Advertisement

ಕಳೆದು ಹೋಗುವ ಮುನ್ನ ನಿಮ್ಮ ಧ್ವನಿಯನ್ನು ರಕ್ಷಿಸಿ!

06:00 AM Apr 01, 2018 | |

“”ಧ್ವನಿಯೇ ಮನುಜನಿಗೆ ಲಭ್ಯವಾಗಿರುವ ಅತ್ಯುತ್ಕೃಷ್ಟ ಸಂಗೀತ ಪರಿಕರ ”
– ಸ್ವಾಮಿ ದಯಾನಂದ ಸರಸ್ವತಿ

Advertisement

ಸ್ವಾಮಿ ದಯಾನಂದ ಸರಸ್ವತಿಯವರು ಹೇಳಿರುವುದು ಅತ್ಯಂತ ಸಮರ್ಪಕವಾಗಿಯೇ ಇದೆ – ಮನುಷ್ಯನ ಧ್ವನಿಯು ನಮಗೆ ಉಡುಗೊರೆಯಾಗಿ ಲಭಿಸಿರುವ ಅತ್ಯಂತ ಸಂಕೀರ್ಣ ಆದರೆ ಅಷ್ಟೇ ಸುಂದರವಾದ ಸಂಗೀತ ಸಾಧನ. ಅದು ನಮ್ಮ ಭಾವನಾತ್ಮಕ ಸ್ಥಿತಿಗತಿ ಮತ್ತು ಸೌಖ್ಯದ ಪ್ರತಿಬಿಂಬವಾಗಿ ಕಾರ್ಯನಿರ್ವಹಿಸುತ್ತದೆ. ಹೀಗಾಗಿಯೇ ಅನೇಕ ಬಾರಿ ಅದು ಕೋಪವಾಗಿರಲಿ, ದುಃಖವಾಗಿರಲಿ, ಭೀತಿಯಾಗಿರಲಿ; ಮನುಷ್ಯನ ಧ್ವನಿಯ ಮೂಲಕವೇ ಆತ ಅನುಭವಿಸುತ್ತಿರುವ ಭಾವನಾತ್ಮಕ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವುದು ಸಾಧ್ಯವಾಗುತ್ತದೆ. ನಮ್ಮ ಧ್ವನಿ ನಮ್ಮ ಬದುಕಿನಲ್ಲಿ ಅತ್ಯಂತ ಪ್ರಾಮುಖ್ಯವಾದ ಪಾತ್ರವನ್ನು ನಿರ್ವಹಿಸುತ್ತದೆ, ಆದರೆ ಅನೇಕ ಬಾರಿ ಅದು ನಮ್ಮ ಗಮನಕ್ಕೆ ಬರುವುದೇ ಇಲ್ಲ. ಜಾಗತಿಕವಾಗಿ ವಿಶ್ವ ಧ್ವನಿ ದಿನವನ್ನು ಎಪ್ರಿಲ್‌ 16ರಂದು ಆಚರಿಸಲಾಗುತ್ತದೆ, ಧ್ವನಿಯ ಬಗ್ಗೆ, ಧ್ವನಿ ಸಮಸ್ಯೆಗಳ ಬಗ್ಗೆ ಮತ್ತು ಪರಿಹಾರ ಕ್ರಮಗಳ ಬಗ್ಗೆ ಅರಿವನ್ನು ವಿಸ್ತರಿಸುವುದಕ್ಕಾಗಿ ಈ ಸದವಕಾಶವನ್ನು ಉಪಯೋಗಿಸಲಾಗುತ್ತದೆ.

ಅನೇಕ ಮಂದಿ ಜೀವನೋಪಾಯಕ್ಕಾಗಿ ತಮ್ಮ ಧ್ವನಿಯನ್ನು ಅವಲಂಬಿಸಿರುತ್ತಾರೆ. ತಮ್ಮ ಧ್ವನಿಯನ್ನು ತಮ್ಮ ಉದ್ಯೋಗದ ಮೂಲ ಆವಶ್ಯಕತೆಯಾಗಿ ಹೊಂದಿರುವವರನ್ನು ಧ್ವನಿಯ ಔದ್ಯೋಗಿಕ/ ವೃತ್ತಿಪರ ಬಳಕೆದಾರರು ಎಂದು ಕರೆಯಲಾಗುತ್ತದೆ. ಇವರಲ್ಲಿ ನಟ ನಟಿಯರು, ಗಾಯಕ ಗಾಯಕಿಯರು, ಬೋಧಕರು, ನಾಟಕ ಕಲಾವಿದರು, ಮಾರಾಟಗಾರರು, ವಕೀಲರು, ಪುರೋಹಿತರು, ಧರ್ಮಗುರುಗಳು, ಕಾಲ್‌ ಸೆಂಟರ್‌ ಉದ್ಯೋಗಿಗಳು ಇತ್ಯಾದಿ ಸೇರುತ್ತಾರೆ. ತಮ್ಮ ಧ್ವನಿಯ ಮೇಲೆ ಉಂಟಾಗುವ ಅತೀವ ಒತ್ತಡದಿಂದಾಗಿ ಧ್ವನಿ ಸಂಬಂಧಿ ಸಮಸ್ಯೆಗಳನ್ನು ಎದುರಿಸುವ ಅಪಾಯ ಇವರಲ್ಲಿ ಹೆಚ್ಚಾಗಿರುತ್ತದೆ. ಅಲ್ಲದೆ, ಅವರ ಧ್ವನಿಯಲ್ಲಿ ಉಂಟಾಗುವ ಅತಿ ಸೂಕ್ಷ್ಮ ಬದಲಾವಣೆಯೂ ಅವರ ಮೇಲೆ ದೊಡ್ಡ ಪರಿಣಾಮವನ್ನು ಉಂಟು ಮಾಡುತ್ತದೆ. 

ಖೇದಕರ ವಿಚಾರವೆಂದರೆ, ವೃತ್ತಿಪರ ಧ್ವನಿ ಬಳಕೆದಾರರಲ್ಲಿ ಅನೇಕ ಮಂದಿಗೆ ತಮ್ಮ ಧ್ವನಿ ಸಮಸ್ಯೆಗಳ ಬಗ್ಗೆ ಅರಿವು ಇರುವುದಿಲ್ಲ ಮತ್ತು ಅವರು ಸಮಸ್ಯೆಯನ್ನು ತಮ್ಮ ವೃತ್ತಿಯ ಭಾಗವಾಗಿ ಬಂದದ್ದು ಎಂದು ತಪ್ಪು ತಿಳಿಯುತ್ತಾರೆ. ಸಾಮಾಜಿಕ ಮತ್ತು ವೃತ್ತಿಪರ ಕಾರಣಗಳಿಂದಾಗಿ ಅವರು ಧ್ವನಿಯನ್ನು ಅತಿಯಾಗಿ ಉಪಯೋಗಿಸುವುದನ್ನು, ದುರ್ಬಳಕೆ ಮಾಡುವುದನ್ನು ಮತ್ತು ತಪ್ಪಾಗಿ ಬಳಕೆ ಮಾಡುವುದನ್ನು ಮುಂದುವರಿಸುತ್ತಾರೆ. ಸಮಸ್ಯೆ ಆರಂಭವಾಗಿ ಎಷ್ಟೋ ಕಾಲದ ಬಳಿಕ ಅವರು ಧ್ವನಿ ತಜ್ಞರ ಸಹಾಯ ಕೇಳುವುದು ಸಾಮಾನ್ಯ. 

ಒಬ್ಬ ವ್ಯಕ್ತಿಯ ಧ್ವನಿಯ ಗುಣಮಟ್ಟ, ಧ್ವನಿಯ ಪ್ರಮಾಣ ಅಥವಾ ನಮನೀಯತೆಯು ಅದೇ ವಯಸ್ಸಿನ, ಅದೇ ಲಿಂಗ ಅಥವಾ ವೃತ್ತಿಯ ಇತರ ವ್ಯಕ್ತಿಗಳಿಗಿಂತ ಭಿನ್ನವಾಗಿದ್ದರೆ ಧ್ವನಿ ಸಮಸ್ಯೆ ಇದೆ ಎಂದು ತಿಳಿಯಬಹುದಾಗಿದೆ. ಧ್ವನಿ ಸಮಸ್ಯೆಗೆ ಕಾರಣಗಳಲ್ಲಿ ಧ್ವನಿಯ ಅತಿ ಬಳಕೆ, ತಪ್ಪು ಬಳಕೆ ಅಥವಾ ದುರ್ಬಳಕೆ ಒಳಗೊಂಡಿವೆ. ಧ್ವನಿ ಉತ್ಪಾದಕ ಅಂಗಗಳಿಗೆ ಹಾನಿ ಉಂಟು ಮಾಡುವ ಅತಿಯಾಗಿ ಮಾತನಾಡುವುದು, ಗಂಟಲು ಸರಿಪಡಿಸಿಕೊಳ್ಳುವುದು, ಕಿರುಚುವುದು, ಧೂಮಪಾನ ಮಾಡುವುದು ಮತ್ತು ಕೆಮ್ಮುವುದನ್ನು ಅತಿಯಾಗಿ ನಡೆಸುವುದು ಧ್ವನಿಯ ದುರ್ಬಳಕೆಯ ಗುಣನಡತೆಗಳಲ್ಲಿ ಒಳಗೊಂಡಿವೆ. ಗಟ್ಟಿಯಾಗಿ ಮಾತನಾಡುವುದು, ತಪ್ಪು ಸ್ಥಾಯಿಯಲ್ಲಿ ಅಥವಾ ತಪ್ಪು ಧ್ವನಿಯಲ್ಲಿ ಹಾಡುವುದು ಧ್ವನಿಯ ತಪ್ಪು ಬಳಕೆಗಳಲ್ಲಿ ಸೇರಿವೆ, ಇದರಿಂದಲೂ ಧ್ವನಿ ಉತ್ಪಾದಕ ಅಂಗಗಳಿಗೆ ಹಾನಿಯಾಗುತ್ತದೆ. ಹೊಗೆ, ನಿರ್ಜಲೀಕರಣ, ಧೂಮ, ಮಾಲಿನ್ಯಗಳು, ಅಲರ್ಜಿಕಾರಕ ಸೂಕ್ಷ್ಮಾಣುಗಳು ಮೊದಲಾದ ಪಾರಿಸರಿಕ ಅಂಶಗಳು ಕೂಡ ಧ್ವನಿ ಸಮಸ್ಯೆಗಳನ್ನು ಉಂಟು ಮಾಡಬಲ್ಲವು. ಸೋಂಕುಗಳು, ಅಲರ್ಜಿಗಳು, ಆಹಾರ ಮತ್ತು ಆಮ್ಲಿàಯ ದ್ರವ ಹೊಟ್ಟೆಯಿಂದ ಗಂಟಲಿಗೆ ಬರುವ “ಗ್ಯಾಸ್ಟ್ರೊಎಸೊಫೇಗಲ್‌ ರಿಫ್ಲಕ್ಸ್‌’, ಹಾರ್ಮೋನ್‌ ಸಮಸ್ಯೆಗಳು, ಕ್ಯಾನ್ಸರ್‌ಕಾರಕ ಮತ್ತು ಕ್ಯಾನ್ಸರ್‌ ಕಾರಕವಲ್ಲದ ಧ್ವನಿ ಅಂಗ ಹಾನಿಗಳು ಇತರ ಕಾರಣಗಳಲ್ಲಿ ಸೇರಿವೆ. 

Advertisement

ನೀವು ಅಥವಾ ನಿಮಗೆ ತಿಳಿದಿರುವ ಯಾರೇ ಆದರೂ ಈ ಲಕ್ಷಣ ಮತ್ತು ಚಿಹ್ನೆಗಳನ್ನು ಹೊಂದಿದ್ದರೆ ಧ್ವನಿ ಭಾಷಿಕ ತಜ್ಞ (ಸ್ಪೀಚ್‌ ಲ್ಯಾಂಗ್ವೇಜ್‌ ಥೆರಪಿಸ್ಟ್‌) ಅಥವಾ ಧ್ವನಿ ತಜ್ಞ (ವಾಯ್ಸ ಥೆರಪಿಸ್ಟ್‌)ರನ್ನು ಆದಷ್ಟು ಬೇಗನೆ ಸಂಪರ್ಕಿಸಬೇಕು. 

– ಧ್ವನಿಯ ಗುಣಮಟ್ಟದಲ್ಲಿ ಬದಲಾವಣೆ/ ಧ್ವನಿ ಗೊಗ್ಗರಾಗುವುದು.
– ಧ್ವನಿ ದಣಿವು/ ಆಯಾಸ
– ಗಂಟಲು ಒಣಗುವುದು 
– ಗಂಟಲಿನಲ್ಲಿ ನೋವು
– ದೊರಗು ಗಂಟಲು
– ನಿಶ್ಶಕ್ತ ಧ್ವನಿ ಅಥವಾ ಮಾತನಾಡಲು ಸಾಧ್ಯವಾಗದೇ ಇರುವುದು
– ಮಾತನಾಡುವಾಗ ಧ್ವನಿ ಕಟ್ಟುವುದು
– ಗಂಟಲಿನಲ್ಲಿ ಬಿಗಿ ಹಿಡಿದ ಅನುಭವ
– ದೀರ್ಘ‌ಕಾಲ ಮಾತನಾಡಿದ ಬಳಿಕ ಧ್ವನಿಯ ಗುಣಮಟ್ಟ ಬದಲಾಗುವುದು
– ಮಾತನಾಡಲು ಅತಿಯಾದ ಪ್ರಯತ್ನ ಅಗತ್ಯವಾಗುವುದು
– ಗಂಟಲು ಸರಿಪಡಿಸಿಕೊಳ್ಳಲು ಆಗಾಗ ಆವಶ್ಯಕತೆ ಉಂಟಾಗುವುದು

– ಡಾ| ಧನಶ್ರೀ ಆರ್‌. ಗುಂಜಾವಠೆ,
ಅಸಿಸ್ಟೆಂಟ್‌ ಪ್ರೊಫೆಸರ್‌
ಆಡಿಯಾಲಜಿ ಮತ್ತು ಎಸ್‌ಎಲ್‌ಪಿ ವಿಭಾಗ
ಕಸ್ತೂರ್ಬಾ ವೈದ್ಯಕೀಯ ಕಾಲೇಜು, ಮಂಗಳೂರು.

Advertisement

Udayavani is now on Telegram. Click here to join our channel and stay updated with the latest news.

Next