Advertisement

ಕರಾವಳಿಯ ಸಮಸ್ಯೆಗಳಿಗೆ ಮುಕ್ತಿ ಯಾವಾಗ? 

12:30 AM Jan 12, 2019 | |

ಭೂ ಪರಿವರ್ತನೆಗೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ/ಉಡುಪಿ ಜಿಲ್ಲೆಗಳ ಭೌಗೋಳಿಕ ಪರಿಸ್ಥಿತಿಯು ಭಿನ್ನವಾಗಿದ್ದು ಗದ್ದೆ, ತೋಟ, ಕಾಡು, ನದಿ, ಕೆರೆ, ತೋಡುಗಳು, ಗುಡ್ಡ ಒಳಗೊಂಡಂತೆ ಎತ್ತರ ತಗ್ಗುಗಳಿಂದ ಕೂಡಿದ ಈ ಜಿಲ್ಲೆಗಳನ್ನು ಬಯಲು ಸೀಮೆ ಜಿಲ್ಲೆಗಳಿಗೆ ಸಮಾನಾಂತರವಾಗಿ ಪರಿಗಣಿಸಿ ಕಾನೂನು ರೂಪಿಸಿರುವುದು ಸರಿಯಲ್ಲ.

Advertisement

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಜನಸಾಮಾನ್ಯರು ಮನೆ ಕಟ್ಟಲು, ಬ್ಯಾಂಕ್‌ ಸಾಲ ಪಡೆದು ಇದ್ದ ಮನೆಗಳನ್ನು ನವೀಕರಿಸಲು ಹಾಗೂ ಆರ್ಥಿಕ ಸಂಕಷ್ಟಕ್ಕಾಗಿ ಜಮೀನು ಮಾರಾಟ ಮಾಡಲು ಭೂ ಪರಿವರ್ತನೆ ಕೋರಿ ಸಲ್ಲಿಸಲಾದ ಸಾವಿರಾರು ಅರ್ಜಿಗಳು ಕಳೆದ 10 ತಿಂಗಳುಗಳಿಂದ ಬಾಕಿ ಇವೆ. ಅದಲ್ಲದೆ ಮರಳಿನ ಸಮಸ್ಯೆ, ಸಿಂಗಲ್‌ ಸೈಟ್‌ ಇತ್ಯಾದಿ ಸಮಸ್ಯೆಗಳಿಂದ ಕರಾವಳಿ ಜಿಲ್ಲೆಗಳು ತೊಂದರೆಗೆ ಒಳಗಾಗಿರುವುದು ಎಲ್ಲರಿಗೂ ತಿಳಿದ ವಿಚಾರ. ಆದರೆ ಸರಕಾರ ಮಾತ್ರ ಈ ಸಮಸ್ಯೆಗಳನ್ನು ನಗಣ್ಯವಾಗಿ ಪರಿಗಣಿಸಿರುವುದು ಮಾತ್ರ ತೀರಾ ಖೇದಕರ ಸಂಗತಿಯಾಗಿರುತ್ತದೆ.

ಭೂ ಪರಿವರ್ತನೆಗೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ/ಉಡುಪಿ ಜಿಲ್ಲೆಗಳ ಭೌಗೋಳಿಕ ಪರಿಸ್ಥಿತಿಯು ಭಿನ್ನವಾಗಿದ್ದು ಗದ್ದೆ, ತೋಟಗಳು, ಕಾಡು, ನದಿ, ಕೆರೆ, ತೋಡುಗಳು, ಗುಡ್ಡಗಳು ಒಳಗೊಂಡಂತೆ ಎತ್ತರ ತಗ್ಗುಗಳಿಂದ ಕೂಡಿದ ಈ ಜಿಲ್ಲೆಗಳನ್ನು ಬಯಲು ಸೀಮೆ ಜಿಲ್ಲೆಗಳಿಗೆ ಸಮಾನಾಂತರವಾಗಿ ಕಾನೂನು ರೂಪಿಸಿರುವುದು ಸರಿಯಲ್ಲ. ಇಲ್ಲಿ ತುಂಡು ಹಿಡುವಳಿ ಜಮೀನು ಅಧಿಕವಾಗಿದ್ದು, ಶೇ.90 ಕೃಷಿ ಜಮೀನಾಗಿರುತ್ತದೆ. 

1.ಭೂ ಸುಧಾರಣಾ ಕಾಯಿದೆಯಂತೆ ಅಧಿಭೋಗದ ಹಕ್ಕು ನೀಡಲಾದ ಸಂದರ್ಭದಲ್ಲಿ 10-15 ಟ್ರಿಬ್ಯೂನಲ್‌ಗ‌ಳನ್ನು ಸ್ಥಾಪಿಸಿ ಅಧಿಕಾರಿಗಳಿಗೆ ಗುರಿ ನಿಗದಿಪಡಿಸಿ, ಮೋಜಣಿದಾರರು ತರಾತುರಿಯಲ್ಲಿ ತಯಾರಿಸಲಾದ ಛಿyಛಿ skಛಿಠಿcಜಆಧಾರದಲ್ಲಿ ತೀರ್ಪು ನೀಡಿ ಅಧಿಭೋಗದ ಹಕ್ಕು ನೀಡಿದ ಸಂದರ್ಭದಲ್ಲಿ ವಾಸ್ತವಿಕವಾಗಿ ಇರುವ ಜಮೀನಿಗೆ ಹೆಚ್ಚು ಅಥವಾ ಕಡಿಮೆ ಜಮೀನು ಮಂಜೂರು ಮಾಡಿರುವುದರಿಂದ ಸಮಸ್ಯೆಯಾಗಿದೆ. 

2.ಉಭಯ ಜಿಲ್ಲೆಗಳಲ್ಲಿ 3, 4, 5, 10 ಸೆಂಟ್ಸುಗಳಂತೆ ಒಂದು ಎಕ್ರೆ ಜಮೀನಿನಲ್ಲಿ 30-40 ಖಾತೆದಾರರಿದ್ದು ತುಂಡು ಹಿಡುವಳಿ ಜಮೀನುಗಳು ಹೆಚ್ಚಾಗಿ ಇದೆ. 

Advertisement

3.ಭೂ ನ್ಯಾಯ ಮಂಡಳಿಯ ತೀರ್ಪು, ದರ್ಖಾಸ್ತು 1 ಸಕ್ರಿಯ ಸಕ್ರಮೀಕರಣ ಆದೇಶಗಳ ವಿರುದ್ಧ ನ್ಯಾಯಾಲಯಗಳಲ್ಲಿ ಸಲ್ಲಿಸಲಾದ ಪ್ರಕರಣಗಳು ಇನ್ನೂ ಇತ್ಯರ್ಥಕ್ಕೆ ಬಾಕಿ ಇವೆ.

4.ಗುಡ್ಡ ಜಮೀನುಗಳನ್ನು ಸಮತಟ್ಟು ಮಾಡಿರುವುದರಿಂದ ಮತ್ತು ಇನ್ನಿತರ ಕಾರಣಗಳಿಂದ ಈ ಜಿಲ್ಲೆಗಳಲ್ಲಿ ಆರ್‌.ಟಿ.ಸಿ. ಮತ್ತು ಆಕಾರ್‌ಬಂದ್‌ ವಿಸ್ತೀರ್ಣಕ್ಕೆ ತಾಳೆ ಇರುವುದಿಲ್ಲ ಹಾಗೂ ಬಹುತೇಕ ಸರ್ವೇ ನಂಬರ್‌ಗಳ ಜಮೀನುಗಳ ವಿಸ್ತೀರ್ಣ ತಾಳ ಮಾಡಲು ಸಾಧ್ಯವೂ ಇರುವುದಿಲ್ಲ. ಆದುದರಿಂದ ಭೂ ಪರಿವರ್ತನೆ ಪ್ರಕರಣಗಳಿಗೆ 11 ಇ ನಕ್ಷೆಯನ್ನು ಕಡ್ಡಾಯಗೊಳಿಸಿರುವ ಕ್ರಮವೂ ಸರಿಯಲ್ಲ. ಈ ಕಾರಣದಿಂದ ಸಾವಿರಾರು ಭೂ ಪರಿವರ್ತನೆಗೆ ಪ್ರಕರಣಗಳು ಬಾಕಿ ಇರುವುದಾಗಿದೆ. 

ಅದಲ್ಲದೆ ನಗರಾಭಿವೃದ್ಧಿ ಪ್ರಾಧಿಕಾರದ ನಿಯಮದಂತೆ ಈ ಜಿಲ್ಲೆಗಳ ರೈತರು ಗದ್ದೆ ತೋಟಗಳ ಮಧ್ಯೆ ಮನೆ ಕಟ್ಟಲು ಕೂಡಾ ಗದ್ದೆ ಹುಣಿಯನ್ನು ಪಂಚಾಯತ್‌ಗೆ ದಾನಪತ್ರವಾಗಿ ನೀಡಬೇಕು. 20 ಅಡಿ ರಸ್ತೆ ಜಾಗ ಬಿಡಬೇಕು. ಕುಟುಂಬ ಸದಸ್ಯರೊಳಗೆ ವಿಭಾಗಪತ್ರ ಮಾಡುವಾಗ ಹಾಗೂ ಈಛಿಚಛ ಛಿnಛ ಆಗಿದ್ದಲ್ಲಿ ಕೂಡ 20 ಅಡಿ ರಸ್ತೆ ಬಿಡಬೇಕು. ಇಲ್ಲವಾದಲ್ಲಿ ದಂಡ ತೆರಬೇಕು. ಕೆರೆ ಅಭಿವೃದ್ಧಿ ಶುಲ್ಕ ಪಾವತಿಸಬೇಕು. ಅಲ್ಲದೆ ಅಧಿಕಾರಿಗಳಿಗೆ ಲಂಚ ನೀಡಬೇಕು. ಈ ರೀತಿಯ ಅಸಂಬದ್ಧ ಕಾನೂನುಗಳಿಂದ ಕರಾವಳಿ ಜಿಲ್ಲೆಗಳ ಜನರು ಶೋಷಣೆಗೆ ಒಳಗಾಗಿದ್ದರೂ ಇಲ್ಲಿನ ಜನ ಪ್ರತಿನಿಧಿಗಳು ಸರಕಾರದ ಗಮನಕ್ಕೆ ತಂದು ಸಮಸ್ಯೆ ಪರಿಹರಿಸಲು ಪ್ರಯತ್ನಿಸದಿರುವುದು ವಿಷಾದಕರವಾಗಿರುತ್ತದೆ. 2018ರಲ್ಲಿ ಆಯ್ಕೆಯಾದ ಬಹುತೇಕ ಶಾಸಕರು ಹೊಸಬರಾಗಿದ್ದು ಅನನುಭವಿಗಳು ನಿಜ. 

ಆದರೆ ದ.ಕ. ಜಿಲ್ಲೆಯ ಉಸ್ತುವಾರಿ ಸಚಿವರು ಹಾಗೂ ಕಳೆದ 20-25 ವರ್ಷಗಳಿಂದ ಶಾಸಕರಾಗಿದ್ದವರು, ಉಸ್ತುವಾರಿ ಸಚಿವರಾಗಿದ್ದವರು ಮತ್ತು ಕಂದಾಯ ಇಲಾಖೆಯಲ್ಲಿ ತಹಶೀಲ್ದಾರ್‌/ಸಹಾಯಕ ಆಯುಕ್ತರಾಗಿ ಕರ್ತವ್ಯ ನಿರ್ವಹಿಸಿದಂತಹ ಓರ್ವ ಮಾಜಿ ಶಾಸಕರು ಕೂಡಾ ಕಂದಾಯ ಸಚಿವರು/ಸರಕಾರದ ಗಮನಕ್ಕೆ ಕರಾವಳಿ ಜಿಲ್ಲೆಗಳ ಸಮಸ್ಯೆಗಳನ್ನು ಪರಿಹರಿಸಲು ಭೂ ಪರಿವರ್ತಿಸದ ಪ್ರಕರಣಗಳಿಗೆ 11 ಇ ನಕ್ಷೆಯನ್ನೂ ಕಡ್ಡಾಯಗೊಳಿಸಿರುವುದನ್ನು ರದ್ದು ಪಡಿಸಿ ವಿನಾಯಿತಿ ನೀಡಲು ಪ್ರಯತ್ನಿಸದಿರುವುದು ಮಾತ್ರ ಖೇದಕರ ವಿಚಾರ.

ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರು ನಗರಾಭಿವೃದ್ಧಿ ಸಚಿವರು ಕೂಡಾ ಆಗಿದ್ದು, ಮಂಗಳೂರು-ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಸಿಂಗಲ್‌ ಸೈಟ್‌ ವಿಚಾರದಲ್ಲಿ ನಡೆಯುತ್ತಿರುವ ಗೊಂದಲ ಹಾಗೂ ದೂರುಗಳ ಬಗ್ಗೆ ಒಂದು ಬಾರಿ ಮಾತ್ರ ಅದಾಲತ್‌ ನಡೆಸಿದ್ದು ತದನಂತರ ಅವರ ಉತ್ಸಾಹವು ಠುಸ್ಸಾಗಿರುವುದಕ್ಕೆ ಕಾರಣ ತಿಳಿಯುತ್ತಿಲ್ಲ. ಜನರ ತೆರಿಗೆಯ ಹಣದಿಂದ ಅಭಿವೃದ್ಧಿ ಕಾರ್ಯ ನಡೆಸುವುದು ಮಹಾಕಾರ್ಯವೇನೂ ಅಲ್ಲ. ಆದರೆ ಕರಾವಳಿ ಜಿಲ್ಲೆಗಳ ಜನರ ಮೂಲಭೂತ ಸಮಸ್ಯೆಗಳಿಗೆ ಅಂತ್ಯ ಕಾಣಿಸಲು ಇಚ್ಛಾಶಕ್ತಿ ಇಲ್ಲದಿರುವುದು ತೀರಾ ಬೇಸರದ ವಿಚಾರ. ನಮ್ಮ ನೆರೆಯ ಕೇರಳ ರಾಜ್ಯದಲ್ಲಿ ಈ ರೀತಿಯ ಗೊಂದಲಗಳಿರುವುದಿಲ್ಲ. ಅಲ್ಲಿನ ಜನರು ಲಂಚ ನೀಡದೆ ಯಾವುದೇ ಮಧ್ಯವರ್ತಿಗಳ ಸಹಾಯವಿಲ್ಲದೆ ತಮ್ಮ ಕೆಲಸ ಕಾರ್ಯಗಳನ್ನು ಸುಸೂತ್ರವಾಗಿ ಮಾಡಿಸಿಕೊಳ್ಳಬಹುದಾಗಿದೆ. ಕಾರಣ ಕೇರಳ ರಾಜ್ಯದಲ್ಲಿ ಇಂತಹ ಅಸಂಬದ್ಧ ಕಾನೂನುಗಳು ಇರುವುದಿಲ್ಲ ಹಾಗೂ ಅಂತಹ ಕಾನೂನು ತಂದಲ್ಲಿ ಅಲ್ಲಿನ ಜನರು ಪಕ್ಷಭೇದ ರಹಿತವಾಗಿ ಹೋರಾಟ ನಡೆಸುವವರಾಗಿರುತ್ತಾರೆ. 

ಆದುದರಿಂದ ಬುದ್ಧಿವಂತ ಜಿಲ್ಲೆಗಳ ಜನರು ಎಚ್ಚೆತ್ತುಕೊಳ್ಳಬೇಕಾದ ಅವಶ್ಯಕತೆ ಇದೆ. ನಾವು ಕೂಡಾ ಪಕ್ಷಭೇದ ರಹಿತವಾಗಿ ಜನಪ್ರತಿನಿಧಿಗಳಿಗೆ ಘೇರಾವ್‌ ಹಾಕಿ ಪ್ರತಿಭಟನೆ ನಡೆಸಲು ಸನ್ನದ್ಧರಾಗುವ ಅನಿವಾರ್ಯತೆ ಇರುತ್ತದೆ. ಆಗ ಮಾತ್ರ ಜನಪ್ರತಿನಿಧಿಗಳು -ಸರಕಾರ ಎಚ್ಚೆತ್ತುಕೊಳ್ಳಬಹುದು. 

– ಅನ್ವರ್‌ ಆಲಿ

Advertisement

Udayavani is now on Telegram. Click here to join our channel and stay updated with the latest news.

Next