Advertisement

ಕಾಂಗ್ರೆಸ್‌ ಹೇಳಿದಂತೆ ಬಂಧಿಸಿದ್ರೆ ಜೈಲುಗಳೇ ಸಾಲಲ್ಲ

01:26 PM Apr 17, 2022 | Team Udayavani |

ಚಿತ್ರದುರ್ಗ: ಕಾಂಗ್ರೆಸ್‌ನವರು ಹೇಳಿದವರೆನ್ನೆಲ್ಲಾ ಬಂಧಿಸುವುದಾದರೆ ಕರ್ನಾಟಕದಲ್ಲಿರುವ ಜೈಲು ಸಾಕಾಗಲಿಕ್ಕಿಲ್ಲ. ಅವರು ಏನು ಹೇಳುತ್ತಾರೆ ಎನ್ನುವುದು ನಮಗೆ ಪ್ರಶ್ನೆಯಲ್ಲ ಎಂದು ಸಚಿವ ಕೋಟಾ ಶ್ರೀನಿವಾಸ್‌ ಪೂಜಾರಿ ಹೇಳಿದರು.

Advertisement

ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇಂತಹ ಸ್ಥಿತಿಗಳು ಒಂದು ರೀತಿ ಆತಂಕದ ವಾತಾವರಣ ಹೌದು. ಆದರೆ, ಇದರಿಂದ ಮುಕ್ತರಾಗುತ್ತೇವೆ ಎಂದರು.

ಸಂತೋಷ್‌ ಪಾಟೀಲ್‌ ಹೇಳಿರುವಂತೆ ನಾಲ್ಕು ಕೋಟಿ ರೂ. ಕಾಮಗಾರಿಗೆ ಟೆಂಡರ್‌ ಆಗಿಲ್ಲ. ಮಂಜೂರಾತಿ ಯಾರು ಕೊಟ್ಟಿದ್ದಾರೆ ಗೊತ್ತಿಲ್ಲ, ಎಸ್ಟಿಮೇಟ್‌ ಯಾರು ಮಾಡಿದ್ದಾರೆ ಗೊತ್ತಿಲ್ಲ, ಕಾಮಗಾರಿ ಯಾರು ಮಾಡಿದ್ದಾರೆ ಗೊತ್ತಿಲ್ಲ, ನಮಗೆ ಹಣ ಕೊಡಲಿಲ್ಲ, ಹಾಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿರುವುದರಿಂದ ಎಲ್ಲವೂ ತನಿಖೆಯಿಂದಲೇ ಹೊರಬರಬೇಕು ಎಂದು ಹೇಳಿದರು.

ಈಶ್ವರಪ್ಪ ನಮ್ಮ ಪಕ್ಷದ ಹಿರಿಯ ಮುಖಂಡರು. ಸಂಘಟನೆಯ ಸೂತ್ರದಡಿ ಬಂದವರು. ಆರೋಪ ಬಂದಾಗ ಸರ್ಕಾರಕ್ಕೆ ಮುಜುಗರ ಆಗಬಾರದು ಎನ್ನುವ ಕಾರಣಕ್ಕೆ ರಾಜೀನಾಮೆ ಸಲ್ಲಿಸಿರುವುದಾಗಿ ಹೇಳಿದ್ದಾರೆ. ತನಿಖೆಯಾಗುತ್ತದೆ ಮತ್ತೆ ಅಧಿಕಾರ ಹಿಡಿಯುತ್ತೇನೆ ಎಂದೂ ಹೇಳಿದ್ದಾರೆ. ಅವರ ಭಾವನೆಯಲ್ಲಿ ಯಾವ ತಪ್ಪೂ ಕಾಣುತ್ತಿಲ್ಲ ಎಂದರು.

ಮುಜರಾಯಿ ದೇವಸ್ಥಾನಗಳ ವ್ಯಾಪ್ತಿಯಲ್ಲಿ ಅನ್ಯಮತೀಯರ ವ್ಯಾಪಾರ ನಿರ್ಬಂಧ ವಿಚಾರ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಈಗ ಇರುವ ಕಾಯ್ದೆ ನಿಯಮದಲ್ಲಿ ಹಿಂದೂ ದೇವಸ್ಥಾನಗಳ ಪರಿವ್ಯಾಪ್ತಿಯಲ್ಲಿರುವ ಯಾವುದೇ ವಾಣಿಜ್ಯ ಕಟ್ಟಡದಲ್ಲಿ ಅನ್ಯಮತೀಯರಿಗೆ ಅವಕಾಶ ಇಲ್ಲ, ಅದನ್ನು ಅನುಷ್ಠಾನ ಮಾಡುವುದು ಅನಿವಾರ್ಯ ಎಂದು ಕಾನೂನು ಮಂತ್ರಿಗಳು ಸದನದಲ್ಲಿ ಉತ್ತರ ಕೊಟ್ಟಿದ್ದಾರೆ. ಎಲ್ಲರೂ ಒಟ್ಟಾಗಿ ಬದುಕಬೇಕು ಎಂಬ ಯೋಚನೆ ಇದೆ. ಕಾನೂನು ಏನು ಹೇಳುತ್ತದೆ ಎನ್ನುವುದು ಒಂದು ಭಾಗ. ಈ ವಿಚಾರದಲ್ಲಿ ಮುಂದೆ ಏನು ಮಾಡಬೇಕು ಎನ್ನುವುದನ್ನು ಆಲೋಚನೆ ಮಾಡಲಾಗುವುದು ಎಂದರು.

Advertisement

ಸಾಂದರ್ಭಿಕವಾಗಿ ಕೆಲ ಸಂಘಟನೆಗಳು ಅವರವರ ಭಾವನೆಗಳನ್ನು ವ್ಯಕ್ತಪಡಿಸಿದ ಉದಾಹರಣೆಗಳಿವೆ. ಸರ್ಕಾರವಾಗಿ ಪರಿಗಣಿಸುವಾಗ ಕಾಯ್ದೆ- ಕಾನೂನು ಗಳನ್ನು ಗೌರವಿಸುವುದು ಸರ್ಕಾರದ ಜವಾಬ್ದಾರಿ. ಕಾಂಗ್ರೆಸ್‌ ಏನು ಹೇಳುತ್ತದೆ ಎನ್ನುವುದು ಪ್ರಶ್ನೆ ಅಲ್ಲ. ಕಾಯ್ದೆ ತಿದ್ದುಪಡಿ ಯಾರು ತಂದಿದ್ದಾರೆ, ಹೇಗೆ ತಂದಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ ಎಂದು ಮಾರ್ಮಿಕವಾಗಿ ಉತ್ತರಿಸಿದರು.

ಬದಲಾವಣೆ ಕಾಲಘಟ್ಟದಲ್ಲಿದೆ

ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಶೇ.96 ರಷ್ಟು ವಿದ್ಯಾರ್ಥಿವೇತನ ನೇರವಾಗಿ ಮೊದಲ ಬಾರಿಗೆ ವಿದ್ಯಾರ್ಥಿಗಳ ಖಾತೆಗೆ ಜಮೆಯಾಗಿದೆ. ಉಳಿದ ಶೇ.4ರಷ್ಟು ಆಧಾರ್‌ ಮತ್ತಿತರೆ ತಾಂತ್ರಿಕ ಸಮಸ್ಯೆಗಳಿದ್ದು, ನೇರವಾಗಿ ತಲುಪಿಸಲಾಗುವುದು. ಬಾಬು ಜಗಜೀವನ್‌ರಾಂ ಜಯಂತಿಯಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಣೆ ಮಾಡಿದ 75 ಯೂನಿಟ್‌ವರೆಗೆ ಉಚಿತ ವಿದ್ಯುತ್‌ ಯೋಜನೆಯಿಂದ ಪರಿಶಿಷ್ಟ ಜಾತಿ-ಪಂಗಡದ ಸುಮಾರು 40 ಲಕ್ಷ ಕುಟುಂಬಗಳಿಗೆ ಅನುಕೂಲವಾಗಲಿದೆ ಎಂದರು.

ಡಾ| ಬಿ.ಆರ್‌. ಅಂಬೇಡ್ಕರ್‌ ಪ್ರಶಸ್ತಿ ವಿತರಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಂಡು ಅತ್ಯಂತ ಸಾಮಾನ್ಯರನ್ನು ಗುರುತಿಸಲಾಗಿದೆ. ತಂಬೂರಿ ಹಿಡಿದು ಅಲೆಮಾರಿಗಳಾಗಿ ಬದುಕುವ ದಕ್ಕಲಿಗ ಸಮಾಜದ ವ್ಯಕ್ತಿಗೆ, ಮಾಜಿ ಸಚಿವೆ ಮೋಟಮ್ಮ ಅವರಂತಹ ನೂರಾರು ಮಹಿಳೆಯರನ್ನು ಹಾಸ್ಟೆಲ್‌ ವಾರ್ಡನ್‌ ಆಗಿದ್ದು ಸಲುಹಿದ 95 ವರ್ಷದ ಸರಸ್ವತಮ್ಮ ಎಂಬುವವರಿಗೆ, ಹರೇಕಳ ಹಾಜಬ್ಬರನ್ನು ಪರಿಚಯಿಸಿದ ಪತ್ರಕರ್ತ ಬಾಳೇಪುಣಿ ಅಂತವರನ್ನು ಹುಡುಕಿ ಪ್ರಶಸ್ತಿ ಕೊಡಲಾಗಿದೆ. ಇವರ ಹಿಂದೆ ಯಾವ ಲಾಬಿಯೂ ಕೆಲಸ ಮಾಡಿಲ್ಲ. ಇದರರ್ಥ ಸಮಾಜ ಕಲ್ಯಾಣ ಇಲಾಖೆಯಲ್ಲಿ ಬದಲಾವಣೆ ಆಗುತ್ತಿದೆ ಎಂದರು.

ಓಬವ್ವ ಆತ್ಮರಕ್ಷಣಾ ಕಲೆ ಮೂಲಕ ಬಾಲಕಿಯರಿಗೆ ಕರಾಟೆ ತರಬೇತಿ ನೀಡುವುದನ್ನು ಈ ವರ್ಷದಿಂದ ಆರನೇ ತರಗತಿಯವರಿಗೂ ಕಲಿಸಲಾಗುವುದು. ಈ ಮೂಲಕ ವಿದ್ಯಾರ್ಥಿನಿಯರಿಗೆ ಆತ್ಮರಕ್ಷಣೆ ಕಲೆಯನ್ನು ಕಲಿಸಲಾಗುತ್ತಿದೆ. ಪ್ರತಿ ಮೂರನೇ ಶನಿವಾರ ಇಲಾಖೆ ವ್ಯಾಪ್ತಿಯ ಎಲ್ಲ ಶಾಲೆ-ವಿದ್ಯಾರ್ಥಿ ನಿಲಯಗಳಲ್ಲಿ ಸ್ವತ್ಛತೆ ಮಾಡಲಾಗುತ್ತಿದೆ. ಬದಲಾವಣೆ ಕಾಲಘಟ್ಟದಲ್ಲಿ ಇಲಾಖೆಯಿದೆ. ವರ್ಗಾವಣೆಗೆ ಸಂಬಂಧಿಸಿದಂತೆ ಕೌನ್ಸೆಲಿಂಗ್‌ ಮಾಡುವ ಬಗ್ಗೆ ಆಲೋಚನೆ ಮಾಡಲಾಗುತ್ತಿದೆ ಎಂದರು.

ಟೆಂಡರ್‌ ಇಲ್ಲದೆ, ನಿಯಂತ್ರಣ ಇಲ್ಲದೆ 1 ರಿಂದ 2 ಕೋಟಿ ರೂ.ವರೆಗೆ ಖರೀದಿ ಮಾಡುವ 4ಜಿ ವ್ಯವಸ್ಥೆಯನ್ನು ಕ್ರಮೇಣ ರದ್ದು ಮಾಡಿದ್ದೇವೆ. ಇದನ್ನು 50 ಲಕ್ಷಕ್ಕೆ ಮಿತಿಗೊಳಿಸಿ ಟೆಂಡರ್‌ ಇಲ್ಲದೆ ಕೆಲಸ ಮಾಡುವುದು ಬೇಡ. ಅಗತ್ಯವಿದ್ದಲ್ಲಿ ವರ್ಷದಲ್ಲಿ ಒಂದೆರಡಕ್ಕೆ ಮಾತ್ರ ಸಮಿತಿ, ಸಚಿವರ ಗಮನಕ್ಕೆ ತಂದು ಖರೀದಿಸುವ ಬಗ್ಗೆ ನಿಯಮ ರೂಪಿಸಲಾಗಿದೆ ಎಂದು ವಿವರಿಸಿದರು.

ಉಡುಪಿ ಶಾಸಕ ರಘುಪತಿ ಭಟ್‌, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಮಮತಾ, ಸಹಾಯಕ ನಿರ್ದೇಶಕ ಪರಮೇಶ್ವರಪ್ಪ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next