Advertisement

ಹಿಂದೂ ಸಮಾಜದವರಿಗೇ ಜಾತ್ರಾ ವ್ಯಾಪಾರ ಮಳಿಗೆ ನೀಡಲು ಮನವಿ

03:04 PM Mar 28, 2022 | Niyatha Bhat |

ಸಾಗರ: ಏ. 5ರಿಂದ ನಡೆಯುವ ಇತಿಹಾಸ ಪ್ರಸಿದ್ಧ ನಗರದ ಮಹಾಗಣಪತಿ ಜಾತ್ರೆ ವ್ಯಾಪಾರ ಮಳಿಗೆಗಳನ್ನು ಹಿಂದೂ ಸಮಾಜದ ವ್ಯಾಪಾರಿಗಳಿಗೆ ನೀಡುವಂತೆ ಒತ್ತಾಯಿಸಿ ವಿಶ್ವಹಿಂದೂ ಪರಿಷತ್‌ ವತಿಯಿಂದ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

Advertisement

ಜಾತ್ರೆಯಲ್ಲಿ ಮಹಾಗಣಪತಿ ರಸ್ತೆಯ ಇಕ್ಕೆಲಗಳಲ್ಲಿ ಹಣ್ಣುಕಾಯಿ, ಆಟಿಕೆ, ತಿಂಡಿತಿನಿಸು ಇತ್ಯಾದಿ ವ್ಯಾಪಾರಿ ಮಳಿಗೆಗಳನ್ನು ನಿರ್ಮಿಸಿ ಹರಾಜು ಹಾಕಿ ಹೆಚ್ಚಿನ ದರಕ್ಕೆ ಹರಾಜು ಹಿಡಿದವರಿಗೆ ನೀಡಲಾಗುತ್ತಿದೆ. ದೇವಸ್ಥಾನವು ಮುಜರಾಯಿಗೆ ಸೇರಿದ್ದು, ಅನ್ಯಧರ್ಮಿಯರಿಗೆ ನೀಡಲು ಅವಕಾಶ ಇರುವುದಿಲ್ಲ ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಪ್ರಸ್ತುತ ಒಂದು ಕೋಮಿನ ಜನ ಈ ದೇಶದ ಕಾನೂನು ಸಂವಿಧಾನ ಮತ್ತು ಹಿಂದೂ ಸಂಸ್ಕೃತಿ, ಧಾರ್ಮಿಕ ಪದ್ಧತಿಯನ್ನು ವಿರೋಧಿಸುತ್ತಾ ಬಂದಿದ್ದಾರೆ. ಇಂತಹ ಸಂದರ್ಭದಲ್ಲಿ ನಮ್ಮ ಧಾರ್ಮಿಕ ಪದ್ಧತಿಗಳ ವಿರೋಧಿಸುತ್ತಾ ಬಂದವರಿಗೆ ವ್ಯಾಪಾರ ಮಳಿಗೆ ನೀಡುವುದು ಸಮಂಜಸವಲ್ಲ. ಈಗಾಗಲೇ ದಕ್ಷಿಣ ಕನ್ನಡ, ಶಿರಸಿ, ಶಿವಮೊಗ್ಗದಲ್ಲಿ ಜಾತ್ರೆಗಳ ವ್ಯಾಪಾರ ವಹಿವಾಟುಗಳನ್ನು ಹಿಂದೂಯೇತರರಿಗೆ ನೀಡದಿರಲು ಆಡಳಿತ ಮಂಡಳಿ ನಿರ್ಧರಿಸಿದೆ.

ಈ ಹಿನ್ನೆಲೆಯಲ್ಲಿ ದೇವಸ್ಥಾನದ ಆಡಳಿತಾ ಧಿಕಾರಿಯಾಗಿರುವ ತಾವು ಮುಜರಾಯಿ ಕಾಯ್ದೆ ಪ್ರಕಾರ ಹಿಂದುಯೇತರರಿಗೆ ಮುಜರಾಯಿ ದೇವಸ್ಥಾನಗಳ ಆಡಳಿತ, ವ್ಯಾಪಾರ ವಹಿವಾಟಿನಲ್ಲಿ ಅವಕಾಶ ನೀಡದಂತೆ ನಿರ್ಬಂಧ ವಿಧಿಸಬಹುದಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ವಿಶ್ವಹಿಂದೂ ಪರಿಷತ್‌ ಜಿಲ್ಲಾ ಉಪಾಧ್ಯಕ್ಷ ಐ.ವಿ.ಹೆಗಡೆ, ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ ಕಾಮತ್‌, ವಿಶ್ವಹಿಂದೂ ಪರಿಷತ್‌ ತಾಲೂಕು ಅಧ್ಯಕ್ಷ ರವೀಶ್‌, ಕಾರ್ಯದರ್ಶಿ ನಂದೀಶ್‌ ಸೂರಗುಪ್ಪೆ, ಸುದರ್ಶನ್‌ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next