Advertisement

ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ಗೆ ಸುಮಲತಾ ಬ್ರಹ್ಮಾಸ್ತ್ರ

01:13 AM Feb 04, 2019 | Team Udayavani |

ಮಂಡ್ಯ: 2019ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸುಮಲತಾ ಅಂಬರೀಶ್‌ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುವರೆಂಬ ಘೋಷವಾಕ್ಯದೊಂದಿಗೆ ಜೆಡಿಎಸ್‌ ವಿರುದ್ಧ ಬ್ರಹ್ಮಾಸ್ತ್ರ ಪ್ರಯೋಗಿಸಿದೆ.

Advertisement

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಪ್ರಚಂಡ ಗೆಲುವಿನ ಸುನಾಮಿಗೆ ಸಿಲುಕಿ ಶೋಚನೀಯ ಸ್ಥಿತಿ ತಲುಪಿರುವ ಕಾಂಗ್ರೆಸ್‌ಗೆ ಸುಮಲತಾ ಅಂಬರೀಶ್‌ ಈಗ ಅನಿವಾರ್ಯ ಅಭ್ಯರ್ಥಿಯಾಗಿದ್ದಾರೆ. ಅವರ ಸ್ಪರ್ಧೆ ವಿಚಾರವನ್ನು ತೇಲಿಬಿಟ್ಟು ಅಸ್ತಿತ್ವ ಕಂಡುಕೊಳ್ಳುವ ಪ್ರಯತ್ನಕ್ಕೆ ಕಾಂಗ್ರೆಸ್‌ ಮುಂದಾಗಿದೆ.

ಮೈತ್ರಿ ವಿಚಾರದಲ್ಲಿ ನೂರಕ್ಕೆ ನೂರರಷ್ಟು ಮಂಡ್ಯ ಕ್ಷೇತ್ರ ಜೆಡಿಎಸ್‌ ಪಾಲಾಗಲಿದೆ ಎಂಬ ಸನ್ನಿವೇಶ ಸೃಷ್ಟಿಯಾಗಿದ್ದ ಸಮಯದಲ್ಲೇ ಹತಾಶ ಕಾಂಗ್ರೆಸಿಗರು ಸುಮಲತಾ ಸ್ಪರ್ಧೆಯನ್ನು ಅಸ್ತ್ರವಾಗಿಸಿಕೊಂಡು ಹೋರಾಟ ನಡೆಸುತ್ತಿರುವಂತೆ ಕಂಡುಬರುತ್ತಿದ್ದಾರೆ.

ಮಂಡ್ಯ ಜೆಡಿಎಸ್‌ಗೆ ಅತಿ ದೊಡ್ಡ ಶಕ್ತಿ ಕೇಂದ್ರವಾಗಿ ರುವುದಲ್ಲದೆ, ಸುರಕ್ಷಿತ ಕ್ಷೇತ್ರವೂ ಆಗಿದೆ. ಈ ನೆಲದಲ್ಲಿ ಜೆಡಿಎಸ್‌ನ್ನು ಸಮರ್ಥವಾಗಿ ಎದುರಿಸಬೇಕಾದರೆ ಅಂಬರೀಶ್‌ ಸಾವಿನ ಅನುಕಂಪ, ಸುಮಲತಾ ಚುನಾವಣಾ ಸ್ಪರ್ಧಾಸಕ್ತಿ, ಕನ್ನಡ ಹಾಗೂ ತೆಲುಗು ಚಿತ್ರರಂಗದ ಸಮೂಹದೊಂದಿಗೆ ಚುನಾವಣಾ ಪ್ರಚಾರ ನಡೆಸಿ ಗೆಲ್ಲುವ ವಿಶ್ವಾಸ ಕಾಂಗ್ರೆಸ್‌ನಲ್ಲಿದೆ.

ರಾಜಕೀಯ ದಾಳ: ಇಲ್ಲಿಯವರೆಗೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಡುವೆ ಸೀಟು ಹಂಚಿಕೆ ವಿಚಾರ ಮುಖ್ಯ ವಾಹಿನಿಯಲ್ಲಿ ಚರ್ಚೆಯಾಗುತ್ತಿತ್ತು. ಮಂಡ್ಯ ಹೊರತು ಪಡಿಸಿ ಉಳಿದ ಕ್ಷೇತ್ರಗಳಲ್ಲಿ ಸೋಲು-ಗೆಲುವು, ಜಾತಿ ಬಲ, ಶಾಸಕರ ಬಲಾಬಲವನ್ನು ಆಧರಿಸಿ ಸೀಟು ಹಂಚಿ ಕೆಯ ಲೆಕ್ಕಾಚಾರ ನಡೆಸಲಾಗುತ್ತಿದೆ. ಆದರೆ, ಮಂಡ್ಯ ಕ್ಷೇತ್ರದಲ್ಲಿ ಸ್ಥಳೀಯ ಸಂಸ್ಥೆಯಿಂದ ಹಿಡಿದು ವಿಧಾನಸಭೆ, ವಿಧಾನಪರಿಷತ್‌, ಲೋಕಸಭೆಯವರೆಗೂ ಜೆಡಿಎಸ್‌ ಅಧಿಕಾರದಲ್ಲಿದೆ. ಅಂಬರೀಶ್‌ ಸಾವಿನ ಬಳಿಕ ಜಿಲ್ಲೆಯಲ್ಲಿ ರಾಜಕೀಯ ಲೆಕ್ಕಾಚಾರ ಬದಲಾವಣೆಯಾಗಿದೆ. ಅಂಬಿ ಸಾವಿನ ಅನುಕಂಪದ ಅಲೆಯಲ್ಲಿ ಅಧಿಕಾರದ ದಡ ಸೇರುವ ಪ್ರಯತ್ನವನ್ನು ಕಾಂಗ್ರೆಸ್‌ ನಡೆಸಿದ್ದು, ಅದಕ್ಕೆ ಸುಮಲತಾ ಹೆಸರನ್ನು ತೇಲಿಬಿಟ್ಟು ರಾಜಕೀಯ ದಾಳ ಉರುಳಿಸಿದೆ.

Advertisement

ಬದಲಾದ ಚಿತ್ರಣ: ರಾಜಕೀಯ ಪ್ರವೇಶಿಸುವ ಹಾಗೂ ಚುನಾವಣೆಗೆ ಸ್ಪರ್ಧಿಸುವ ಆಸಕ್ತಿ ಸುಮಲತಾ ಅವರಲ್ಲಿ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಕಾಂಗ್ರೆಸ್‌ ಪಾಲಿಗಂತೂ ಅವರು ಮಂಡ್ಯಕ್ಕೆ ಅನಿವಾರ್ಯ ಅಭ್ಯರ್ಥಿ ಯಾಗಿದ್ದಾರೆ. ಮಂಡ್ಯ ಲೋಕಸಭಾ ಉಪ ಚುನಾವಣೆ ಸಮಯದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸುವ ಅಭ್ಯರ್ಥಿಯೇ ಇರಲಿಲ್ಲ. ಅಂತಿಮವಾಗಿ ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಪ್ರಯತ್ನವನ್ನೇ ನಡೆಸದೆ ಮೈತ್ರಿಗೆ ಶರಣಾಗಿದ್ದರು. ಆದರೆ, ಬದಲಾದ ಸನ್ನಿವೇಶದಲ್ಲಿ ಈಗ ಕಾಂಗ್ರೆಸ್‌ಗೆ ಸುಮಲತಾ ಪ್ರಬಲ ಅಭ್ಯರ್ಥಿಯಾಗಿ ಕಂಡುಬಂದಿದ್ದಾರೆ. ಇದು ಜಿಲ್ಲೆಯ ರಾಜಕೀಯ ಚಿತ್ರಣ ಬದಲಾವಣೆಗೂ ಕಾರಣವಾಗಿದೆ.

ಕಾಂಗ್ರೆಸ್‌ ಲೆಕ್ಕಾಚಾರ: 2019ರ ಲೋಕಸಭಾ ಚುನಾ ವಣೆಯಲ್ಲಿ ಕಾಂಗ್ರೆಸ್‌ ಪಕ್ಷದೊಳಗೆ ಸುಮಲತಾ ಇರುವ ಕಾರಣ ಸ್ಪರ್ಧಿಸುವ ಅವಕಾಶಕ್ಕೆ ಜೆಡಿಎಸ್‌ ಎದುರು ಬೇಡಿಕೆ ಇಟ್ಟಿದೆ. ಇದು ಜೆಡಿಎಸ್‌ನ್ನು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ. ಇಂದಿನ ಸನ್ನಿವೇಶದಲ್ಲಿ ಜೆಡಿಎಸ್‌ಗೆ ಪ್ರಬಲ ವಾದ ಎದುರಾಳಿಯಾಗಬಹುದಾದ ಏಕೈಕ ಅಭ್ಯರ್ಥಿ ಎಂದರೆ ಸುಮಲತಾ ಎನ್ನುವುದು ಕಾಂಗ್ರೆಸ್ಸಿಗರ ಮನಸ್ಸಿನ ಲ್ಲಿದೆ. ಏಕೆಂದರೆ, ಅಂಬರೀಶ್‌ ಜೆಡಿಎಸ್‌ ವರಿಷ್ಠರು ಹಾಗೂ ಸ್ಥಳೀಯ ನಾಯಕ ರೊಂದಿಗೆ ರಾಜಕೀಯವಾಗಿ ಕಾಂಗ್ರೆಸ್ಸಿಗಿಂತಲೂ ಹೆಚ್ಚು ವಿಶ್ವಾಸದಲ್ಲಿದ್ದರು. ಹಾಗಾಗಿ ಜೆಡಿಎಸ್‌ ನಾಯಕರು ಅಂಬರೀಶ್‌ ಕುಟುಂಬವನ್ನು ಪ್ರಬಲವಾಗಿ ಹಾಗೂ ಅಷ್ಟೇ ನಿಷ್ಠುರವಾಗಿ ಎದುರಿಸಲು ಸಾಧ್ಯವಾಗದಂತಹ ಪರಿಸ್ಥಿತಿ ಸೃಷ್ಟಿಯಾಗಿದೆ. ಇದು ಪಕ್ಷಕ್ಕೆ ಲಾಭವಾಗಬಹುದು ಎನ್ನುವುದು ಕಾಂಗ್ರೆಸ್‌ ಲೆಕ್ಕಾಚಾರ.

ಅಂಬರೀಶ್‌ ಜತೆ ಯಾವುದೇ ಸಂದರ್ಭದಲ್ಲೂ ದ್ವೇಷವನ್ನು ಬೆಳೆಸಿಕೊಳ್ಳದ ಜೆಡಿಎಸ್‌ ಈಗ ಲೋಕಸಭಾ ಚುನಾವಣೆಯಲ್ಲಿ ಅಂಬರೀಶ್‌ ಕುಟುಂಬ ಹಾಗೂ ಬೆಂಬಲಿಗರನ್ನು ನೇರವಾಗಿ ಎದುರಿಸುವ ಶಕ್ತಿಯನ್ನು ಹೊಂದಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡು ಸುಮಲತಾ ಹೆಸರನ್ನು ಮುನ್ನೆಲೆಗೆ ತಂದು ಕಾಂಗ್ರೆಸ್‌ ಬ್ರಹ್ಮಾಸ್ತ್ರ ಪ್ರಯೋಗಿಸಿದೆ.

ರಕ್ಷಣಾತ್ಮಕ ಆಟ

ಮಂತ್ರಿ ಪದವಿಯಿಂದ ಪದಚ್ಯುತರಾದ ಬಳಿಕ ಅಂಬರೀಶ್‌ ಜೆಡಿಎಸ್‌ ಪರ ನಿಂತಿದ್ದರು. ಸಾವಿನ ಕೊನೆಯ ದಿನಗಳಲ್ಲೂ ಜೆಡಿಎಸ್‌ ಪರವಾಗಿಯೇ ಮಾತನಾಡುತ್ತಿದ್ದರಲ್ಲದೆ, ಲೋಕಸಭಾ ಉಪ ಚುನಾವಣೆಯಲ್ಲೂ ಮದ್ದೂರು ಶಾಸಕ ಡಿ.ಸಿ.ತಮ್ಮಣ್ಣರ ಜತೆಯಲ್ಲಿಯೇ ಆಗಮಿಸಿ ಮತ ಚಲಾಯಿಸಿದ್ದರು. ಅಂಬರೀಶ್‌ ಸಾವಿನ ಬಳಿಕ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಅಂಬರೀಶ್‌ ಕಾಂಗ್ರೆಸ್ಸಿಗರು ಎಂದು ಹೇಳುತ್ತಾ ರಾಜಕೀಯವಾಗಿ ರಕ್ಷಣಾತ್ಮಕ ಆಟವಾಡುತ್ತಿದ್ದಾರೆ. ಆ ಕುಟುಂಬಕ್ಕೂ ನಮಗೂ ಸಂಬಂಧವಿಲ್ಲವೆಂಬಂತೆ ಮಾತನಾಡುತ್ತಿದ್ದಾರೆ.

ಮಂಡ್ಯ ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next