Advertisement

ಸುದೀಪ್‌ ಹೇಳಿದ ಭವಿಷ್ಯ ನಿಜವಾಯಿತು: ರಾಜರು ಬಂದರು

09:47 AM Apr 28, 2017 | Team Udayavani |

ನಿರಂಜನ್‌ ಶೆಟ್ಟಿ ನಾಯಕರಾಗಿರುವ “ರಾಜರು’ ಚಿತ್ರದ ಆಡಿಯೋ ಬಿಡುಗಡೆ ಇತ್ತೀಚೆಗೆ ನಡೆಯಿತು. ಈ ಹಿಂದೆ ಸುದೀಪ್‌ ಅವರ ಜೊತೆ ಸಹಾಯಕ ನಿರ್ದೇಶಕರಾಗಿದ್ದ ಗಿರೀಶ್‌ ಮೂಲಿಮನಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಹಾಗಾಗಿ, ಚಿತ್ರದ ಆಡಿಯೋ ಬಿಡುಗಡೆಗೆ ಸುದೀಪ್‌ ಅವರನ್ನು ಆಹ್ವಾನಿಸಿದ್ದರು. ಸುದೀಪ್‌ ಬಂದ ಖುಷಿಯಲ್ಲಿದ್ದ ಗಿರೀಶ್‌, “ಸುದೀಪ್‌ ಅವರ ಜೊತೆ “ಕೆಂಪೇಗೌಡ’ ಚಿತ್ರದಲ್ಲಿ ಸಹಾಯಕ ನಿರ್ದೇಶಕನಾಗಿದ್ದಾಗ ಸಾಕಷ್ಟು ಕಲಿತಿದ್ದೇನೆ, ಏಟನ್ನು ಹೊಡೆಸಿಕೊಂಡಿದ್ದೇನೆ. ಅದೊಂದು ದಿನ ಸುದೀಪ್‌ ಅವರು ನಿನಗೆ ಸ್ವತಂತ್ರವಾಗಿ ನಿರ್ದೇಶನ ಮಾಡುವ ಶಕ್ತಿ ಇದೆ ಎಂದು ಹೇಳಿದ್ದರು. ಅದರಂತೆ ಈಗ ಸಿನಿಮಾ ನಿರ್ದೇಶನ ಮಾಡಿದ್ದೇನೆ’ ಎಂದರು.

Advertisement

ಗಿರೀಶ್‌ ಅವರ ಈ ಮಾತು ಅಲ್ಲೊಂದು ನಗುವಿಗೆ ವೇದಿಕೆ ಸೃಷ್ಟಿಸಿತು. ಮೈಕ್‌ ಎತ್ತಿಕೊಂಡ ಸುದೀಪ್‌, “ಆಗ ನಾನು ಯಾರಿಗೂ ಹೊಡೆದಿಲ್ಲ, ಈಗ ಹೊಡೆಯಬೇಕಾಗುತ್ತದೆ. ಮಾತನಾಡುವ ಖುಷಿಯಲ್ಲಿ ಗಿರೀಶ್‌ ಹೊಡೆದೆನೆಂದು ಹೇಳಿ ಒಳ್ಳೆಯ ಕಾಣಿಕೆ ಕೊಟ್ಟರು’ ಎಂದು ತಮಾಷೆಯಾಗಿಯೇ ಹೇಳಿದ ಸುದೀಪ್‌, ಚಿತ್ರದ ಹಾಡುಗಳ ಹಾಗೂ ಮೇಕಿಂಗ್‌ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕ್ಲಾಪ್‌ ಬೋರ್ಡ್‌ ಹಿಡಿದವನು ನಿರ್ದೇಶಕನಾಗುತ್ತಾನೆ, ಡ್ಯಾನ್ಸರ್‌ಗಳು ನಾಯಕ-ನಾಯಕಿಯಾಗುತ್ತಾರೆ ಎಂದ ಸುದೀಪ್‌, ಸಂಗೀತ
ನಿರ್ದೇಶಕ ಶ್ರೀಧರ್‌ ವಿ ಸಂಭ್ರಮ್‌ ಅವರ ಬಗ್ಗೆ ಮಾತನಾಡಲು ಮರೆಯಲಿಲ್ಲ. “ಶ್ರೀಧರ್‌ ಈಗಾಗಲೇ ಮೆಲೋಡಿ ಕಿಂಗ್‌
ಎಂಬುದನ್ನು ಸಾಬೀತು ಮಾಡಿದ್ದಾರೆ. ನನ್ನ ಅಮ್ಮನ ಮೊಬೈಲ್‌ನಲ್ಲಿ ಇವತ್ತಿಗೂ “ಮುಸ್ಸಂಜೆ ಮಾತು’ ಚಿತ್ರದ “ಏನಾಗಲಿ …’ ಹಾಡಿನ
ಕಾಲರ್‌ ಟ್ಯೂನ್‌ ಇದೆ’ ಎನ್ನುತ್ತಾ ಶ್ರೀಧರ್‌ ಅವರ ಬೆನ್ನು ತಟ್ಟಿದರು.

ಇಲ್ಲಿ “ರಾಜರು’ ಯಾರು, ಅವರೇಕೆ ಬರುತ್ತಾರೆ, ರಾಣಿಯ ಹಿಂದೆ ಏಕೆ ಬೀಳುತ್ತಾರೆ ಎಂಬ ಕುತೂಹಲವಿದ್ದರೆ ಸಿನಿಮಾ
ಬಿಡುಗಡೆಯಾಗುವವರೆಗೆ ಕಾಯಲೇಬೇಕು. ಏಕೆಂದರೆ,ನಿದೆ ನಿರ್ದೇಶಕ ಗಿರೀಶ್‌ ಆ ಬಗ್ಗೆ ಗುಟ್ಟು ಬಿಟ್ಟುಕೊಡಲು ರೆಡಿಯಿಲ್ಲ. ನಾಯಕ ನಿರಂಜನ್‌ ಶೆಟ್ಟಿಗೆ “ರಾಜರು’ ಮೂಲಕ ಬ್ರೇಕ್‌ ಸಿಗುವ ನಿರೀಕ್ಷೆ. ಜೊತೆಗೆ ಕ್ಲೈಮ್ಯಾಕ್ಸ್‌ ಚಿತ್ರದ ನಿಜವಾದ ಶಕ್ತಿ ಎಂಬುದು ಅವರ ಮಾತು. ನಾಯಕಿ ಶಾಲಿನಿ ಕೂಡಾ ತಮ್ಮ ಅನುಭವ ಹಂಚಿಕೊಂಡರು. ಸಂಗೀತ ನಿರ್ದೇಶಕ ಶ್ರೀಧರ್‌ ಸಂಭ್ರಮ್‌ ಹಾಡುಗಳ ಬಗ್ಗೆ ಹೇಳಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next