Advertisement

ನೀರಿನಲ್ಲಿ ಮುಳುಗಿ ವಿದ್ಯಾರ್ಥಿ ಸಾವು

03:39 PM May 06, 2017 | Team Udayavani |

ಸಿದ್ದಾಪುರ: ಸ್ನೇಹಿತರೊಂದಿಗೆ ಸೇರಿ ನದಿಯಲ್ಲಿ ಈಜಲು ತೆರಳಿದ ವಿದ್ಯಾರ್ಥಿಯೊಬ್ಬ ವಾರಾಹಿ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಶುಕ್ರವಾರ ಶಂಕರನಾರಾಯಣದ ಶಾಡಿಗುಂಡಿ ಬಳಿ ಸಂಭವಿಸಿದೆ.

Advertisement

ಅಂಪಾರು ಮೂಡುಬಗೆ ನಿವಾಸಿ ಸುಬ್ಬಣ್ಣ ಶೆಟ್ಟಿ ಅವರ ಕಿರಿಯ ಪುತ್ರ ಅಮೋಘ ಶೆಟ್ಟಿ (19)  ಮೃತಪಟ್ಟವರು. ಆತ ಶಂಕರನಾರಾಯಣ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಮುಗಿಸಿದ್ದು, ಎರಡು ದಿನಗಳ ಹಿಂದೆ ಸಿಇಟಿ ಪರೀಕ್ಷೆ ಬರೆದಿದ್ದರು.

ಅಮೋಘ  ಹಾಗೂ  8 ವಿದ್ಯಾರ್ಥಿಗಳು ಮಧ್ಯಾಹ್ನ ಕುಂಬಾರಮಕ್ಕಿ ಬಳಿಯ ಶಾಡೆಗುಂಡಿ ಹತ್ತಿರದ ವಾರಾಹಿ ನದಿಗೆ ಈಜಲು ತೆರಳಿದ್ದರು. ಸ್ನೇಹಿತ ರೆಲ್ಲ ಸೇರಿ ಈಜುತ್ತಿದ್ದರೆ, ಅಮೋಘ ಶೆಟ್ಟಿ ಮಾತ್ರ ಈಜು ಬಾರದ ಕಾರಣ ನದಿಯ ದಂಡೆಯ ಮೇಲೆ ಕುಳಿತು ನೋಡುತ್ತಿದ್ದರು.

ಇದ್ದಕ್ಕಿದ್ದಂತೆ ಸ್ನೇಹಿತನೊಬ್ಬ ನೀರಿನಲ್ಲಿ ಮುಳುಗಿದ್ದನ್ನು ನೋಡಿ ಆತನನ್ನು ರಕ್ಷಿಸಲು ಅಮೋಘ ಸಹಿತ ಎಲ್ಲರೂ ನೀರಿಗೆ ಧುಮುಕಿದ್ದರು. ಮುಳುಗಿದವನು ಸೇರಿ ಇನ್ನೀತರ ಸ್ನೇಹಿತರು ನೀರಿನಿಂದ ಮೇಲೆ ಬಂದರು. ಆದರೆ ಅಮೋಘ ಸುಳಿಗೆ ಸಿಲುಕಿ ಮೃತಪಟ್ಟರು. 

ಅಮೋಘ ಶೆಟ್ಟಿ ಅವರ ತಂದೆ ಸುಬ್ಬಣ್ಣ ಶೆಟ್ಟಿ ಗುತ್ತಿಗೆದಾರರಾಗಿದ್ದು, ತಾಯಿ ಕೆಲವು ವರ್ಷಗಳ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next