Advertisement

ಗ್ರಾಪಂನಲ್ಲಿ ಭ್ರಷ್ಟಾಚಾರ ಕೊನೆಗಾಣಿಸಲು ಶ್ರಮಿಸಿ

11:34 PM Oct 02, 2019 | Lakshmi GovindaRaju |

ಬೆಂಗಳೂರು: “ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಭ್ರಷ್ಟಾಚಾರವನ್ನು ಕೊನೆಗಾಣಿಸಲು ಶ್ರಮಿಸಿ. ಪ್ರಾಮಾಣಿಕತೆ, ಅಭಿವೃದ್ಧಿ ಕಡೆಗೆ ಗಮನ ನೀಡಿ’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಗ್ರಾಮ ಪಂಚಾಯ್ತಿ ಪ್ರತಿನಿಧಿಗಳಿಗೆ ಕರೆ ನೀಡಿದರು.

Advertisement

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯಿಂದ ಗಾಂಧಿ ಜಯಂತಿ ಪ್ರಯುಕ್ತ ವಿಧಾನಸೌಧದ ಬ್ಯಾಂಕ್ವೆಟ್‌ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ “ಗಾಂಧಿ ಗ್ರಾಮ ಪುರಸ್ಕಾರ’ ಪ್ರದಾನ ಮಾಡಿ ಅವರು ಮಾತನಾಡಿದರು. ಗ್ರಾಮ ಪಂಚಾಯ್ತಿ ಮಟ್ಟದಲ್ಲಿನ ಭ್ರಷ್ಟಾಚಾರವನ್ನು ಕೊನೆಗೊಳಿಸಲು ಎಷ್ಟರ ಮಟ್ಟಿಗೆ ಶ್ರಮ ವಹಿಸುತ್ತೀರೋ, ಅಷ್ಟರ ಮಟ್ಟಿಗೆ ಅಭಿವೃದ್ಧಿಯಾಗುತ್ತದೆ. ಇಲ್ಲದಿದ್ದರೆ ಹಣ ದುರುಪಯೋಗವಾಗುತ್ತದೆ ಎಂದು ಹೇಳಿದರು.

ಸ್ವಂತ ಸಂಪನ್ಮೂಲ ಸೃಷ್ಟಿಸಿಕೊಳ್ಳಲು ಆದ್ಯತೆ ಕೊಡಿ: ಮಹಾತ್ಮ ಗಾಂಧೀಜಿಯವರು ಪ್ರತಿ ಪಾದಿಸಿದ ಗ್ರಾಮ ಸ್ವರಾಜ್ಯ ಕಲ್ಪನೆಗೆ ಬದ್ಧರಾಗಿ ಎಲ್ಲ ಸರ್ಕಾರಗಳು ಪಂಚಾಯತ್‌ರಾಜ್‌ ವ್ಯವಸ್ಥೆಗೆ ಸಾಂಸ್ಥಿಕ ರೂಪ ನೀಡುತ್ತಾ ಬಂದಿವೆ. ನಮ್ಮ ಸರ್ಕಾರವು ವಿಕೇಂದ್ರೀಕರಣ ವ್ಯವಸ್ಥೆ ಯನ್ನು ಬಲಪಡಿಸಿ ಮತ್ತಷ್ಟು ಶಕ್ತಿಶಾಲಿಯ ನ್ನಾ ಗಿಸಲು ಬದ್ಧವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ನೀಡುವ ಅನುದಾನವನ್ನು ಗ್ರಾಮ ಪಂಚಾಯ್ತಿಗಳು ಸಮರ್ಥವಾಗಿ ಬಳಸಿಕೊಂಡು ಗ್ರಾಮೀಣಾಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿವೆ.

ಗ್ರಾಪಂಗಳು ಅವಕಾಶವಿದ್ದಲ್ಲಿ ತಮ್ಮದೇ ಸಂಪನ್ಮೂಲ ಸೃಷ್ಟಿಸಿಕೊಳ್ಳಲು ಆದ್ಯತೆ ನೀಡಬೇಕು ಎಂದು ಹೇಳಿದರು. ಪಂಚಾಯತ್‌ರಾಜ್‌ ಸಂಸ್ಥೆಗಳ ಆಡಳಿತ ವನ್ನು ಪಾರದರ್ಶಕಗೊಳಿಸಲು ಕಂಪ್ಯೂಟರ್‌ ಅಪ್ಲಿಕೇಷನ್‌ ವ್ಯವಸ್ಥೆಯನ್ನು ಪೂರ್ಣವಾಗಿ ಜಾರಿಗೊಳಿಸಲು ಸರ್ಕಾರ ಬದ್ಧವಾಗಿದೆ. ಈ ದೃಷ್ಟಿಯಿಂದಲೇ ಗ್ರಾಮ ಪಂಚಾಯ್ತಿ ಗಳ ಆಸ್ತಿಗಳು ಮತ್ತು ದಾಖಲೆಗಳ ಗಣಕೀಕರಣ ದತ್ತ ಸರ್ಕಾರ ಹೆಜ್ಜೆ ಇಡುತ್ತಿದೆ.

ಗ್ರಾಪಂಗಳಿಗೆ ಹೆಚ್ಚಿನ ಜವಾಬ್ದಾರಿ ನೀಡಲು ಕೆಡಿಪಿ ಸಭೆಯನ್ನು ನಡೆಸುವ ಹೊಣೆಗಾರಿಕೆಯನ್ನು ಹಸ್ತಾಂತರಿಸಿ ಗ್ರಾಮ ಹಂತದಲ್ಲಿ ಇರುವ ಎಲ್ಲ ಸರ್ಕಾರದ ಅಧಿಕಾರಿ, ಸಿಬ್ಬಂದಿ ಸಭೆಗೆ ಹಾಜರಾಗುವುದನ್ನು ಕಡ್ಡಾಯಗೊಳಿಸಲಾಗಿದೆ. ಗ್ರಾಮ ಹಂತದಲ್ಲಿ ಸರ್ಕಾರದ 29 ಇಲಾಖೆಗಳು ಅನುಷ್ಠಾನಗೊಳಿಸುಡಿವ ಯೋಜನೆ ಗಳು ಫ‌ಲಪ್ರದವಾಗಲು ಗ್ರಾಮ ಪಂಚಾಯ್ತಿ ಯನ್ನು ಸದೃಢಗೊಳಿಸುವುದು ಇದರ ಉದ್ದೇಶ ಎಂದು ತಿಳಿಸಿದರು.

Advertisement

ತಲಾ 5 ಲಕ್ಷ ರೂ. ಪ್ರಶಸ್ತಿ: 2018-19ನೇ ಸಾಲಿನ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾದ 176 ಗ್ರಾಮ ಪಂಚಾಯ್ತಿಗೆ ತಲಾ 5 ಲಕ್ಷ ರೂ.ಪ್ರಶಸ್ತಿ ಹಣ ನೀಡಲಾಯಿತು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್‌.ಆರ್‌.ವಿಶ್ವನಾಥ್‌, ರಾಜ್ಯ ಯೋಜನಾ ಮಂಡಳಿ ಉಪಾ ಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ಉಪಸ್ಥಿತರಿದ್ದರು.

ಉದ್ಯೋಗ ಖಾತರಿ – ಸ್ಥಗಿತ ಇಲ್ಲ: ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಉದ್ಯೋಗ ಖಾತರಿ ಯೋಜನೆಯನ್ನು ಸ್ಥಗಿತ ಗೊಳಿಸುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ ಸ್ಪಷ್ಟಪಡಿಸಿದರು. ಗಾಂಧಿ ಗ್ರಾಮ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ರಾಜ್ಯದಲ್ಲಿ ನರೇಗಾ ಯೋಜನೆಯನ್ನು ಸ್ಥಗಿತಗೊಳಿಸಲಾಗುತ್ತಿದ್ದು, ಕಳೆದ ಮೂರ್‍ನಾಲ್ಕು ತಿಂಗಳಿನಿಂದ ಕೇಂದ್ರ ಸರ್ಕಾರ ಕೂಲಿ ಹಣ ಬಿಡುಗಡೆ ಮಾಡಿಲ್ಲ ಎಂಬುದಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಟ್ವೀಟ್‌ ಮಾಡಿದ್ದಾರೆ. ಆದರೆ, ಸಿದ್ದರಾಮಯ್ಯ ಅವರ ಆರೋಪ ಕೇಳಿ ನನಗೆ ಆಶ್ಚರ್ಯವಾಯಿತು. ಯಾವುದೇ ಕಾರಣಕ್ಕೂ ಉದ್ಯೋಗ ಖಾತರಿ ಯೋಜನೆ ಸ್ಥಗಿತಗೊಳಿಸುವ ಪ್ರಶ್ನೆಯೇ ಇಲ್ಲ ಎಂದರು.

ಕೇಂದ್ರ ಸರ್ಕಾರದಿಂದ ಬರ ಬೇಕಿದ್ದ 485 ಕೋಟಿ ರೂ.ಬಾಕಿ ಪೈಕಿ, ಬುಧವಾರ 347 ಕೋಟಿ ರೂ.ಬಿಡುಗಡೆಯಾಗಿದ್ದು, 86 ಕೋಟಿ ರೂ. ಬಾಕಿ ಬರಬೇಕಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಕೂಲಿ ಹಣ ಹಾಗೂ ಸಾಮಗ್ರಿ ಹಣ ಸೇರಿ ಒಟ್ಟು 950 ಕೋಟಿ ರೂ.ಬಾಕಿ ಹಣ ಬಿಡುಗಡೆಯಾಗಿದ್ದು, ಇದಕ್ಕಾಗಿ ಪ್ರಧಾನಿ ಮೋದಿಯವರನ್ನು ಅಭಿನಂದಿಸಲಾಗುವುದು ಎಂದರು. ರಾಜ್ಯದ 6,022 ಗ್ರಾಪಂ ಗಳ ಪೈಕಿ ತಾಲೂಕಿಗೊಂದರಂತೆ 176 ಗ್ರಾಪಂಗಳು ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. 176 ಗ್ರಾಪಂಗಳು ಇತರರಿಗೆ ಮಾದರಿಯಾಗಿವೆ. ಆದರೆ ಎರಡನೇ, ಮೂರನೇ ಸ್ಥಾನ ಪಡೆದವರು ಮುಂದೆ ಮೊದಲ ಸ್ಥಾನಕ್ಕೆ ಬರಲು ಪ್ರೇರಣೆ ನೀಡಬೇಕಿದೆ ಎಂದರು.

ಕುಡಿಯುವ ನೀರು ಹಾಗೂ ತುರ್ತು ಸ್ಪಂದನೆಗಾಗಿ ಜಿಲ್ಲಾ ಪಂಚಾಯತ್‌ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಟಾಸ್ಕ್ಫೋರ್ಸ್‌ ರಚಿಸಲು ತೀರ್ಮಾನಿಸಲಾಗಿದ್ದು, ಪ್ರತಿ ಜಿಲ್ಲಾ ಪಂಚಾಯತ್‌ಗೆ ತಲಾ 1 ಕೋಟಿ ರೂ.ಅನುದಾನ ನೀಡಲಾಗುವುದು. ಉತ್ತರ ಕರ್ನಾಟಕದ 10-12 ಜಿಲ್ಲೆಯ ಜನರ ಅನುಕೂಲಕ್ಕಾಗಿ ಬೆಳಗಾವಿಯ ಸುವರ್ಣ ಸೌಧದಲ್ಲಿ ಇಲಾಖೆಯ ವಿಶೇಷ ಕಚೇರಿ ಆರಂಭಿಸಿ, ಆಡಳಿತಾತ್ಮಕ ಹಾಗೂ ಆರ್ಥಿಕ ಅನುಮೋದನೆ ನೀಡುವ ಅಧಿಕಾರ ನೀಡಲಾಗುವುದು ಎಂದು ಹೇಳಿದರು.

ಶಾಸಕರು, ಸಂಸದರನ್ನು ಆಯ್ಕೆ ಮಾಡುವ ಮತದಾರರು ದೊಡ್ಡ ಸಂಖ್ಯೆಯಲ್ಲಿರುತ್ತಾರೆ. ಆದರೆ ಗ್ರಾಮ ಪಂಚಾಯ್ತಿಯಲ್ಲಿ ಸೀಮಿತ ಮತದಾರರಿರುತ್ತಾರೆ. ನಿಮ್ಮ ಪ್ರತಿಯೊಂದು ಹೆಜ್ಜೆಯನ್ನು ಜನ ಗಮನಿಸುತ್ತಿರುತ್ತಾರೆ. ಏನೇ ಹೇಳಿದರೂ ನಡೆ, ನುಡಿ, ವ್ಯವಹಾರವನ್ನು ಜನ ಗಮನಿಸುತ್ತಿರುತ್ತಾರೆ ಎಂಬುದು ತಿಳಿದಿರಲಿ.
-ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ

ಮಹಾತ್ಮ ಗಾಂಧಿಯವರ ಗ್ರಾಮ ಸ್ವರಾಜ್ಯದ ಕನಸು ನನಸಾಗತೊಡಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಸ್ವತ್ಛ ಭಾರತ, ಫಿಟ್‌ ಇಂಡಿಯಾ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಜತೆಗೆ, ಗ್ರಾಮೀಣ ಪ್ರದೇಶದ ಮೂಲ ಸೌಕರ್ಯಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ.
-ಲಕ್ಷ್ಮಣ ಸವದಿ, ಉಪಮುಖ್ಯಮಂತ್ರಿ

ಮೋದಿಯವರಿಗೆ “ಫಿಟ್‌ ಇಂಡಿಯಾ’ ಪರಿಕಲ್ಪನೆಯ ವಿಶೇಷ ಯೋಜನೆಯನ್ನು ಗ್ರಾಮ ಪಂಚಾಯ್ತಿ ಮೂಲಕ ಜಾರಿಗೊಳಿಸುವ ಅಪೇಕ್ಷೆ ಇದೆ. ಗ್ರಾಮೀಣ ಯುವಜನತೆ, ಹೆಣ್ಣು ಮಕ್ಕಳು, ಇತರರು ಉತ್ತಮ ಆರೋಗ್ಯ ಕಾಯ್ದುಕೊಳ್ಳಲು ಪೂರಕವಾಗಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ತೆರೆದ ವ್ಯಾಯಾಮ ಶಾಲೆ ಆರಂಭಿಸಲು ತೀರ್ಮಾನಿಸಲಾಗಿದೆ.
-ಕೆ.ಎಸ್‌.ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next