Advertisement

ಸಂಪೂರ್ಣ ಮಲಿನಗೊಂಡ ತೋಡಿನ ಬದಿಯೇ ಜನ ಜೀವನ; ಸಾಂಕ್ರಾಮಿಕ ರೋಗ ಭೀತಿ

12:01 PM May 25, 2018 | |

ಮಹಾನಗರ: ಮನೆಗಳಿಗೆ ತಾಗಿಕೊಂಡೇ ಇರುವ ತೋಡಿನಲ್ಲಿ ಹಲವು ವರ್ಷಗಳಿಂದ ನಿಂತಿರುವ ನೀರು..ತ್ಯಾಜ್ಯ, ಕೆಸರು, ಗಲೀಜು ಸೇರಿ ಸಂಪೂರ್ಣ ಮಲಿನಗೊಂಡ ಈ ತೋಡು ಸೊಳ್ಳೆ ಉತ್ಪತ್ತಿ ತಾಣವೂ ಹೌದು..ಮನೆಯೊಳಗೆ ಕಾಲಿಟ್ಟಂತೆ ಕೆಟ್ಟ ವಾಸನೆಯ ಉಸಿರಾಟ.. ಮಳೆಗಾಲದಲ್ಲಿ ನಿತ್ಯ ಸಾಂಕ್ರಾಮಿಕ ರೋಗ ಭೀತಿಯಲ್ಲಿರುವ ನಿವಾಸಿಗಳು.

Advertisement

ಸುರತ್ಕಲ್‌ ಹೊಸಬೆಟ್ಟು ಫಿಶರೀಸ್‌ ರಸ್ತೆಯಲ್ಲಿರುವ ಸ್ನೇಹನಗರ ಲೇಔಟ್‌ ನಿವಾಸಿಗಳನ್ನು ಸರ್ವಋತುಗಳಲ್ಲಿಯೂ ಕಾಡುವ ಈ ಸಮಸ್ಯೆಗೆ ವರ್ಷಗಳುರುಳಿದರೂ ಮುಕ್ತಿ ಇಲ್ಲ. 

ಸ್ನೇಹನಗರ ಲೇಔಟ್‌ನ ಎಡ ಮತ್ತು ಬಲ ಎರಡೂ ಭಾಗದಲ್ಲಿ ಮನೆ ಕಟ್ಟಿಕೊಂಡು ಸುಮಾರು ಹದಿನೈದು ಕುಟುಂಬಗಳು ವಾಸಿಸುತ್ತಿವೆ. ಎರಡೂ ಭಾಗಗಳಿಗೆ ಸಂಪರ್ಕಗೊಂಡ ತೋಡು ಇಲ್ಲಿದೆ. ಆದರೆ ಈ ತೋಡು ಇಲ್ಲಿನ ನಿವಾಸಿಗಳ ಪಾಲಿಗೆ ಭಯದ ವಾತಾವರಣವನ್ನು ಹುಟ್ಟಿಸಿದೆ. ಸುಮಾರು ನಾಲ್ಕು ಅಡಿ ಅಗಲ ಇರುವ ತೋಡಿನಲ್ಲಿ ನೀರು ಸಂಗ್ರಹವಾಗುತ್ತಿದ್ದು, ನೀರಿನ ಮಟ್ಟ ಏರುತ್ತಲೇ ಇದೆಯೇ ಹೊರತು ಹರಿದು ಹೋಗುತ್ತಿಲ್ಲ. ಹಲವು ವರ್ಷಗಳಿಂದ ಇಲ್ಲಿ ಇದೇ ಪರಿಸ್ಥಿತಿ ಮುಂದುವರಿಯುತ್ತಿದೆ. ತ್ಯಾಜ್ಯ, ಕಸ ಸೇರಿ ಸಂಪೂರ್ಣ ಮಲಿನಗೊಂಡ ನೀರಿನ ಬಣ್ಣವೂ ಕಪ್ಪಾಗಿದ್ದು, ಮಳೆಗಾಲದಲ್ಲಿ ಸೊಳ್ಳೆ ಉತ್ಪತ್ತಿ ಮಾಡುವ ತಾಣವಾಗಿದೆ. ಇದರಿಂದ ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಭೀತಿಯೂ ಇಲ್ಲಿನ ಜನಗಳಿಗೆ ತಪ್ಪಿದ್ದಲ್ಲ. ಬೇಸಗೆಯ ಬಿರು ಬಿಸಿಲಿಗೆ ತೋಡಿನಿಂದ ಕೆಟ್ಟ ವಾಸನೆ ಬರುವುದಲ್ಲದೆ ಮೂಗು ಮುಚ್ಚಿಕೊಂಡೇ ವಾಸಿಸಬೇಕಿದೆ ಪರಿಸ್ಥಿತಿ ಇದೆ ಎಂದು ಸ್ನೇಹ ನಗರದ ನಿವಾಸಿಗಳು ತಿಳಿಸಿದ್ದಾರೆ.

ಮನೆಗೆ ತಾಗಿಕೊಂಡೇ ಇರುವ ತೋಡಿದು
ಗಮನಾರ್ಹ ವಿಚಾರವೆಂದರೆ ಈ ತೋಡಿಗೆ ತಾಗಿಕೊಂಡೇ ಅನೇಕ ಮನೆಗಳಿವೆ. ಇದರಿಂದಾಗಿ ಮನೆಯ ಬಾಗಿಲು ಪ್ರವೇಶಿಸುತ್ತಿದ್ದಂತೆಯೇ ಕೆಟ್ಟ ವಾಸನೆ ಮೂಗಿಗೆ ಬಡಿಯುತ್ತದೆ. ‘ನಾನು ನಾಲ್ಕು ವರ್ಷಗಳ ಹಿಂದೆ ಇಲ್ಲಿಗೆ ಬಂದು ಮನೆ ಕಟ್ಟಿಕೊಂಡು ವಾಸವಾಗಿದ್ದೇನೆ. ಮನೆ ಕಟ್ಟುವ ಸಮಯದಲ್ಲಿ ಬೇಸಗೆ ಕಾಲವಾದ್ದರಿಂದ ಈ ತೋಡಿನ ಬಗ್ಗೆ ಅಷ್ಟೊಂದು ಲಕ್ಷé ವಹಿಸಲಿಲ್ಲ. ಆದರೆ ಮಳೆಗಾಲದ ಬಳಿಕ ಅದರಿಂದಾಗುವ ತೊಂದರೆ ತಿಳಿಯಿತು. ನಮ್ಮ ಮನೆ ತೋಡಿಗೆ ತಾಗಿಕೊಂಡೇ ಇರುವುದರಿಂದ ಮನೆ ಬಾಗಿಲು ಪ್ರವೇಶಿಸುತ್ತಿದ್ದಂತೆಯೇ ವಾಸನೆ ಮೂಗಿಗೆ ಬಡಿಯುತ್ತದೆ. ವಾಸನೆ ಸಹಿಸಿ ಕೊಂಡೇ ಜೀವನ ಸಾಗಿಸುತ್ತಿದ್ದೇವೆ. ಪಾಲಿಕೆಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ’ಎನ್ನುತ್ತಾರೆ ಸ್ನೇಹನಗರ ನಿವಾಸಿಯೋರ್ವರು.

ಕಾರಣ ಗೊತ್ತಿಲ್ಲ
ತೋಡಿನಲ್ಲಿ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಿಕೊಡಿ ಎಂದು ಇಲ್ಲಿನ ನಿವಾಸಿಗಳು ಹಲವು ಬಾರಿ ಪಾಲಿಕೆಯ ಪ್ರಮುಖರಲ್ಲಿ ಮನವಿ ಮಾಡಿದ್ದಾರೆ. ಅವರಲ್ಲಿ ಹೇಳಿ, ಇವರಲ್ಲಿ ಹೇಳಿ ಎಂದು ಹೇಳುತ್ತಾರೆಯೇ ಹೊರತು ಈ ತೋಡಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವುದಕ್ಕೆ ಯಾರೂ ಮುಂದಾಗುತ್ತಿಲ್ಲ ಎಂದು ಸ್ಥಳೀಯರು ಅಳಲು ತೋಡಿಕೊಳ್ಳುತ್ತಾರೆ.

Advertisement

ಈ ಹಿಂದೆ ನೀರು ನಿಲುಗಡೆಗೊಂಡು ತೋಡಿಗೆ ತಾಗಿ ಕೊಂಡಿದ್ದ ಮನೆಯೊಂದರ ಕಾಂಪೌಂಡ್‌ ಗೋಡೆ ಕುಸಿದು ಬಿದ್ದಿತ್ತು. ಕುಸಿದ ಗೋಡೆಯ ಅವಶೇಷಗಳು ಈಗಲೂ ನೀರಿನಲ್ಲಿ ತೇಲಿಕೊಂಡಿವೆ. ಈ ಬಗ್ಗೆ ಆ ಮನೆಯ ನಿವಾಸಿಗಳು ಮೂರು ಬಾರಿ ಪಾಲಿಕೆಗೆ ದೂರು ನೀಡಿದ್ದಾರೆ. ಆದರೂ ಪ್ರಯೋಜನವಿಲ್ಲದಾಗಿದೆ. ತೋಡಿನಲ್ಲಿ ಹೀಗೆ ನೀರು ನಿಲುಗಡೆಯಾಗಲು ಕಾರಣ ವೇನೆಂದು ಇದುವರೆಗೂ ತಿಳಿದಿಲ್ಲ.

ಹುಲ್ಲು ತೆಗೆಯುತ್ತಾರೆ
ತೋಡಿನಲ್ಲಿ ಬೆಳೆದ ಹುಲ್ಲನ್ನು ಪ್ರತಿ ವರ್ಷ ಪಾಲಿಕೆ ವತಿಯಿಂದ ತೆಗೆಯಲಾಗುತ್ತದೆ. ಆದರೆ ಹುಲ್ಲು ತೆಗೆದರೂ ಒಳಗಿದ್ದ ಹೂಳು ತೆಗೆಯುವುದಿಲ್ಲ. ಇದರಿಂದ ನೀರು ಸಂಗ್ರಹ ಆಗಿ ಬ್ಲಾಕ್‌ ಆಗುತ್ತದೆ. ಇದು ಸಮಸ್ಯೆ ಬಿಗಡಾಯಿಸಲು ಕಾರಣವಾಗುತ್ತಿದೆ.

ನೆಮ್ಮದಿಯ ಬದುಕು ನೀಡಿ
ಸ್ನೇಹನಗರದ ನಿವಾಸಿಗಳ ಪಾಲಿಗೆ ಇಲ್ಲಿರುವ ತೋಡು ಅತ್ಯಂತ ಭಯವನ್ನು ಸೃಷ್ಟಿಸುತ್ತಿದೆ. ಕೆಟ್ಟ ವಾಸನೆಯಿಂದಾಗಿ ಬದುಕುಲು ಅಸಾಧ್ಯವಾಗಿದೆ. ಈ ಮೊದಲು ಅನೇಕ ಬಾರಿ ಸಂಬಂಧಪಟ್ಟವರಲ್ಲಿ ತಿಳಿಸಿದರೂ ಪ್ರಯೋಜನವಾಗಿಲ್ಲ. ಇನ್ನು ಮುಂದಾದರೂ ಪಾಲಿಕೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಿ ನಮ್ಮನ್ನು ನೆಮ್ಮದಿಯಿಂದ ಬದುಕುವಂತೆ ಮಾಡಬೇಕು.
 - ಸ್ಥಳೀಯ ನಿವಾಸಿಗಳು,
   ಸ್ನೇಹನಗರ ಫಿಶರೀಸ್‌ ರಸ್ತೆ,
   ಹೊಸಬೆಟ್ಟು

ರಾತ್ರಿಯೊಳಗೆ ಕ್ಲಿಯರ್‌
ಸ್ಥಳೀಯ ಮನೆಗಳಲ್ಲಿನ ತ್ಯಾಜ್ಯ ನೀರನ್ನು ತೋಡಿಗೆ ಬಿಡುತ್ತಿರುವುದೂ ಇಲ್ಲಿ ನೀರು ಸಂಗ್ರಹಕ್ಕೆ ಕಾರಣವಾಗುತ್ತಿದೆ.
ಚಿತ್ರಾಪುರದಲ್ಲಿ ಬೃಹತ್‌ ಚರಂಡಿಯಲ್ಲಿ ಮಣ್ಣು ತುಂಬಿರುವುದರಿಂದ ಈ ತೋಡಿಗೆ ಚರಂಡಿ ನೀರು ಸೇರ್ಪಡೆಗೊಳ್ಳುತ್ತಿದೆ. ಗುರುವಾರ ರಾತ್ರಿಯೇ ಇದನ್ನೆಲ್ಲ ಸರಿಪಡಿಸುತ್ತೇವೆ.
 - ಖಾದರ್‌, ಅಭಿಯತ
    ಮಹಾನಗರ ಪಾಲಿಕೆ

ಸಮಸ್ಯೆ ಪರಿಹಾರ
ಚಿತ್ರಾಪುರದಲ್ಲಿ ಖಾಸಗಿಯವರೊಬ್ಬರು ಬೃಹತ್‌ ಚರಂಡಿಗೆ ಮಣ್ಣು ತುಂಬಿಸಿರುವುದರಿಂದ ನೀರು ಸಮುದ್ರಕ್ಕೆ ಹೋಗುತ್ತಿಲ್ಲ. ಆ ನೀರು ಸ್ನೇಹನಗರ ತೋಡಿನಲ್ಲಿ ನೀರು ನಿಲ್ಲಲು ಕಾರಣವಾಗಿದೆ. ಈಗಾಗಲೇ ಈ ಬಗ್ಗೆ ಗಮನ ಹರಿಸಲಾಗಿದ್ದು, ಗುರುವಾರ ರಾತ್ರಿಯೇ ಬೃಹತ್‌ ಚರಂಡಿಯಲ್ಲಿ ತುಂಬಿರುವ ಮಣ್ಣನ್ನು ತೆಗೆಯಲಾಗುವುದು. ಅಲ್ಲಿ ನೀರು ಸರಾಗವಾಗಿ ಹರಿದರೆ ಸ್ನೇಹನಗರದ ಸಮಸ್ಯೆ ನಿವಾರಣೆಯಾಗಲಿದೆ.
 - ಅಶೋಕ್‌ ಶೆಟ್ಟಿ, ಕಾರ್ಪೊರೇಟರ್‌

Advertisement

Udayavani is now on Telegram. Click here to join our channel and stay updated with the latest news.

Next