Advertisement

ಮಧುಮೇಹಿಗಳಿಗೆ, ಸಹಜೀವಿಗಳಿಗೆ: ಮಾರ್ಗಸೂಚಿ, ಕಾರ್ಯಸೂಚಿ

12:30 AM Jan 13, 2019 | |

ಮಧುಮೇಹದೊಂದಿಗೆ ಜೀವಿಸುವವರಿಗೆ ಬರಬಹುದಾದ ಸಂಭಾವ್ಯ ದಂತ ಮತ್ತು ಒಸಡಿನ ತೊಂದರೆಗಳಾವುವು?
ಮಧುಮೇಹದಿಂದ ಜೀವಿಸುವವರಲ್ಲಿ ಸಾಮಾನ್ಯವಾಗಿ ಬಾಯಿಯ ಆರೋಗ್ಯ ಸಮಸ್ಯೆಗಳು ಬರುತ್ತವೆ ಎಂಬ ವಿಚಾರ ಹಲವಾರು ಜನರಿಗೆ ತಿಳಿದಿರುವುದಿಲ್ಲ.  

Advertisement

ಸಾಮಾನ್ಯವಾಗಿ ಎಲ್ಲರಲ್ಲೂ ಒಸಡಿನ ತೊಂದರೆ ಕಂಡುಬರುತ್ತದೆ. ಆದರೆ ಮಧುಮೇಹದೊಂದಿಗೆ ಜೀವಿಸುವವರಲ್ಲಿ ಈ ರೋಗ ಉಲ್ಬಣವಾಗಿ ಆಗಾಗ ಒಸಡುಗಳಲ್ಲಿ ಕೀವು ತುಂಬಿದ ಗುಳ್ಳೆಗಳು ಕಂಡುಬರುತ್ತವೆ. ಇದರೊಂದಿಗೆ ಕಿಟ್ಟ ಆವರಿಸಿ ವಸಡುಗಳಲ್ಲಿ ವ್ಯತಿರಿಕ್ತವಾದ ತೊಂದರೆಗಳು ಉಂಟಾಗಬಹುದು. 

ದಂತಸುತ್ತುಪರಿರೋಗ
ಮಧುಮೇಹದೊಂದಿಗೆ ಜೀವಿಸುವವರಲ್ಲಿ ಕಂಡುಬರುವ ಇನ್ನೊಂದು ಸಾಮಾನ್ಯ ತೊಂದರೆ. ಹಾಗೆಯೇ ಜೊಲ್ಲು ಸುರಿಸುವ‌ ಗ್ರಂಥಿಗಳ ಕಾರ್ಯತತ್ಪರತೆ ಕಡಿಮೆಯಾಗಿ ಇದರಿಂದ ಕ್ಯಾಂಡಿಡಿಯಾಸಿಸ್‌ ಮತ್ತು ದಂತ ಕುಳಿ ತೊಂದರೆಗಳು ಕಂಡುಬರುತ್ತದೆ. ಇದರೊಂದಿಗೆ ನರದೌರ್ಬಲ್ಯ ಜೊತಗೂಡಿ ರಸಗ್ರಹಣಶಕ್ತಿ ಕಡಿಮೆ ಆಗಿ ರುಚಿ ಕಡಿಮೆ ಆಗುವುದೂ ಸಾಮಾನ್ಯ
 
ಮಧುಮೇಹ ಹಾಗೂ ದಂತ ಮತ್ತು ಒಸಡಿನ ತೊಂದರೆಗಳ ನಡುವಿನ ಸಂಬಂಧವೇನು?
ಮಧುಮೇಹದೊಂದಿಗೆ ಜೀವಿಸುವವರ ರಕ್ತದಲ್ಲಿ ಸಕ್ಕರೆ ಅಂಶ ಅಧಿಕವಾಗಿರುವಂತೆ ಜೊಲ್ಲಿನಲ್ಲೂ ಸಕ್ಕರೆ ಅಂಶ ಅಧಿಕವಾಗುತ್ತದೆ. ಇದರಿಂದಾಗಿ ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳಿಗೆ ಸಕ್ಕರೆ ಅಂಶ ಸುಲಲಿತವಾಗಿ ಲಭ್ಯವಾಗುತ್ತದೆ ಇದರೊಂದಿಗೆ ದೇಹದಲ್ಲಾಗುವ ಇನ್ನೂ ಇತರ ಬದಲಾವಣೆಗಳಿಂದ ಕ್ರಮೇಣವಾಗಿ ಒಸಡು ರೋಗ ಅಥವಾ ದಂತ ಸುತ್ತು ಪರಿರೋಗ ಬರುವ ಸಾಧ್ಯತೆಗಳಿರುತ್ತವೆ. ಜೊತೆಗೆ ಮಧುಮೇಹದೊಂದಿಗೆ ಜೀವಿಸುವವರಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗಿ ಈ ಸೋಂಕುಗಳು ಉಲ್ಬಣವಾಗುವ ಸಾಧ್ಯತೆಗಳಿರುತ್ತವೆ. 

ಇತ್ತೀಚಿನ ಸಂಶೋಧನೆಯಂತೆ ಒಸಡುರೋಗದಿಂದ ದೇಹದಲ್ಲಿ ಸ್ರವಿಸುವ ಕೆಲವು ಕಿಣ್ವಗಳು ಇನ್ಸುಲಿನ್‌ನ ಕಾರ್ಯತತ್ಪರತೆಯನ್ನು ಕಡಿಮೆ ಮಾಡಿ ರಕ್ತದಲ್ಲಿ ಗ್ಲುಕೋಸ್  ಅಂಶವನ್ನು ಅಧಿಕಗೊಳಿಸುತ್ತದೆ. ಹಾಗಾಗಿ ಒಂದರ ಪ್ರಭಾವ ಇನ್ನೊಂದರ ಮೇಲಾಗುವುದರಿಂದ ಎರಡುಮಾರ್ಗದ ಸಂಬಂಧವೆಂದು ಹೇಳಬಹುದು.

ಒಸಡು ರೋಗ ಮತ್ತು ದಂತ ಸುತ್ತು ಪರಿರೋಗದ ತೊಂದರೆಗೆ ಲಭ್ಯವಿರುವ ಚಿಕಿತ್ಸೆ ಏನು?
ಒಸಡು ಮತ್ತು ದಂತ ಸುತ್ತು ಪರಿರೋಗಕ್ಕೆ ಸೂಕ್ತ ಚಿಕಿತ್ಸೆ ಈ ಕಳಗಿನಂತಿದೆ:
– ದಂತ ವೈದ್ಯರಿಂದ ಹಲ್ಲನ್ನು ಸ್ವತ್ಛಗೊಳಿಸಿಕೊಳ್ಳುವುದು.
– ಕೀವು ಇದ್ದಲ್ಲಿ ಪ್ರತಿಜೀವಕವನ್ನು ನೀಡಿ ಕೀವು ತೆಗೆದು ಸ್ವತ್ಛಗೊಳಿಸುವುದು ಮತ್ತು ಅಗತ್ಯವಿದ್ದರೆ ಇದಾದ 5 ದಿನಗಳ ಒಸಡುಗಳನ್ನು ವಿಂಗಡಿಸಿ ಸಣ್ಣ ಶಸ್ತ್ರ ಚಿಕಿತ್ಸೆಯನ್ನು ಮಾಡಲಾಗುವುದು.
– ಮಧುಮೇಹವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು.
– ಕೆಲವೊಮ್ಮೆ ರಕ್ತದಲ್ಲಿ ಗ್ಲುಕೋಸ್  ಅಂಶ ಅಧಿಕವಾಗಿ ಹಲ್ಲುಕುಳಿಗಳಾಗಿ ಹಲ್ಲಿನ ತಿರುಳಿಗೆ ಹಾನಿಯಾಗಿ ವಸಡು ಮತ್ತು ಬೇರಿನಲ್ಲಿ ಕೀವು ತುಂಬಿಕೊಂಡು ವಿಪರೀತ ನೋವು ಕಾಣಿಸಿಕೊಳ್ಳುತ್ತದೆ. ಇದು ಯಾವುದೇ ನೋವು ನಿವಾರಕ ಮಾತ್ರೆಯಿಂದಲೂ ಕಡಿಮೆಯಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ದಂತ ವೈದ್ಯರ ತುರ್ತು ಚಿಕಿತ್ಸೆಯ ಅಗತ್ಯವಿರುತ್ತದೆ.

Advertisement

ಮಧುಮೇಹದೊಂದಿಗೆ ಜೀವಿಸುವವರು ಮಧುಮೇಹದೊಂದಿಗೆ ಜೀವಿಸುವವರಿಗೆ ರೋಗ ನಿರೋಧಕ ಶಕ್ತಿ ಕಡಿಮೆ 
ಇರಲು ಕಾರಣವೇನು?

ಮಾನವನ ರೋಗ ನಿರೋಧಕ ಶಕ್ತಿಯನ್ನು ಸಹಜ (ಹುಟ್ಟಿನಿಂದಲೇ ಇರುವಂಥದ್ದು) ಮತ್ತು ಹೊಂದಿಕೊಂಡು ಬರುವ ರೋಗನಿರೋಧಕ ಶಕ್ತಿ ಎಂದು ಎರಡು ರೀತಿಯಲ್ಲಿ ವಿಂಗಡಿಸಬಹುದು. ರೋಗನಿರೋಧಕ ಶಕ್ತಿಯು ದೇಹಕ್ಕೆ ಪ್ರವೇಶ ಮಾಡುವ ರೋಗಾಣುಗಳ ವಿರುದ್ಧ ಹೋರಾಟ ಮಾಡಿ 
ರೋಗ ಬರದಂತೆ ತಡೆಯುತ್ತದೆ.

ಸಹಜ ರೋಗ ನಿರೋಧಕಶಕ್ತಿಗೆ ಉದಾಹರಣೆಯೆಂದರೆ ಚರ್ಮ ಹಾಗೂ ಲೋಳೆಯಂತಹ ಪದರ. ಇವುಗಳು ದೇಹಕ್ಕೆ ರೋಗಾಣುಗಳು ಬರುವುದನ್ನು ತಡೆಯುತ್ತವೆ. ಇದರೊಂದಿಗೆ ಸೀನುವುದು, ಕಫ‌, ಕೆಮ್ಮು ಹಾಗೂ ಮೂತ್ರ ಇತ್ಯಾದಿ ಸಹಜ ಪ್ರಕ್ರಿಯೆಗಳು ರೋಗಾಣುವನ್ನು ದೇಹದಿಂದ ಹೊರಹಾಕಲು ಸಹಾಯ ಮಾಡುತ್ತವೆ. 

ಇನ್ನು ಬಿಳಿ ರಕ್ತಕಣದಲ್ಲಿರುವ ಲಿಂಫೋಸೈಟ್ಸ್‌ ಎಂಬ ಜೀವಕೋಶಗಳು ಹೊರಗಿನಿಂದ ಬಂದ ರೋಗಾಣುಗಳನ್ನು ನೇರವಾಗಿ ಕೊಲ್ಲುತ್ತವೆ ಅಥವಾ ಅವುಗಳನ್ನು ಗುರುತಿಸಿ ಅವುಗಳ ವಿರುದ್ಧ ಹೋರಾಟ ಮಾಡುವ ಆ್ಯಂಟಿಜನ್‌ ಎಂಬ ವಸ್ತುವನ್ನು ಉತ್ಪಾದನೆ ಮಾಡಿ ಸೋಂಕು ಬರದಂತೆ ತಡೆಯುತ್ತವೆ. ಹಾಗೆಯೇ ಬಿಳಿರಕ್ತಣದ ನ್ಯೂಟ್ರೋಫಿಲ್‌ ಎಂಬ ಜೀವಕೋಶ ರೋಗಾಣುಗಳು ದೇಹವನ್ನು ಸೇರಿಕೊಂಡಾಗ ಆ ಪ್ರದೇಶಕ್ಕೆ ತಲುಪಿ ಅವುಗಳನ್ನು ನಿಷ್ಕ್ರಿಯಗೊಳಿಸುತ್ತವೆ. 

ಮಧುಮೇಹದೊಂದಿಗೆ ಜೀವಿಸುವವರಲ್ಲಿ ರಕ್ತದಲ್ಲಿ ಗ್ಲುಕೋಸ್ ಅಂಶ ಅಧಿಕವಾಗಿ ರಕ್ತನಾಳಗಳ ತೊಂದರೆಯಿಂದ ಚರ್ಮ ಮತ್ತು ಇತರ ಭಾಗಗಳಿಗೆ ಬೇಕಾಗುವ ಎಲ್ಲಾ ಅಂಶಗಳು ಸರಿಯಾಗಿ ಸರಬರಾಜಾಗದೆ ಸಹಜ ರಕ್ಷಣೆಯ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಹಾಗೆಯೇ ಪಡೆದುಕೊಂಡ ರೋಗನಿರೋಧಕತೆಯ ಭಾಗವಾದ ನ್ಯುಟ್ರೋಫಿಲ್‌ ಕೆಲಸ ಕುಗ್ಗಿ ರೋಗನಿರೋಧಕ ಶಕ್ತಿಯೂ ಕುಗ್ಗುತ್ತದೆ.

ಹಾಗೆಯೇ ನರದೌರ್ಬಲ್ಯವು ಸಂವೇದನಾ ಸ್ಪರ್ಶಜ್ಞಾನವನ್ನು ಕಡಿಮೆ ಮಾಡಿ ಸ್ಪರ್ಶದ ಅನುಭವ ಕ್ಷೀಣಿಸಿ ರೋಗನಿರೋಧಕ ಶಕ್ತಿಯ ಸ್ಪಂದನೆಯನ್ನು ಕ್ಷೀಣಿಸುತ್ತದೆ. 

ಇವೆರಡು ಸೇರಿ ದೇಹದ ರೋಗನಿರೋಧಕ ಶಕ್ತಿಯ ನಿರ್ಧಾರವಾಗುತ್ತದೆ.ಮಧುಮೇಹದೊಂದಿಗೆ ಜೀವಿಸುವವರಿಗೆ ಬರಬಹುದಾದ ಸೋಂಕುಗಳಾವುವು ಮತ್ತು ಲಭ್ಯವಿರುವ ಚಿಕಿತ್ಸೆಗಳೇನು?ಮಧುಮೇಹಿಗಳಲ್ಲೇ ಕಂಡುಬರುವ ಸೋಂಕುಗಳೆಂದರೆ ತೀವ್ರವಾದ ಕಿವಿಯ ಹೊರಭಾಗದ ಸೋಂಕು, ಮೂಗು ಮತ್ತು ಮಿದುಳಿಗೆ ಸಂಬಂಧಿ ಸಿದ ಸೋಂಕು, ಪಿತ್ತ ಕೋಶದ ಸೋಂಕು, ಎಲುಬುಗಳ ಸೋಂಕು ಮತ್ತು ಶಸ್ತ್ರಚಿಕಿತ್ಸೆಯ ಭಾಗದ ಸೋಂಕು. ಈ ಎಲ್ಲಾ ಸೋಂಕುಗಳು ಮಾರಕವಾಗುವ ಸಾಧ್ಯತೆಗಳಿದ್ದು ಸೋಂಕಿಗನುಣವಾಗಿ ಒಳರೋಗಿ ಅಥವಾ ಹೊರರೋಗಿಯಾಗಿ ಚಿಕಿತ್ಸೆ ನೀಡಲಾಗುತ್ತದೆ. ಆದರೆ ಆಸ್ಪತ್ರೆಯ ಅವಧಿ ಮತ್ತು ವೆಚ್ಚ ಅಧಿಕವಾಗಿ ಮಧುಮೇಹದೊಂದಿಗೆ ಜೀವಿಸುವವರ ಮತ್ತು ಅವರ ಕುಟುಂಬಸ್ಥರ ಜೀವನ ದುಸ್ತರವಾಗಬಹುದು.

ಮಧುಮೇಹ ಮತ್ತು ಕ್ಷಯ ರೋಗಕ್ಕಿರುವ ಸಂಬಂಧವೇನು?
ದುರದೃಷ್ಟವಶಾತ್‌ ಜಗತಿನ‌ಲ್ಲಿ ಭಾರತ ದೇಶ ಕ್ಷಯ ರೋಗದಲ್ಲಿ ಮುನ್ನಡೆಯಲ್ಲಿದ್ದರೆ ಮಧುಮೇಹದಲ್ಲಿ 2ನೇಯ ಸ್ಥಾನದಲ್ಲಿದೆ. ಮಧುಮೇಹ ಇರುವವರಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗಿರುವುದರಿಂದ ಕ್ಷಯ ರೋಗ ಬರುವ ಸಾಧ್ಯತೆ ಅಧಿಕವಾಗಿರು ವುದು, ಮಧುಮೇಹದ ಜತೆಯಲ್ಲಿ ಕ್ಷಯರೋಗ ಬಂದಾಗ ಉಲ್ಬಣವಾಗುವ ಸಾಧ್ಯತೆ ಹೆಚ್ಚು. 

ಮಧುಮೇಹದೊಂದಿಗೆ ಜೀವಿಸು ವವರಲ್ಲಿ ಶ್ವಾಸಕೋಶೇತರ ಕ್ಷಯ ಬರುವ ಸಾಧ್ಯತೆಯೂ ಸಾಮಾನ್ಯ ವಾಗಿದೆ. ಹಾಗಾಗಿ ಆರೈಕೆಯು ಸಂಕೀರ್ಣವಾದುದು. 

ಮಧುಮೇಹದೊಂದಿಗೆ ಕ್ಷಯ ರೋಗ ಬಂದಲ್ಲಿ ಲಭ್ಯವಿರುವ ಚಿಕಿತ್ಸೆ ಏನು?
ಕ್ಷಯರೋಗಕ್ಕೆ ಪರಿಷ್ಕೃತ ಕ್ಷಯ ರೋಗ ನಿಯಂತ್ರಣ ಕಾರ್ಯಕ್ರಮದಲ್ಲಿ ಸೂಚಿಸುವಂತೆ ನೇರ ನಿಗಾವಣೆಯ ಅಲ್ಪಾವದಿ ಚಿಕಿತ್ಸೆಯನ್ನು ನೀಡುತ್ತಾರೆ. ಹಾಗೆಯೇ ಕ್ಷಯ ರೋಗಿಗಳಿಗೆ ಅಧಿಕ ಪೋ›ಟೀನ್‌ ಅಂಶವಿರುವ ಪೌಷ್ಟಿಕ ಆಹಾರ ನೀಡಬೇಕು. ಪ್ರೊಟೀನ್‌ ಅಂಶ ಮಧುಮೇಹದೊಂದಿಗೆ ಜೀವಿಸುವವರಿಗೆ ವಜ್ಯìವಲ್ಲದ್ದರಿಂದ ಅಧಿಕ ಸೇವನೆಯಿಂದ ತೊಂದರೆಯಾಗುವುದಿಲ್ಲ.

ಆರೋಗ್ಯಯುತ ಬಾಯಿಗಾಗಿ ಕೈಗೊಳ್ಳಬೇಕಾದ 
ಮುಂಜಾಗ್ರತಾ ಕ್ರಮಗಳೇನು?

– ಹಲ್ಲು ಮತ್ತು ಬಾಯಿಯ ಸ್ವಚ್ಚತೆ ಯನ್ನು ಕಾಪಾಡಿಕೊಳ್ಳುವುದು. ದಿನಕ್ಕೆರಡು ಬಾರಿ ಹಲ್ಲನ್ನು ಉಜ್ಜುವುದು ಕಡ್ಡಾಯ ಹಾಗೂ ರಾತ್ರಿ ಹಲ್ಲುಜ್ಜುವುದು ಅತಿ ಮುಖ್ಯ.
– ನಿಯಮಿತವಾಗಿ ದಂತವೈದ್ಯರಿಂದ ತಪಾಸಣೆ ಮಾಡಿಸಿಕೊಳ್ಳುವುದು. ಹಲ್ಲಿಗೆ ಸಂಬಂಧಿಸಿದ ಯಾವುದೇ ತೊಂದರೆಗಳಿಲ್ಲದಿದ್ದರೂ ಕನಿಷ್ಟ 6 ತಿಂಗಳಿಗೊಮ್ಮೆ ದಂತ ವೈದ್ಯರಲ್ಲಿ ದಂತ ತಪಾಸಣೆ ಮಾಡಿಸಲೇಬೇಕು. ತೊಂದರೆಗಳಿದ್ದಲ್ಲಿ ವೈದ್ಯರು ಸೂಚಿಸಿದಂತೆ ಚಿಕಿತ್ಸೆ ಪಡೆಯಬೇಕು.
– ದಂತ ವೈದ್ಯರಲ್ಲಿ ಯಾವುದೇ ಮುಚ್ಚು ಮರೆ ಇಲ್ಲದೆ ಮಧುಮೇಹ ಇರುವುದನ್ನು ತಿಳಿಸಬೇಕು.
– ಪ್ರತಿ ದಿನ ಹಲ್ಲಿನ ಸ್ವಯಂ ಪರೀಕ್ಷೆ ಮಾಡಿಕೊಳ್ಳಬೇಕು.
– ಧೂಮಪಾನ ಮಾಡುತ್ತಿದ್ದಲ್ಲಿ ನಿಲ್ಲಿಸಬೇಕು.
– ಮಧುಮೇಹವನ್ನು ನಿಯಂತ್ರಣದಲ್ಲಿರಿಸಿಕೊಳ್ಳುಬೇಕು.

ಮಧುಮೇಹದೊಂದಿಗೆ ಜೀವಿಸುವವರಲ್ಲಿ ಕಂಡುಬರುವ ಬಾಯಿಯ ಸಾಮಾನ್ಯ ತೊಂದರೆಗಳಾದ ಒಸಡು ರೋಗ 
ಮತ್ತು ದಂತ ಸುತ್ತು ಪರಿರೋಗದ ಸಾಮಾನ್ಯ ಲಕ್ಷಣಗಳೇನು?ಒಸಡು ರೋಗದ ಲಕ್ಷಣಗಳು: 

ಮಧುಮೇಹದೊಂದಿಗೆ ಜೀವಿಸುವವರಲ್ಲಿ ಯಾವಾಗಲೂ ಹಲ್ಲುಜ್ಜುವಾಗ ಕೀವು ಅಥವಾ ರಕ್ತಸ್ರಾವವಾಗುವುದು ಮತ್ತು ಕೀವುತುಂಬಿರುವ ಗುಳ್ಳೆಗಳಾಗುವುದು ಸಾಮಾನ್ಯವಾಗಿ ಕಂಡುಬರುವ ಲಕ್ಷಣಗಳು.

ದಂತ ಸುತ್ತು ಪರಿರೋಗದ ಲಕ್ಷಣಗಳು: 
ಹಲ್ಲಿನ ಬೇರಿನ ಸುತ್ತಲು ಒಸಡು ರೋಗ ಪಸರಿಸುವುದನ್ನು ದಂತ ಸುತ್ತು ಪರಿರೋಗ ಎನ್ನುತ್ತೇವೆ. ಇದರಲ್ಲಿ ಹಲ್ಲಿನ ಒಸಡುಗಳ ಬಣ್ಣಬದಲಾಗಿ ನೀಲಿ ಬಣ್ಣಕ್ಕೆ ತಿರುಗುವುದು ಮತ್ತು ಹಲ್ಲು ಸಡಿಲಗೊಂಡು ಹಳದಿ ಮತ್ತು ನೀಲಿ ಬಣ್ಣಕ್ಕೆ ತಿರುಗುವುದು ದಂತ ಸುತ್ತು ಪರಿರೋಗದ ಸಾಮಾನ್ಯ ಲಕ್ಷಣಗಳು.

– ಮುಂದುವರಿಯುವುದು

– ಪ್ರಭಾತ್‌ ಕಲ್ಕೂರ ಎಂ., 
ಯೋಜನಾ ನಿರ್ವಾಹಕರು, ವಿಶ್ವ ಮಧುಮೇಹ ಪ್ರತಿಷ್ಠಾನ‌
15: 941, ಸ್ಕೂಲ್‌ ಆಫ್ ಅಲೈಡ್‌ ಹೆಲ್ತ್‌ ಸೈನ್ಸಸ್‌, ಮಣಿಪಾಲ.

Advertisement

Udayavani is now on Telegram. Click here to join our channel and stay updated with the latest news.

Next