Advertisement

ಬಸವಣ್ಣ, ಚಾಣಕ್ಯನ ಸ್ಮರಣೆ

10:51 PM Jul 05, 2019 | Lakshmi GovindaRaj |

ಮುಂಗಡ ಪತ್ರ ಮಂಡನೆಯ ವೇಳೆ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಹಲವು ಬಾರಿ ಬಸವೇಶ್ವರರ ವಚನವನ್ನು ಉಲ್ಲೇಖೀಸಿದ್ದಲ್ಲದೆ, 2 ಸಾವಿರ ವರ್ಷಗಳಷ್ಟು ಹಳೆಯ ತಮಿಳು ಕವನವನ್ನು ವಾಚಿಸುವ ಮೂಲಕ ತಮ್ಮ ಕರ್ಮಭೂಮಿ(ಕರ್ನಾಟಕ) ಮತ್ತು ಜನ್ಮಭೂಮಿ(ತಮಿಳುನಾಡು) ಎರಡಕ್ಕೂ ಮನ್ನಣೆ ನೀಡಿದ್ದಾರೆ.

Advertisement

ಅಷ್ಟೇ ಅಲ್ಲ, ಉರ್ದು ದ್ವಿಪದಿ, ಕೌಟಿಲ್ಯನ ಅರ್ಥಶಾಸ್ತ್ರ ವನ್ನೂ ಉಲ್ಲೇಖೀಸುವ ಮೂಲಕ ಸರ್ಕಾರದ ಬದ್ಧತೆಯನ್ನು ತಿಳಿಸಿಕೊಡಲು ಯತ್ನಿಸಿದ್ದಾರೆ. ನಮ್ಮ ಸರ್ಕಾರವು “ಕಾಯಕವೇ ಕೈಲಾಸ’ ಎಂಬ ಬಸವೇಶ್ವರರ ತತ್ವವನ್ನು ಅನುಸರಿಸುತ್ತಾ ಬಂದಿದೆ ಎಂದು ಹೇಳಿದ ನಿರ್ಮಲಾ, 12ನೇ ಶತಮಾನದ ಸಮಾಜ ಸುಧಾರಕನನ್ನು ಸ್ಮರಿಸಿ ಬಜೆಟ್‌ ಮಂಡಿಸಿದರು. ಜತೆಗೆ, ಚೋಳ, ಚೇರಾ ಹಾಗೂ ಪಾಂಡ್ಯರ ಆಡಳಿತದ ವೇಳೆ ನೀಡಲಾದ ಸಲಹೆಗಳನ್ನು ಆಧರಿಸಿದ ಸಂಗಮ ಯುಗದ “ಪೂರಾ ನಾನೂರು’ ಗ್ರಂಥದ ಸಾಲುಗಳನ್ನು ಕೂಡ ಉಲ್ಲೇಖೀಸಿದರು.

ಇದೇ ವೇಳೆ, ಉರ್ದು ದ್ವಿಪದಿಯೊಂದನ್ನು ಹೇಳಿದ ಅವರು, “ನಂಬಿಕೆಯೊಂದಿದ್ದರೆ ಯಾವುದಾದರೂ ದಾರಿ ಸಿಕ್ಕೇ ಸಿಗುತ್ತದೆ; ಜೋರಾಗಿ ಬೀಸುವ ಗಾಳಿಯಲ್ಲೂ ದೀಪ ಪ್ರಜ್ವಲಿಸುತ್ತದೆ’ ಎಂದಾಗ ಇಡೀ ಸದನದಲ್ಲಿ ಚಪ್ಪಾಳೆ ಮೊಳಗಿತು. ವಿತ್ತ ಸಚಿವೆಯು ಈ ದ್ವಿಪದಿ ಮೂಲಕ ಸರ್ಕಾರದ ಮುಂದಿರುವ ಸವಾಲುಗಳನ್ನು ಪರೋಕ್ಷವಾಗಿ ಉಲ್ಲೇಖೀಸಿದಂತೆ ಹಾಗೂ ಆ ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ತಮಗಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದಂತೆ ಕಂಡುಬಂತು.

ಚಾಣಕ್ಯ ನೀತಿ: ತಾವು ಮಂಡಿಸಿದ ಬಜೆಟ್‌ ಕುರಿತು ವಿಶ್ವಾಸ ವ್ಯಕ್ತಪಡಿಸಿದ ನಿರ್ಮಲಾ, “ಕಾರ್ಯ ಪುರುಷ ಕರೇ ನಾ ಲಕ್ಷ್ಯಂ ಸಂಪ ದಾಯತೆ’, ಅಂದರೆ, ಬದ್ಧತೆಯಿಂದ ಕೆಲಸ ಮಾಡಿದರೆ, ಖಂಡಿತಾ ಆ ಕೆಲಸವು ಪೂರ್ಣಗೊಳ್ಳುತ್ತದೆ ಎಂಬ ಚಾಣಕ್ಯ ನೀತಿಯನ್ನೂ ಉಲ್ಲೇಖೀಸಿದರು. ಜತೆಗೆ, ಬಲಿಷ್ಠ ದೇಶಕ್ಕಾಗಿ ಬಲಿಷ್ಠ ನಾಗರಿಕ ಎಂಬುದು ನಮ್ಮ ಸರ್ಕಾರದ ಧ್ಯೇಯವಾಗಿದ್ದು, ಈ ನಿಟ್ಟಿನಲ್ಲಿ ನಾವು ಮುಂದೆ ಸಾಗಲಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next