Advertisement

Kota Shivarama Karanth: ಕಾರಂತರ ನೆನಪು

11:18 AM Sep 25, 2024 | Team Udayavani |

ಕನ್ನಡ ಎರಡು ಸಾವಿರ ವರ್ಷಗಳ ಇತಿಹಾಸವಿರುವ ಭಾಷೆ. ನಮ್ಮ ಈ ಕರುನಾಡಿನಲ್ಲಿ ಅದೆಷ್ಟೋ ಸಾಹಿತಿಗಳು ಕನ್ನಡ ಭಾಷೆಯ ಕಂಪು, ಅದರ ಮಹತ್ವವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎತ್ತಿ ಹಿಡಿಯಲುವಲ್ಲಿ ಶ್ರಮಿಸಿದ್ದಾರೆ. ಅಂಥವರ ಸಾಲಿನಲ್ಲಿ ಬರುವ ಮಹಾನ್‌ ಸಾಹಿತಿಗಳಲ್ಲಿ ಒಬ್ಬರು ಕೋಟ ಶಿವರಾಮ ಕಾತಂತರು. ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಕಥೆ, ಸಣ್ಣಕಥೆ, ಹರಟೆ, ವ್ಯಂಗ್ಯ, ಕವನ, ಕಾದಂಬರಿ, ನಾಟಕ, ಪ್ರವಾಸ ಕಥನ, ಮಕ್ಕಳ ಸಾಹಿತ್ಯ, ಪರಿಸರ ವಿಜ್ಞಾನ, ಜೀವನಚರಿತ್ರೆ, ಕಲೆ, ಯಕ್ಷಗಾನ ಸೇರಿದಂತೆ ಎಲ್ಲ ಕ್ಷೇತ್ರದಲ್ಲೂ ಛಾಪು ಮೂಡಿಸಿ ನಡೆದಾಡುವ ವಿಶ್ವಕೋಶ ಎಂದೇ ಅವರು ಖ್ಯಾತರಾಗಿದ್ದಾರೆ.

Advertisement

ಕಡಲ ತೀರದ ಭಾರ್ಗವನ ಸಾಹಿತ್ಯದ ಸಾಧನೆಯನ್ನು ಅಜರಾಮರವಾಗಿರುವಂತೆ ಮಾಡಲು ಅವರ ಹುಟ್ಟೂರಾದ ಉಡುಪಿಯ ಕೋಟದ ಕೋಳ್ಕೆರೆಯಲ್ಲಿ ಕೋಟ ಶಿವರಾಮ ಕಾರಂತ ಥೀಮ್‌ ಪಾರ್ಕ್‌ ಅನ್ನು 2011ರಲ್ಲಿ ನಿರ್ಮಿಸಲಾಗಿದೆ. ಇದುಕೋಟ ಮುಖ್ಯರಸ್ತೆಯಿಂದ 300ಮೀ. ದೂರದಲ್ಲಿದ್ದು, ಇಲ್ಲಿ ವಾರದ 7 ದಿನವೂ ಬೆಳಗ್ಗೆ 10 ಗಂಟೆಯಿಂದ ಸಂಜೆ 6ರ ವರೆಗೆ ಭೇಟಿಗೆ ಅವಕಾಶವಿದೆ.

ಈ ಥೀಮ್‌ ಪಾರ್ಕ್‌ ಒಂದು ಉದ್ಯಾನವನವನ್ನು ಹೊಂದಿದ್ದು, ಅದರ ಮಧ್ಯದಲ್ಲಿ ಶಿವರಾಮ ಕಾರಂತರ ಕಂಚಿನ ಪ್ರತಿಮೆಯನ್ನು ಒಳಗೊಂಡಿರುವ ಒಂದು ಸಣ್ಣ ಕೊಳವಿದೆ. ಅವರ ಕಾದಂಬರಿಗಳಲ್ಲಿ ಬರುವ ಕೆಲವು ಸಾಂಪ್ರದಾಯಿಕ ಪಾತ್ರಗಳನ್ನು ಪ್ರತಿನಿಧಿಸುವ ಶಿಲ್ಪಗಳನ್ನು ಈ ಉದ್ಯಾನವನದಲ್ಲಿ ಇರಿಸಲಾಗಿದ್ದು, ಈ ಪೈಕಿ ಪ್ರಮುಖವಾಗಿ ಕಾರಂತರಿಗೆ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ rಅವರ ಮೂಕಜ್ಜಿಯ ಕನಸುಗಳು ಕಾದಂಬರಿಯ ಪ್ರಮುಖ ಪಾತ್ರವಾದ ಮೂಕಜ್ಜಿಯ ಪ್ರತಿಮೆ ಹಾಗೂ ಅವರ ಚೋಮನ ದುಡಿ ಕಾದಂಬರಿಯ ಪ್ರಮುಖ ಪಾತ್ರವಾದ ಚೋಮನು ಡ್ರಮ್‌ ಬಾರಿಸುವ ಪ್ರತಿಮೆಗಳನ್ನು ಇಲ್ಲಿ ಕಾಣಬಹುದು. ಉದ್ಯಾನವನದ ಇನ್ನೊಂದು ಭಾಗದಲ್ಲಿ ಕಾರಂತರನ್ನು ತನ್ನ ಎತ್ತಿನಗಾಡಿಯಲ್ಲಿ ಕರೆದುಕೊಂದು ಹೋಗುತಿದ್ದ ಕೂಸಣ್ಣ ಮತ್ತು ಅವನ ಎತ್ತಿನಗಾಡಿಯ ಪ್ರತಿಮೆಯಿದೆ.

ಈ ಪಾರ್ಕ್‌ನ ಇನ್ನೊಂದು ಆಕರ್ಷಣೆಯೆಂದರೆ ಉಯ್ನಾಲೆಯ ಮೇಲೆ ಕುಳಿತಿರುವ ರಾಧಾ-ಕೃಷ್ಣರ ಅವಳಿ ಶಿಲ್ಪಗಳು. ಶಿವರಾಮ ಕಾರಂತರು ಸಭಿಕರನ್ನು ಉದ್ದೇಶಿಸಿ ಮಾತನಾಡುತ್ತಿರುವ ಚಿತ್ರವನ್ನು ಪಾರ್ಕ್‌ ನಲ್ಲಿ ಇರಿಸಲಾಗಿದೆ.  ಇಲ್ಲಿ ಕನ್ನಡದ ಎಲ್ಲ ಜ್ಞಾನಪೀಠ ಪ್ರಶಸ್ತಿ ಪುರಸ್ಕತರ ಪ್ರತಿಮೆಗಳಿದ್ದು, ಶಿವರಾಮಕಾರಂತರ ಅಪರೂಪದ ಛಾಯಾಚಿತ್ರಗಳನ್ನೂ ಕಾಣಬಹುದು.

Advertisement

ಈ ಪಾರ್ಕ್‌ನಲ್ಲಿ ಒಂದು ಗ್ರಂಥಾಲಯ ಹಾಗೂ ಕಲಾ ಮಂದಿರ(ಆರ್ಟ್‌ ಗ್ಯಾಲರಿ)ವಿದ್ದು,  ಗ್ರಂಥಾಲಯವು ಕಾರಂತರ ಎಲ್ಲ ಕೃತಿಗಳ ಸಂಗ್ರಹದ ಜತೆಗೆ ಅವರ ವೈಯಕ್ತಿಕ ಸಂಗ್ರಹಣೆಯ ಪುಸ್ತಕಗಳನ್ನೂ ಹೊಂದಿದೆ. ಸ್ಥಳೀಯರು ಇಲ್ಲಿ ನೊಂದಾಯಿಸಿಕೊಂಡು ಇದರ ಸದಸ್ಯತ್ವವನ್ನು ಪಡೆದು ಕೊಳ್ಳಬಹುದು. ಇಲ್ಲಿನ ಕಲಾಮಂದಿರದಲ್ಲಿ ಶಿವರಾಮ ಕಾರಂತರ ಜೀವನ ಮತ್ತು ಕೃತಿಗಳನ್ನು ಬಿಂಬಿಸುವ ಚಿತ್ರಗಳು ಮತ್ತು ಛಾಯಾಚಿತ್ರಗಳನ್ನು ಪ್ರದರ್ಶಿದಸಲಾಗುತ್ತದೆ. ಇಲ್ಲಿ ಒಂದು ಸಂಗೀತ ಕಾರಂಜಿಯಿದ್ದು, ಪ್ರತೀ ತಿಂಗಳ ಮೊದಲ ಶುಕ್ರವಾರದಂದು ಹಾಗೂ ಸ್ವಾತಂತ್ರ್ಯ ದಿನಾಚರಣೆ, ಪ್ರಜಾಪ್ರಭುತ್ವ ದಿನಾಚರಣೆ ಯಂತಹ ರಾಷ್ಟ್ರೀಯ ಹಬ್ಬಗಳಂದು ಉಚಿತವಾಗಿ ಸಂಗೀತ ಕಾರಂಜಿ ಪ್ರದರ್ಶನ ನೋಡಬಹುದು.

ಪ್ರತೀ ವರ್ಷ ಕಾರಂತರ ಜನ್ಮ ವಾರ್ಷಿಕೋತ್ಸವದಂದು ಆಡಿಟೋರಿಯನಲ್ಲಿ ವಿಶೇಷ ಕಾರ್ಯಕ್ರಮಗಳು ನಡೆಯುತ್ತವೆ. ಈ ಸಂದರ್ಭ  ಸಾಧಕರಿಗೆ ಕಾರಂತ ಹುಟ್ಟೂರ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಈ ವೇಳೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಮಕ್ಕಳ ಉತ್ಸವ, ಯಕ್ಷಗಾನ ಪ್ರದರ್ಶನಗಳು, ವಿಚಾರ ಸಂಕಿರಣಗಳು, ರಂಗಭೂಮಿ ಚಟುವಟಿಕೆಗಳು ಮತ್ತು ಕವಿಗಳ ಸಭೆಯಂತಹ ವಿವಿಧ ಕಾರ್ಯಕ್ರಮಗಳೊಂದಿಗೆ, 10 ದಿನಗಳ ಸುಧೀರ್ಘ‌ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತದೆ.

ಕಾರಂತರು ಕನ್ನಡ ಸಾಹಿತ್ಯಕ್ಷೇತ್ರ ಮಾತ್ರವಲ್ಲದೇ ಕರಾವಳಿಯ ಸುಪ್ರಸಿದ್ಧ ಕಲೆ ಯಕ್ಷಗಾನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು. ಅವರು ತಮ್ಮ ಮನೆಯಲ್ಲಿಯೇ ವಿದ್ಯಾರ್ಥಿಗಳಿಗೆ ಊರ ಆಸಕ್ತರಿಗೆ ಕಾರಂತರು ತರಬೇತಿಯನ್ನು ನೀಡುತ್ತಿದ್ದರು. ಈ ಥೀಮ್‌ ಪಾರ್ಕ್‌ನ ಆರ್ಟ್‌ಗ್ಯಾಲರಿಯಲ್ಲಿ ಅಂದಿನ ಕಾಲದಲ್ಲಿ ಕಾರಂತರು ಗೆಜ್ಜೆ ಕಟ್ಟಿಕುಣಿಯುತ್ತಿರುವ ಪೋಟೋಗಳನ್ನು ಸಂಗ್ರಹಿಸಿಡಲಾಗಿದೆ. ಕಾರಂತರು ಅಪ್ರತಿಮ ದೇಶ ಭಕ್ತರಾಗಿದ್ದು ಈ ಥೀಮ್‌ ಪಾರ್ಕ್‌ನ ಸಂಪನ್ಮೂಲ ವ್ಯಕ್ತಿಯಾದ ಪ್ರದೀಪ್‌ ಬಸರೂಯ ಅವರು ಬರೆದಿರುವ ಪುಸ್ತಕದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಕಾರಂತರ ಭಾಗವಹಿಸುವಿಕೆಯ ಕುರಿತ ಉಲ್ಲೇಖಗಳಿವೆ.

ಕನ್ನಡ ಸಾರಸ್ವತ ಲೋಕವನ್ನು ಬೆಳಗಿದ ಈ ಮಹಾನ್‌ಕವಿಯ ಸಾಧನೆಗಳನ್ನು ಬಿಂಬಿಸುವ ಈ ಪಾರ್ಕ್‌ ಕನ್ನಡಿಗರೆಲ್ಲರೂ ನೋಡಲೇಬೇಕಾದ ಸ್ಥಳವಾಗಿದೆ.

-ದಿವ್ಯಾ

ನಾಯ್ಕನಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next