Advertisement

ಮೇಳದಲ್ಲಿ 130 ತಳಿಗಳ ಮಾವು

06:01 PM Jun 06, 2018 | |

ದಾವಣಗೆರೆ: ಆಮ್ಲೆಟ್‌…, ಪಶ್ಚಿಮ ಬಂಗಾಳ….,  ಮ್ರಪಾಲ…, ಬಾಟಲಿ…, ಬಾಂಬೆಗ್ರೀನ್…, ಮೋಹತ್‌ನಗರ…, ಕರಿಇಷಾದ್‌…,ಲಾಂಗ್ರಾ…, ಪಾರ್ನಾಡ್‌ …,ಗಿಡಗಾ…, ಅಟ್ಕನ್‌…, ಓಲೂರು…. ಚಲಾತ್‌ ಚೆನ್ನಿ…,ಕಲುಮಿ…, ಚೌಸಾ…, ನೀಲುದೀªನ್‌…, ಮಂಜಿರಾ…, ಕಿಂಗ್‌ ಸ್ಟಾರ್‌…, ಕೊಬ್ಬರಿ…, ಇವು ಹಣ್ಣುಗಳ ರಾಜ ಎಂದೇ
ಕರೆಯಲ್ಪಡುವ ಮಾವಿನ ವಿವಿಧ ತಳಿಗಳ ಹೆಸರು. ಸಾಮಾನ್ಯವಾಗಿ ಕಸಿ, ರಸಪೂರಿ, ತೋತಾಪುರಿ, ಮಲ್‌ಗೋವಾ, ನೀಲಂ, ಬಾದಾಮಿ, ರತ್ನಗಿರಿ… ಹೆಸರು ಎಲ್ಲರೂ ಕೇಳಿರುವುದು ಸಹಜ. ಹೆಸರು ಕೇಳದ ಮಾವಿನ ತಳಿಗಳ ನೋಡುವ, ಖರೀದಿಸುವ ಅವಕಾಶವನ್ನು ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ  ಸಾರ್ವಜನಿಕರಿಗೆ ಕಲ್ಪಿಸಲಾಗಿದೆ. 130 ವಿವಿಧ ತಳಿಗಳ ಮಾವಿನ ಹಣ್ಣುಗಳನ್ನ ಒಂದೇ ಕಡೆ ನೋಡುವುದಾದರೆ ಎಷ್ಟೊಂದು ಚೆನ್ನಾಗಿರುತ್ತೆ ಅಂದುಕೊಂಡವರು ದಾವಣಗೆರೆಯ ಹಳೆ ಪಿಬಿ ರಸ್ತೆಯ ತೋಟಗಾರಿಕಾ ಇಲಾಖೆ ಆವರಣದಲ್ಲಿ ನಡೆಯುತ್ತಿರುವ ಮಾವು ಮೇಳಕ್ಕೆ ಭೇಟಿ ನೀಡಬಹುದು.

Advertisement

ನೈಸರ್ಗಿಕವಾಗಿ ಮಾಗಿಸಿದ ಮಾವುಗಳನ್ನು ಸಾರ್ವಜನಿಕರಿಗೆ ರೈತರಿಂದ ನೇರವಾಗಿ ತಲುಪಿಸುವ ಮತ್ತು ಬೆಳೆಗಾರರಿಗೆ ಸ್ಥಳೀಯವಾಗಿ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ, ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯತ್‌ ಸಹಯೋಗದಲ್ಲಿ ಜೂ. 7ರ ವರೆಗೆ ಮಾವು ಮೇಳ ನಡೆಯಲಿದೆ. 

ವಿವಿಧ ತಳಿಗಳ ಹಣ್ಣು ನೋಡುವುದು ಮಾತ್ರವಲ್ಲ ರುಚಿಕರ ಹಣ್ಣುಗಳ ಖರೀದಿ ಸಹ ಮಾಡಬಹುದು. ಎಲ್ಲಾ ಹಣ್ಣುಗಳ ಮೇಳ…. ಮಾವಿನ ವಿವಿಧ ತಳಿಗಳ ಪ್ರದರ್ಶನ ಮತ್ತು ಮಾರಾಟ ಮೇಳ ಉದ್ಘಾಟಿಸಿದ ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌, ರೈತರೇ ನೇರವಾಗಿ ಸಾರ್ವಜನಿಕರಿಗೆ ಮಾರಾಟ ಮಾಡುವ ಸ್ಥಳೀಯ ಮಾರುಕಟ್ಟೆ ಹಾಗೂ ರೈತರು-ಗ್ರಾಹಕರಿಗೆ ಮಾಹಿತಿ ಕೇಂದ್ರದಂತಿರುವ ಮಾವು ಮೇಳ ಮತ್ತು ಸಸ್ಯ ಸಂತೆ ಆಯೋಜನೆ ಶ್ಲಾಘನೀಯ.

ಸಾರ್ವಜನಿಕರು-ರೈತರು ಇಂತಹ ಮೇಳಗಳ ಸದ್ಬಳಕೆಗೆ ಮನವಿ ಮಾಡಿದರು. ಒಂದೇ ಸೂರಿನಡಿ ರೈತರು,
ಸಾರ್ವಜನಿಕರಿಗೆ ವಿವಿಧ ತಳಿಗಳ ಸಸಿಗಳು, ಹಣ್ಣುಗಳ ಬೆಳೆಯಲು ಬೇಕಾದ ಮಾಹಿತಿ ಮೇಳದಲ್ಲಿ ದೊರೆಯಲಿದೆ.
ಮಾವು ಮೇಳದಂತೆ ಪ್ರತಿ ಹಣ್ಣಿನ ಮೇಳ ಆಯೋಜನೆಗೆ ಮುಂದಿನ ದಿನಗಳಲ್ಲಿ ಕ್ರಮ ವಹಿಸಲಾಗುವುದು.
ಮುಂದಿನ ದಿನಗಳಲ್ಲಿ ಇಂತಹ ಫಲ-ಪುಷ್ಪ ಪ್ರದರ್ಶನ, ಹಣ್ಣಿನ ಮೇಳಗಳು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಗಾಜಿನ ಮನೆಯಲ್ಲಿ ಆಯೋಜಿಸಲಾಗುವುದು ಎಂದು ತಿಳಿಸಿದರು. ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಟಿ.ಆರ್‌. ವೇದಮೂರ್ತಿ ಮಾತನಾಡಿ, ಮಾವು ಮೇಳದೊಂದಿಗೆ ಸಸ್ಯ ಸಂತೆ ಆಯೋಜಿಸಲಾಗಿದೆ.

 ಮಳೆಗಾಲ ಬಹುತೇಕ ತೋಟಗಾರಿಕೆ ಬೆಳೆಗಳ ನಾಟಿ  ಮಾಡಲು ಇದು ಸೂಕ್ತ ಸಮಯ. ಹಾಗಾಗಿ ಜಿಲ್ಲೆಯ ವಿವಿಧ ತೋಟಗಾರಿಕೆ ಕ್ಷೇತ್ರಗಳಲ್ಲಿ ಲಭ್ಯವಿರುವ ಉತ್ತಮ ಗುಣಮಟ್ಟದ ಮಾವು, ಸಪೋಟ, ಕರಿಬೇವು, ನುಗ್ಗೆ, ನಿಂಬೆ,
ಗುಲಾಬಿ, ಗೃಹ ಅಲಂಕಾರಿಕ ಸಸಿಗಳನ್ನು ಇಲಾಖಾ ದರದಲ್ಲಿ ಅಂದರೆ ಕನಿಷ್ಠ 10 ರಿಂದ ಗರಿಷ್ಠ 50 ರೂಪಾಯಿವರೆಗೆ
ಮಾರಾಟ ಮಾಡಲಾಗುವುದು.

Advertisement

ರೈತರು-ಸಾರ್ವಜನಿಕರು ಸದುಪಯೋಗ ಪಡೆಯಬೇಕು ಎಂದು ಮನವಿ ಮಾಡಿದರು.  ಮಾವುಮೇಳದಲ್ಲಿ ಕಾಲಾಪಾಡ, ಚೌಸಾ, ಬಾಳಮಾವು, ಮಲಗೋವಾ, ಚಿನೊಟೊ, ನೀಲೆಶಾನ್‌, ಚಲಾತ ಚೆನ್ನಿ, ತಾಲಿಮ್ಯಾಂಗೊ,
ಕೇಸರ, ಸಣ್ಣೇಲೆ, ಗೋವಾ ಮನಕುರ, ಆಪೂಸ್‌, ತೋತಾಪುರಿ, ಮದನಪಲ್ಲಿ, ಬಂಗಸಫರಿ, ಚಾರ್ದಾಳು, ದೂದ್‌ಪೇಡಾ, ಕಿಂಗ್‌ಸ್ಟಾರ್‌, ಬಾಂಬೆ, ಮಾಲ್ಡ, ರಸಪೂರಿ, ಲಾಲ್‌ಪುರಿ ಇತರೆ ತಳಿಗಳ ಪ್ರದರ್ಶನ ಇದೆ.

ಹಣ್ಣು ಮಾಗಿಸುವ ಘಟಕ ಸ್ಥಾಪಿಸಿ

ಮಾವು ಮತ್ತು ಬಾಳೆ ಸೇರಿ ವಿವಿಧ ಹಣ್ಣುಗಳನ್ನಾಗಿಸಲು ಉಪಯೋಗಿಸುವ ಹಾನಿಕಾರಕ ಕಾರ್ಬೈಡ್ ರಾಸಾನಿಯಕದಿಂದ ಮುಕ್ತಗೊಳಿಸಲು ಹಣ್ಣು ಮಾಗಿಸುವ ಘಟಕ (ರೈಪನಿಂಗ್‌ ಚೇಂಬರ್‌) ಸ್ಥಾಪಿಸಲು ಮುಂದೆ ಬರುವ ರೈತರು ಅಥವಾ ಆಸಕ್ತರಿಗೆ ಮಾವು ಮಂಡಳಿ ಮತ್ತು ತೋಟಗಾರಿಕೆ ಇಲಾಖೆ ವತಿಯಿಂದ ಒಟ್ಟು ಶೇ. 60 ಸಹಾಯಧನ (ಸಬ್ಸಿಡಿ) ಒದಗಿಸಲಾಗುವುದು ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಟಿ.ಆರ್‌. ವೇದಮೂರ್ತಿ ತಿಳಿಸಿದರು.

ದಾವಣಗೆರೆಯ ಆರ್‌ಎಂಸಿ ಯಾರ್ಡ್‌ನಲ್ಲಿ ರೈಪನಿಂಗ್‌ ಚೇಂಬರ್‌ ಇದೆ. ಹಾಪ್‌ಕಾಮ್ಸ್‌ನಲ್ಲಿ ಮಾರಾಟ ಮಾಡುವ ಹಣ್ಣುಗಳನ್ನು ಕಾರ್ಬೈಡ್ ಈಥೆಲಿನ್‌ ಗ್ಯಾಸ್‌ ಮೂಲಕ ಮಾಗಿಸಲಾಗುವುದು. ಕಾರ್ಬೈಡ್  ರಾಸಾಯನಿಕ ನಿಷೇಧಿತ ವಸ್ತುವಾದರೂ ಬಳಸಲಾಗುತ್ತಿದೆ. ಕಾರ್ಬೈಡ್ ಬಳಕೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಕಾರಣ ರೈಪನಿಂಗ್‌ ಚೇಂಬರ್‌ ಮೂಲಕ ಹಣ್ಣು ಮಾಗಿಸಿದರೆ ಒಳಿತು. ರೈತರು, ಉದ್ಯಮಿಗಳು ರೈಪನಿಂಗ್‌ ಚೇಂಬರ್‌
ಸ್ಥಾಪಿಸಲು ಮುಂದೆ ಬರಬೇಕು ಎಂದು ಮನವಿ ಮಾಡಿದರು

Advertisement

Udayavani is now on Telegram. Click here to join our channel and stay updated with the latest news.

Next