Advertisement

ಇನ್ನು ಮಲೇಷ್ಯಾ ಮರಳಿನ ಹವಾ

06:00 AM Dec 09, 2017 | Team Udayavani |

ಮಂಗಳೂರು: ರಾಜ್ಯ ಸರ್ಕಾರ ಈಗಾಗಲೇ ತೀರ್ಮಾನಿಸಿರುವಂತೆ ಇದೇ ಮೊದಲ ಬಾರಿಗೆ 52,129 ಮೆಟ್ರಿಕ್‌ ಟನ್‌ಗಳಷ್ಟು ಭಾರೀ ಪ್ರಮಾಣದ ವಿದೇಶಿ ಮರಳು ನೆರೆಯ ಮಲೇಷ್ಯಾದಿಂದ ಈಗ ಮಂಗಳೂರು ಬಂದರಿಗೆ ಬಂದು ತಲುಪಿದೆ. ಪರಿಣಾಮವಾಗಿ, ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಇನ್ನುಮುಂದೆ ವಿದೇಶಿ ಮರಳಿನ ಹವಾ ಸೃಷ್ಟಿಯಾಗಲಿದೆ.

Advertisement

ಮಲೇಷ್ಯಾದ ಪಿಕೋನ್‌ ಬಂದರಿನಿಂದ “ತೋರ್‌ ಇನ್ಫಿನಿಟ್‌’ ಹೆಸರಿನ ಸರಕು ಹಡಗು ಈ ಮರಳು ತುಂಬಿಕೊಂಡು ನ.27ರಂದು ಹೊರಟಿದ್ದು, ಒಖೀ ಚಂಡಮಾರುತದ ಭೀತಿಯ ನಡುವೆಯೂ 10 ದಿನಗಳಲ್ಲಿ ನವಮಂಗಳೂರು ಬಂದರನ್ನು ತಲುಪುವಲ್ಲಿ ಯಶಸ್ವಿಯಾಗಿದೆ. ಹಡಗಿನಲ್ಲಿರುವ ಕೋಟ್ಯಂತರ ರೂ. ಮೌಲ್ಯದ, ಬೃಹತ್‌ ಪ್ರಮಾಣದ ಮರಳನ್ನು ಶುಕ್ರವಾರ ಬೆಳಗ್ಗಿನಿಂದ ಅನ್‌ಲೋಡ್‌ ಮಾಡುವ ಕಾರ್ಯ ಪ್ರಾರಂಭವಾಗಿದ್ದು, ಈ ಕಾರ್ಯಾಚರಣೆಗೇ ಬರೋಬ್ಬರಿ ಮೂರು ದಿನ ಬೇಕಾಗಲಿದೆ.

ರಸ್ತೆ ಮೂಲಕ ಇತರೆಡೆಗೆ ಸಾಗಣೆ: ಬಳಿಕ ಸರ್ಕಾರದ ನೀತಿ ನಿಯಮಗಳ ಪ್ರಕಾರ, ಮರಳನ್ನು 14 ಗಾಲಿಗಳ, 21 ಟನ್‌ ಹೊರುವ ಸಾಮರ್ಥ್ಯ ಹೊಂದಿರುವ ಬೃಹತ್‌ ಲಾರಿಗಳಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಇತರ ಜಿಲ್ಲೆಗಳಿಗೆ ರಸ್ತೆ ಮೂಲಕ ರವಾನಿಸಲಾಗುತ್ತದೆ. ಲಾರಿಗಳ ಲೆಕ್ಕಾಚಾರದಂತೆ ನೋಡಿದರೆ, ಒಟ್ಟು 2,482 ಲಾರಿಗಳಷ್ಟು ಮರಳು ಈಗ ಮಂಗಳೂರು ಬಂದರು ತಲುಪಿದೆ ಎಂದು ವಿದೇಶಿ ಮರಳು ಆಮದು ನಿರ್ವಹಣೆ ಉಸ್ತುವಾರಿ ವಹಿಸಿಕೊಂಡಿರುವ ಡೆಲ್ಟಾ ಇನ್‌ಫ್ರಾ ಏಜೆನ್ಸಿ ಎಂಬ ಕಂಪೆನಿಯ ಉನ್ನತ ಅಧಿಕಾರಿಗಳು “ಉದಯವಾಣಿ’ಗೆ ತಿಳಿಸಿದ್ದಾರೆ.

ಮರಳು ಅಭಾವಕ್ಕೆ ಪ್ರತಿಯಾಗಿ ರಾಜ್ಯ ಸರ್ಕಾರ ಎರಡು ತಿಂಗಳ ಹಿಂದಷ್ಟೇ ಮಲೇಷ್ಯಾದಿಂದ ಮರಳು ತರಿಸಿಕೊಳ್ಳಲು ನಿರ್ಧರಿಸಿತ್ತು. ಈ ಬಳಿಕ ಪ್ರಕ್ರಿಯೆಗಳು ಶುರುವಾಗಿ ಮಂಗಳೂರು ಬಂದರು ಮೂಲಕ  ಮಲೇಷ್ಯಾದಿಂದ 5 ಲಕ್ಷ ಮೆ. ಟನ್‌ ಮರಳನ್ನು ಆಮದು ಮಾಡಿಕೊಳ್ಳಲು ಸರ್ಕಾರ ಅನುಮತಿ ನೀಡಿತ್ತು. ಇದರಂತೆ, ಚೆನ್ನೈ ಮೂಲದ ಆಕಾರ್‌ ಎಂಟರ್‌ಪ್ರೈಸಸ್‌ ಎಂಬ ಕಂಪನಿಯ ಮೂಲಕ ಮಲೇಷ್ಯಾದಿಂದ ಮೊದಲ ಹಂತದಲ್ಲಿ 52,129 ಮೆ. ಟನ್‌ ಮರಳು ನವಮಂಗಳೂರು ಬಂದರಿಗೆ ರವಾನೆಯಾಗಿದೆೆ ಎಂದು ಮೂಲಗಳು ತಿಳಿಸಿವೆ.

ಎರಡು ಕಂಪನಿಗಳಿಗೆ ಅನುಮತಿ
ವಿದೇಶದಿಂದ ಮರಳು ತರಿಸಿಕೊಂಡು ರಾಜ್ಯದಲ್ಲಿ ಮಾರಾಟ ಮಾಡಲು ರಾಜ್ಯ ಸರ್ಕಾರದ ಪರವಾನಗಿಯಡಿ ಮೈಸೂರ್‌ ಸೇಲ್ಸ್‌ ಇಂಟರ್‌ನ್ಯಾಷನಲ್‌ ಸಂಸ್ಥೆಗೆ ಮತ್ತು ಮುಕ್ತ ಪರವಾನಗಿಯಡಿ ಆಕಾರ್‌ ಕಂಪನಿಗೆ ಅನುಮತಿ ನೀಡಲಾಗಿದೆ. ಇದರಂತೆ ಎಂಎಸ್‌ಐಎಲ್‌ ಈಗಾಗಲೇ ಆರು ಕಂಪನಿಗಳಿಗೆ ಗುತ್ತಿಗೆ ನೀಡಿದ್ದು, ಆಮದು ಪ್ರಕ್ರಿಯೆ ಶುರುವಾಗಿಲ್ಲ. ಈ ನಡುವೆ, ಮುಕ್ತ ಸಾಮಾನ್ಯ ಪರವಾನಿಗೆಯಲ್ಲಿ ಆಕಾರ್‌ ಏಜೆನ್ಸಿ ಇದೀಗ ಮೊದಲ ಹಂತವಾಗಿ ಮಲೇಷ್ಯಾದಿಂದ ಮರಳು ಆಮದು ಮಾಡಿಕೊಳ್ಳಲು ಶುರು ಮಾಡಿದೆ. ಈ ಕಂಪನಿಗೆ ಒಟ್ಟು 5 ಲಕ್ಷ ಮೆಟ್ರಿಕ್‌ ಟನ್‌ ಮರಳು ಆಮದು ಮಾಡಿಕೊಳ್ಳಲು ಅನುಮತಿ ಸಿಕ್ಕಿದೆ.

Advertisement

ಸದ್ಯ ರಾಜ್ಯದಲ್ಲಿ ವಾರ್ಷಿಕ 90 ಲಕ್ಷ ಟನ್‌ ಮರಳು ಬಳಕೆಗೆ ಲಭ್ಯವಿದೆ. ಆದರೆ ವರ್ಷಕ್ಕೆ ಬೇಡಿಕೆ ಇರುವ ಮರಳು 3.5 ಕೋಟಿ ಮೆಟ್ರಿಕ್‌ ಟನ್‌. ಹೀಗಾಗಿ ಬೇಡಿಕೆ ಮತ್ತು ಪೂರೈಕೆಯಲ್ಲಿ ಭಾರಿ ವ್ಯತ್ಯಾಸವಿರುವುದರಿಂದ ರಾಜ್ಯ ಸರ್ಕಾರ ವಿದೇಶಿ ಮರಳಿನ ಮೊರೆ ಹೋಗಿದೆ. ಹಾಗಂತ ಈಗ ಮಂಗಳೂರಿನ ಬಂದರಿಗೆ ಮರಳು ಬಂದಿದೆ, ನಾಳೆಯೇ ಸಿಗು¤ತ್ತೆ ಎಂದು ಭಾವಿಸುವ ಹಾಗೂ ಇಲ್ಲ. ಇದಕ್ಕೆ ಕಾರಣ, ರಾಜ್ಯ ಸರ್ಕಾರ ಇಲ್ಲಿ ಮರಳಿನ ಮಾರಾಟ ಮತ್ತು ಸಾಗಾಟಕ್ಕೆ ಕೆಲವೊಂದು ನಿಯಮಗಳನ್ನು ವಿಧಿಸಿದೆ. ಈ ನಿಯಮಗಳನ್ನು ಪಾಲನೆ ಮಾಡಿದ ಮೇಲಷ್ಟೇ ಮರಳು ತುಂಬಿದ ಲಾರಿಗಳು ಬಂದರಿನಿಂದ ಹೊರಡಲಿವೆ.ಅಲ್ಲಿವರೆಗೆ ಇಲ್ಲೇ ದಾಸ್ತಾನು ಮಾಡಲಾಗುತ್ತದೆ. ಈಗಾಗಲೇ ಆಕಾರ್‌ ಕಂಪನಿ ಸಾಗಾಟ ಮತ್ತು ಮಾರಾಟ ಸಂಬಂಧ ರಾಜ್ಯ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಅರ್ಜಿ ಸಲ್ಲಿಸಿದ್ದು ಅನುಮತಿಯನ್ನು ಎದುರು ನೋಡುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಮಂಗಳೂರಿಗೇ ಏಕೆ?
ಮಂಗಳೂರು ಬಂದರಿಗೆ ಹೋಲಿಸಿದರೆ ಮಲೇಷ್ಯಾಕ್ಕೆ ಚೆನ್ನೈ ಬಂದರು ಸರಕು ಸಾಗಣೆಯ ದೃಷ್ಟಿಯಿಂದ ತುಂಬಾ ಹತ್ತಿರವಿದೆ. ಪ್ರಯಾಣದ ಅವಧಿಯೂ ಮಂಗಳೂರು ಬಂದರಿಗೆ ಹೋಲಿಸಿದರೆ ಕಡಿಮೆ ಸಾಕು. ಆದರೆ ಚೆನ್ನೈ ಬಂದರಿನಲ್ಲಿ ಬಂದರು ಶುಲ್ಕ ಹಾಗೂ ನಿರ್ವಹಣಾ ಶುಲ್ಕ ಅಧಿಕ. ಒಟ್ಟಾರೆ ಸಾಗಾಟ ವೆಚ್ಚದ ದೃಷ್ಟಿಯಿಂದ, ಚೆನ್ನೈಗೆ ಹೋಲಿಸಿದರೆ ಮಂಗಳೂರಿಗೆ ಮರಳು ಸಾಗಣೆ ಅನುಕೂಲಕರ ಮಿತವ್ಯಯಿ ಎಂಬ ದೃಷ್ಟಿಯಿಂದ ಕಂಪೆನಿ ಈ ಕ್ರಮ ತೆಗೆದುಕೊಂಡಿದೆ. ಕರ್ನಾಟಕದ ಮಾರುಕಟ್ಟೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸಂಸ್ಥೆಯು ನವಮಂಗಳೂರು ಬಂದರು ಮೂಲಕ ಮರಳು ಆಮದು ಮಾಡಿಕೊಂಡಿದೆ.

– ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next