Advertisement

ಕಿಮ್ಮತ್ತು ಕಳೆದುಕೊಂಡ ಲಾಕ್‌ಡೌನ್‌

12:04 PM May 05, 2020 | Suhan S |

ಹುಬ್ಬಳ್ಳಿ: ಕೋವಿಡ್ 19 ಸೋಂಕು ಹರಡದಂತೆ ನಿಯಂತ್ರಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಘೋಷಿಸಿರುವ ಲಾಕ್‌ಡೌನ್‌ಗೆ ವಾಣಿಜ್ಯ ನಗರಿದಲ್ಲಿ ಕವಡೆಕಾಸಿನ ಕಿಮ್ಮತ್ತು ಇಲ್ಲದಂತಾಗಿದೆ. ಲಾಕ್‌ಡೌನ್‌ ಸಡಿಲಿಕೆ ಪರಿಣಾಮ ಸೋಮವಾರ ವಾಹನಗಳ ಬೇಕಾಬಿಟ್ಟಿ ಓಡಾಡಕ್ಕೆ ಯಾವುದೇ ಕಡಿವಾಣ ಇಲ್ಲದಂತಾಗಿತ್ತು. ಹಲವು ನಿರ್ಬಂಧಗಳನ್ನು ವಿಧಿಸಿದ ಜಿಲ್ಲಾಧಿಕಾರಿಗಳ ಆದೇಶ ಸಂಪೂರ್ಣ ಗಾಳಿಗೆ ತೂರಲಾಗಿತ್ತು.

Advertisement

ಸರಕಾರ ಮದ್ಯ ಮಾರಾಟಕ್ಕೆ ಅವಕಾಶ ನೀಡಿದ್ದೆ ತಡ, ಸೋಮವಾರ ಮದ್ಯದಂಗಡಿಗಳಿಗೆ ಧಾವಿಸಿದ ಜನ, ಕೋವಿಡ್ 19, ಲಾಕ್‌ಡೌನ್‌, ನಿಷೇಧಾಜ್ಞೆ ಎಲ್ಲವನ್ನು ಮರೆತವರಂತೆ ವರ್ತಿಸಿದ್ದು ಕಂಡುಬಂದಿತು. ಕೆಲವೊಂದು ಕಡೆಯಂತೂ ಪೊಲೀಸರೇ ಅಸಹಾಯಕರಂತೆ ನಿಲ್ಲಬೇಕಾಗಿತ್ತು. ಅಷ್ಟೇ ಅಲ್ಲ ಮದ್ಯದ ಅಂಗಡಿಗಳಿಗೂ ರಕ್ಷಣೆ, ಕಾವಲು ಕಾಯುವ ಸ್ಥಿತಿ ಅವರದ್ದಾಗಿತ್ತು. ಮೂರನೇ ಹಂತದ ಲಾಕ್‌ಡೌನ್‌ ಆರಂಭವಾಗಿರುವ ಸಂದರ್ಭದಲ್ಲಿ ಕೇಂದ್ರ ಸರಕಾರ ಆರ್ಥಿಕ ಚೇತರಿಕೆ ಹಿನ್ನೆಲೆಯಲ್ಲಿ ಒಂದಿಷ್ಟು ಚಟುವಟಿಕೆಗಳಿಗೆ ವಿನಾಯಿತಿ ನೀಡಿದೆ. ಕೇಂದ್ರದ ಮಾರ್ಗಸೂಚಿ ಪ್ರಕಾರ ಜಿಲ್ಲಾಡಳಿತ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಲಾಕ್‌ಡೌನ್‌ನಲ್ಲಿ ಕೊಂಚ ಸಡಿಲಿಕೆ ನೀಡಲಾಗಿದೆ ಎನ್ನುವ ನೆಪದಲ್ಲೇ ಜನರು ಬೇಕಾಬಿಟ್ಟಿಯಾಗಿ ರಸ್ತೆಗಿಳಿಯುತ್ತಿದ್ದಾರೆ. ಅಗತ್ಯ ವಸ್ತುಗಳ ಖರೀದಿ, ಕಚೇರಿಗೆ ತೆರಳುವುದು ಇಂತಹ ನೆಪ ಹೇಳಿಕೊಂಡು ದ್ವಿಚಕ್ರ ವಾಹನ ಹಾಗೂ ಕಾರುಗಳ ಸಂಚಾರ ಜೋರಾಗಿತ್ತು. ಬಹುತೇಕ ಪ್ರಮುಖ ರಸ್ತೆಗಳು ವಾಹನಗಳಿಂದ ತುಂಬಿದ್ದವು. ಸೋಮವಾರದ ವಾಹನ ದಟ್ಟಣೆ ಸಾಮಾನ್ಯ ದಿನಗಳ ಸಂಚಾರವನ್ನು ನೆನಪಿಸುವಂತಿತ್ತು. ಸಮೂಹ ಸಾರಿಗೆ ಹೊರತುಪಡಿಸಿದರೆ ಮೂರನೇ ಲಾಕ್‌ಡೌನ್‌ ಮೊದಲ ದಿನ ಅಕ್ಷರಶಃ ನಿಯಮಗಳು ಮೂಲೆಗುಂಪಾದಂತಿತ್ತು.

ಲಾಕ್‌ಡೌನ್‌ ಅರ್ಥಹೀನ: ಮಹಾನಗರ ನಗರದಲ್ಲಿ ನಾಲ್ಕು ಸೋಂಕಿತ ಪ್ರಕರಣ ಸಕ್ರಿಯವಾಗಿದ್ದು, ಜಿಲ್ಲೆ ನೇರಳೆ ವಲಯದಲ್ಲಿದ್ದರೂ ಜನರ ಬೇಕಾಬಿಟ್ಟಿ ಓಡಾಟಕ್ಕೆ ಪಾರವೇ ಇರಲಿಲ್ಲ. ಮುಲ್ಲಾ ಓಣಿ, ಆಜಾದ್‌ ನಗರ, ಶಾಂತಿ ನಗರದ ಸೋಂಕಿತರ ಮನೆಯ ಸುತ್ತಲಿನ ಸೋಂಕಿತರ ನಿವಾಸದ 100 ಮೀಟರ್‌ ಪ್ರದೇಶ ಹೊರತುಪಡಿಸಿದರೆ ಸುತ್ತಲಿನ ಪ್ರದೇಶದಲ್ಲಿ ಯಾವ ಕಡಿವಾಣ ಇರಲಿಲ್ಲ. ಸುತ್ತಲಿನ 3 ಕಿ.ಮೀ. ಕಂಟೈನ್‌ಮೆಂಟ್‌ ಪ್ರದೇಶವಾಗಿದ್ದರೂ ನಿಯಮಗಳು ಸಂಪೂರ್ಣ ಗಾಳಿಗೆ ತೂರಲಾಗಿತ್ತು.

ನಗರ ಮತ್ತು ತಾಲೂಕು ವ್ಯಾಪ್ತಿಯಲ್ಲಿನ ಗ್ಯಾರೇಜ್‌, ಆಟೋ ಮೊಬೈಲ್ಸ್‌, ಜನರಲ್‌ ಸ್ಟೋರ್‌ ಸೇರಿದಂತೆ ಬಹುತೇಕ ಅಂಗಡಿಗಳು ಆರಂಭವಾಗಿದ್ದವು. ಇನ್ನೂ ಕೆಲವಡೆ ಹೇರ್‌ ಸಲೂನ್‌ಗಳು ಕೂಡ ಆರಂಭವಾಗಿದ್ದವು. ನಿಗದಿತ ಪಾಸ್‌ ಹೊಂದಿದ ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಆದರೆ ತುರ್ತು ಕಾರ್ಯದಲ್ಲಿ ಎನ್ನುವ ಫಲಕ ಹಾಕಿಕೊಂಡು ಸಂಚರಿಸುವ ವಾಹನಗಳೇ ಹೆಚ್ಚಾಗಿದ್ದವು. ಇನ್ನೂ ಬೈಕ್‌ ಓಡಾಟವಂತೂ ಮಿತಿ ಮೀರಿತ್ತು.

ಮಾಸ್ಕ್ ಇಲ್ಲ, ಅಂತರವೂ ಇಲ್ಲ: ಸಾರ್ವಜನಿಕವಾಗಿ ಸಂಚರಿಸುವ ಪ್ರತಿಯೊಬ್ಬರು ಮುಖಕ್ಕೆ ಮಾಸ್ಕ್ ಧರಿಸಬೇಕು, ಇನ್ನೂ 5 ಜನರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಸೇರಬಾರದು. ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಈ ನಿಯಮ ಮೀರಿದವರಿಂದ ದಂಡ ವಸೂಲಿ ಮಾಡುವುದಾಗಿ ಸೂಚನೆಯಿದ್ದರೂ ಜನರು ಮಾತ್ರ ಇದನ್ನು ಕ್ಯಾರೇ ಎನ್ನದೆ ಓಡಾಡುತ್ತಿದ್ದರು. ಇದನ್ನು ಅನುಷ್ಠಾನಗೊಳಿಸಬೇಕಾದ ಅಧಿಕಾರಿಗಳು, ಸಿಬ್ಬಂದಿ ಕಾಣಲಿಲ್ಲ.

Advertisement

ಕೆಲ ಚಟುವಟಿಕೆಗಳಿಗೆ ಅವಕಾಶ ನೀಡಿದ ಹಿನ್ನೆಲೆಯಲ್ಲಿ ಈ ಚೆಕ್‌ಪೋಸ್ಟ್‌ಗಳ ಕಾರ್ಯದಲ್ಲಿ ಸಡಿಲಿಕೆಯಿತ್ತು. ಚೆಕ್‌ಪೋಸ್ಟ್‌ ಮುಂಭಾಗದಲ್ಲಿ ಬ್ಯಾರಿಕೇಡ್‌ ಮೂಲಕ ಒಳ ಮತ್ತು ಹೊರ ಹೋಗುವ ವಾಹನಗಳಿಗೆ ಅವಕಾಶ ಮಾಡಿಕೊಡಲಾಗಿತ್ತು. ನಗರದಲ್ಲಿ ಆರು ಸೋಂಕಿತ ಪ್ರಕರಣಗಳು ಇರುವ ಕಾರಣದಿಂದ ಕನಿಷ್ಠ ಚೆಕ್‌ಪೋಸ್ಟ್‌ ಗಳಲ್ಲಾದರೂ ಬೇಕಾಬಿಟ್ಟಿ ಓಡಾಟಕ್ಕೆ ಕಡಿವಾಣ ಹಾಕುವ ಕೆಲಸ ಆಗಬೇಕು ಎನ್ನುವ ಮಾತುಗಳು ಕೇಳಿ ಬಂದವು.

ಆರಂಭವಾದ ಸಿಗ್ನಲ್‌: ಸುಮಾರು ನಲವತ್ತು ದಿನಗಳಿಂದ ಸ್ಥಗಿತಗೊಂಡಿದ್ದ ಟ್ರಾಫಿಕ್‌ ಸಿಗ್ನಲ್‌ ಗಳು ಇಂದು ಪುನರಾರಂಭವಾಗಿದ್ದವು. ಚೆಕ್‌ಪೋಸ್ಟ್‌ ಗಳಲ್ಲಿದ್ದು ವಿನಾಕಾರಣ ಓಡಾಡುತ್ತಿರುವ ನಿಗಾ ವಹಿಸುತ್ತಿದ್ದ ಸಂಚಾರಿ ಪೊಲೀಸರು ವೃತ್ತ ಹಾಗೂ ರಸ್ತೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಜನರನ್ನು ನಿಯಂತ್ರಿಸಲು ಪರದಾಡುತ್ತಿದ್ದ ಪೊಲೀಸರು, ವಾಹನಗಳ ದಟ್ಟಣೆ ನಿಯಂತ್ರಿಸುವ ಕಾರ್ಯದಲ್ಲಿ ತೊಡಗಿದ್ದರು.

ಬೇಕಾಬಿಟ್ಟಿ ಓಡಾಟಕ್ಕೆ ಬೇಕಿದೆ ಬ್ರೇಕ್‌ :  ವಾಣಿಜ್ಯ ನಗರದಲ್ಲಿ ಇನ್ನೂ ನಾಲ್ಕು ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ  ಪಿ-589 ಸೋಂಕಿತ ನಗರದ ವಿವಿಧ ಭಾಗಗಳಲ್ಲಿ ಸಂಚಾರ ಮಾಡಿರುವ ಟ್ರಾವಲ್‌ ಹಿಸ್ಟರಿ, ಅವರೊಂದಿಗಿನ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಸಂಪರ್ಕಿತರ ಸಂಖ್ಯೆ ಬಹು ದೊಡ್ಡದಿದೆ ಎನ್ನಲಾಗಿದೆ. ಇಂತಹ ಸಂದರ್ಭದಲ್ಲಿ ಕಂಟೈನ್ಮೆಂಟ್‌ ವಲಯದಲ್ಲಿ ಲಾಕ್‌ಡೌನ್‌ ನಿಯಮಗಳು ಬಿಗಿಗೊಳ್ಳಬೇಕು. ಸರಕಾರದ ಮಾರ್ಗಸೂಚಿಯ ಪ್ರಕಾರ ಅವರ ಸಂಚಾರದ ತಪಾಸಣೆ ನಡೆಯಬೇಕು. ಇರುವ ಚೆಕ್‌ಪೋಸ್ಟ್‌ಗಳನ್ನು ಬಿಗಿಗೊಳಿಸಬೇಕು. ಲಾಕ್‌ಡೌನ್‌ ಸಡಿಲಿಕೆಯಿಂದ ಪೊಲೀಸರ ಮೇಲೆ ಒತ್ತಡ ಹೇರಲು ಸಾಧ್ಯವಿಲ್ಲ. ಹೀಗಾಗಿ ಸೋಂಕಿತರ ಪ್ರಮಾಣ ಕಡಿಮೆಯಾಗುವವರೆಗೂ ಲಾಕ್‌ಡೌನ್‌ ನಿಮಯಗಳನ್ನು ಬಿಗಿಗೊಳಿಸಿ ಬೇಕಾಬಿಟ್ಟಿ ಓಡಾಟಕ್ಕೆ ಬ್ರೇಕ್‌ ಹಾಕಬೇಕಿದೆ. ಹಸಿರುವ ವಲಯಕ್ಕೆ ಹೋಗುವ ನಿಟ್ಟಿನಲ್ಲಿ ಪ್ರಯತ್ನಗಳಾಗಬೇಕು ವಿನಃ ರೆಡ್‌ಝೋನ್‌ತ್ತ ಹೋಗದಂತೆ ಎಚ್ಚರವಹಿಸಬೇಕು ಎನ್ನುವುದು ಜನರ ಒತ್ತಾಯ.

 

­ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next