Advertisement

ಸ್ಥಳೀಯರೇ ರಸ್ತೆಅಭಿವೃದ್ಧಿ ಪಡಿಸಿದರು !

06:34 AM Mar 21, 2019 | |

ವಿಟ್ಲ : ಅಳಿಕೆ ಗ್ರಾಮದಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆ ಯಡಿಯಲ್ಲಿ ರಸ್ತೆ ಮಂಜೂರಾಗಿದೆ ಎಂಬ ರಾಜಕೀಯ ಧುರೀಣರ ಮಾತನ್ನು ನಂಬಿ 9 ವರ್ಷ ಕಳೆದರೂ ರಸ್ತೆಯಾಗಲಿಲ್ಲವೆಂದು ಬೇಸತ್ತ ಗ್ರಾಮಸ್ಥರೇ ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಮೂಲಕ ರಸ್ತೆ ನಿರ್ಮಾಣ ಮಾಡಿ, ಭೇಷ್‌ ಎನಿಸಿದ್ದಾರೆ.

Advertisement

ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆಯಡಿ 2010-11ನೇ ಸಾಲಿನಲ್ಲಿ ಅಳಿಕೆ ಸತ್ಯಸಾಯಿ ವಿಹಾರದಿಂದ ಮೆಣಸಿನ ಗಂಡಿ ಮೂಲಕವಾಗಿ ಕೆಳಗಿನ ಮುಳಿಯ ಸೇರುವ 6.42 ಕಿ.ಮೀ. ರಸ್ತೆಗೆ 341.50 ಲಕ್ಷ ರೂ. ಮಂಜೂರಾಗಿತ್ತು. ಕಳೆದ 9 ವರ್ಷಗಳಿಂದ ಮಂಜೂರಾಗಿರುವ ಬಗ್ಗೆ ರಾಜಕಾರಣಿಗಳು ಘೋಷಿಸುತ್ತಿದ್ದರು ಹೊರತಾಗಿ ರಸ್ತೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿರಲಿಲ್ಲ.

ಚುನಾವಣೆ ಬಂದಾಗಲೆಲ್ಲ ಭರವಸೆ ಸಿಗುತ್ತಿತ್ತು. ಆದರೆ ರಸ್ತೆ ಅಭಿವೃದ್ಧಿಯಾಗಲೇ ಇಲ್ಲ. ತೀರಾ ಹದಗೆಟ್ಟು ಹೋದ ಪ್ರದೇಶದ ರಸ್ತೆಗೆ ಕಾಂಕ್ರೀಟ್‌ ಮಾಡುವುದಕ್ಕೆ ಸ್ಥಳೀಯರು ಸಜ್ಜಾದರು. ಉದ್ಯೋಗ ಖಾತ್ರಿ ಯೋಜನೆಯ ಮೂಲಕ 20ಕ್ಕೂ ಅಧಿಕ ಸ್ಥಳೀಯ ನಿವಾಸಿಗಳು ಜತೆಯಾಗಿ ಸುಮಾರು 6 ಲಕ್ಷ ರೂ. ವೆಚ್ಚದಲ್ಲಿ 128 ಮೀ. ಉದ್ದಕ್ಕೂ ಕಾಂಕ್ರೀಟ್‌ ಕಾರ್ಯ ಮಾಡಿದ್ದಾರೆ. ರಾಜಕಾರಣಿಗಳು ಮತ ಯಾಚನೆಗೆ ಆಗಮಿಸುವ ವೇಳೆ ಈ ರಸ್ತೆ ಕಾಮಗಾರಿಯನ್ನು ತೋರಿಸಿ, ಇದನ್ನು ನಾವೇ ಅಭಿವೃದ್ಧಿ ಪಡಿಸಿದ್ದು ಎನ್ನುತ್ತಿದ್ದಾರೆ.

ಭರವಸೆ ನೀಡಿದವರು ಬರಲೇ ಇಲ್ಲ
ಅಳಿಕೆ, ಗಂಗೆಮೂಲೆ, ಮೆಣಸಿನಗಂಡಿ, ದೂಜಮೂಲೆ, ಮುಳಿಯ ನೆಕ್ಕರೆ, ಕೆಳಗಿನ ಮುಳಿಯವಾಗಿ ನೆಕ್ಕಿತ್ತಪುಣಿ ಸೇರುವ ಈ ರಸ್ತೆಯಲ್ಲಿ 100ಕ್ಕೂ ಅಧಿಕ ಮನೆಗಳಿವೆ. ಇದು ಈ ಊರಿನ ಪ್ರಮುಖ ಸಂಪರ್ಕ ರಸ್ತೆಯಾಗಿದ್ದು, ಮಳೆಗಾಲದಲ್ಲಿ ವಾಹನ ಸಂಚಾರ ಕಷ್ಟಕರವಾಗಿತ್ತು. ರೋಗಿಯನ್ನು ಗದ್ದೆ, ತೋಡಿನ ಬದಿಗಳಲ್ಲಿ ಹೊತ್ತು ಆಸ್ಪತ್ರೆ ಸೇರುವ ಪರಿಸ್ಥಿತಿ ಇತ್ತು. ಹಿಂದಿನ ಲೋಕಸಭಾ ಚುನಾವಣೆ ಸಮಯ ಭರವಸೆ ನೀಡಿ ಹೋದ ವ್ಯಕ್ತಿಗಳು  ಮಾತ್ರ ಬಳಿಕ ಇತ್ತ ಆಗಮಿಸಲೇ ಇಲ್ಲ. ಯಾವ ಭರವಸೆಗೂ ಕಾಯದೇ ನಮ್ಮ ರಸ್ತೆಯನ್ನು ನಾವೇ ಅಭಿವೃದ್ಧಿಪಡಿಸುತ್ತೇವೆ ಎನ್ನುತ್ತಿದ್ದಾರೆ ರಸ್ತೆ ಫಲಾನುಭವಿಗಳು.

Advertisement

Udayavani is now on Telegram. Click here to join our channel and stay updated with the latest news.

Next