Advertisement

ಕಾಂಗ್ರೆಸ್‌-ಜೆಡಿಎಸ್‌ ತಂತ್ರಕ್ಕೆ ಬಿಜೆಪಿ ತಿರುಮಂತ್ರ

06:50 AM Apr 18, 2018 | Team Udayavani |

ಬೆಂಗಳೂರು:ರಾಜ್ಯದಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ  ಜಾತಿವಾರು ಟಿಕೆಟ್‌ ಹಂಚಿಕೆ ತಂತ್ರಕ್ಕೆ ಪ್ರತಿಯಾಗಿ ಸೇರಿಗೆ ಸವ್ವಾ ಸೇರು ಎಂಬಂತೆ ಬಿಜೆಪಿಯು “ಟಾರ್ಗೆಟ್‌ ಲೀಡರ್’ ತಂತ್ರಗಾರಿಕೆ ಮೂಲಕ  ರಾಜಕೀಯ ಜಾಣ್ಮೆ ತೋರಿದೆ.

Advertisement

ಮೊದಲ ಹಾಗೂ ಎರಡನೇ ಪಟ್ಟಿಯಲ್ಲಿ 154 ಅಭ್ಯರ್ಥಿಗಳ ಹೆಸರು ಘೋಷಿಸಿ, 42 ಅಭ್ಯರ್ಥಿಗಳ ಪಟ್ಟಿ ಸಿದ್ಧಗೊಂಡಿದ್ದರೂ ಬಿಡುಗಡೆ ಮಾಡದೆ 28 ಕ್ಷೇತ್ರಗಳ ಆಯ್ಕೆ ಗುಪ್ತವಾಗಿಟ್ಟು ಟಿಕೆಟ್‌ ಹಂಚಿಕೆಯಲ್ಲಿ “ರಕ್ಷಣಾತ್ಮಕ’ ಆಟ ಆಡುವ ಮೂಲಕ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರೇ ಅಚ್ಚರಿಯಾಗುವಂತೆ ಮಾಡಿದೆ.

ಕಾಂಗ್ರೆಸ್‌ ಮತ್ತು ಜೆಡಿಎಸ್‌ ಇಂತಿಂಥ ಜಾತಿಗಳಿಗೆ ಇಷ್ಟಿಷ್ಟು ಸೀಟು ಕೊಟ್ಟಿದ್ದೇವೆ ಎಂದು ಅಂಕಿ-ಸಂಖ್ಯೆ ಸಮೇತ ಪ್ರಕಟಿಸಿದರೆ ಬಿಜೆಪಿ ಬಹಿರಂಗವಾಗಿ ಹೇಳದಿದ್ದರೂ ಸದ್ದಿಲ್ಲದೆ ಆ ಕೆಲಸ ಮಾಡಿ ಮುಗಿಸಿದೆ. ಇದೇ ಮೊದಲ ಬಾರಿಗೆ ಬಿಜೆಪಿ ರಾಜ್ಯದ  ಎಲ್ಲ ಜಿಲ್ಲೆಗಳಲ್ಲೂ ಆಯಾ ಭಾಗದಲ್ಲಿ ಪ್ರಭಾವ ಅಥವಾ ನಿರ್ಣಾಯಕರಾಗಿರುವ ಜಾತಿ, ಸಮುದಾಯದ ನಾಯಕರಿಗೆ ಅವಕಾಶ ಕೊಡುವ ಮೂಲಕ ವಿಧಾನಸಭೆಯಷ್ಟೇ ಅಲ್ಲದೆ ಮುಂದಿನ ಲೋಕಸಭೆಗೂ ಈ ಮೂಲಕವೇ ಭದ್ರ ಬುನಾದಿ ಹಾಕಿಕೊಂಡಿದೆ.

ಟಿಕೆಟ್‌ ಹಂಚಿಕೆಯಲ್ಲಿ ಕೇಂದ್ರ ಸಚಿವರಾದ ಅನಂತಕುಮಾರ್‌, ಡಿ.ವಿ.ಸದಾನಂದಗೌಡ, ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಆಯ್ದ ಹಾಗೂ ಸೀಮಿತ ಕ್ಷೇತ್ರಗಳ ಟಿಕೆಟ್‌ ಹಂಚಿಕೆಯಲ್ಲಿ ಪ್ರಧಾನ ಪಾತ್ರ ವಹಿಸಿರುವುದು ಬಿಟ್ಟರೆ ಯಡಿಯೂರಪ್ಪ ಹಾಗೂ ಶ್ರೀರಾಮುಲು “ಮೇಲುಗೈ’ ಸಾಧಿಸಿರುವುದು ಸ್ಪಷ್ಟ.

ಮೊಳಕಾಳೂ¾ರು ತಿಪ್ಪೇಸ್ವಾಮಿ ಹೊರತುಪಡಿಸಿ ಕೆಜಿಪಿ- ಬಿಎಸ್‌ಆರ್‌ನಿಂದ ಸ್ಪರ್ಧಿಸಿ ಗೆದ್ದವರು ಹಾಗೂ ಸೋತವರು, ಜೆಡಿಎಸ್‌, ಕಾಂಗ್ರೆಸ್‌ನಿಂದ ವಲಸೆ ಬಂದ “ಗೆಲ್ಲುವ’ ಕುದುರೆಗಳಿಗೆ ಟಿಕೆಟ್‌ ಕೊಡಿಸುವಲ್ಲಿ ಯಡಿಯೂರಪ್ಪ-ಶ್ರೀರಾಮುಲು ಜೋಡಿ ಯಶಸ್ವಿಯಾಗಿದೆ.

Advertisement

ಮಿಷನ್‌ 150 ಗುರಿ ಎಂದು ಹೇಳಿಕೊಂಡರೂ ಬಿಜೆಪಿಯ ಆಂತರಿಕ ಸಮೀಕ್ಷೆಗಳ ಪ್ರಕಾರವೇ ತೀರಾ ಕಷ್ಟ ಪಟ್ಟರೆ 75 ಸೀಟು ಗೆಲ್ಲಬಹುದಷ್ಟೇ ಎಂದು ಗೊತ್ತಾದ ನಂತರವೇ ಬಿಜೆಪಿ ಕಳೆದ ಎರಡು ತಿಂಗಳಲ್ಲಿ ತನ್ನ ಕಾರ್ಯತಂತ್ರ ಬದಲಾಯಿಸಿಕೊಂಡು “ಗೆಲ್ಲುವ’ಕುದುರೆಗಳ ಬೇಟೆ  ಆರಂಭಿಸಿ ಅದರಲ್ಲಿ ಯಶಸ್ಸನ್ನೂ ಕಂಡಿತು.

ಅದರ ಫ‌ಲವಾಗಿಯೇ ಎ.ಎಸ್‌.ಪಾಟೀಲ್‌ ನಡಹಳ್ಳಿ, ಮಲ್ಲಿಕಾರ್ಜುನ ಖೂಬಾ, ಮಾಲೀಕಯ್ಯ ಗುತ್ತೇದಾರ್‌, ಸಿ.ಪಿ.ಯೋಗೇಶ್ವರ್‌, ಸಂದೇಶ್‌ ಸ್ವಾಮಿ, ಬಸವರಾಜ ಪಾಟೀಲ್‌ ಯತ್ನಾಳ್‌, ಹಾಲಾಡಿ ಶ್ರೀನಿವಾಸಶೆಟ್ಟಿ, ಗೂಳಿಹಟ್ಟಿ ಶೇಖರ್‌, ಪೂರ್ಣಿಮಾ ಶ್ರೀನಿವಾಸ್‌, ಶಿವರಾಜ್‌ ಪಾಟೀಲ್‌, ಮಾನಪ್ಪ ವಜ್ಜಲ್‌, ಕೃಷ್ಣಯ್ಯಶೆಟ್ಟಿ, ಕುಮಾರ್‌ ಬಂಗಾರಪ್ಪ , ಗವಿಯಪ್ಪ, ಹರ್ಷವರ್ಧನ್‌, ಸುನಿಲ್‌ಹೆಗಡೆ,  ಡಾ.ಪ್ರೀತನ್‌ ನಾಗಪ್ಪ, ಪಿ.ರಾಜೀವ್‌ ಅವರಿಗೆ ಟಿಕೆಟ್‌ ನೀಡಲಾಗಿದೆ.

ವಿವಾದ-ಆರೋಪಗಳಿದ್ದರೂ ರೇಣುಕಾಚಾರ್ಯ, ಕೃಷ್ಣಯ್ಯಶೆಟ್ಟಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಹರತಾಳು ಹಾಲಪ್ಪಗೆ ಅವಕಾಶ ಮಾಡಿಕೊಡಲಾಗಿದೆ. ಕಗ್ಗಂಟಾದರೂ ವಿ.ಸೋಮಣ್ಣ, ಬಸವರಾಜ ಬೊಮ್ಮಾಯಿ, ಮುರುಗೇಶ್‌ ನಿರಾಣಿ, ಸಿದ್ದು ಸವದಿಗೆ ಅವಕಾಶ ಮಾಡಿಕೊಡಲಾಗಿದೆ. ರಾಯಣ್ಣ ಬ್ರಿಗೇಡ್‌ ರೂವಾರಿ ಈಶ್ವರಪ್ಪ ಅವರನ್ನೂ ಸಮಾಧಾನಪಡಿಸಲಾಗಿದೆ.

ಕಾಂಗ್ರೆಸ್‌ಗೆ ತಲೆನೋವಾಗಿರುವ ದಲಿತ ಸಮುದಾಯದ ಎಡ-ಬಲ, ಬೋವಿ ಎಂಬ ತಂಟೆಗೆ ಹೊಗದೆ ಸೂಕ್ಷ್ಮವಾಗಿ ಅಂತರ ಕಾಯ್ದುಕೊಂಡಿರುವ ಬಿಜೆಪಿ ಗೋವಿಂದ ಕಾರಜೋಳ, ಎ.ನಾರಾಯಣಸ್ವಾಮಿ ಸಹಿತ ಪಕ್ಷದ ಹಾಲಿ ಮತ್ತು ಮಾಜಿ ಶಾಸಕರಿಗೆ ಸಹಜವಾಗಿ ಟಿಕೆಟ್‌ ನೀಡಿ ಪ್ರಾಮುಖ್ಯತೆ ನೀಡಲಾಗಿದೆ.

ಒಟ್ಟಾರೆ, ಒಕ್ಕಲಿಗ-ರೆಡ್ಡಿ ಸಹಕಾರದಡಿ ‘ಲಿಂಗಾಯಿತ-ನಾಯಕ -ಹಿಂದುಳಿದ’ ಕ್ಯಾಂಬಿನೇಷನ್‌ನಡಿ ಆಂತರಿಕವಾಗಿ ಬಿಜೆಪಿ ಚುನಾವಣೆಯಲ್ಲಿ ಸರ್ಕಾರ ರಚಿಸುವಷ್ಟು ಸೀಟು ಗೆಲ್ಲುವ ಕಾರ್ಯತಂತ್ರ ರೂಪಿಸಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ರೆಡ್ಡಿ ಕಾರ್ಯತಂತ್ರ
ಈಮಧ್ಯೆ, ಜನಾರ್ದನರೆಡ್ಡಿಗೂ ಬಿಜೆಪಿಗೂ ಸಂಬಂಧವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಹೇಳಿದರೂ ಚಿತ್ರದುರ್ಗ, ಬಳ್ಳಾರಿ ಜಿಲ್ಲೆಗಳ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಹಾಗೂ ಕಾರ್ಯತಂತ್ರದ ರೂವಾರಿ “ಮಾಸ್ಟರ್‌ ಮೈಂಡ್‌’ ಜನಾರ್ಧನರೆಡ್ಡಿಯೇ ಆಗಿದ್ದಾರೆ.

ಆಪ್ತಮಿತ್ರ ಶ್ರೀರಾಮುಲು ಗೆಲುವಿಗಾಗಿ ಮೊಳಕಾಳೂ¾ರು ಕ್ಷೇತ್ರದಲ್ಲಿ ಮನೆ ಮಾಡಿದ್ದಾರೆ. ಕಾಂಗ್ರೆಸ್‌ನಲ್ಲಿ ಟಿಕೆಟ್‌ ತಪ್ಪಿದ ಎನ್‌.ವೈ.ಗೋಪಾಲಕೃಷ್ಣ ಹಾಗೂ ಎನ್‌.ವೈ.ಹನುಮಂತಪ್ಪ ಅವರನ್ನು ಬಿಜೆಪಿಗೆ ಕರೆತರುವ ಹಿಂದೆಯೂ ಜನಾರ್ಧನರೆಡ್ಡಿ ಪ್ರಯತ್ನ ಹೆಚ್ಚಾಗಿದೆ.

ಈ ಮೂಲಕ ಬಳ್ಳಾರಿ ಹಾಗೂ ಚಿತ್ರದುರ್ಗ ಅಷ್ಟೇ ಅಲ್ಲದೆ ಇಡೀ ರಾಜ್ಯದ ನಾಯಕ ಸಮುದಾಯದ ಭವಿಷ್ಯದ ನಾಯಕ ಶ್ರೀರಾಮುಲು ಎಂದು ಬಿಂಬಿಸುವ  ಉದ್ದೇಶವೂ ಇದೆ.ಎನ್‌.ವೈ.ಗೋಪಾಲಕೃಷ್ಣ ಅವರಿಗೆ ವಿಧಾನಸಭೆ ಚುನಾವಣೆಯಲ್ಲಿ ಕೂಡ್ಲಿಗಿ ಟಿಕೆಟ್‌ ಭರವಸೆ ನೀಡಿದ್ದು, ಎನ್‌.ವೈ.ಹನುಮಂತಪ್ಪ ಅವರಿಗೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಳ್ಳಾರಿ ಟಿಕೆಟ್‌ ಭರವಸೆ ನೀಡಲಾಗಿದೆ.  ಈ ನಡುವೆ ಪ್ರಸ್ತುತ ಬಳ್ಳಾರಿ ಗ್ರಾಮೀಣ ಹಾಗೂ ನಗರ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿರುವ ಸೋಮಶೇಖರೆಡ್ಡಿ, ಸಣ್ಣ ಫ‌ಕೀರಪ್ಪ ಗೆಲುವಿಗೂ ಸಹಕಾರಿಯಾಗಲಿದೆ ಎಂದು ಹೇಳಲಾಗಿದೆ.

ಬಿಎಸ್‌ವೈ ಬಲಿಷ್ಠ
*ಕಳೆದ ಚುನಾವಣೆಯಲ್ಲಿ ಕೆಜಿಪಿ’ , ಬಿಎಸ್‌ಆರ್‌, ಬಿಜೆಪಿಯಿಂದಾಗಿ  ಆದ  ಮತ ವಿಭಜನೆ ಲೆಕ್ಕಾಚಾರವನ್ನೇ ಮುಂದಿಟ್ಟುಕೊಂಡು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿರುವುದು ಇದಕ್ಕೆ ಸಾಕ್ಷಿ. ಕಾಂಗ್ರೆಸ್‌ ಮಟ್ಟಿಗೆ  ಮುಖ್ಯಮಂತ್ರಿ ಸಿದ್ದರಾಮಯ್ಯ “ಬಲಿಷ್ಠ’ವಾದಂತೆ ಬಿಜೆಪಿಯಲ್ಲೂ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ “ಬಲಿಷ್ಠ’ ಎಂದು ವಿಶ್ಲೇಷಿಸಲಾಗುತ್ತಿದೆ.

– ಎಸ್‌.ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next