Advertisement

ಸಮರ್ಥ ವಾಯುಪಡೆ; ಇಂದು ಭಾರತೀಯ ವಾಯುಪಡೆ ದಿನಾಚರಣೆ

11:32 PM Oct 07, 2022 | Team Udayavani |

ವಿಶ್ವದ ಅತೀ ಬಲಿಷ್ಠ ವಾಯುಪಡೆಗಳಲ್ಲಿ ಒಂದಾಗಿರುವ ಭಾರತೀಯ ವಾಯು ಪಡೆ ಅನೇಕ ಯುದ್ಧಗಳಲ್ಲಿ ಮತ್ತು ರಕ್ಷಣ ಕಾರ್ಯಾಚರಣೆಗಳಲ್ಲಿ ಮುಂಚೂಣಿಯಲ್ಲಿ ನಿಂತು ಕಾರ್ಯ ನಿರ್ವಹಿಸಿದೆ. ಇಂದು(ಅ.8) 90ನೇ ವಾಯು ಪಡೆ ದಿನ ಆಚರಿಸಲಾಗುತ್ತಿದೆ. “ವೈಭವದೊಂದಿಗೆ ಆಕಾಶವನ್ನು ಸ್ಪರ್ಶಿಸಿ’ ಎಂಬ ಧ್ಯೇಯ ವಾಕ್ಯ ದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಭಾರತೀಯ ವಾಯು ಪಡೆಯ ಹಿರಿಮೆ ಕುರಿತ ಪಕ್ಷಿನೋಟ ಇಲ್ಲಿದೆ.

Advertisement

ಇಂಡಿಯನ್‌ ಏರ್‌ ಫೋರ್ಸ್‌ ಎಂದು ನಾಮಕರಣ
1932ರ ಅ.8ರಂದು ರಾಯಲ್‌ ಇಂಡಿಯನ್‌ ಏರ್‌ಪೋರ್ಸ್‌ ಸ್ಥಾಪಿಸಲಾಯಿತು. ದೇಶಕ್ಕೆ ಸ್ವಾತಂತ್ರ್ಯ ದೊರೆತ ಅನಂತರ 1950ರ ಜನವರಿ 26ರಂದು ರಾಯಲ್‌ ಹೆಸರನ್ನು ತೆಗೆದು ಹಾಕಿ, ಇಂಡಿಯನ್‌ ಏರ್‌ ಫೋರ್ಸ್‌ ಎಂದು ನಾಮಕರಣ ಮಾಡಲಾಯಿತು.

ಯಶಸ್ವಿ ಕಾರ್ಯಾಚರಣೆ
ನೆರೆ ದೇಶಗಳಾದ ಪಾಕಿಸ್ಥಾನ ಮತ್ತು ಚೀನದೊಂದಿಗೆ ನಡೆದ ಯುದ್ಧದಲ್ಲಿ ನಮ್ಮ ವಾಯುಪಡೆ ತೋರಿದ ಸಾಹಸ ಅದ್ಭುತ. ವಾಯುಪಡೆಯು ನಡೆಸಿದ ಸೇನಾ ಕಾರ್ಯಾಚರಣೆಗಳಲ್ಲಿ ಆಪರೇಶನ್‌ ವಿಜಯ್‌, ಆಪರೇಶನ್‌ ಮೇಘದೂತ್‌, ಆಪರೇಶನ್‌ ರಾಹತ್‌, ಆಪರೇಶನ್‌ ಪೂಮಲೈ, ಆಪರೇಶನ್‌ ಕ್ಯಾಕ್ಟಸ್‌ ಮೊದಲಾದವುಗಳು ಪ್ರಮುಖವಾಗಿದೆ. ಅಲ್ಲದೇ ದೇಶದಲ್ಲಿ ಪ್ರಕೃತಿ ವಿಕೋಪಗಳು ಸಂಭವಿಸಿದಾಗ ವಾಯುಪಡೆ ಕೂಡಲೇ ರಕ್ಷಣೆಗೆ ಧಾವಿಸಿ, ನಾಗರಿಕರ ನೆರವಿಗೆ ನಿಲ್ಲುತ್ತದೆ. 28/11ರ ಮುಂಬಯಿ ದಾಳಿ ಸಂದರ್ಭದಲ್ಲಿ ಭಾರತೀಯ ವಾಯುಪಡೆಯ ಪರಾಕ್ರಮ ಅದ್ವಿತೀಯವಾಗಿತ್ತು.

ರಾಷ್ಟ್ರಪತಿಗಳು ಸುಪ್ರೀಂ ಕಮಾಂಡರ್‌
ರಾಷ್ಟ್ರಪತಿಗಳು ಭಾರತೀಯ ವಾಯುಪಡೆಯ ಸುಪ್ರೀಂ ಕಮಾಂಡರ್‌ ಆಗಿರುತ್ತಾರೆ. ಚೀಫ್ ಆಫ್ ಏರ್‌ ಸ್ಟಾಫ್ ಐಎಎಫ್ನ ಮುಖ್ಯಸ್ಥರಾಗಿರುತ್ತಾರೆ. ಅನಂತರ ಏರ್‌ ಚೀಫ್ ಮಾರ್ಷಲ್‌ ಸೇರಿದಂತೆ ಹಲವು ಪ್ರಮುಖ ಹುದ್ದೆಗಳು ಇರಲಿವೆ. ಇತ್ತೀಚೆಗೆ ಭಾರತೀಯ ಸೇನೆ, ನೌಕಾ ಪಡೆ ಮತ್ತು ವಾಯು ಪಡೆ ಸೇರಿದಂತೆ ಮೂರು ಪಡೆಗಳ ನಡುವೆ ಸಮನ್ವಯತೆ ಸ್ಥಾಪಿಸಲು ಚೀಫ್ ಆಫ್ ಡಿಫೆನ್ಸ್‌ ಸ್ಟಾಫ್ ಹುದ್ದೆ ಸೃಜಿಸಲಾಯಿತು.

ಜಾಗತಿಕ ಯುದ್ಧದಲ್ಲಿ ಭಾಗಿ
1932ರಲ್ಲಿ ಇಂಡಿಯನ್‌ ಏರ್‌ಪೋರ್ಸ್‌ ಸ್ಥಾಪನೆಯಾಯಿತು. ಅಂದಿನಿಂದ ಹಲವಾರು ಪ್ರಮುಖ ಯುದ್ಧಗಳಲ್ಲಿ ಹಾಗೂ ಮಹತ್ವದ ಕಾರ್ಯಾಚರಣೆಗಳಲ್ಲಿ ಭಾರತೀಯ ವಾಯುಪಡೆ ಭಾಗವಹಿಸಿದೆ. ಎರಡನೇ ಮಹಾಯುದ್ಧ (1939-45)ದ ಸಂದರ್ಭದಲ್ಲಿ ಭಾರತೀಯ ವಾಯುಪಡೆಯು ಬ್ರಿಟಿಷ್‌ ಸೇನೆಗೆ ಸಹಾಯ ಮಾಡಿತು.

Advertisement

ವಾಯುಪಡೆಯ ಬಲಾಬಲ
ಭಾರತದಲ್ಲಿ ವಾಯುಪಡೆಗೆ ಸೇರಿದ ಒಟ್ಟು 60 ಸೇನಾ ನೆಲೆಗಳಿವೆ. ಅಲ್ಲದೇ ವಾಯು ಪಡೆಯಲ್ಲಿ 1,39,576 ಸಕ್ರಿಯ ಅಧಿಕಾರಿ ಮತ್ತು ಸಿಬಂದಿ ಇದ್ದಾರೆ. ಮೀಸಲು ಪಡೆಯಲ್ಲಿ 1,40,000 ಅಧಿಕಾರಿ ಮತ್ತು ಸಿಬಂದಿ ಇದ್ದಾರೆ. ಜತೆಗೆ ಭಾರತೀಯ ವಾಯು ಪಡೆಯ ಬತ್ತಳಿಕೆಯಲ್ಲಿ 1,500 ಯುದ್ಧ ವಿಮಾನಗಳಿದ್ದು, ಈ ಪೈಕಿ 227 ಸುಖೋಯ್‌-30 ಯುದ್ಧ ವಿಮಾನಗಳು, 5 ರಫೇಲ್‌, 17 ತೇಜಸ್‌, 54 ಮಿಗ್‌-21, 65 ಮಿಗ್‌-29, 51 ಮಿರಾಜ್‌-2,000, 106 ಜಾಗ್ವಾರ್‌ ಯುದ್ಧ ವಿಮಾನಗಳಿವೆ.

ಏಷ್ಯಾದಲ್ಲೇ ಅತೀ ದೊಡ್ಡ ವಾಯು ನೆಲೆ
ಗಾಜಿಯಾಬಾದ್‌ನಲ್ಲಿರುವ ಹಿಂಡನ್‌ ವಾಯು ನೆಲೆ ಏಷ್ಯಾದಲ್ಲೇ ಅತೀ ದೊಡ್ಡ ವಾಯು ನೆಲೆಯಾಗಿದೆ. ಅಲ್ಲದೇ ಇದು ಜಗತ್ತಿನ 8ನೇ ಅತೀ ದೊಡ್ಡ ವಾಯುನೆಲೆಯಾಗಿದೆ. ಜತೆಗೆ 9 ಸಾವಿರ ಅಡಿಯ ಅತೀ ದೊಡ್ಡ ರನ್‌ವೇ ಅನ್ನು ಹೊಂದಿದೆ. ವೆಸ್ಟರ್ನ್ ಏರ್‌ ಕಮಾಂಡ್‌ ಅಡಿಯಲ್ಲಿ ಇದು ಕಾರ್ಯ ನಿರ್ವಹಿಸುತ್ತಿದೆ.

ವಾಯು ಪಡೆಯ ಧ್ಯೇಯ ವಾಕ್ಯ
ಭಾರತೀಯ ವಾಯು ಪಡೆಯು “ನಭ ಸ್ಪರ್ಶಂ ದೀಪ್ತಂ’ (ವೈಭವದೊಂದಿಗೆ ಆಕಾಶವನ್ನು ಸ್ಪರ್ಶಿಸಿ) ಎಂಬ ಧ್ಯೇಯ ವಾಕ್ಯವನ್ನು ಹೊಂದಿದೆ. ಇದನ್ನು ಭಗವದ್ಗೀತೆಯ 11ನೇ ಅಧ್ಯಾಯದಿಂದ ತೆಗೆದುಕೊಳ್ಳಲಾಗಿದೆ.

ಗರುಡ ಕಮಾಂಡೊ ಸ್ಥಾಪನೆ
2004ರಲ್ಲಿ ವಿಶೇಷವಾಗಿ ಐಎಎಫ್ ಗರುಡ ಕಮಾಂಡೊ ಸ್ಥಾಪಿಸಲಾಯಿತು. ಎಲ್ಲ ರೀತಿಯ ಪ್ರತಿಕೂಲ ಪರಿಸ್ಥಿತಿಯಲ್ಲೂ ಕಾರ್ಯ ನಿರ್ವಹಿಸುವಂತೆ ಇದರ ಕಮಾಂಡೊಗಳಿಗೆ ಸುದೀರ್ಘ‌ ತರಬೇತಿ ನೀಡಲಾಗುತ್ತದೆ. ಗರುಡ ಕಮಾಂಡೊ ಅನೇಕ ರಕ್ಷಣ ಕಾರ್ಯಾಚರಣೆಗಳನ್ನು ಯಶಸ್ವಿಯಾಗಿ ನಡೆಸಿದೆ.

ಪರಿಹಾರ ಕಾರ್ಯಾಚರಣೆ
1998ರ ಗುಜರಾತ್‌ ಚಂಡಮಾರುತ, 2004ರಲ್ಲಿ ಸಂಭವಿಸಿದ ಸುನಾಮಿ, ಉತ್ತರ ಭಾರತದಲ್ಲಿ ಪ್ರವಾಹ ಸೇರಿದಂತೆ ನೈಸರ್ಗಿಕ ವಿಕೋಪಗಳ ಸಂದರ್ಭಗಳ ಐಎಎಫ್ ಸದಾ ಮುಂದೆ ನಿಂತು ಪರಿಹಾರ ಕಾರ್ಯಾಚರಣೆಗಳನ್ನು ಕೈಗೊಂಡಿದೆ. ಅಲ್ಲದೇ ಉತ್ತರಾಖಂಡದ ಪ್ರವಾಹದ ಸಂದರ್ಭದಲ್ಲಿ ಸಿಲುಕಿದ್ದ ನಾಗರಿಕರನ್ನು ರಕ್ಷಿಸುವ ಮೂಲಕ ಐಎಎಫ್ ವಿಶ್ವ ದಾಖಲೆಯನ್ನು ನಿರ್ಮಿಸಿದೆ. ಈ ಕಾರ್ಯಾಚರಣೆಯಲ್ಲಿ ಐಎಎಫ್ ಸುಮಾರು 20,000 ನಾಗರಿಕರನ್ನು ರಕ್ಷಿಸಿತು.

ಭಾರತೀಯ ವಾಯುಪಡೆ ದಿನಾಚರಣೆ
ಬ್ರಿಟಿಶ್‌ ಆಡಳಿತದ ಸಂದರ್ಭದಲ್ಲಿ 1932ರ ಅಕ್ಟೋಬರ್‌ 8ರಂದು ರಾಯಲ್‌ ಏರ್‌ ಫೋರ್ಸ್‌ ಸ್ಥಾಪಿಸಲಾಯಿತು. ಈ ಹಿನ್ನೆಲೆಯಲ್ಲಿ ಇದೇ ದಿನದಂದು ಭಾರತೀಯ ವಾಯುಪಡೆಯ ದಿನವನ್ನಾಗಿ ಆಚರಿಸಲಾಗುತ್ತಿದೆ. ಅನಂತರ 1950 ಜನವರಿ 26ರಂದು ಇಂಡಿಯನ್‌ ಏರ್‌ ಫೋರ್ಸ್‌ ಎಂದು ನಾಮಕರಣ ಮಾಡಲಾಯಿತು.

ಈ ಬಾರಿಯ ವಿಶೇಷ
ಶನಿವಾರ ದೇಶಾದ್ಯಂತ ವಾಯುಪಡೆ ದಿನಾ ಚರಣೆಯನ್ನು ಆಚರಿಸಲಾಗುತ್ತಿದ್ದು, ಇತ್ತೀಚೆ ಗಷ್ಟೇ ವಾಯುಪಡೆಗೆ ಸೇರ್ಪಡೆಯಾದ ಪ್ರಚಂಡ ಲಘು ಸಮರ ಹೆಲಿಕಾಪ್ಟರ್‌ಗಳು, ಧ್ರುವ, ಚಿನೋಕ್‌, ಅಪಾಚೆ ಮತ್ತು ಮಿಗ್‌ 17 ವಿಮಾನಗಳನ್ನು ಪ್ರದರ್ಶಿಸಲಾಗುತ್ತಿದೆ. ಚಂಡೀಗಢದಲ್ಲಿ ಈ ಸಮಾರಂಭ ನಡೆಯಲಿದ್ದು, ಒಟ್ಟಾರೆ 80 ಯುದ್ಧ ವಿಮಾನಗಳು ತಮ್ಮ ಶಕ್ತಿ ಪ್ರದರ್ಶನ ನಡೆಸಲಿವೆ. ಅಲ್ಲದೆ, ಸುಕೋಯ್‌, ಮಿಗ್‌ 29, ಜಾಗ್ವಾರ್‌, ರಫೇಲ್‌, ಐಎಲ್‌-76, ಸಿ130ಜೆ ಮತ್ತು ಹಾಕ್‌ ಸಮರ ವಿಮಾನಗಳ ಪ್ರದರ್ಶನವೂ ನಡೆಯಲಿದೆ.

ಆಪರೇಶನ್‌ ಗಂಗಾ
ಉಕ್ರೇನ್‌ ಮೇಲೆ ರಷ್ಯಾ ದಾಳಿ ನಡೆಸಿದ ವೇಳೆ, ಅಲ್ಲಿದ್ದ ಭಾರತೀಯರನ್ನು ಕರೆತರುವ ಸಲುವಾಗಿ ಭಾರತೀಯ ವಾಯು ಪಡೆಯ ಪಾತ್ರ ಗಣನೀಯವಾದದ್ದು. ಆಪರೇಶನ್‌ ಗಂಗಾ ಹೆಸರಿನಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಭಾರತೀಯ ವಾಯುಪಡೆಯ ಸಿ-17 ಗ್ಲೋಬ್‌ಮಾಸ್ಟರ್‌ ಎಂಬ ಸರಕುಸಾಗಣೆ ವಿಮಾನವನ್ನು ಭಾರತೀಯರನ್ನು ವಾಪಸ್‌ ಕರೆತರಲು ಬಳಸಿ ಕೊಳ್ಳಲಾಯಿತು. 25 ಸಾವಿರಕ್ಕೂ ಹೆಚ್ಚು ಭಾರತೀ ಯರನ್ನು ವಾಪಸ್‌ ಕರೆಸಿಕೊಳ್ಳಲಾಯಿತು.

ಆಪರೇಶನ್‌ ದೇವಿ ಶಕ್ತಿ
ಕಳೆದ ವರ್ಷ ಅಫ್ಘಾನಿಸ್ಥಾನದಿಂದ ಅಮೆರಿಕ ವಾಪಸ್‌ ಹೋಗಿದ್ದು, ಅಲ್ಲಿ ಸಿಲುಕಿದ್ದ ಸಾವಿರಾರು ಭಾರತೀಯರನ್ನು ವಾಪಸ್‌ ಕರೆತರುವುದೇ ದೊಡ್ಡ ಸವಾಲಿನದ್ದಾಗಿತ್ತು. ಈ ಸಂದರ್ಭದಲ್ಲೂ ಭಾರತೀಯ ವಾಯುಪಡೆಯು ತನ್ನ ವಿಮಾನಗಳನ್ನು ಕಳುಹಿಸಿತ್ತು.

ಭಾರತೀಯ ವಾಯುಪಡೆ
ಸ್ಥಾಪನೆ:8 ಅಕ್ಟೋಬರ್‌ 1932 (ರಾಯಲ್‌ ಏರ್‌ ಫೋರ್ಸ್‌)
ಮರುನಾಮಕರಣ:26 ಜನವರಿ 1950 (ಇಂಡಿಯನ್‌ ಏರ್‌ ಫೋರ್ಸ್‌)
ಪ್ರಧಾನ ಕಚೇರಿ: ಹೊಸದಿಲ್ಲಿ
ಭಾಗ: ಭಾರತೀಯ ಸಶಸ್ತ್ರ ಪಡೆ
ಧ್ಯೇಯವಾಕ್ಯ:”ನಭ ಸ್ಪರ್ಶಂ ದೀಪ್ತಂ’ (ವೈಭವದೊಂದಿಗೆ ಆಕಾಶವನ್ನು ಸ್ಪರ್ಶಿಸಿ)

-ಭಾರತೀಯ ವಾಯುಪಡೆಯು ವಿಶ್ವದ ನಾಲ್ಕನೇ ಅತೀದೊಡ್ಡ ವಾಯುಪಡೆಯಾಗಿದೆ.
-ತ್ವರಿತ ಮತ್ತು ನಿಖರವಾದ ಕಾರ್ಯಾಚರಣೆಗಾಗಿ 2010ರಲ್ಲಿ “ಏರ್‌ ಫೋರ್ಸ್‌ ನೆಟ್‌ವರ್ಕ್‌’ ಡಿಜಿಟಲ್‌ ಮಾಹಿತಿ ಗ್ರಿಡ್‌ ಅನ್ನು ಆರಂಭಿಸಲಾಯಿತು.
-ವಾಯುಪಡೆಯು 1,39,576 ಅಧಿಕಾರಿ ಮತ್ತು ಸಿಬಂದಿ ಮತ್ತು 1,40,000 ಮೀಸಲು ಅಧಿಕಾರಿ ಮತ್ತು ಸಿಬಂದಿ ಹೊಂದಿದೆ. ಸುಮಾರು 1500 ಯುದ್ಧ ವಿಮಾನ ಹೊಂದಿದೆ.
-ಭಾರತೀಯ ವಾಯುಪಡೆಯು ಸ್ವಾತಂತ್ರ್ಯದ ಅನಂತರ ಹಲವು ಯುದ್ಧಗಳಲ್ಲಿ ಭಾಗವಹಿಸಿದೆ. ಈ ಪೈಕಿ ಪ್ರಮುಖವಾಗಿ ಪಾಕಿಸ್ಥಾನದೊಂದಿಗಿನ ನಾಲ್ಕು ಯುದ್ಧಗಳು ಮತ್ತು ಚೀನದೊಂದಿಗೆ ಒಂದು ಯುದ್ಧ ಸೇರಿದೆೆ.
-ಆಪರೇಶನ್‌ ವಿಜಯ್‌, ಆಪರೇಶನ್‌ ಮೇಘದೂತ್‌, ಆಪರೇಶನ್‌ ರಾಹತ್‌, ಆಪರೇಶನ್‌ ಪೂಮಲೈ, ಆಪರೇಶನ್‌ ಕ್ಯಾಕ್ಟಸ್‌ ಇವು ಐಎಎಫ್ ನಡೆಸಿದ ಪ್ರಮುಖ ಕಾರ್ಯಾಚರಣೆಗಳು.

Advertisement

Udayavani is now on Telegram. Click here to join our channel and stay updated with the latest news.

Next