Advertisement

ಸ್ವಾತಂತ್ರ್ಯಹೋರಾಟಗಾರ, ಶೈಕ್ಷಣಿಕ ಹರಿಕಾರ: ಪಂಡಿತ್‌ ಸಂಸ್ಮರಣೆ

03:20 AM Dec 19, 2018 | Karthik A |

ಶಿರ್ವ: ಎಳವೆಯಲ್ಲೇ ಮುಂಬಯಿಗೆ ತೆರಳಿ, ದಿನವಿಡೀ ದುಡಿದು, ರಾತ್ರಿ ಶಾಲೆಯಲ್ಲಿ ಕಲಿತು, ಸ್ವಾತಂತ್ರ್ಯ ಹೋರಾಟಗಾರನಾಗಿ ಕ್ವಿಟ್‌ ಇಂಡಿಯಾ ಸಹಿತ ವಿವಿಧ ಚಳುವಳಿಗಳಲ್ಲಿ ಭಾಗವಹಿಸಿ, ಕೃಷ್ಣ ಮೆನನ್‌ ಅವರ ಆಪ್ತ ಸಹಾಯಕರಾಗಿ, ಮುಂದೆ ಭೂಗತರಾಗಿ ದೊಡ್ಡ ಮಟ್ಟದ ಹೋರಾಟಗಳನ್ನು ಸಂಘಟಿಸಿದ ಮೂಡುಬೆಳ್ಳೆಯ ದಿ|ಪಂಡಿತ್‌ ಡಾ|ಎಸ್‌.ಕೆ. ಸುವರ್ಣ ಅವರ 25ನೇ ಸಂಸ್ಮರಣೆ ಕಾರ್ಯಕ್ರಮ ಅವರ ಕರ್ಮಭೂಮಿ ಮುಂಬಯಿ ಮತ್ತು ಹುಟ್ಟೂರು ಬೆಳ್ಳೆಯಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.

Advertisement

ಸ್ವಾತಂತ್ರ್ಯಾನಂತರ ಸನ್ಯಾಸಿಯಾಗಿ ವಜ್ರೇಶ್ವರಿಯ ನಿತ್ಯಾನಂದರು ಮತ್ತು ಕೊಲ್ಕತ್ತಾದ ಗಂಗಾಪ್ರಸಾದರ ಶಿಷ್ಯತ್ವ ಸ್ವೀಕರಿಸಿದ್ದ ಸುವರ್ಣರು, ಧಾರ್ಮಿಕ ರಂಗದ ಪಂಡಿತ ಗುರುವಾಗಿ, ಪಾರಂಪರಿಕ ವೈದ್ಯನಾಗಿ, ಉದ್ಯಮಿಯಾಗಿ ಮುಂಬಯಿ ಹಾಗೂ ಬೆಳ್ಳೆಯಲ್ಲಿ ಜನಹಿತ ಕಾರ್ಯ ನಡೆಸಿದ್ದಾರೆ. ಮುಂಬಯಿ ಬಿಲ್ಲವರ ಅಸೋಸಿಯೇಶನ್‌ನ ಭಾಂಡುಪ್‌ ಶಾಖಾ ಅಧ್ಯಕ್ಷರಾಗಿ, ಭಾರತ್‌ ಕೋ ಆಪರೇಟಿವ್‌ ಬ್ಯಾಂಕ್‌ನ ಸ್ಥಾಪಕ ನಿರ್ದೇಶಕರಾಗಿ, ಬೆಳ್ಳೆ ಬಿಲ್ಲವ ಸಂಘದ ಸ್ಥಾಪಕರಾಗಿ, ಆದಿ ಉಡುಪಿಯ ಶ್ರೀ ಬ್ರಹ್ಮಬೈದರ್ಕಳ ಅಧ್ಯಯನ ಪ್ರತಿಷ್ಠಾನ, ಬೆಳ್ಳೆ ಗೀತಾ ಮಂದಿರದ ಸ್ಥಾಪಕ ಟ್ರಸ್ಟಿ ಮತ್ತು ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಮುಂಬಯಿ, ಉಡುಪಿ, ದ.ಕ. ಜಿಲ್ಲೆಯ ಶಿಕ್ಷಣ ಸಂಸ್ಥೆಗಳಿಗೆ, ಧಾರ್ಮಿಕ, ಸಾಮಾಜಿಕ ಸಂಘ ಸಂಸ್ಥೆಗಳಿಗೆ ಪಂಡಿತರು ಕೊಡುಗೈ ದಾನಿಯಾಗಿ ಬೆಂಬಲವಿತ್ತವರು.

1950ರ ದಶಕದಲ್ಲಿ ಮುಂಬಯಿಯ ಭಾಂಡುಪ್‌ನಲ್ಲಿ ಶ್ರೀ ನಿತ್ಯಾನಂದ ಆಶ್ರಮ ಸ್ಥಾಪಿಸಿದರು. ಅದೇ ಆಶ್ರಮ ಇಂದು ಮುಂಬಯಿಯ ಖ್ಯಾತ ಮಂದಿರಗಳಲ್ಲಿ ಒಂದಾದ ಭಾಂಡುಪ್‌ನ ಸ್ವಾಮಿ ನಿತ್ಯಾನಂದ ಮಂದಿರವಾಗಿದೆ. ಮೂಡುಬೆಳ್ಳೆ ಕಪ್ಪಂದಕರಿಯದಲ್ಲಿ 1960ರಲ್ಲಿ ಶ್ರೀ ನಿತ್ಯಾನಂದ ಆಶ್ರಮ ಸ್ಥಾಪಿಸಿದರು. ಮೂಡುಬೆಳ್ಳೆಗೆ ವಿದ್ಯುತ್‌, ಟೆಲಿಫೋನ್‌ ಸೌಕರ್ಯ ಒದಗಿಸುವಲ್ಲಿಯೂ ಪಂಡಿತರದ್ದು ಪ್ರಮುಖ ಪಾತ್ರ. ಬೆಳ್ಳೆ ವ್ಯವಸಾಯ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಪಡುಬೆಳ್ಳೆಯ ಶ್ರೀ ನಾರಾಯಣ ಗುರು ಶಿಕ್ಷಣ ಸಂಸ್ಥೆ ಸ್ಥಾಪನೆಗೆ ಶ್ರಮಿಸಿದವರಲ್ಲಿ ಸುವರ್ಣರು ಅಗ್ರಮಾನ್ಯರು.

1993ರ ಡಿ. 20ರಂದು ಮುಂಬಯಿಯಲ್ಲಿ ಇಹಲೋಕ ತ್ಯಜಿಸಿದ ಅವರ 25ನೇ ಸಂಸ್ಮರಣೆ ಕಾರ್ಯಕ್ರಮವು ಬೆಳ್ಳೆ ಹಾಗೂ ಮುಂಬಯಿಯಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಲಿವೆ. ಡಿ. 20, 21 ಮತ್ತು 22ರಂದು ಅವರೇ ಸ್ಥಾಪಿಸಿದ ಮುಂಬಯಿ ಭಾಂಡುಪ್‌ನ ಶ್ರೀ ನಿತ್ಯಾನಂದ ಮಂದಿರದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಡಿಸೆಂಬರ್‌ ಕೊನೆಯ ವಾರದಲ್ಲಿ ಪಡುಬೆಳ್ಳೆ ನಾರಾಯಣ ಗುರು ಶಾಲೆಯಲ್ಲಿ ಸಂಸ್ಮರಣಾ ಸಪ್ತಾಹ ಜರಗಲಿಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next