Advertisement

IFFI Goa: ಸಿನಿಮಾಗಳನ್ನು ಪ್ರೀತಿಸುವ ಗುಣ ಭಾರತೀಯ ಸಂಸ್ಕೃತಿಯಲ್ಲಿದೆ: ಪಾವೊ

12:39 PM Nov 26, 2023 | Team Udayavani |

ಪಣಜಿ: ಸಿನಿಮಾಗಳನ್ನು ಪ್ರೀತಿಸುವ ಸದ್ಗುಣ ಭಾರತೀಯ ಸಂಸ್ಕೃತಿಯಲ್ಲೇ ಅಖಂಡವಾಗಿ ಅಡಕವಾಗಿದೆ ಎಂದು ಮುಕ್ತವಾಗಿ ಹೇಳಿದವರು ಕ್ರೋಷಿಯಾ ಸಿನಿಮಾ ನಿರ್ದೇಶಕ ಪಾವೊ ಮರಿನ್ಕೊವಿಕ್.

Advertisement

ಇಫಿ ಚಿತ್ರೋತ್ಸವದಲ್ಲಿ ಅವರ “ಬೋಸ್ನಿಯಾನ್ ಪಾಟ್ʼ ಚಿತ್ರ ಪ್ರದರ್ಶನಗೊಂಡಿದೆ. ಈ ಸಿನಿಮಾ ಕ್ರೋಷಿಯಾ ಮತ್ತು ಜರ್ಮನ್ ಭಾಷೆಯಲ್ಲಿ ರೂಪುಗೊಂಡಿದೆ.
“ನನ್ನ ಸಿನಿಮಾಕ್ಕೆ ಒಳ್ಳೆಯ ಪ್ರತ್ರಿಕ್ರಿಯೆ ವ್ಯಕ್ತವಾಗಿದೆ. ಅದರ ಬಿಡುಗಡೆ ಕುರಿತೂ ಯೋಚಿಸುತ್ತಿರುವೆ. ಒಂದು ಒಳ್ಳೆಯ ಸಿನಿಮಾವನ್ನು ಸ್ವೀಕರಿಸುವಂಥ ಪ್ರೀತಿ ಭಾರತೀಯರಲ್ಲಿದೆ. ಕೇರಳದ ಸಿನಿಮೋತ್ಸವಗಳಲ್ಲಿ ಭಾಗವಹಿಸಿರುವೆʼ ಎಂದರು.

ಈ ಸಿನಿಮಾ ವಲಸೆ, ಐಡೆಂಟಿಟಿ ಹಾಗೂ ಜನರ ಬದುಕನ್ನು ಬದಲಿಸಬಲ್ಲಷ್ಟು ಪ್ರಭಾವಶಾಲಿಯಾಗಿರುವ ಕಲೆಯ ಕುರಿತು ಪ್ರಸ್ತಾಪಿಸುತ್ತಿದೆ. ಸ್ವತಃ ಲೇಖಕನಾದ ಕಥಾನಾಯಕ (ಫಾರೂಕ್ ಸೇಗೊ) ಆಸ್ಟ್ರಿಯಾ ದೇಶದಲ್ಲಿ ನಿರಾಶ್ರಿತನಾಗಿದ್ದಾನೆ. ಅವನ ವಲಸೆ ಕುರಿತ ಪರವಾನಗಿ ನವೀಕರಣಗೊಳ್ಳಬೇಕಿದೆ. ಅದಕ್ಕಾಗಿ ಅವನು ಪಡುವ ಕಷ್ಟ. ಕೊನೆಗೂ ಅವಕಾಶ ಸಿಗದೇ ತನ್ನೂರಿಗೆ ವಾಪಸಾಗುವ ನಾಯಕನ ಕಥೆ.

ʼನನ್ನ ಸಿನಿಮಾ ಹಲವು ಸೋಲುಗಳ ಕುರಿತಾದದ್ದುʼ ಎಂದು ಸಿನಿಮಾ ಪ್ರದರ್ಶನ ಮುನ್ನ ಹೇಳಿದ ಪಾವೊ, ʼಕಥಾನಾಯಕ ಒಂದು ಹಂತದಲ್ಲಿ ಗೆಲ್ಲಬಹುದು. ಆದರೆ ನಿಜವಾಗಿಯೂ ಇದು ಹಲವು ಸೋಲುಗಳ ಕಥೆ, ಸೋತವರ ಕಥೆ. ಬದುಕಿನಲ್ಲಿ ಗೆಲ್ಲಲಾಗದೆಂಬ ವಾದವನ್ನು ನಾನು ಒಪ್ಪುವುದಿಲ್ಲ. ಆಶಾವಾದ ಎಂದಿಗೂ ನನ್ನ ಸಿನಿಮಾದಲ್ಲಿದೆʼ ಎಂದವರು ಪಾವೊ.

ಆಸ್ಟ್ರಿಯಾದಲ್ಲಿ ವಲಸೆ ಕುರಿತು ನಿಯಮಗಳು ಹಿಂದಿನಂತಿಲ್ಲ. ಬಹಳಷ್ಟು ಕಠಿನಗೊಂಡಿವೆ. ಅದರ ಪರಿಣಾಮವನ್ನು ಕಥಾನಾಯಕನೂ ಎದುರಿಸುತ್ತಾನೆ. ಒಬ್ಬ ಲೇಖಕನಾಗಿದ್ದರೂ ಆಸ್ಟ್ರಿಯಾ ಸಾಂಸ್ಕೃತಿಕ ಜಗತ್ತಿಗೆ ಅವನ ಕೊಡುಗೆ ಇರಬೇಕು. ಆಗ ಮಾತ್ರ ಅಲ್ಲಿರಲು ಪರವಾನಗಿ ಸಿಗುತ್ತದೆ. ನನ್ನ ಕಥಾನಾಯಕನದ್ದೂ ಅದೇ ಕಥೆ ಎಂದು ವಿವರಿಸಿದವರು ಪಾವೊ.

Advertisement

ಕಥಾ ನಾಯಕ ತನ್ನ ಸವಾಲುಗಳನ್ನು ಎದುರಿಸುತ್ತಲೇ ತನ್ನೊಳಗಿನ ಅವಲೋಕನದಲ್ಲೂ ತೊಡಗುತ್ತಾನೆ.

ಸಿನಿಮಾ ನಿರ್ಮಾಣದ ಬಗ್ಗೆ ಹೇಳುತ್ತಾ, ಇದು ನಿಜವಾಗಲೂ ಕಸರತ್ತಿನ ಪ್ರಯತ್ನ. ಕ್ರೋಷಿಯಾ, ಆಸ್ಟ್ರಿಯಾ ಸೇರಿದಂತೆ ಮೂರು ರಾಷ್ಟ್ರಗಳ ನಟರೊಂದಿಗೆ ಸಂಯುಕ್ತವಾಗಿ ಕೆಲಸ ಮಾಡುವುದು ಕೊಂಚ ಹೆಚ್ಚು ಶ್ರಮ ಬೇಡುವ ಕೆಲಸ ಎಂದು ಹೇಳಿದ ಪಾವೊ, ಸಿನಿಮಾದ ಶೀರ್ಷಿಕೆಯೂ ಒಂದು ಉಪಮೆ. ಅದೊಂದು ಎಲ್ಲರೂ ಸೇರಿ ಸಿದ್ಧಪಡಿಸುವ ಒಂದು ಅಡುಗೆ ಎಂದು ವಿವರಿಸಿದರು.

ಪಾವೋ ರಂಗಭೂಮಿಯಿಂದ ಬಂದವರು. ನಾಟಕಗಳನ್ನು ಬರೆಯುತ್ತಾ ಬೆಳೆದ ಪಾವೊ ಬಳಿಕ ಚಿತ್ರರಂಗಕ್ಕೆ ಬಂದವರು. ಅವರ ತ್ರೆಸೆಟ್ಟ ಸಿನಿಮಾಕ್ಕೆ ಆರು ಅಂತಾರಾಷ್ಟ್ರೀಯ ಪ್ರಶಸ್ತಿ ಒಳಗೊಂಡಂತೆ ಹಲವು ಪುರಸ್ಕಾರಗಳನ್ನು ಪಡೆದಿದೆ. ಸುಮಾರು ೩೦ ಕ್ಕೂ ಚಿತ್ರೋತ್ಸವಗಳಲ್ಲೂ ಪ್ರದರ್ಶಿತವಾಗಿದೆ.

ಇದನ್ನೂ ಓದಿ: Uttarkashi: ಸುರಂಗದಲ್ಲಿ ಸಿಲುಕಿದ ಕಾರ್ಮಿಕರ ಮಾನಸಿಕ ಒತ್ತಡ ನಿವಾರಿಸಲು ಅಗತ್ಯ ಕ್ರಮ

Advertisement

Udayavani is now on Telegram. Click here to join our channel and stay updated with the latest news.

Next