Advertisement

ದಕ್ಷಿಣದಲ್ಲಿ ಬಿಜೆಪಿ ಭದ್ರಕೋಟೆ ಭೇದಿಸಲಿದ್ದೇನೆ

12:27 AM Apr 16, 2019 | Team Udayavani |

ಬೆಂಗಳೂರು: ಪಕ್ಷದ ನಾಯಕರ ಒತ್ತಾಯಕ್ಕೆ ಮಣಿದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ಕಾಂಗ್ರೆಸ್‌ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್‌, ದಕ್ಷಿಣದಲ್ಲಿ ಸ್ಪರ್ಧಿಸಲು ಕಾರಣ, ಕಣಕ್ಕಿಳಿದ ನಂತರ ಆಗಿರುವ ಬದಲಾವಣೆ, ಕ್ಷೇತ್ರದಲ್ಲಿನ ಪರಿಸ್ಥಿತಿ ಹಾಗೂ ರಾಷ್ಟ್ರೀಯ ವಿಚಾರಗಳ ಕುರಿತು “ಉದಯವಾಣಿ’ ಜತೆ ಮುಕ್ತವಾಗಿ ಮಾತನಾಡಿದ್ದಾರೆ.

Advertisement

* ಬೆಂಗಳೂರು ದಕ್ಷಿಣದಲ್ಲಿ ನಿಮ್ಮನ್ನು ಒತ್ತಾಯಪೂರ್ವಕವಾಗಿ ನಿಲ್ಲಿಸಲಾಯಿತು ಎನ್ನುವುದು ನಿಜಾನಾ?
ಹಾಗೇನಿಲ್ಲ. ನಾನು ಬೆಂಗಳೂರು ಕೇಂದ್ರದಲ್ಲಿ ಟಿಕೆಟ್‌ ಕೇಳಿದ್ದೆ. ಪಕ್ಷದ ಹೈ ಕಮಾಂಡ್‌ ಉತ್ತರ ಕನ್ನಡದಲ್ಲಿ ಸ್ಪರ್ಧೆ ಮಾಡುವಂತೆ ಸೂಚನೆ ನೀಡಿತ್ತು. ಆ ನಂತರ ಬೆಂಗಳೂರು ದಕ್ಷಿಣದಲ್ಲಿ ನರೇಂದ್ರ ಮೋದಿ ಸ್ಪರ್ಧೆ ಮಾಡುತ್ತಾರೆ ಎನ್ನುವ ಕಾರಣಕ್ಕೆ ನನಗೆ ಸ್ಪರ್ಧಿಸಲು ಸೂಚನೆ ನೀಡಿದ್ದರು. ಬದಲಾದ ಪರಿಸ್ಥಿತಿಯಲ್ಲಿ ನೀವೇ ಸ್ಪರ್ಧಿಸಿ ಎಂದು ಸೂಚನೆ ನೀಡಿದರು. ಹೀಗಾಗಿ ಸ್ಪರ್ಧೆಗೆ ಒಪ್ಪಿದೆ.

* ನಿಮಗೆ ಇಷ್ಟ ಇಲ್ಲದೇ ಅಲ್ಲಿ ಸ್ಪರ್ಧೆ ಮಾಡಿದ್ದೀರಾ?
ಹಾಗೇನಿಲ್ಲ. ನಾನೊಬ್ಬ ರಾಜಕೀಯ ಕಾರ್ಯಕರ್ತ. ಪಕ್ಷ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಎಲ್ಲಿ ಸ್ಪರ್ಧೆ ಮಾಡುವಂತೆ ಹೇಳುತ್ತದೆಯೋ ಅಲ್ಲಿ ಸ್ಪರ್ಧೆ ಮಾಡಬೇಕು. ಜಾರ್ಜ್‌ ಫೆರ್ನಾಂಡಿಸ್‌ ಅವರು ಬಿಹಾರ ಹಾಗೂ ಮುಂಬೈನಲ್ಲಿ ಸ್ಪರ್ಧೆ ಮಾಡಿದ್ದರು. ಅಖೀಲ ಭಾರತ ಮಟ್ಟದಲ್ಲಿ ಕೆಲಸ ಮಾಡಿರುವುದರಿಂದ ಇದೇ ಕ್ಷೇತ್ರ, ಅದೇ ಕ್ಷೇತ್ರ ಎಂದು ಯಾವುದೇ ಭೇದಭಾವ ಇಲ್ಲ. ಕಾಂಗ್ರೆಸ್‌ ಪಕ್ಷ ಏನು ತೀರ್ಮಾನ ಕೈಗೊಳ್ಳುತ್ತದೋ, ಅದಕ್ಕೆ ಬದ್ಧನಾಗಿ ಕೆಲಸ ಮಾಡುವುದಷ್ಟೇ ನನ್ನ ಕೆಲಸ.

* ಬೆಂಗಳೂರು ದಕ್ಷಿಣ ಬಿಜೆಪಿಯ ಭದ್ರಕೋಟೆ ಎಂಬ ಭಾವನೆ ಇದೆ. ನೀವು ಆ ಕ್ಷೇತ್ರಕ್ಕೆ ಅಪರಿಚಿತರು ಎಂಬ ಮಾತೂ ಇದೆಯಲ್ಲಾ?
ಸದ್ಯಕ್ಕೆ ಬಿಜೆಪಿಯವರು ನನ್ನನ್ನು ಪಾಕಿಸ್ತಾನದವನು ಎಂದು ಹೇಳಿಲ್ಲ. ವಿದ್ಯಾರ್ಥಿ ಕಾಂಗ್ರೆಸ್‌ನಿಂದಲೂ ನಾನು ಬೆಂಗಳೂರಿನಲ್ಲಿಯೇ ಇದ್ದವನು. ನನಗೆ ಕ್ಷೇತ್ರ ಹೊಸದಲ್ಲ. ಈ ಕ್ಷೇತ್ರದಲ್ಲಿ ಜಾತ್ಯತೀತ ಭಾವನೆ ಉಳ್ಳವರಿದ್ದಾರೆ. ಮೈತ್ರಿ ಪಕ್ಷಗಳ ಮತಗಳನ್ನು ನೋಡಿದರೆ, ಕೇವಲ ಐದು ಸಾವಿರ ಮತಗಳ ಅಂತರ ಇದೆ. ಕ್ಷೇತ್ರದ ಮತದಾರರು ಬಹಳ ಪ್ರಬುದ್ಧರಿದ್ದಾರೆ. ಯಾವುದೋ ಕಾರಣಕ್ಕೆ ಗೆದ್ದರೆ ಅದನ್ನು ಬಲಪಂಥೀಯರು ಗೆದ್ದರು ಎನ್ನುವ ಭಾವನೆ ಮೂಡಿಸುತ್ತಾರೆ. 2011ರಲ್ಲಿ ಬಿಜೆಪಿ ವಿರೋಧ ಪಕ್ಷದ ಗೌರವವನ್ನೇ ಕಳೆದುಕೊಂಡಿತ್ತು. ಆಗ ಅಣ್ಣಾ ಹಜಾರೆ, ಕೇಜ್ರಿವಾಲ್‌ ಅವರನ್ನು ಮುಂದೆ ಬಿಟ್ಟು ಯುಪಿಎ ವಿರುದ್ಧ ಅಪಪ್ರಚಾರ ನಡೆಸಿದರು.

* ನಿಮಗೆ ಯುವಕರ ಬೆಂಬಲ ದೊರೆಯುತ್ತಿಲ್ಲ ಎಂಬ ಮಾತು ಕೇಳಿ ಬರುತ್ತಿದೆಯಲ್ಲ?
ಈ ರಾಜ್ಯದಲ್ಲಿ ಯುವ ಕಾಂಗ್ರೆಸ್‌ ಚಳವಳಿ ಯಾರಾದರೂ ಮಾಡಿದ್ದರೆ ಅದು ನಾನು ಮಾತ್ರ. ನನ್ನೊಂದಿಗಿದ್ದ ಯುವಕರು ದೊಡ್ಡ ಹುದ್ದೆಗಳನ್ನು ಅನುಭವಿಸಿದ್ದಾರೆ. ಹೀಗಾಗಿ ನನ್ನ ಜತೆಗಿದ್ದರೆ ಭವಿಷ್ಯ ಇದೆ ಎನ್ನುವ ಭಾವನೆ ಯುವಕರಲ್ಲಿದೆ.

Advertisement

* ಬಿಜೆಪಿ ತೀರಾ ಹೊಸ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಅವರು ನಿಮಗೆ ಪ್ರಬಲ ಸ್ಪರ್ಧಿ ಅಂತ ಅನಿಸುತ್ತಾ?
ನೋಡಿ ಬಿಜೆಪಿಯ ಮಾಜಿ ಉಪ ಮುಖ್ಯಮಂತ್ರಿ ಈ ಚುನಾವಣೆಯಲ್ಲಿ 28 ಕ್ಷೇತ್ರದಲ್ಲಿಯೂ ಮೋದಿ ಒಬ್ಬರೇ ಸ್ಪರ್ಧೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ಈ ಚುನಾವಣೆಯಲ್ಲಿ ನಮ್ಮ ಪ್ರತಿಸ್ಪರ್ಧಿ ಮೋದಿಯಲ್ಲ. ನಮ್ಮ ಸ್ಪರ್ಧೆ ಸಂವಿಧಾನ ಉಳಿಸಿಕೊಳ್ಳಲು. ಶಿಥಿಲಗೊಂಡಿರುವ ಪ್ರಜಾಪ್ರಭುತ್ವವನ್ನು ರಕ್ಷಿಸಲು ನಮ್ಮ ಸ್ಪರ್ಧೆ ಇದೆ. ಬಿಜೆಪಿಯವರು ಸಂವಿಧಾನ ಒಪ್ಪುವುದಿಲ್ಲ ಎಂದು ಹೇಳುತ್ತಿದ್ದಾರೆ. ನಾನು ಅವರ ವಿರುದ್ಧ ಸ್ಪರ್ಧೆ ಮಾಡಿದ್ದೇನೆ.

* ರಾಜ್ಯದಲ್ಲಿ ಮೈತ್ರಿ ಮಾಡಿಕೊಂಡಿರುವುದರಿಂದ ಕಾಂಗ್ರೆಸ್‌ ಅಸ್ತಿತ್ವ ಕಳೆದುಕೊಳ್ಳುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆಯಲ್ಲಾ?
ಇಲ್ಲಿ ದೇಶ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ದೇಶ ಉಳಿಸಿಕೊಳ್ಳಲು ಜಾತ್ಯತೀತ ತತ್ವದಲ್ಲಿ ನಂಬಿಕೆ ಇಟ್ಟವರು ಎಲ್ಲರೂ ಒಗ್ಗಟ್ಟಾಗುವ ಅನಿವಾರ್ಯತೆ ಇದೆ.

* ಚುನಾವಣೆ ನಂತರ ಸರ್ಕಾರದ ಅಸ್ತಿತ್ವಕ್ಕೆ ಧಕ್ಕೆಯಾಗುತ್ತದೆ ಎಂಬ ಮಾತು ಕೇಳಿ ಬರುತ್ತಿದೆಯಲ್ಲಾ?
ಸರ್ಕಾರಕ್ಕೆ ಏನೂ ಧಕ್ಕೆಯಾಗುವುದಿಲ್ಲ. ರಾಜ್ಯದಲ್ಲಿ ನಾವು 20 ಸ್ಥಾನ ಗೆಲ್ಲುತ್ತೇವೆ. ಇಪ್ಪತ್ತಕ್ಕಿಂತ ಕಡಿಮೆಯಾದರೆ, ಸ್ವಲ್ಪ ಯೋಚನೆ ಮಾಡಬೇಕು.

* ನಿಮ್ಮ ಪ್ರತಿಸ್ಪರ್ಧಿ ಎಷ್ಟು ಪ್ರಬಲವಾಗಿದ್ದಾರೆ?
ನನ್ನ ಪ್ರತಿಸ್ಪರ್ಧಿ ಬಿಜೆಪಿ, ನರೇಂದ್ರ ಮೋದಿ ನನ್ನ ವಿರೋಧಿ, ಸಂವಿಧಾನ ವಿರೋಧಿಗಳು ನನ್ನ ವಿರೋಧಿಗಳು. ಕ್ಷೇತ್ರದ ಕಣದಲ್ಲಿರುವ ಅಭ್ಯರ್ಥಿಯ ಬಗ್ಗೆ ನಾನು ಯೋಚನೆ ಮಾಡಿಲ್ಲ.

* ಬೆಂಗಳೂರು ದಕ್ಷಿಣದಲ್ಲಿ ದಾಖಲೆ ಬರೀತಿರಾ?
ಜನರ ಉತ್ಸಾಹ ನೋಡಿದರೆ, ದಾಖಲೆಯಾಗುತ್ತದೆ ಎಂಬ ನಂಬಿಕೆ ಇದೆ.

* ದೇಶದ ಭವಿಷ್ಯಕ್ಕೆ ಮೋದಿಯಂತಹ ಬಲಿಷ್ಠ ನಾಯಕ ಬೇಕು ಎಂದು ಹೇಳುತ್ತಿದ್ದಾರೆ?
ಒಂದು ಪತ್ರಿಕಾಗೋಷ್ಠಿ ಮಾಡಿ ಪತ್ರಕರ್ತರ ಪ್ರಶ್ನೆಗಳನ್ನು ಎದುರಿಸುವ ಧೈರ್ಯ ಇಲ್ಲದವರು, ವಿದೇಶಿಗರನ್ನು ಹೇಗೆ ಎದುರಿಸುತ್ತಾರೆ. ಇಂಥವರೆಲ್ಲಾ ದೇಶ ಆಳಲು ಸಾಧ್ಯವೇ? ಕನ್ನಡದಲ್ಲಿ ಒಂದು ಗಾದೆಯಿದೆ; “ಕರೆಯದೇ ಬಂದವರನ್ನು ಏನೋ ಮಾಡು’ ಎಂದು. ಹೇಳದೇ ಕೇಳದೇ ಪಾಕಿಸ್ತಾನಕ್ಕೆ ಭೇಟಿ ನೀಡಿ ಮಂಗಳಾರತಿ ಮಾಡಿಸಿಕೊಂಡು ಬಂದಿದ್ದಾರೆ. ಇವರಿಗೆ ಬೇರೆಯವರನ್ನು ಎದುರಿಸುವ ಧೈರ್ಯ ಎಲ್ಲಿಂದ ಬರಬೇಕು.

* ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next