Advertisement

ಶಾಲೆಯನ್ನುಳಿಸಲು ಆಶ್ರಯ ಟ್ರಸ್ಟ್‌ನಿಂದ ಹೈಟೆಕ್‌ ಸ್ಪರ್ಶ

08:50 AM Jul 29, 2017 | Harsha Rao |

ಬೆಳ್ಮಣ್‌: ಸರಕಾರಿ ಶಾಲೆಗಳಿಗೆ ಸರಕಾರ ನೂರಾರು ಯೋಜನೆಗಳ ಜತೆ ಸವಲತ್ತುಗಳನ್ನು ಅನಾಯಾಸವಾಗಿ ನೀಡುತ್ತಿದ್ದರೂ ಶಿಕ್ಷಕರ ಕೊರತೆಯ ಜತೆ ವಿದ್ಯಾರ್ಥಿಗಳ ಕೊರತೆಯಿಂದಾಗಿ ಹಲವಾರು ಶಾಲೆಗಳು ಮುಚ್ಚುತ್ತಿರುವ ಕಾಲಘಟ್ಟದಲ್ಲಿ ಮುಂಡ್ಕೂರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಇದಕ್ಕೆ ಹೊರತಾಗಿ ವಿದ್ಯಾರ್ಥಿಗಳ ಸೇರ್ಪಡೆಯಲ್ಲಿ ಅಭಿವೃದ್ಧಿ ಕಂಡು ಗಮನ ಸೆಳೆದಿದೆ.

Advertisement

ಅಭೂತಪೂರ್ವ ಯಶಸ್ಸು
ಮುಂಡ್ಕೂರು ಮುಲ್ಲಡ್ಕ ಗುರುಪ್ರಸಾದ್‌ ಸುಧಾಕರ ಶೆಟ್ಟಿಯವರ ನೇತೃತ್ವದ ಶಿಕ್ಷಣ ಪ್ರೇಮಿಗಳ ಬಳಗದ ಮೂಲಕ ಪ್ರಾರಂಭಗೊಂಡ ಮುಂಡ್ಕೂರಿನ ವಿದ್ಯಾಶ್ರಯ ಎಂಬ ಪರಿಕಲ್ಪನೆಯ  ಆಶ್ರಯ ಟ್ರಸ್ಟ್‌  ಈ ಶಾಲೆಯನ್ನುಳಿಸಲು ಪಣತೊಟ್ಟಿದ್ದು ಅಭೂತಪೂರ್ವ ಯಶಸ್ಸನ್ನೂ ಕಂಡಿದೆ. ಬುಧವಾರ ಈ ಶಾಲೆಯ ವಿದ್ಯಾರ್ಥಿಗಳು ಕಲರ್‌ಫುಲ್‌ ಸಮವಸ್ತ್ರದೊಂದಿಗೆ ಕಾಣಿಸಿಕೊಂಡರು. ಸರಕಾರದ ನೀಲಿಬಿಳಿಯ ಜತೆ ಈ ಬಣ್ಣದ ಸಮವಸ್ತ್ರ ಮಕ್ಕಳಲ್ಲಿ ಹೊಸ ಹುರುಪು ತಂದಿದೆ. ಶನಿವಾರಕ್ಕೆಂದೇ ಟ್ರಸ್ಟ್‌  ಕ್ರೀಡಾ ಸಮವಸ್ತ್ರವನ್ನೂ ನೀಡಿದ್ದು ಹೆತ್ತವರು ತಮ್ಮ ಮಕ್ಕಳನ್ನು ವಿನೂತನ ಪರಿಕಲ್ಪನೆಯ ಈ ಸರಕಾರಿ ಶಾಲೆಗೆ ಸೇರಿಸಲು ತುದಿಗಾಲಲ್ಲಿ ನಿಂತಿದ್ದಾರೆ. 

ವಿದ್ಯಾರ್ಥಿಗಳ ಸಂಖ್ಯೆ 145ಕ್ಕೇ
ಈ ಪರಿಕಲ್ಪನೆಯ ಹಿಂದೆ ಶಿಕ್ಷಣ ಇಲಾಖೆ, ಶಿಕ್ಷಣ ಪ್ರೇಮಿಗಳು, ಊರ ಪರವೂರ ದಾನಿಗಳು, ಹಳೆ ವಿದ್ಯಾರ್ಥಿಗಳು, ಶಾಲೆಯ ಶಿಕ್ಷಕರು, ಹೆತ್ತವರು ಎಲ್ಲರು ಕೈ ಜೋಡಿಸಿದ್ದು, ಇತರರಿಗೆ ಮಾದರಿಯೆನಿಸಿದೆ. ಪರಿಣಾಮವಾಗಿ ಈ ಶಾಲೆಯಲ್ಲಿ ಕಳೆದ ವರ್ಷದ ಹಿಂದೆ  90ಕ್ಕೆ ಇಳಿದಿದ್ದ ವಿದ್ಯಾರ್ಥಿಗಳ ಸಂಖ್ಯೆ ಹಾಲಿ ಶೈಕ್ಷಣಿಕ ವರ್ಷದಲ್ಲಿ 145ಕ್ಕೇರಿದೆ.

(1ನೇ ತರಗತಿಗೆ 23 ವಿದ್ಯಾರ್ಥಿಗಳ ನೋಂದಣಿ)
ಇಂಗ್ಲಿಷ್‌ ಕಲಿಸಿ-ಕನ್ನಡ ಉಳಿಸಿ
ಸರಕಾರಿ ಶಾಲೆ ಅದರಲ್ಲೂ ಕನ್ನಡ ಮಾಧ್ಯಮ ಶಾಲೆಗಳ ಅವನತಿಗೆ ಆಕರ್ಷಣೆಗಳೊಂದಿಗೆ ಬೆಳೆಯುತ್ತಿರುವ ಆಂಗ್ಲಮಾಧ್ಯಮ ಶಾಲೆಗಳು ಎಂಬ ಉದ್ದೇಶದಿಂದ ಮುಂಡ್ಕೂರಿನ ಈ ಶಾಲೆಯಲ್ಲಿ  ಇಂಗ್ಲಿಷ್‌ ಕಲಿಸಿ ಕನ್ನಡ ಉಳಿಸಿ ಎಂಬ ಧ್ಯೇಯದೊಂದಿಗೆ ಇಡೀ ಶಾಲೆಯಲ್ಲಿ ಪರಿಪೂರ್ಣ ಇಂಗ್ಲಿಷ್‌ ಕಲಿಸಲು ಶಿಕ್ಷರೊಬ್ಬರ ನೇಮಕಾತಿ ನಡೆದಿದೆ.ಕಂಪ್ಯೂಟರ್‌ ಕಲಿಕೆಯ ಜತೆ ಇತರ ಪಠ್ಯಗಳ ಬೋಧನೆಗೂ ಗೌರವ ಶಿಕ್ಷಕರ ನೇಮಕಾತಿ ನಡೆದಿದೆ. ಶಾಲೆಯಲ್ಲಿರುವ 6 ಸರಕಾರಿ ಶಿಕ್ಷಕರು ಹಾಗೂ ಗೌರವ ಶಿಕ್ಷಕರೂ ನಿರಂತರವಾಗಿ ಶಾಲೆಯ ಉಳಿವಿಗಾಗಿ ವಿವಿಧ ವಿಶೇಷ ಕಾರ್ಯಕ್ರಮಗಳನ್ನು ಸಂಘಟಿಸಿ ಶಾಲೆಯನ್ನು ಆಕರ್ಷಣೆಯ ಕೇಂದ್ರವನ್ನಾಗಿಸಿದ್ದಾರೆ.

ವಾಚನಾಲಯ, ಕಂಪ್ಯೂಟರ್‌ ಕೊಠಡಿ
ಮುಂಬೈನ ಚಿತ್ರನಟ ನಾನಾ ಪಾಟೇಕರ್‌ರವರ ಪ್ರಾಯೋಜಕತ್ವದ ನವೀಕೃತ ಕಂಪ್ಯೂಟರ್‌ ಕೊಠಡಿ ಹಾಗೂ ವಾಚನಾಲಯ ಇಲ್ಲಿವ ವೈಶಿಷ್ಠ.ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಂತದ ಕಂಪ್ಯೂಟರ್‌ ತರಬೇತಿ ನೀಡಲು ದಾನಿಗಳು ನೀಡಿದ್ದ ಕಂಪ್ಯೂಟರ್‌ನಬಳಕೆ ನಡೆಯುತ್ತಿದೆ. ನೂರಾರು ಪುಸ್ತಕಗಳು ಗ್ರಂಥಾಲಯದಲ್ಲಿದ್ದು ಅದೂ ಆಕರ್ಷಣೆಯ ವಿಚಾರವಾಗಿದೆ. ಶಾಲೆಯ ಶತಮಾನೋತ್ಸವ ಸಮಿತಿ ಹಾಗೂ ಟ್ರಸ್ಟ್‌ ವತಿಯಿಂದ 54 ಸಾವಿರ ರೂ. ಮೌಲ್ಯದ ನೋಟ್‌ ಪುಸ್ತಕ ವಿತರಿಸಲಾಗಿದೆ. ಇತರ ದಾನಿಗಳು ಸ್ಕೂಲ್‌ ಬ್ಯಾಗ್‌, ಕೊಡೆ, ಕಲಿಕಾ ಸಾಮಾಗ್ರಿ ನೀಡಿದ್ದಾರೆ.

Advertisement

ಆಶ್ರಯ ಬಾಲವಾಡಿ ವಿಲೀನ
ಕಳೆದ 18 ವರ್ಷಗಳಿಂದ  ಮುಂಡ್ಕೂರಿನಲ್ಲಿ  ಮನೆಮಾತಾಗಿರುವ ಸಂಸ್ಕಾರಯುತ ಶಿಕ್ಷಣಕ್ಕೆ ಹೆಸರಾದ ಸುಧಾಕರ ಶೆಟ್ಟರ ಆಶ್ರಯ ಬಾಲವಾಡಿಯೂ ಈ ಸರಕಾರಿ ಶಾಲೆಯನ್ನುಳಿಸುವ ಉದ್ದೇಶದಿಂದ ಇದೇ ಶಾಲೆಗೆ ವಿಲೀನಗೊಂಡಿದ್ದು ಈ ಸಂಸ್ಥೆಯಲ್ಲಿ 92 ವಿದ್ಯಾರ್ಥಿಗಳಿದ್ದಾರೆ.

ಅಕ್ಷರ ಜಾತ್ರೆ, ಅಕ್ಷರ ದೀಪ, ಬೇಸಗೆ ಶಿಬಿರ, ಶನಿವಾರದ ಸಂಭ್ರಮ
ಕಳೆದ ವರ್ಷ ನಾನಾಪಾಟೇಕರ್‌ರವರ ಭಾಗವಹಿಸುವಿಕೆಯಲ್ಲಿ  ಜನಪ್ರಿಯತೆ ಪಡೆದ ಶೈಕ್ಷಣಿಕ ಸಮಾವೇಶ ಅಕ್ಷರ ಜಾತ್ರೆ ಈ ಬಾರಿಯೂ ಆ. 15ರಂದು ನಡೆಯಲಿದೆ. ಜನವರಿ 26ರಂದು ನಡೆದ ಆಶ್ರಯ ಬಾಲವಾಡಿ ಹಾಗೂ ಪ್ರಾಥಮಿಕ ಶಾಲೆಗಳ  ವಾರ್ಷಿಕೋತ್ಸವ ಅಕ್ಷರದೀಪ ,ಎಪ್ರಿಲ್‌ನಲ್ಲಿ ನಡೆದ ಬೇಸಗೆ ಶಿಬಿರ ಗಮನ ಸೆಳೆದ ಕಾರ್ಯಕ್ರಮಗಳು.ಇನ್ನು ಕೃಷ್ಣಾಷ್ಟಮಿ,ರಮ್ಜಾನ್‌,ದೀಪಾವಳಿ,ಕ್ರಿಸ್ಮಸ್‌ ಸಹಿತ ವಿವಿಧ ದಾರ್ಮಿಕ ಆಚರಣೆಗಳ ಮಹತ್ವ ಸಾರುವ ಕಾರ್ಯಕ್ರಮಗಳ ಆಯೋಜನೆ ಸದುದ್ದೇಶಿತ ಕಾರ್ಯಕ್ರಮಗಳಾಗಿವೆ.ಮುಂದೆ ಶನಿವಾರ ಸಾಲೆಯ ವಿದ್ಯಾರ್ಥಿಗಳಿಗೆ, ಹೆತ್ತವರಿಗೆ, ಶಿಕ್ಷಕರಿಗೆವ ಶನಿವಾರದ ಸಂಭ್ರಮ ಎನ್ನುವ ವಿನೂತನ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸಲುದ್ದೇಶಿಲಾಗಿದೆ.

ಕ್ರೀಡೆ, ಕಲಿಕೆ, ಚಿತ್ರಕಲೆ ಹಾಗೂ ಪ್ರತಿಭಾ ಕಾರಂಜಿಗಳಲ್ಲಿಯೂ ಎತ್ತಿದ ಕೈ
ಈ ಶಾಲೆಯ ಶಿಕ್ಷಕರ ಪ್ರಯತ್ನದ ಫಲವಾಗಿ ವಿದ್ಯಾರ್ಥಿಗಳು ಎಲ್ಲ ಕ್ಷೇತ್ರಗಳಲ್ಲಿಯೂ ಸರ್ವಾಂಗೀಣ ಪ್ರಗತಿ ತೋರುತ್ತಿದ್ದಾರೆ. ಕ್ರೀಡೆಯಲ್ಲಿ  ಇಲ್ಲಿನ ವಿದ್ಯಾರ್ಥಿನಿ ಶ್ರೀನಿಧಿ ಕಳೆದ ವರ್ಷ 400 ಮೀ ಓಟದಲ್ಲಿ ರಾಜ್ಯಮಟ್ಟಕ್ಕೇರಿದ್ದಾಳೆ. ಬಾಲಕ-ಬಾಲಕಿಯರು ತಾಲೂಕು ಮಟ್ಟದಲ್ಲಿ ಚಾಂಪಿಯನ್‌ಶಿಪ್‌ ಗಳಿಸಿದ್ದಾರೆ. ಕಬಡ್ಡಿಯಲ್ಲಿ ನಿರಂತರ 3 ವರ್ಷಗಳಿಂದ ಬಾಲಕಿಯರು ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನಿಯಾಗಿ ವಿಭಾಗ ಮಟ್ಟಕ್ಕೇರಿದ್ದಾರೆ. ಪ್ರತಿಭಾ ಕಾರಂಜಿಯಲ್ಲಿ ಜಿಲ್ಲಾ ಮಟ್ಟದ ಸಾಧನೆ, ಚಿತ್ರಕಲೆಯಲ್ಲಿ ರಾಜ್ಯ ಮಟ್ಟದ ಸಾಧನೆ ಈ ಶಾಲೆಯ ಮಕ್ಕಳದು.

ಇನ್ನೂ ಹಲವು ಕನಸುಗಳಿವೆ: ಸುಧಾಕರ ಶೆಟ್ಟಿ
ತನು ಕಲಿತ ಶಾಲೆ ಮುಚ್ಚಬಾರದೆಂಬ ಉದ್ದೇಶದಿಂದ ವಿದ್ಯಾಸಕ್ತ ಜನರನ್ನು ಸೇರಿಸಿ ಈ ಯೋಜನೆ ಆರಂಭಿಸಿದ್ದೇನೆ ಎನ್ನುವ ಸುಧಾಕರ ಶೆಟ್ಟಿ ಈ ಶಾಲೆಯ ಚಿತ್ರಣವನ್ನೇ ಬದಲಿಸುವುದಾಗಿ ತಿಳಿಸಿದ್ದಾರೆ. ನೂತನ ಶಾಲಾ ಕಟ್ಟಡ, ತರಗತಿ ಕೋಣೆಯೊಳಗೆ ವಿಭಿನ್ನ ವಿನ್ಯಾಸ, ಶಿಕ್ಷಕರಿಗೆ ಹೆತ್ತವರಿಗೆ ವಿಶೇಷ ತರಬೇತಿ, ಶಾಲೆಯ ಆವರಣದಲ್ಲಿ ಉದ್ಯಾನವನ ನಿರ್ಮಾಣ, ಪ್ರಾಜೆಕ್ಟರ್‌ ಅಳವಡಿಕೆಯಂತಹ ಯೋಜನೆಗಳಿವೆ ಎಂದಿದ್ದಾರೆ.ಶಿಕ್ಷಣ ರಂಗದ ಬೇರೆ ಹೆಸರಾಂತ ಶಿಕ್ಷಣ ಸಂಸ್ಥೆಗಳನ್ನು ಭೇಟಿ ಮಾಡಿ, ಶಿಕ್ಷಣ ತಜ°ರ ಜತೆ ಸಮಾಲೋಚನೆ ನಡೆಸಿ ಮುಂಡ್ಕೂರಿನ ಶತಮಾನೋತ್ತರ ಇತಿಹಾಸವುಳ್ಳ ಈ ಶಾಲೆಯ ಸರ್ವಾಂಗೀಣ ಬದಲಾವಣೆಗೆ ಚಿಂತನೆ ನಡೆಸಿದ್ದಾರೆ.
ಬುಧವಾರ ಬಣ್ಣದ ಸಮವಸ್ತ್ರಗಳೊಂದಿಗೆ ಬಣ್ಣ ಬಣ್ಣದ ಕನಸುಗಳೊಂದಿಗೆ ಈ ಸರಕಾರಿ ಶಾಲೆಯ ವಿದ್ಯಾರ್ಥಿಗಳು ಶಾಲೆಯಲ್ಲಿ ಸಂಭ್ರಮ ಪಟ್ಟರು.

ಸರಕಾರಿ ಶಾಲೆಯನ್ನುಳಿಸಲು ಹೆತ್ತವರು, ಶಿಕ್ಷಕರ ಜತೆ ವಿದ್ಯಾಭಿಮಾನಿಗಳ ಸಹಕಾರ  ಅಗತ್ಯ.
– ವಿ. ಸುನಿಲ್‌ ಕುಮಾರ್‌ ಶಾಸಕರು, ಕಾರ್ಕಳ

ಮುಂಡ್ಕೂರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಇತರರಿಗೆ ಮಾದರಿ.ಇಲ್ಲಿನ ಆಶ್ರಯ ಟ್ರಸ್ಟ್‌  ನಡೆಸುವ ಸೇವೆ ಶ್ಲಾಘನೀಯ.
– ಮನಮೋಹನ ಎಚ್‌. ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಾರ್ಕಳ

ಸರಕಾರದ ಎಷ್ಟೇ ಅನುದಾನಗಳಿದ್ದರೂ ಊರವರು ಸ್ವಯಂಪ್ರೇರಿತರಾಗಿ ಮುಂದೆ ಬಂದಾಗ ಮಾತ್ರ ಸರಕಾರಿ ಶಾಲೆಗಳು ಉಳಿಯಲು ಸಾಧ್ಯ.
– ರೇಷ್ಮಾ ಉದಯ ಶೆಟ್ಟಿ ,ಜಿಲ್ಲಾ ಪಂಚಾಯತ್‌ ಸದಸ್ಯರು

– ಶರತ್‌ ಶೆಟ್ಟಿ  ಮುಂಡ್ಕೂರು

Advertisement

Udayavani is now on Telegram. Click here to join our channel and stay updated with the latest news.

Next