Advertisement

ಇನ್ನೊಂದು ಅಪಾಯ ಎರಗುವ ಮುನ್ನ ಎಚ್ಚೆತ್ತುಕೊಳ್ಳಿ

08:30 AM Apr 27, 2018 | Karthik A |

ಪುತ್ತೂರು: ಎರಡು ದಿನಗಳ ಹಿಂದೆ ಬರೆ ಕುಸಿದು ಎರಡು ಮುಗ್ಧ ಜೀವಗಳು ಬಲಿಯಾಗಿವೆ. ಇಂತಹ ಘಟನೆ ಮರುಕಳಿಸದಂತೆ ಸ್ಥಳೀಯಾಡಳಿತ ಗಮನ ಹರಿಸುವ ಅಗತ್ಯವಿದೆ. ಗಾಂಧಿ ಕಟ್ಟೆ ಹಾಗೂ ಅಶ್ವತ್ಥ ಕಟ್ಟೆಗೊಂದು ವ್ಯವಸ್ಥೆ ಮಾಡುವ ಹೊಣೆಗಾರಿಕೆಯೂ ಇದೆ. ಬಿರುಕು ಬಿಟ್ಟ ಕಟ್ಟೆ, ಸುಣ್ಣ ಬಣ್ಣ ಮೆತ್ತಿಕೊಂಡು ನಿಂತ ಗಾಂಧಿ ಪ್ರತಿಮೆ, ಇದಕ್ಕೆ ಆಶ್ರಯವಾಗಿ ಎತ್ತರದ ಕಟ್ಟೆಯಲ್ಲಿರುವ ಅಶ್ವತ್ಥ ಮರ, ಮರದ ಮೇಲ್ಗಡೆ ಹಿಕ್ಕೆ ಹಾಕುವ ಹಕ್ಕಿಗಳು. ಇದು ಅಶ್ವತ್ಥ ಮರದ ಸದ್ಯದ ಸ್ಥಿತಿ.

Advertisement

ದಿನನಿತ್ಯ ಸಾವಿರಾರು ವಾಹನಗಳು ಅತ್ತಿಂದಿತ್ತ ಓಡಾಡುವ ಪ್ರಮುಖ ಸ್ಥಳವಿದು. ಪೇಟೆಗೆ ಸಮೃದ್ಧ ನೆರಳು ನೀಡುವ ಮರವಿದೆ. ಸಾಕಷ್ಟು ಹಕ್ಕಿಗಳು ವಾಸಕ್ಕೆ ಇದೇ ಮರವನ್ನು ಬಳಸಿಕೊಂಡಿವೆ. ಅಶ್ವತ್ಥ ಮರಕ್ಕೆ ಧಾರ್ಮಿಕ ಮಹತ್ವವೂ ಇದೆ. ಇದರ ಜತೆಗೆ ಗಾಂಧಿ ಮಂಟಪ ಇರುವ ಕಾರಣಕ್ಕೆ ಈ ಮರ ಹಾಗೂ ಕಟ್ಟೆಯನ್ನು ತೆರವು ವಿಚಾರದಲ್ಲಿ ಪರ – ವಿರೋಧ ಧ್ವನಿಗಳು ಕೇಳಿಬಂದಿವೆ. ತೀರ್ಮಾನ ಕೈಗೊಳ್ಳಲು ಸಮಿತಿಯನ್ನೂ ರಚಿಸಲಾಗಿತ್ತು. ಆದರೆ ಗೊಂದಲವನ್ನು ಪರಿಹರಿಸಲು ಯಾರೊಬ್ಬರೂ ಮುಂದಾಗದ ಕಾರಣ, ಸಮಸ್ಯೆ ಹಾಗೇ ಉಳಿದುಕೊಂಡಿದೆ. 


ಬರೆ ಜರಿದು ಇಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಮತ್ತೂಮ್ಮೆ ನೆನಪಾಗಿದೆ. ಇನ್ನು ಒಂದೇ ತಿಂಗಳಲ್ಲಿ ಮಳೆ ಧಾಂಗುಡಿ ಇಡಲಿದೆ. ಅಷ್ಟರಲ್ಲಿ ಸಾಕಷ್ಟು ಸಿದ್ಧತೆಗಳನ್ನು ಸ್ಥಳೀಯಾಡಳಿತ ನಡೆಸ ಬೇಕಾಗಿದೆ. ಇದರಲ್ಲಿ ಯಾವುದೇ ರೀತಿಯ ಲೋಪ ಆಗದಂತೆ ಎಚ್ಚರ ವಹಿಸಬೇಕು. ಇಲ್ಲದೇ ಹೋದರೆ, ಪ್ರಾಣಕ್ಕೆ ಎರವಾಗುವ ಸಂದರ್ಭ. ಗಾಂಧಿ ಹಾಗೂ ಅಶ್ವತ್ಥ ಮರವಿರುವ ಕಟ್ಟೆ ಇಂತಹ ಅಪಾಯದ ಸ್ಥಿತಿಯಲ್ಲಿದೆ. ಬಿರುಕು ಬಿಟ್ಟ ಕಟ್ಟೆ ಅಪಾಯವನ್ನು ಆಹ್ವಾನಿಸುತ್ತಿದೆ. ಯಾವುದೇ ಹೊತ್ತಿನಲ್ಲಿ ಮಣ್ಣು ಸಡಿಲಗೊಂಡು ಉರುಳಿ ಬಿದ್ದರೆ, ವಾಣಿಜ್ಯ ಮಳಿಗೆ, ಸುತ್ತಲಿರುವ ಜನರು, ವಾಹನಗಳಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಹೀಗಾಗದಂತೆ ಎಚ್ಚರ ವಹಿಸಬೇಕಾದ ಜವಾಬ್ದಾರಿ ಆಡಳಿತದ ಹೆಗಲಲ್ಲಿದೆ.

ಪುತ್ತೂರಿಗೆ ಆಗಮಿಸಿದ್ದ ಗಾಂಧೀಜಿ ರಾಗಿದಕುಮೇರು ಹಾಗೂ ಬ್ರಹ್ಮನಗರ ಕಾಲೊನಿಗಳಿಗೆ ಭೇಟಿ ನೀಡಿದ್ದರು. ಅಲ್ಲಿ ವಾಸವಾಗಿದ್ದವರ ದಯನೀಯ ಪರಿಸ್ಥಿತಿ ಯನ್ನು ಗಮನಿಸಿ, ನೊಂದಿದ್ದರು. ತಮ್ಮ ಜತೆಗಿದ್ದ ಡಾ| ಶಿವರಾಮ ಕಾರಂತ, ಸದಾಶಿವ ಕಾರ್ನಾಡ ಮೊದಲಾದವರ ಬಳಿ ಪ್ರಸ್ತಾಪಿಸಿ, ರಾಗಿದಕುಮೇರಿನಲ್ಲಿ ಬಾವಿ ತೋಡಿಸಲು ಸೂಚನೆ ನೀಡಿದ್ದರು. ಆ ಬಾವಿ ಈಗಲೂ ಅಲ್ಲಿ ಇದೆ. ಗಾಂಧೀ ಕಟ್ಟೆ ಉಳಿಸಬೇಕು ಎಂದು ಹೋರಾಟ ನಡೆಸು ವವರು ಇದರ ಬಗ್ಗೆಯೂ ಆಸ್ಥೆ ವಹಿಸುವ ಅಗತ್ಯವಿದೆ.

ಗಾಂಧಿ ಬಂದಿದ್ದರು
ಸ್ವಾತಂತ್ರ್ಯ ಚಳವಳಿ ಸಂದರ್ಭ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಪುತ್ತೂರಿಗೆ ಆಗಮಿಸಿದ್ದರು. 1934ರಲ್ಲಿ ಇಲ್ಲಿಗೆ ಆಗಮಿಸಿದ ಗಾಂಧೀಜಿ, ಇದೇ ಕಟ್ಟೆಯಲ್ಲಿ ಕುಳಿತು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ್ದರು. ಈ ನೆನಪಿನಲ್ಲಿ ಗಾಂಧಿ ಕಟ್ಟೆಯನ್ನು ನಿರ್ಮಿಸಿ, ಗಾಂಧಿ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಯಿತು. ಇದೀಗ ಗಾಂಧಿ ಕಟ್ಟೆಗೆ ರಕ್ಷಣೆ ಇಲ್ಲದಂತಾಗಿದೆ.

Advertisement

ತೆರವು ಮಾಡಲಿ
ಗಾಂಧಿಕಟ್ಟೆ ಪುತ್ತೂರಿನ ಕೇಂದ್ರಸ್ಥಾನ. ಇಲ್ಲಿ ಬಸ್‌, ರಿಕ್ಷಾಕ್ಕೆ ಸಾಕಷ್ಟು ಜನ ಕಾಯುತ್ತಿರುತ್ತಾರೆ. ಮಳೆಗಾಲದ ಸಂದರ್ಭ ಈ ಮರ ಧರೆಗುರುಳಿದರೆ, ಸಾಕಷ್ಟು ಮಂದಿ ಪ್ರಾಣ ಕಳೆದುಕೊಳ್ಳುವ ಭೀತಿ ಇದೆ. ಆದ್ದರಿಂದ ಸಂಬಂಧಪಟ್ಟ ಇಲಾಖೆಯವರು ತತ್‌ಕ್ಷಣ ಎಚ್ಚೆತ್ತುಕೊಳ್ಳಬೇಕು. ಈ ಕಟ್ಟೆಗೆ ಸರಿಯಾದ ಕಾಯಕಲ್ಪ ನೀಡಬೇಕು. ವ್ಯವಸ್ಥೆ ಮಾಡಲು ಸಾಧ್ಯ ಇಲ್ಲ ಎಂದಾದರೆ, ತೆರವು ಮಾಡಲಿ. ಗಾಂಧಿಕಟ್ಟೆಯನ್ನು ಬೇಕಿದ್ದರೆ ಉಳಿಸಿಕೊಳ್ಳಲಿ. ಆದರೆ ಜನಸಾಮಾನ್ಯರಿಗೆ ತೊಂದರೆ ಆಗದಂತೆ ಎಚ್ಚರ ವಹಿಸಲಿ.
– ಮಾಧವಿ ಮನೋಹರ್‌ ರೈ, ಗೃಹಿಣಿ, ಪುತ್ತೂರು

— ಗಣೇಶ್‌ ಎನ್‌. ಕಲ್ಲರ್ಪೆ

Advertisement

Udayavani is now on Telegram. Click here to join our channel and stay updated with the latest news.

Next