Advertisement

ನಗರ ಕೇಂದ್ರ ಗ್ರಂಥಾಲಯದಲ್ಲಿ ಪಾಲಿಕೆಯಿಂದ ಇ-ಶೌಚಾಲಯ

11:03 AM Nov 21, 2017 | Team Udayavani |

ಕಲಬುರಗಿ: ನಗರ ಕೇಂದ್ರ ಗ್ರಂಥಾಲಯಕ್ಕೆ ಆಗಮಿಸುವ ಸಾರ್ವಜನಿಕರಿಗೆ ಶೌಚಾಲಯ ಕೊರತೆ ಇದೆ. ಹಗಾಗಿ ಮಹಾನಗರ ಪಾಲಿಕೆಯಿಂದ ಇ-ಶೌಚಾಲಯ ನಿರ್ಮಿಸಲಾಗುವುದು ಎಂದು ಮಹಾನಗರ ಪಾಲಿಕೆ ಮಹಾಪೌರ ಶರಣಕುಮಾರ ಮೋದಿ ಹೇಳಿದರು.

Advertisement

ನಗರದ ಜಗತ್‌ ವೃತ್ತದಲ್ಲಿರುವ ನಗರ ಕೇಂದ್ರ ಗ್ರಂಥಾಲಯದಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಗರ ಗ್ರಂಥಾಲಯಕ್ಕೆ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಿಂದ ಅನೇಕ ವಿದ್ಯಾರ್ಥಿಗಳು ಓದಲು ಬರುತ್ತಾರೆ. ಇಲ್ಲಿ ಮಧ್ಯಾಹ್ನದ ಊಟ ಮಾಡಲು ಅವರಿಗೆ ಸೂಕ್ತವಾದ ಸ್ಥಳಾವಕಾಶ ಇಲ್ಲ. ಗ್ರಂಥಾಲಯದ ಮೊದಲನೇ ಮಹಡಿ ಕಟ್ಟಡದಲ್ಲಿ ಒಂದು ಪ್ರತ್ಯೇಕವಾದ ಊಟದ ಮನೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ನಗರ ಕೇಂದ್ರ ಗ್ರಂಥಾಲಯದ ಗ್ರಂಥಾಲಯ ಸಹಾಯಕ ದೀಪಕ ಎಂ. ಕಮತರ, ನ. 14ರಿಂದ 20ರ ವರೆಗೆ ರಾಷ್ಟ್ರವ್ಯಾಪಿಯಾಗಿ ಗ್ರಂಥಾಲಯ ಸಪ್ತಾಹ ಆಚರಿಸಲಾಗಿದೆ. ಸಪ್ತಾಹದ ಅಂಗವಾಗಿ ಒಂದು ವಾರ ಹಬ್ಬದ ರೀತಿಯಲ್ಲಿ ಕಲಬುರಗಿಯಲ್ಲಿ ವಿವಿಧ ಬಡಾವಣೆಗಳ ಗ್ರಂಥಾಲಯಗಳಲ್ಲಿ ಪುಸ್ತಕ ಪ್ರದರ್ಶನ, ಸದಸ್ಯತ್ವ ನೋಂದಣಿ ಅಭಿಯಾನ ಹಾಗೂ ಮಕ್ಕಳಿಗಾಗಿ ವಿವಿಧ ಕಾರ್ಯಕ್ರಮ, ಸ್ಪರ್ಧೆಗಳನ್ನು ಬಡಾವಣೆಗಳಲ್ಲಿರುವ ಜನರಲ್ಲಿ ಗ್ರಂಥಾಲಯಗಳ ಮಹತ್ವದ ಕುರಿತು ಮನವರಿಕೆ ಮಾಡಲಾಗಿದೆ ಎಂದು ಹೇಳಿದರು.

ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿ ಕಾರ್ಯಕ್ರಮದ ಸದಸ್ಯ ಡಾ| ಸುರೇಶ ಜಂಗೆ ಮಾತನಾಡಿ, ಇಂದಿನ ದಿನಗಳಲ್ಲಿ ಜನರಿಗೆ ಪುಸ್ತಕ ಓದುವ ಹವ್ಯಾಸ ಬೆಳೆಸುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ನಗರ ಕೇಂದ್ರ ಗ್ರಂಥಾಲಯ ಉತ್ತಮ ಕೆಲಸ ಮಾಡುತ್ತಿದೆ. ಗ್ರಂಥಾಲಯದ ಸಿಬ್ಬಂದಿ ಗ್ರಂಥಾಲಯಕ್ಕೆ ಆಗಮಿಸುವ ಓದುಗರೊಂದಿಗೆ ನಗು ಮುಖದಿಂದ ವ್ಯವಹರಿಸಬೇಕು ಎಂದು ಹೇಳಿದರು.

ಖ್ಯಾತ ಸಾಹಿತಿ ವಸಂತ ಕುಷ್ಟಗಿ ಮಾತನಾಡಿ, ಚಿತ್ತಾಪುರ ತಾಲೂಕು ನಾಗಾವಿಯಲ್ಲಿ ಪುರಾತನ ಗ್ರಂಥಾಲಯ ಇರುವ ಬಗ್ಗೆ ಶಿಲಾಶಾಸನದಲ್ಲಿ ನಮೂದಿಸಲಾಗಿದೆ ಎಂದು ಹೇಳಿದರು. ಶ್ರೀ ಶರಣಬಸವೇಶ್ವರ ವಿಜ್ಞಾನ ಪದವಿ
ಮಹಾವಿದ್ಯಾಲಯದ ಮುಖ್ಯಸ್ಥ ಡಾ| ಬಿ. ರಾಮಕೃಷ್ಣ ರೆಡ್ಡಿ ಮಾತನಾಡಿದರು. 

Advertisement

ನಗರ ಗ್ರಂಥಾಲಯ ಪ್ರಾಧಿಕಾರ ಹಾಗೂ ಸದಸ್ಯರು ಹಾಗೂ ಮಹಾನಗರ ಪಾಲಿಕೆ ಸದಸ್ಯ ಅಬ್ದುಲ್‌ ರಹೀಮ್‌, ನಗರ ಕೇಂದ್ರ ಗ್ರಂಥಾಲಯ ಉಪ ನಿರ್ದೇಶಕ ಅಜಯಕುಮಾರ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಡಾ| ಎಸ್‌. ಆರ್‌. ರಂಗನಾಥನ್‌ ಅವರ ಭಾವಚಿತ್ರಕ್ಕೆ ಪೂಜೆಸಲ್ಲಿಸಿ ಜ್ಯೋತಿ ಬೆಳಗಿಸಿ ಪುಸ್ತಕ ಪ್ರದರ್ಶನ ಹಾಗೂ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ನಗರದ ಕ್ಯಾಂಬ್‌ಲ್ಸ್‌ ಶಾಲೆಯಲ್ಲಿ ಶಾಲಾ ಮಕ್ಕಳಿಗಾಗಿ ವಿವಿಧ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಚಿತ್ರ ಬರೆಯುವ
ಸ್ಪರ್ಧೆ, ಭಾಷಣ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಉತ್ತಮ ಓದುಗ, ಉತ್ತಮ ಸದಸ್ಯ ಸ್ಪರ್ಧೆಯಲ್ಲಿ ಪ್ರಥಮ, ದ್ವತೀಯ ಹಾಗೂ ತೃತೀಯ ಸ್ಥಾನ ಪಡೆದವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಗ್ರಂಥಾಲಯದಲ್ಲಿ ಅಧ್ಯಯನ ಮಾಡಿ ಸರ್ಕಾರಿ ನೌಕರಿ ಪಡೆದ ಓದುಗ, ಇಲಾಖೆಯಲ್ಲಿ ಸುಮಾರು ವರ್ಷಗಳಿಂದ ಉತ್ತಮ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳನ್ನು ಗುರುತಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next