Advertisement

ಮರುಭೂಮಿ, ನೀರಿನ ಬಾಟಲಿ, ಬದುಕು

05:41 PM Mar 23, 2019 | |

ನಿಜಕ್ಕೂ ಅಲ್ಲಿ ಗುಡಿಸಲು ಇದೆಯೋ ಅಥವಾ ಮರೀಚಿಕೆಯೋ? ದಾಹ ಹೆಚ್ಚಾಗಿ ತಾನು ಭ್ರಮಿಸುತ್ತಿದ್ದೀನೋ? ಎಂಬ ಗೊಂದಲ ಅವನಿಗೆ ಆರಂಭವಾಯಿತು. ಆದರೆ ಆತನ ಮುಂದೆ ಬೇರಾವ ಆಯ್ಕೆಯೂ ಇರಲಿಲ್ಲ. ಇರುವ ಶಕ್ತಿಯನ್ನೆಲ್ಲ ಒಗ್ಗೂಡಿಸಿಕೊಂಡು ಮುಂದೆ ಸಾಗಿದ…

Advertisement

ಅದೊಂದು ವಿಶಾಲ ಮರುಭೂಮಿ. ಬೇಸಗೆಯ ಸಮಯವಾಗಿದ್ದರಿಂದ ಧಗೆ ವಿಪರೀತವಿತ್ತು, ಕಣ್ಣು ಕುರುಡಾಗಿಸುವಷ್ಟು ಬಿಸಿಲಿನ ಕಿರಣಗಳು ಮರಳನ್ನು ಅಪ್ಪಳಿಸಿ ಪ್ರತಿಫ‌ಲಿಸುತ್ತಿದ್ದವು. ಇಂಥ ವಿಷಮ ಮರುಭೂಮಿಯಲ್ಲೇ ವ್ಯಕ್ತಿಯೊಬ್ಬ ಪ್ರಯಾಣ ಆರಂಭಿಸಿದ. ಆತ ತನ್ನ ಜೊತೆ ನೀರಿನ ದೊಡ್ಡ ಬಾಟಲಿಯೊಂದನ್ನೂ ಇಟ್ಟುಕೊಂಡಿದ್ದ. ಎರಡು ದಿನದ ಪಯಣವದು. ಆದರೆ ಎರಡನೆಯ ದಿನ ಆ ಪಯಣಿಗ ದಾರಿತಪ್ಪಿಬಿಟ್ಟ. ಅಲೆದೂ ಅಲೆದೂ ಹೈರಾಣಾದ. ಅಷ್ಟರಲ್ಲಾಗಲೇ  ಆತನೊಂದಿಗಿದ್ದ ನೀರೂ ಖಾಲಿಯಾಗಿಬಿಟ್ಟಿತ್ತು! ದಾಹ ಹೆಚ್ಚಾಗಲಾರಂಭಿಸಿತು. ನೀರು ಸಿಗದೇ ಹೋದರೆ ತನ್ನ ಸಾವು ನಿಶ್ಚಿತ ಎನ್ನುವುದು ಅವನಿಗೆ ಖಾತ್ರಿಯಾಗಿಬಿಟ್ಟಿತ್ತು. ಬಿಸಿಲಿನ ಬೇಗೆಗೆ ಅತಿಯಾಗಿ ಬಳಲಿದ್ದರೂ ಆ ವ್ಯಕ್ತಿ ಭರವಸೆ ಕಳೆದುಕೊಳ್ಳಲಿಲ್ಲ. ಕಾಲುಗಳು ನಿಶ್ಶಕವಾಗಿದ್ದವು. ಆದರೂ ನೀರನ್ನು ಹುಡುಕುತ್ತಾ ಮುಂದೆ ಸಾಗುತ್ತಲೇ ಹೋದ. 

ಕೊನೆಗೂ ಸ್ವಲ್ಪ ದೂರದಲ್ಲಿ ಅವನಿಗೆ ಅಸ್ಪಷ್ಟವಾಗಿ ಒಂದು ಗುಡಿಸಲು ಕಾಣಿಸಿತು. ನಿಜಕ್ಕೂ ಅಲ್ಲಿ ಗುಡಿಸಲು ಇದೆಯೋ ಅಥವಾ ಮರೀಚಿಕೆಯೋ? ದಾಹ ಹೆಚ್ಚಾಗಿ ತಾನು ಭ್ರಮಿಸುತ್ತಿದ್ದೀನೋ? ಎಂಬ ಗೊಂದಲ ಅವನಿಗೆ ಆರಂಭವಾಯಿತು. ಆದರೆ ಆತನ ಮುಂದೆ ಬೇರಾವ ಆಯ್ಕೆಯೂ ಇರಲಿಲ್ಲ. ಇದ್ದಬದ್ದ ಶಕ್ತಿಯನ್ನೆಲ್ಲ ಒಗ್ಗೂಡಿಸಿಕೊಂಡು ಮುಂದೆ ಸಾಗಿದ…

ಅದು ಅವನ ಭ್ರಮೆಯಾಗಿರಲಿಲ್ಲ, ಮರೀಚಿಕೆಯೂ ಆಗಿರಲಿಲ್ಲ. ನಿಜಕ್ಕೂ ಅಲ್ಲೊಂದು ಗುಡಿಸಲಿತ್ತು!  ಗುಡಿಸಲಲ್ಲಿ ಚೂರಾದರೂ ನೀರಿರಬಹುದು ಎಂಬ ಆಶಾಭಾವನೆ ಚಿಗುರೊಡೆದು ಒಳ ಹೊಕ್ಕ. ಗುಡಿಸಲು ಖಾಲಿ ಇತ್ತು. ಬಹಳ ದಿನದ ಹಿಂದೆಯೇ ಅದರಲ್ಲಿರುವವರು ಹೊರಟುಹೋಗಿದ್ದರು. ಒಳಗೆ ಕಣ್ಣಾಡಿಸುತ್ತಿದ್ದಂತೆಯೇ ಅವನ ಎದೆಬಡಿತ ಒಮ್ಮೆ ಲಯತಪ್ಪಿತು. ಖುಷಿಯಿಂದ ಕುಣಿದಾಡುವಂತಾಯಿತು ಅವನಿಗೆ! ಗುಡಿಸಲ ಒಂದು ಮೂಲೆಯಲ್ಲಿ ನೀರಿನ ಹ್ಯಾಂಡ್‌ ಪಂಪ್‌ ಇತ್ತು! 

ಇವನು ಅವಸರದಿಂದ ಅದರತ್ತ ಹೋಗಿ ಆ ಹ್ಯಾಂಡ್‌ ಪಂಪ್‌ನ ಹ್ಯಾಂಡಲ್‌ ಅನ್ನು ಒತ್ತಲಾರಂಭಿಸಿದ…ಒಂದು ಬಾರಿ, ಎರಡು ಬಾರಿ, ಮೂರು ಬಾರಿ…ಎಷ್ಟೇ ಒತ್ತಿದರೂ ನೀರು ಹೊರಬರುವ ಸೂಚನೆಯೇ ಸಿಗುತ್ತಿಲ್ಲ. ಪಂಪ್‌ ಒತ್ತುತ್ತಾ ಅದಕ್ಕೆ ಕಿವಿಯಿಟ್ಟು ಕೇಳಿಸಿಕೊಂಡ, ನೀರಿನ ಸದ್ದಿಲ್ಲ. ಇನ್ನಷ್ಟು, ಮತ್ತಷ್ಟು ಶ್ರಮ ಹಾಕಿದ…ಎಷ್ಟು ಬಾರಿ ಒತ್ತಿದರೂ ಪಂಪ್‌ನಿಂದ ನೀರು ಬರಲೇ ಇಲ್ಲ. ಇವನ ಕೈಗಳು ಸೋಲಲಾರಂಭಿಸಿದ್ದವು. ಶಕ್ತಿಯನ್ನೆಲ್ಲಾ ಒಗ್ಗೂಡಿಸಿ ಕೊನೆಯ ಬಾರಿಗೆ ಎಂಬಂತೆ ಜೋರಾಗಿ ಒತ್ತಿದ…. ಊಹೂಂ…ನೀರು ಬರಲೇ ಇಲ್ಲ. ಸಿಟ್ಟು ಮತ್ತು ನಿರಾಸೆಯಿಂದ ಆ ವ್ಯಕ್ತಿ ಕುಸಿದು ಕುಳಿತ…

Advertisement

“ಬಹುಶಃ ನಾನು ಇವತ್ತು ದಾಹದಿಂದ ಸಾಯಬೇಕೆಂದು ಹಣೆಯಲ್ಲಿ ಬರೆದಿರಬಹುದು’ ಎಂದುಕೊಂಡು ನಿಟ್ಟುಸಿರುಬಿಟ್ಟ. ಆ ನಿರಾಸೆ ತುಂಬಿದ ಕಣ್ಣಲ್ಲೇ ಗುಡಿಸಲಲ್ಲಿ ಮತ್ತೂಮ್ಮೆ ಕಣ್ಣಾಡಿಸಿದ…ಮತ್ತೂಂದು ಆಶಾಕಿರಣ! ಗುಡಿಸಲ ಮೂಲೆಯೊಂದರಲ್ಲಿ ನೀರು ತುಂಬಿದ ಬಾಟಲಿಯಿತ್ತು! ಇವನು ಛಂಗನ್ನೆದ್ದು ಆ ಬಾಟಲಿಯನ್ನು ಎತ್ತಿಕೊಂಡ. ನೀರು ಆವಿಯಾಗದಿರಲೆಂದು ಕಾರ್ಕ್‌ನಿಂದ ಅದನ್ನು ಮುಚ್ಚಲಾಗಿತ್ತು. ಅಲ್ಲದೇ ಆ ಬಾಟಲಿಗೆ ಹಾಳೆಯೊಂದನ್ನು ಕಟ್ಟಲಾಗಿತ್ತು. ಅದರಲ್ಲಿನ ಬರಹ ಕಣ್ಣಿಗೆ ಬಿದ್ದದ್ದೇ ಅವನು ಗೊಂದಲಕ್ಕೆ ಬಿದ್ದ. “ಪಂಪ್‌ನಿಂದ ನೀರು ಹೊರ ಬರಬೇಕೆಂದರೆ, ಮೊದಲು ಈ ಬಾಟಲಿಯಲ್ಲಿನ ನೀರನ್ನೆಲ್ಲ ಆ ಪಂಪ್‌ ಒಳಕ್ಕೆ ಸುರಿಯಿರಿ. ಆಮೇಲೆ ಮತ್ತೆ ಈ ಬಾಟಲಿಯಲ್ಲಿ ನೀರು ತುಂಬಿಡಿ’ ಎಂದು ಅದರ ಮೇಲೆ ಬರೆಯಲಾಗಿತ್ತು! 

ಆ ಚೀಟಿಯಲ್ಲಿ ಬರೆದಂತೆ ಬಾಟಲಿಯಲ್ಲಿನ ನೀರನ್ನೆಲ್ಲ ಪಂಪಿಗೆ ಸುರಿಯಬೇಕೋ ಅಥವಾ ಆ ಬರಹವನ್ನು ಕಡೆಗಣಿಸಿ, ನೀರು ಕುಡಿದು ದಾಹ ಇಂಗಿಸಿಕೊಳ್ಳಬೇಕೋ? ಇವನೋ ಗೊಂದಲದ ಗೂಡಾಗಿಬಿಟ್ಟ. “ನೀರನ್ನು ಪಂಪಿನೊಳಕ್ಕೆ ಸುರಿದ ನಂತರ ಅದು ಕೆಲಸ ಮಾಡದೇ ಹೋದರೆ? ಅಥವಾ ಈ ಚೀಟಿಯಲ್ಲಿ ಸರಿಯಾಗಿಯೇ ಬರೆದಿರಬಹುದಲ್ಲ? ನಿಜಕ್ಕೂ ನೀರು ಹೊರಬರಬಹುದಲ್ಲ? ಬರದೇ ಹೋದರೆ? ಈ ರಿಸ್ಕ್ ನಿಜಕ್ಕೂ ತೆಗೆದುಕೊಳ್ಳಬೇಕಾ? ಆ ಚೀಟಿಯಲ್ಲಿ ಬರೆದದ್ದೆಲ್ಲ ಸುಳ್ಳಾಗಿದ್ದರೆ? ನನಗೆ ಸಿಕ್ಕ ಕೊನೆಯ ಅವಕಾಶವನ್ನೂ ಕಳೆದುಕೊಳ್ಳಬೇಕಾ?’ 

ನಿಮಗೂ ಕೂಡ ಜೀವನದಲ್ಲಿ ಈ ರೀತಿಯ ಸನ್ನಿವೇಶಗಳು ಎದುರಾಗಿವೆಯೇ? ನೀವೂ ಇಂಥದ್ದೊಂದು ಸನ್ನಿವೇಶದಲ್ಲಿ ಸಿಲುಕಿದರೆ ಏನು ಮಾಡುತ್ತೀರಿ? ಕೇವಲ ಎರಡೇ ದಾರಿಗಳು ನಿಮಗೆ ಎದುರಾದರೆ ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತೀರಿ? ಯಾವ ದಾರಿ ಕೆಲಸ ಮಾಡುತ್ತದೆ ಎಂಬ ಅನಿಶ್ಚಿತತೆ ಕಾಡಿದಾಗ ಏನು ಮಾಡುತ್ತೀರಿ?  ಏನು ಮಾಡಬೇಕು ಗೊತ್ತೇ? ಯಾವುದಾದರೂ ಒಂದು ದಾರಿಯನ್ನು ಆಯ್ಕೆ ಮಾಡಿಕೊಳ್ಳಬೇಕು! ಆ ಆಯ್ಕೆ ಎದುರೊಡ್ಡುವ ಪರಿಣಾಮಗಳನ್ನು ಎದುರಿಸಲು ಸಿದ್ಧರಾಗಬೇಕು. ಬಹಳ ಜನಕ್ಕೆ ಜೀವನದಲ್ಲಿ ಈ ರೀತಿಯ ಎರಡು ಆಯ್ಕೆಗಳು ಎದುರಾದಾಗ, ಅವರಿಗೆ ಒಂದು ನಿರ್ಧಾರಕ್ಕೆ ಬರಲು ಸಾಧ್ಯವಾಗುವುದೇ ಇಲ್ಲ. ಏಕೆಂದರೆ ಅವರಿಗೆ ಪರಿಣಾಮದ ಬಗ್ಗೆ ಹೆದರಿಕೆ ಇರುತ್ತದೆ. ತಮ್ಮ ಜೀವನವನ್ನು ಗೊಂದಲದಲ್ಲಿಯೇ, ಒದ್ದಾಟದಲ್ಲಿಯೇ ಕಳೆಯುವುದನ್ನು ಅವರು ಮುಂದುವರಿಸುತ್ತಾರೆ. 

ಗುಡಿಸಲ್ಲಿದ್ದ ಆ ವ್ಯಕ್ತಿ ರಿಸ್ಕ್ ತೆಗೆದುಕೊಳ್ಳಲು ನಿರ್ಧರಿಸಿಬಿಟ್ಟ. ನಡುಗುವ ಕೈಗಳಲ್ಲಿ ಆ ಬಾಟಲಿಯನ್ನು ಹೊತ್ತು ಹ್ಯಾಂಡ್‌ಪಂಪ್‌ನತ್ತ ನಿಧಾನಕ್ಕೆ ಹೆಜ್ಜೆ ಹಾಕಿದ. ಗಟ್ಟಿ ಮನಸ್ಸು ಮಾಡಿ, ಜೋರಾಗಿ ಉಸಿರುಬಿಟ್ಟು ನೀರನ್ನೆಲ್ಲ ಪಂಪ್‌ನೊಳಕ್ಕೆ ಸುರಿದುಬಿಟ್ಟ! ಕಣ್ಣು ಮುಚ್ಚಿ ದೇವರನ್ನೊಮ್ಮೆ ಪ್ರಾರ್ಥಿಸಿ ಪಂಪ್‌ನ ಹಿಡಿಕೆಯನ್ನು ಪ್ರಸ್‌ ಮಾಡಲಾರಂಭಿಸಿದ…ಮೂರು ನಾಲ್ಕು ಬಾರಿ ಪ್ರಸ್‌ ಮಾಡುತ್ತಿದ್ದಂತೆಯೇ ಪಂಪ್‌ನ ಒಡಲಿಂದ ಬುಳುಬುಳುಬುಳುಬುಳು ಸದ್ದು ಬರಲಾರಂಭಿಸಿತು! ಧುತ್ತನೇ ಒಮ್ಮೆಗೇ ನೀರು ಹೊರಗೆ ಹರಿಯಲಾರಂಭಿಸಿತು. ಇವನು ಆ ತಣ್ಣನೆಯ ಆಹ್ಲಾದಕಾರಿ ನೀರನ್ನು ದೇಹ-ಮನಸ್ಸು ತಣಿಯುವವರೆಗೂ ಕುಡಿದ. ಜೀವನ ಸಂಜೀವಿನಿಯಾದ ನೀರನ್ನು ಕುಡಿದದ್ದೇ ಅವನಲ್ಲಿ ಶಕ್ತಿ ಮರುಕಳಿಸಿಬಿಟ್ಟಿತು. ಆಗಲೇ ಅವನಿಗೆ ಗುಡಿಸಲ ಮತ್ತೂಂದು ಭಾಗದಲ್ಲಿ ಬಿದ್ದಿದ್ದ ಹಾಳೆ ಮತ್ತು ಪೆನ್ಸಿಲ್‌ ಕಣ್ಣಿಗೆ ಬಿತ್ತು. ಅದೇನಿರಬಹುದೆಂದು ಕುತೂಹಲದಿಂದ ಹೋಗಿ ನೋಡಿದರೆ ಮರುಭೂಮಿಯ ನಕಾಶೆ! ಈ ಗುಡಿಸಲು ಎಲ್ಲಿದೆ ಎನ್ನುವ ಗುರುತನ್ನೂ ಪೆನ್ಸಿಲ್‌ನಿಂದ ಮಾಡಲಾಗಿತ್ತು. ಅವನು ತಲುಪಬೇಕಾದ ಸ್ಥಾನ ಹತ್ತಿರವೇನೂ ಇರಲಿಲ್ಲ. ಆದರೆ ಅಲ್ಲಿಗೆ ತಲುಪುವಷ್ಟು ಶಕ್ತಿ ಅವನಿಗೀಗ ಬಂದಿತ್ತು. 

ಹೊರಗೆ ಹೋಗುವ ಮುನ್ನ ತಾನು ತಂದಿದ್ದ ಬಾಟಲಿಯಲ್ಲಿ ನೀರು ತುಂಬಿಸಿಕೊಂಡ. ಆ ಗುಡಿಸಲಲ್ಲಿದ್ದ ಬಾಟಲಿಯಲ್ಲೂ ನೀರು ತುಂಬಿಸಿದ. ಅದಕ್ಕೆ ಕಟ್ಟಿದ ಚೀಟಿಯನ್ನು ಮತ್ತೂಮ್ಮೆ ಓದಿದ….ಆ ಪೆನ್ಸಿಲ್‌ ಅನ್ನು ಎತ್ತಿಕೊಂಡು ಆ ಚೀಟಿಯಲ್ಲಿ ಬರೆದಿದ್ದ ನಿರ್ದೇಶನದ ಕೆಳಗೆ ತಾನೂ ಒಂದು ಸಾಲು ಸೇರಿಸಿದ. ಆ ಚೀಟಿಯ ಕಳಗೆ ಅವನೇನು ಬರೆದ ಗೊತ್ತೇ? “ನನ್ನನ್ನು ನಂಬಿ, ಈ ದಾರಿ ಕೆಲಸ ಮಾಡುತ್ತದೆ!’

ನಮಗೆಲ್ಲರಿಗೂ ಈ ರೀತಿಯ ಜೀವನ್ಮರಣದ ಆಯ್ಕೆಗಳು ಜೀವನದಲ್ಲಿ ನಿತ್ಯ ಎದುರಾಗದೇ ಇರಬಹುದು. ಆದರೂ ನಮ್ಮ ಮುಂದೆ ನಮ್ಮವೇ ಆದ ಸಮಸ್ಯೆಗಳು, ಆಯ್ಕೆಗಳು, ಸವಾಲುಗಳು ಉದ್ಭವವಾಗುತ್ತಲೇ ಇರುತ್ತವೆ. ನಾವಾಗ ಒಂದು ದಾರಿಯನ್ನು ಆಯ್ಕೆಮಾಡಿಕೊಂಡುಬಿಡಬೇಕು. ಆ ಆಯ್ಕೆಯಿಂದ ನಮಗೆ ಲಾಭವಾದರೆ ಫೆಂಟ್ಯಾಸ್ಟಿಕ್‌. ಆಗ ನಾವೂ ಜನರಿಗೆ ಹೇಳಬಹುದು- “ನನ್ನನ್ನು ನಂಬಿ, ಇದು ಕೆಲಸ ಮಾಡುತ್ತದೆ!’ ಒಂದು ವೇಳೆ ನಾವು ಮಾಡಿಕೊಂಡ ಆಯ್ಕೆ ತಪ್ಪಾದರೆ? ಆಗಲೂ ನಾವು ನಮ್ಮ ತಪ್ಪುಗಳನ್ನು, ಅನುಭವವನ್ನು, ಪಾಠವನ್ನು ಜನರೊಂದಿಗೆ ಹಂಚಿಕೊಂಡು ಅವರು ಸರಿಯಾದ ಹಾದಿಯಲ್ಲಿ  ಸಾಗುವುದಕ್ಕೆ ಸಹಾಯ ಮಾಡಬಹುದು….

ಶುಭಮಸ್ತು!

ಗೌರ್‌ ಗೋಪಾಲದಾಸ್‌
ಸಂತ, ಲೇಖಕರು, ಪ್ರೇರಣಾದಾಯಕ ಭಾಷಣಕಾರರು

Advertisement

Udayavani is now on Telegram. Click here to join our channel and stay updated with the latest news.

Next