Advertisement

ರಾಜ್ಯದ ಬೊಕ್ಕಸ ಲೂಟಿ ಹೊಡೆದ ಕಾಂಗ್ರೆಸ್‌

04:34 PM May 01, 2018 | |

ಯಲ್ಲಾಪುರ: ಸಿದ್ದರಾಮಯ್ಯ ನೇತೃತ್ವದ ಲೂಟಿಕೋರ ಸರ್ಕಾರ ರಾಜ್ಯದ ಬೊಕ್ಕಸವನ್ನೇ ಲೂಟಿ ಹೊಡೆದಿದೆ.

Advertisement

ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ಗರೀಬಿ ಹಠಾವೊ ಘೋಷಣೆ ಮಾಡುತ್ತ ಬಂದಿರುವ ಕಾಂಗ್ರೆಸ್‌ ದೇಶದ ಜನರ ಬಡತನ ತೊಲಗಿಸಿಲ್ಲ. ಕಾಂಗ್ರೆಸ್‌ ಚೇಲಾಗಳ ಬಡತನ ದೂರ ಮಾಡಿಕೊಂಡಿದೆ. ಜನರ ವಿಶ್ವಾಸಕ್ಕೆ ಧಕ್ಕೆ ತಂದಿದೆ. ವ್ಯಾಪಕ ಭ್ರಷ್ಟಾಚಾರ ಎಸಗಿದೆ. ಮತದ ಸಲುವಾಗಿ ಕರ್ನಾಟಕ ಸರ್ಕಾರ ಜಾತಿ ಜಾತಿಯ ನಡುವೆ ಒಡಕು ಹುಟ್ಟಿಸಿ ಧರ್ಮವನ್ನು ಒಡೆಯುತ್ತಿದೆ. ಇದನ್ನು ಕಿತ್ತಸೆಯಿರಿ ಎಂದು ಕೇಂದ್ರ ಸಾರಿಗೆ ಹಾಗೂ ಬಂದರು ಸಚಿವ ನಿತಿನ ಗಡ್ಕರಿ ಹೇಳಿದರು.

ವೈಟಿಎಸ್‌ಎಸ್‌ ಮೈದಾನದಲ್ಲಿ ಬಿಜೆಪಿ ಅಭ್ಯರ್ಥಿ ವಿ. ಎಸ್‌. ಪಾಟೀಲ ಪರ ಪ್ರಚಾರ ಸಭೆಯಲ್ಲಿ ಮಾತನಾಡಿ, ದೇಶದಲ್ಲಿ ಬಿಜೆಪಿಯಿಂದ ಮಾತ್ರ ಭ್ರಷ್ಟಾಚಾರ ರಹಿತ ಆಡಳಿತ ಸಾಧ್ಯ. ಕರ್ನಾಟಕದ ರಸ್ತೆ ಅಭಿವೃದ್ಧಿಗೆ ಕೇಂದ್ರದಿಂದ 2 ಲಕ್ಷ ಕೋಟಿಗಿಂತ ಅಧಿಕ ಅನುದಾನ ನೀಡಲಾಗಿದೆ. ಆದರೆ ಅದನ್ನು ತಮ್ಮ ಸಾಧನೆಯೆಂದು ಈ ಸಿದ್ದರಾಮಯ್ಯ ಕಾಂಗ್ರೆಸ್‌ ಸರ್ಕಾರ ಹೇಳಿಕೊಳ್ಳುತ್ತಿದೆ. ಯಲ್ಲಾಪುರದಲ್ಲೂ ರಾಷ್ಟ್ರೀಯ ಹೆದ್ದಾರಿ ಪಕ್ಕ 17 ಕೋಟಿ ವೆಚ್ಚದ ಕಾಂಕ್ರಿಟ್‌ ಗಟಾರ ಕಾಮಗಾರಿ ನಡೆಯುತ್ತಿದೆ. ಇಲಕಲ್‌ ಕೈಗಾ, ಖಾನಾಪುರ ತಾಳಗುಪ್ಪ ಈ ಎಲ್ಲಾ ರಸ್ತೆ ಸುಧಾರಣಾ ಕಾಮಗಾರಿಗಳು ಕೇಂದ್ರದ್ದೇ ಆಗಿವೆ. ಆದರೆ ಅದನ್ನು ತಮ್ಮ ಸಾಧನೆಯೆಂದು ಕಾಂಗ್ರೆಸ್‌ ಹೇಳಿಕೊಳ್ಳುತ್ತಿದೆ. ಇದೇ ಇವರ ಸಾಧನೆ ಹೇಳಿಕೊಳ್ಳುವ ವಿಧಾನ. ಮದುವೆಯಾಗಿದ್ದು ನಾವು, ಮಕ್ಕಳಾದದ್ದೂ ನಮಗೆ. ಆದರೆ ಸಿಹಿ ಹಂಚಿ ಸಂಭ್ರಮಿಸುತ್ತಿರುವುದು ಮಾತ್ರ ಕಾಂಗ್ರೆಸಿನವರು ಎಂದರು.

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದರೆ ರಾಜ್ಯದ ವಿಕಾಸ ಸಾಧ್ಯ. ನದಿಗಳ ಜೋಡಣೆ ಮೂಲಕ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ತಮಿಳುನಾಡು ರಾಜ್ಯಗಳ ನೀರಿನ ಸಮಸ್ಯೆ ಪರಿಹರಿಸಲಾಗುವುದು. ದೇಶದ ಭವಿಷ್ಯ ಬದಲಾಯಿಸುವ ಪ್ರಯತ್ನ ಕೇಂದ್ರ ಸರ್ಕಾರದಿಂದ ನಡೆಯುತ್ತಿದೆ. ಬದಲಿ ಇಂಧನಗಳ ಬಳಕೆ, ಹೈನುಗಾರಿಕೆ, ಕೃಷಿಗೆ ಉತ್ತೇಜನ ನೀಡುವ ಮೂಲಕ ರೈತರ ಸ್ವಾವಲಂಬನೆಗೆ ಯತ್ನಿಸಲಾಗುತ್ತಿದೆ. ಹಳ್ಳಿಗಳಲ್ಲಿನ ಕಚ್ಚಾ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸಿಕೊಡುವ ಮೂಲಕ ಹೊರಗಿನಿಂದ ಆಮದು ಮಾಡಿಕೊಳ್ಳುವ ಪ್ರಮಾಣವನ್ನು ಕಡಿಮೆ ಮಾಡಬೇಕು ಎಂದರು.

ಅಭ್ಯರ್ಥಿ ವಿ.ಎಸ್‌. ಪಾಟೀಲ ಮಾತನಾಡಿ, ಈ ಹಿಂದೆ2008 ರಲ್ಲಿ ಊರಿನ ಮಗನಿಗೆ ಆಶೀರ್ವಾದ ಮಾಡಿದ್ದೀರಿ. ಈಗ ದತ್ತುಪುತ್ರನಾಗಿ ನನ್ನನ್ನು ಸ್ವೀಕರಿಸಿ ಆಶೀರ್ವದಿಸುವ ಮೂಲಕ ಬಿಜೆಪಿಯನ್ನು ಗೆಲ್ಲಿಸಬೇಕೆಂದರು. ಗುಡ್ಡಗಾಡು ಪ್ರದೇಶಗಳಿಂದ ಕೂಡಿದ ಯಲ್ಲಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 200 ಕಿಮೀ ರಸ್ತೆ ಅಭಿವೃದ್ಧಿ ಕಲ್ಪಿಸಿಕೊಡಬೇಕು. ಪಟ್ಟಣದಲ್ಲಿ ಬೈಪಾಸ್‌ ನಿರ್ಮಿಸಿಕೊಡಬೇಕು.

Advertisement

ಕ್ಷೇತ್ರದ ತಾ.ಪಂ, ಜಿ.ಪಂ ಹಾಗೂ ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ 3000 ಕಿ.ಮೀ ರಸ್ತೆ ಮೇಲ್ದರ್ಜೆಗೇರಿಸಿ ಅಭಿವೃದ್ಧಿಪಡಿಸಬೇಕು. ಸಿದ್ದಿ, ಗೌಳಿ, ಕುಣಬಿ, ಲಂಬಾಣಿ ಸಮುದಾಯಗಳು ವಾಸಿಸುವ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್‌ ನೀಡಬೇಕೆಂದು ಅಭ್ಯರ್ಥಿ ವಿ.ಎಸ್‌. ಪಾಟೀಲ ಮನವಿ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಗಡ್ಕರಿ, ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸಿದರೆ ಎಲ್ಲ ಬೇಡಿಕೆಗಳನ್ನೂ ಈಡೇರಿಸುವುದಾಗಿ ಭರವಸೆ ನೀಡಿದರು.

ಗುಜರಾತ್‌ ಸಂಸದ ದೇವಸಿಂಹ ಚೌಹಾಣ, ಆಸ್ಸಾಂ ಸಂಸದ ವಿಜಯಕುಮಾರ ಗುಪ್ತಾ, ಜಿಲ್ಲಾ ವಕ್ತಾರ ಪ್ರಮೋದ ಹೆಗಡೆ, ಪ್ರಮುಖರಾದ ಎಲ್‌.ಟಿ. ಪಾಟೀಲ, ಸದಾನಂದ ಭಟ್ಟ ನಡಗೋಡ, ರಾಘವೇಂದ್ರ ಭಟ್ಟ, ಗಣಪತಿ ಮುದ್ದೆಪಾಲ, ಗಣಪತಿ ಮಾನಿಗದ್ದೆ, ಅಶೋಕ ಚಲವಾದಿ, ಗಣಪತಿ ಬೋಳಗುಡ್ಡೆ, ಶ್ರುತಿ ಹೆಗಡೆ, ಗುಡ್ಡಪ್ಪ ಕಾತೂರ, ರೇಖಾ ಹೆಗಡೆ, ಚಂದ್ರಕಲಾ ಭಟ್ಟ, ಬಾಬಾಸಾಬ್‌ ಅಲನ್‌, ಎಲ್‌.ಆರ್‌. ಭಟ್ಟ ತೋಟ¾ನೆ, ಎನ್‌.ಕೆ. ಭಟ್ಟ ಅಗ್ಗಾಶಿಕುಂಬ್ರಿ, ಸುಮನ್‌ ಕುಲಕರ್ಣಿ ಉಪಸ್ಥಿತರಿದ್ದರು.

ತಾಲೂಕಾಧ್ಯಕ್ಷ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ಸ್ವಾಗತಿಸಿದರು. ರಾಜ್ಯ ರೈತ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಉಮೇಶ ಭಾಗÌತ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next