Advertisement

ಕೊರೊನಾ ಜತೆಗೇ ಕಾಲರಾ ಕಾಟ!

12:22 AM Mar 10, 2020 | Lakshmi GovindaRaj |

ಬೆಂಗಳೂರು: ನಗರದಲ್ಲಿ ಕೊರೊನಾ ಮೊದಲ ಪ್ರಕರಣ ದೃಢವಾಗಿ ಆತಂಕ ಹೆಚ್ಚಾಗಿರುವ ನಡುವೆಯೇ ವಿವಿಧ ವಾರ್ಡ್‌ಗಳಲ್ಲಿ 17 ಕಾಲರಾ ಪ್ರಕರಣಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ರಸ್ತೆ ಬದಿ ತೆರೆದಿಟ್ಟ ಆಹಾರ ಪದಾರ್ಥ ಮಾರಾಟ ಮಾಡುವುದನ್ನು ನಿಷೇಧಿಸಿ ಬಿಬಿಎಂಪಿ ಆದೇಶಿಸಿದೆ.

Advertisement

ಪುರಭವನದಲ್ಲಿ ಮೇಯರ್‌ ಹಾಗೂ ಆಯುಕ್ತರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ರೋಗ್ಯಾಧಿಕಾರಿಗಳ ತುರ್ತು ಸಭೆಯಲ್ಲಿ ಈ ಮಾಹಿತಿ ನೀಡಿದ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌, ನಗರದಲ್ಲಿ ಕೊರೊನಾ ಜತೆಗೆ, ಕಾಲರಾ ತಡೆಗೂ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದ್ದು, ರಸ್ತೆ ಬದಿ ತೆರೆದಿರಿಸಿದ ಆಹಾರ ಪದಾರ್ಥ ಮಾರಾಟ ನಿಷೇಧಿಸಲಾಗಿದೆ ಎಂದರು.

ರಸ್ತೆ ಬದಿ ತೆರೆದಿಟ್ಟ ಆಹಾರ, ಬಣ್ಣದ ನೀರಿನ ಪಾನೀಯ ಹಾಗೂ ಕತ್ತರಿಸಿಟ್ಟ ಹಣ್ಣು ಮಾರಾಟ ಮಾಡದಂತೆ ತಡೆಗಟ್ಟಬೇಕು. ಆಹಾರ ತಯಾರಿಸುವ ಸ್ಥಳ ಮತ್ತು ಆಹಾರ ಪದಾರ್ಥ ಸಂಗ್ರಹಿಸುವ ಸ್ಥಳದಲ್ಲಿನ ಸ್ವಚ್ಛತೆ ಕಾಪಾಡುವುದು. ಹೋಟೆಲ್‌, ರೆಸ್ಟೋರೆಂಟ್‌ಗಳಲ್ಲಿ ಬಿಸಿ ನೀರು ಸಿಗಲಿದೆ ಎಂಬ ನಾಮಫ‌ಲಕ ಅಳವಡಿಸಿಕೊಳ್ಳುವುದು, ಸ್ವಚ್ಛತೆ ಕಾಪಾಡಿಕೊಳ್ಳುವುದು ಕಡ್ಡಾಯ. ಅನುಮಾನ ಬಂದ ಕಡೆ ನೀರಿನ ಮಾದರಿ ಪರೀಕ್ಷೆಗೆ ಒಳಪಡಿಸುವುದೂ ಸೇರಿ ಗತ್ಯ ಕ್ರಮ ಕೈಗೊಳ್ಳುವಂತೆ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಕಾಲರಾಗೆ ಸಂಬಂಧಿಸಿದಂತೆ ಈಗಾಗಲೇ ಬೆಂಗಳೂರು ಜಲಮಂಡಳಿ ಅಧ್ಯಕ್ಷ ತುಷಾರ್‌ ಗಿರಿನಾಥ್‌ ಅವರೊಂದಿಗೆ ಚರ್ಚಿಸಿದ್ದು, ಕೊಳವೆ ಮೂಲಕ ಸರಬರಾಜು ಮಾಡುವ ಕುಡಿಯುವ ನೀರು ಪರೀಕ್ಷಿಸಲು ತಿಳಿಸಲಾಗಿದೆ. ಬೇಸಿಗೆ ಸಮಯದಲ್ಲಿ ಸಾಂಕ್ರಾಮಿಕ ರೋಗ ಬೇಗನ ಹರಡುವ ಸಾಧ್ಯತೆ ಇರುವುದರಿಂದ ಕುಡಿಯುವ ನೀರಿನಲ್ಲಿ ಕ್ಲೋರಿನ್‌ ಪ್ರಮಾಣವನ್ನು ಹೆಚ್ಚಿಸುವಂತೆ ಮನವಿ ಮಾಡಲಾಗಿದೆ ಎಂದರು.

ಕಾಲರಾ ಪ್ರಕರಣ ವರದಿಯಾಗಿರುವ ಪ್ರದೇಶಗಳಿಗೆ ಭೀಟಿ ನೀಡಿ, ಕುದಿಸಿ ಆರಿಸಿದ ನೀರು ಕುಡಿಯುವಂತೆ ಜನರಿಗೆ ಜಾಗೃತಿ ಮೂಡಿಸಲು ಆರೋಗ್ಯಾಧಿಕಾರಿಗಳ ತಂಡಕ್ಕೆ ನಿರ್ದೇಶನ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

Advertisement

ಬಿಬಿಎಂಪಿ ಸಾರ್ವಜನಿಕ ಆರೋಗ್ಯ ವಿಭಾಗದ ಮುಖ್ಯ ಆರೋಗ್ಯಾಧಿಕಾರಿ ಡಾ.ಬಿ.ಕೆ.ವಿಜಯೇಂದ್ರ ಮಾತನಾಡಿ, ಒಂದು ವಾರದಲ್ಲಿ 17 ಕಾಲರಾ ಪ್ರಕರಣ ಪತ್ತೆಯಾಗಿವೆ. ಕಾಲರಾ ಲಕ್ಷಣ ಕಾಣಿಸಿಕೊಂಡಿರುವ 17 ಮಂದಿಯೂ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಇವರು ಎಲ್ಲೆಲ್ಲಿ ಆಹಾರ, ನೀರು ಸೇವಿಸಿದ್ದರು ಎಂಬ ಮಾಹಿತಿ ಪಡೆದು, ಆ ಪ್ರದೇಶದ ನೀರಿನ ಮಾದರಿ ಸಂಗ್ರಹಿಸಿ, ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಕಾರಣ ತಿಳಿಯಲಿದೆ ಎಂದರು.

ಸ್ಯಾನಿಟೈಸರ್‌ನಿಂದ ಕೈತೊಳೆದು ಸಭಾಂಗಣ ಪ್ರವೇಶ: ಕೊರೊನಾ ವೈರೆಸ್‌ ಹರಡುವಿಕೆ ತಡೆಗೆ ಮುನ್ನೆಚ್ಚರಿಕೆ ಕ್ರಮವಾಗಿ ನೈರ್ಮಲೀಕರಣ ದ್ರಾವಣವನ್ನು (ಸ್ಯಾನಿಟೈಸರ್‌) ಪುರಭವನದಲ್ಲಿ ಸೋಮವಾರ ನಡೆದ ಪಾಲಿಕೆ ಆರೋಗ್ಯಾಧಿಕಾರಿಗಳ ತುರ್ತು ಸಭೆ ವೇಳೆ ಬಳಸಲಾಯಿತು. ಬಿಬಿಎಂಪಿ ಅಧಿಕಾರಿಗಳು, ಸಾರ್ವಜನಿಕರು ಹಾಗೂ ವಿವಿಧ ಕ್ಷೇಮಾಭಿವೃದ್ಧಿ ಸಂಘಟನೆಗೆ ಪ್ರತಿನಿಧಿಗಳು ನೂರಾರು ಜನ ಪುರಭವನದಲ್ಲಿ ಸೇರಿದ್ದರಿಂದ ಸಭಾಂಗಣದ ಒಳಗೆ ಪ್ರದೇಶಿಸುವ ಮುನ್ನ ಮೇಯರ್‌, ಆಯುಕ್ತರು ಸೇರಿದಂತೆ ಎಲ್ಲ ಅಧಿಕಾರಿಗಳ ಕೈಗೂ ದ್ರವಣ ಹಾಕಲಾಯಿತು. ಈ ವೇಳೆ ಯಾವ ರೀತಿ ಕೈತೊಳೆದುಕೊಳ್ಳಬೇಕು ಎಂಬುದನ್ನು ಮೇಯರ್‌ ಹಾಗೂ ಆಯುಕ್ತರು ಉಳಿದವರಿಗೆ ತೋರಿಸಿಕೊಟ್ಟರು.

ಆರೋಗ್ಯಾಧಿಕಾರಿಗಳ ತಪಾಸಣೆ: ಎಂ.ಜಿ.ರಸ್ತೆ, ಬ್ರಿಗೆಡ್‌ರಸ್ತೆ, ಶಾಂತಿನಗರ, ನಂಜಪ್ಪ ವೃತ್ತ, ವಿಜಯನಗರ, ಚಿಕ್ಕಪೇಟೆ, ಜಯನಗರ ಸೇರಿದಂತೆ ಹಲವು ಕಡೆದ ಪಾದಚಾರಿ ಮಾರ್ಗದಲ್ಲಿ ಹಣ್ಣು ಮಾರಾಟ ಮಾಡುತ್ತಿದ್ದ ಮಳಿಗೆ, ಹೋಟೆಲ್‌ ಸೇರಿದಂತೆ ವಿವಿಧ ಕಡೆ ಸೋಮವಾರ ಬಿಬಿಎಂಪಿ ಆರೋಗ್ಯಾಧಿಕಾರಿಗಳು ದಿಢೀರ್‌ ದಾಳಿ ನಡೆಸಿದ್ದು, ಪಾದಚಾರಿ ಮಾರ್ಗದಲ್ಲಿ ಆಹಾರ ಮಾರಾಟ ಮಾಡದಂತೆ ಸೂಚನೆ ನೀಡಿ ತೆರವುಗೊಳಿಸಿದ್ದಾರೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಕಾಲರಾ ಪ್ರಕರಣ ಪತ್ತೆಯಾದ ಪ್ರದೇಶಗಳು
ದಕ್ಷಿಣ ವಲಯ: ಬಸವನಗುಡಿಯಲ್ಲಿ 2, ಪದ್ಮನಾಭ ನಗರದಲ್ಲಿ 3, ವಿಜಯನಗರ ಹಾಗೂ ಬಿಟಿಎಂ ಲೇಔಟ್‌ನಲ್ಲಿ ತಲಾ ಒಂದು ಸೇರಿ 7 ಪ್ರಕರಣ.

ಪೂರ್ವ ವಲಯ: ನೀಲಸಂದ್ರದಲ್ಲಿ 4, ಆರ್‌.ಟಿ.ನಗರದಲ್ಲಿ 2, ಎಲ್‌ಆರ್‌ ನಗರ ಹಾಗೂ ಸಗಾಯ್‌ ಪುರದಲ್ಲಿ ತಲಾ ಒಂದು ಸೇರಿ 8 ಪ್ರಕರಣ.

ಪಶ್ಚಿಮ ವಲಯ: ಮಲ್ಲೇಶ್ವರ ಹಾಗೂ ಗೌರಿಪಾಳ್ಯದಲ್ಲಿ ತಲಾ ಒಂದು ಸೇರಿ ಎಡರಡು ಪ್ರಕರಣಗಳು ಪತ್ತೆಯಾಗಿವೆ.

ಮುಂಜಾಗ್ರತಾ ಕ್ರಮಗಳು
-ಪಾಲಿಕೆಯ ಆಸ್ಪತ್ರೆಗಳಲ್ಲಿ ಮಾಸ್ಕ್, ಸ್ಯಾನಿಟೈಸರ್‌ ವ್ಯವಸ್ಥೆ; ಸಹಾಯವಾಣಿ 104

-ವಾಣಿಜ್ಯ ವಹಿವಾಟು ನಡೆಯುವ ಪ್ರದೇಶದಲ್ಲಿ ಸ್ವಚ್ಛತೆಗೆ ಆದ್ಯತೆ

-ನಗರದ ಎಲ್ಲ ಶೌಚಾಲಯಗಳಲ್ಲಿ ಸಾಬೂನು ವ್ಯವಸ್ಥೆ ಕಡ್ಡಾಯ

ಟ್ರಿಪಲ್‌ ಲೇಯರ್‌ ಮಾಸ್ಕ್ ಬಳಸಿ: ಕೊರೊನಾ ವೈರೆಸ್‌ ಸೋಂಕು ತಡೆಯಲು ಎನ್‌-97 ಮಾಸ್ಕ್ಗಳನ್ನೇ ಬಳಸಬೇಕಿಲ್ಲ. ಟ್ರಿಪಲ್‌ ಲೇಯರ್‌ ಮಾಸ್ಕ್ ಬಳಸಿದರೆ ಸಾಕು. ಇನ್ನು ಹೊರ ದೇಶಕ್ಕೆ ಹೋಗಿ ಬಂದವರ ಬಗ್ಗೆ ಎಚ್ಚರಿಕೆ ಇರಲಿ. ಯಾರಾದರು ಹೊರದೇಶಕ್ಕೆ ಹೋಗಿ ಬಂದರೆ ತಕ್ಷಣ ಮಾಹಿತಿ ನೀಡಿ. ಪಾಲಿಕೆ ಆರೋಗ್ಯಾಧಿಕಾರಿಗಳ ತಂಡವು ಸ್ಥಳಕ್ಕೆ ಭೇಟಿ ನೀಡಿ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಾರೆ ಎಂದು ಆಯುಕ್ತ ಅನಿಲ್‌ಕುಮಾರ್‌ ಹೇಳಿದರು. ಹಾಗೇ ಈ ಬಾರಿ ಹೋಳಿ ಹಬ್ಬ ಆಚರಣೆ ಮಾಡದಂತೆ ಮನವಿ ಮಾಡಿದ ಅವರು, ಶುಚಿತ್ವಕ್ಕೆ ಒತ್ತು ನೀಡಬೇಕು ಮತ್ತು ಹಸ್ತಲಾಘವ ಮಾಡದೆ ಇರುವುದು ಉತ್ತಮ ಎಂದು ಸಲಹೆ ನೀಡಿದರು.

ಇಂದಿನಿಂದ ವಾರ್ಡ್‌ಗಳಲ್ಲಿ ದಿಢೀರ್‌ ತಪಾಸಣೆ: ಪಾಲಿಕೆ ವ್ಯಾಪ್ತಿಯ ಹಲವು ವಾರ್ಡ್‌ಗಳಲ್ಲಿ ಸ್ವಚ್ಛತೆ ಕೊರತೆ ಇದೆ. ಈ ನಡುವೆ ಕೊರೊನಾ ಭೀತಿ ಜತೆಗೆ ಕಾಲರಾ ಕೂಡ ಕಾಣಿಸಿ ಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಮಂಗಳವಾರದಿಂದ (ಮಾ.10) ಬೆಳಗ್ಗೆ 6 ಗಂಟೆಯಿಂದಲೇ ವಿವಿಧ ವಾರ್ಡ್‌ಗಳಿಗೆ ದಿಢೀರ್‌ ಭೇಟಿ ನೀಡಿ ಸ್ವಚ್ಛತೆಯ ತಪಾಸಣೆ ನಡೆಸಲು ನಿರ್ಧರಿಸಲಾಗಿದೆ ಎಂದು ಮೇಯರ್‌ ಎಂ.ಗೌತಮ್‌ಕುಮಾರ್‌ ಹೇಳಿದರು. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಮೇಯರ್‌, ವಾರ್ಡ್‌ಗಳ ದಿಢೀರ್‌ ತಪಾಸಣೆ ಮಾಡಿ ಅಧಿಕಾರಿಗಳ ಕಾರ್ಯವೈಖರಿಯನ್ನು ಪರಿಶೀಲಿಸಲಾಗುವುದು. ಬ್ಲಾಕ್‌ಸ್ಪಾಟ್‌ ಹಾಗೂ ಕರ್ತವ್ಯ ಲೋಪದಂತಹ ಪ್ರಕರಣಗಳು ಕಂಡುಬಂದರೆ ಸಂಬಂಧಪಟ್ಟವರ ಮೇಲೆ ನಿರ್ದಾಕ್ಷಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಅಂಗನವಾಡಿಗಳಿಗೂ ರಜೆ: ಕೊರೊನಾ ಸೋಂಕಿನಿಂದ ಅಂಗನವಾಡಿ ಕೇಂದ್ರದ ಮಕ್ಕಳಿಗೆ ರಕ್ಷಣೆ ನೀಡಲು ಹಾಗೂ ವೈರಸ್‌ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿರುವ ಅಂಗನವಾಡಿ ಕೇಂದ್ರಗಳಿಗೆ ಮಾ.10ರಿಂದ 17ರವರೆಗೆ ರಜೆ ಘೋಷಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆದೇಶಿಸಿದೆ. ದೇಶದಲ್ಲಿ ಏಕಾಏಕಿ ಕೊರೊನಾ ಹರಡುತ್ತಿದ್ದು, ಬಿಬಿಎಂಪಿ ಮತ್ತು ಬೆಂಗಳೂರು ಪ್ರದೇಶದಲ್ಲಿನ ಪ್ರಿ-ಕೆಜಿ, ಎಲ್‌ಕೆಜಿ ಮತ್ತು ಯುಕೆಜಿ ಶಾಲೆಗಳನ್ನು ತಕ್ಷಣದಿಂದ ಹಾಗೂ ಮುಂದಿನ ಆದೇಶವರೆಗೂ ಸ್ಥಗಿತಗೊಳಿಸಲು ಸೂಚಿಸಿರುವ ಹಿನ್ನಲೆ,

ಮುನ್ನೆಚ್ಚರಿಕೆ ಕ್ರಮವಾಗಿ ಬೆಂಗಳೂರು ಗ್ರಾಮಾಂತರದಲ್ಲಿರುವ 1229, ಬೆಂಗಳೂರು ನಗರದಲ್ಲಿ 2420 ಅಂಗನವಾಡಿ ಕೇಂದ್ರಗಳಿಗೆ ರಜೆ ನೀಡಲಾಗಿದೆ. ಬೆಂಗಳೂರು ಗ್ರಾಮಾಂತರ, ನಗರ ಜಿಲ್ಲೆ ಹೊರತು ಪಡಿಸಿ ಉಳಿದ ಜಿಲ್ಲೆಗಳಲ್ಲಿ ಅಂಗನವಾಡಿಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ರಾಜ್ಯಾದ್ಯಂತ ಇರುವ ಎಲ್ಲ ಅಂಗನವಾಡಿಗಳಲ್ಲಿ ಸ್ವಚ್ಛತೆ ಕಾಪಾಡುವುದು, ಅಗತ್ಯ ಕ್ರಮ ಕೈಗೊಳ್ಳುವುದರ ಬಗ್ಗೆ ಆದೇಶ ನೀಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕ ಕೆ.ಎ.ದಯಾನಂದ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next