Advertisement

“ಚೆಂಬೂರು ಕರ್ನಾಟಕ ಕಾಲೇಜ್‌ ಆಫ್‌ ಲಾ’ ಲೋಕಾರ್ಪಣೆ

04:07 PM Sep 12, 2017 | |

ಮುಂಬಯಿ: ಚೆಂಬೂರು ಕರ್ನಾಟಕ ಸಂಘದ ಶಿಸ್ತುಬದ್ಧ ಕಾರ್ಯಕ್ರಮ ವನ್ನು ಕಂಡು ನಿಜವಾಗಿಯೂ ಸಂಸ್ಥೆಯ ಮೇಲಿನ ಪ್ರೀತಿ ಇಮ್ಮಡಿಗೊಂಡಿದೆ.  ಸಂಘದ ಅಕ್ಷರ ದಾಸೋಹವನ್ನು ಕಂಡಾಗ ಎದೆತುಂಬಿ ಬಂತು. ನಾಲ್ಕು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು, 140ಕ್ಕೂ  ಅಧಿಕ ಶಿಕ್ಷಕವೃಂದ, ಶಿಕ್ಷಕೇತರ ಸಿಬಂದಿಯನ್ನು ಹೊಂದಿರುವ ಸಂಸ್ಥೆಯ ಸಾಧನೆ ಅನನ್ಯವಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆ ಯಶಸ್ವಿಯಾಗಿ ಅಭಿವೃದ್ಧಿಯತ್ತ ಸಾಗಬೇಕಾದರೆ ಆಡಳಿತ ಸಮಿತಿ, ಶಾಲೆಯ ಮುಖ್ಯಸ್ಥರ ದಕ್ಷ ಆಡಳಿತ, ಉತ್ತಮ ಶಿಕ್ಷಕರು, ಶಿಸ್ತುಬದ್ಧ ವಿದ್ಯಾರ್ಥಿಗಳು, ಹೆತ್ತವರು ಹೀಗೆ ಎಲ್ಲರ ಸಹಕಾರ ಅಗತ್ಯ ವಾಗಿದೆ. ಚೆಂಬೂರು ಕರ್ನಾಟಕ ಸಂಘದ ಶಿಕ್ಷಣ ವ್ಯವಸ್ಥೆಯನ್ನು ಕಂಡಾಗ ಈ ಎಲ್ಲಾ ಗುಣಗಳು ಮೇಳೈಸುತ್ತಿರುವುದು ಅಭಿಮಾನದ ಸಂಗತಿಯಾಗಿದೆ ಎಂದು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಜಸ್ಟೀಸ್‌ ಡಾ| ಶಿವರಾಜ್‌ ವಿ. ಪಾಟೀಲ್‌ ಅವರು ನುಡಿದರು.

Advertisement

ಸೆ. 10ರಂದು ಚೆಂಬೂರು ಕರ್ನಾಟಕ ಸಂಘ ಆಡಳಿತದ ನೂತನ ಚೆಂಬೂರು ಕರ್ನಾಟಕ ಕಾಲೇಜ್‌ ಆಫ್‌ ಲಾ ಶಿಕ್ಷಣ ಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಅದೆಷ್ಟೋ ಕಾನೂನು ಪದವಿ ಕಾಲೇಜುಗಳಿವೆ. ಆದರೆ ಹೆಚ್ಚಿನ ಸಂಸ್ಥೆಗಳು ಉತ್ತಮ ನ್ಯಾಯಾಧೀಶರನ್ನು ಸೃಷ್ಟಿಸುವ ಸಂಸ್ಥೆಗಳಾಗಿಲ್ಲ. ಇಂದು ಉದ್ಘಾಟನೆಗೊಂಡ ಕರ್ನಾಟಕ ಸಂಘದ ಕಾನೂನು ಕಾಲೇಜು ವಿಭಿನ್ನ ಮಟ್ಟದ ಕಾಲೇಜು ಆಗಿ ಬೆಳೆಯಬೇಕು. ಈ ಕಾಲೇಜಿನಿಂದ ವಿದ್ಯಾರ್ಥಿಗಳು ಗುಣ ಮಟ್ಟದ ಕಾನೂನು ಶಿಕ್ಷಣವನ್ನು ಮೈ ಗೂಡಿಸಿಕೊಳ್ಳುವಂತಾಗಬೇಕು. ವಿದ್ಯಾರ್ಥಿ ಗಳಿಗೆ ಉತ್ತಮ ಅಧ್ಯಯನಕ್ಕಾಗಿ ಎಲ್ಲಾ ರೀತಿಯ ಅನುಕೂಲತೆಗಳನ್ನು ಚೆಂಬೂರು ಕರ್ನಾಟಕ ಸಂಘವು ಒದಗಿಸಿ ಕೊಡುವುದರಲ್ಲಿ ಯಾವುದೇ ರೀತಿಯ ಸಂಶಯವಿಲ್ಲ. ಮುಂಬಯಿಯಲ್ಲಿ ಬಹಳಷ್ಟು ನ್ಯಾಯಾಧೀಶರು ಇದ್ದಾರೆ. ಅವರೆಲ್ಲರ ಸಹಕಾರದಿಂದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ದೊರಕುವಂತೆ ಮಾಡಬೇಕು. ಈ ಕಾಲೇಜು ಎಲ್ಲಾ ರೀತಿಯಿಂದಲೂ ಅಭಿವೃದ್ಧಿಯನ್ನು ಕಾಣು ವಂತಾಗಬೇಕು. ಶಿಕ್ಷಣ ಸಂಸ್ಥೆಯನ್ನು ಮುನ್ನಡೆಸುವ ಶಕ್ತಿಯನ್ನು ಹೊಂದಿರುವ ಆಡಳಿತ ಸಮಿತಿಗೆ ನನ್ನ ಅಭಿನಂದನೆಗಳು ಹಾಗೂ ಶುಭಹಾರೈಕೆಗಳು ಎಂದರು.

ಗಟ್ಟಿತನದ ನ್ಯಾಯಾಧೀಶರನ್ನು ಸೃಷ್ಟಿಸಲಿ:ಛಾಗ್ಲಾ
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಹಿರಿಯ ನ್ಯಾಯವಾದಿ  ಇಕ್ಬಾಲ್‌ ಛಾಗ್ಲಾ ಅವರು ಕಾನೂನು ಕಾಲೇಜಿನ ವಿವರಣ ಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿ, ಚೆಂಬೂರು ಕರ್ನಾಟಕ ಸಂಘದ ಶಿಕ್ಷಣ ಸಂಸ್ಥೆಯು ಶೈಕ್ಷಣಿಕ ರಂಗದಲ್ಲಿ ಸಾಧಿಸಿರುವ ಸಾಧನೆಯನ್ನು ಕಂಡು ಸಂತೋಷವಾಗುತ್ತಿದೆ. ಶಿಕ್ಷಣ ಸಂಸ್ಥೆಯು ನಡೆದು ಬಂದ ಸಾಧನೆಯನ್ನು ಗಮನಿಸಿದರೆ ಉದ್ಘಾಟನೆಗೊಂಡ ಕಾನೂನು ಕಾಲೇಜು ಕೂಡ ಯಶಸ್ವಿಯಾಗುವುದರಲ್ಲಿ ಸಂಶಯವಿಲ್ಲ. ವಿದ್ಯಾರ್ಥಿಗಳು ಕಾನೂನು ತಜ್ಞರಾಗಲು ಕಾನೂನು ಕಾಲೇಜಿನ ಅವಶ್ಯಕತೆ ಬಹಳಷ್ಟಿದೆ. ನ್ಯಾಯಾಂಗ ಪ್ರಜಾಪ್ರಭುತ್ವದ ಒಂದು ಅಂಗವಾಗಿದ್ದು, ಭವಿಷ್ಯದ ನ್ಯಾಯವಾದಿಗಳು ಪರಿ ಪೂರ್ಣತೆಯನ್ನು ಸಾಧಿಸಿ ಕಾನೂನು ಪ್ರಕ್ರಿಯೆ ನ್ಯಾಯಸಮ್ಮತವಾಗಿ ನಡೆಸಲು ಸಮರ್ಥರಾಗಿರಬೇಕು. ಮನುಷ್ಯನಲ್ಲಿ ಕಾರ್ಯತತ್ಪರತೆ, ವಿನಯತೆ, ಶ್ರದ್ಧೆಯಿದ್ದಾಗ ಉನ್ನತ ಸ್ಥಾನಮಾನಗಳನ್ನು ಗಳಿಸಲು ಸಾಧ್ಯವಿದೆ. ಚೆಂಬೂರು ಕರ್ನಾಟಕ ಸಂಘದ ಮುಖೇನ ಪ್ರಾರಂಭಗೊಂಡ ಕಾನೂನು ಕಾಲೇಜು ದೇಶದ ನ್ಯಾಯಾಂಗ ವ್ಯವಸ್ಥೆಗೆ ಗಟ್ಟಿತನವನ್ನು ನೀಡುವ ನ್ಯಾಯಾಧೀಶರನ್ನು ಸೃಷ್ಟಿಸುವಂತಾಗಲಿ ಎಂದರು.

ಕಾಲೇಜು ಯಶಸ್ವಿಯಾಗುವುದರಲ್ಲಿ ಸಂಶಯವಿಲ್ಲ:  ಕಪಾಡಿಯಾ
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಿರಿಯ ನ್ಯಾಯವಾದಿ ರೋಹಿತ್‌ ಎ. ಕಪಾಡಿಯಾ ಅವರು ಮಾತನಾಡಿ, ಚೆಂಬೂರು ಕರ್ನಾಟಕ ಸಂಘಯಾವುದೇ ರೀತಿಯ ಪರಂಪರೆಯಿಲ್ಲದೆ, ತಳಮಟ್ಟದಿಂದಲೇ ಕಾನೂನು ಕಾಲೇಜನ್ನು ಆರಂಭಿಸಿದೆ. ಈ ಕಾಲೇಜಿನಲ್ಲಿ ಕಾನೂನು ಪದವಿ ಕಲಿಯುವ ವಿದ್ಯಾರ್ಥಿಗಳಿಗೆ ಮನುಷ್ಯನಾಗುವುದು ಮತ್ತು ಉತ್ತಮ ಮನುಷ್ಯನಾಗುವುದು ಇವೆರಡರ ಮಧ್ಯೆ ಇರುವ ವ್ಯತ್ಯಾಸವನ್ನು ಮೊದಲು ತಿಳಿಸಬೇಕು. ಕಾಲೇಜಿಗೆ ಉತ್ತಮ ಶಿಕ್ಷಕರ ಅಗತ್ಯತೆಯಿದ್ದು, ಕಾನೂನು ತಜ್ಞರನ್ನು ಆಹ್ವಾನಿಸಿ ಅವರಿಂದ ವಿದ್ಯಾರ್ಥಿಗಳಿಗೆ ಬೋಧನೆಯನ್ನು ನೀಡಬೇಕು. ಆಗ ಮಾತ್ರ ಉತ್ತಮ ನ್ಯಾಯವಾದಿಗಳು ಈ ಶಿಕ್ಷಣ ಸಂಸ್ಥೆಯಿಂದ ಹೊರಬರಲು ಸಾಧ್ಯ. ಸಂಸ್ಥೆಯ ಅಧ್ಯಕ್ಷ ಎಚ್‌. ಕೆ. ಸುಧಾಕರ್‌ ಅವರು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುತ್ತಾರೆ ಎಂಬ ಭರವಸೆ ನನಗಿದೆ ಎಂದು ನುಡಿದು ಶುಭ ಹಾರೈಸಿದರು.

ವೇದಿಕೆಯಲ್ಲಿ ಚೆಂಬೂರು ಕರ್ನಾಟಕ ಸಂಘದ ಅಧ್ಯಕ್ಷ ನ್ಯಾಯವಾದಿ ಎಚ್‌. ಕೆ. ಸುಧಾಕರ್‌, ಗೌರವ ಕಾರ್ಯದರ್ಶಿ ರಂಜನ್‌ ಕುಮಾರ್‌ ಆರ್‌. ಅಮೀನ್‌, ಗೌರವ ಕೋಶಾಧಿಕಾರಿ ಟಿ. ಆರ್‌. ಶೆಟ್ಟಿ, ಮಾಜಿ ಅಧ್ಯಕ್ಷ ಜಯ  ಶೆಟ್ಟಿ, ಪ್ರಾಂಶುಪಾಲ ಡಾ| ದಿನಕರ್‌ ಪವಾರ್‌ ಅವರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಭಾರತಿ ಶೆಟ್ಟಿ, ವಿಜೇತಾ ಸುವರ್ಣ ಪ್ರಾರ್ಥನೆಗೈದರು. ಎಚ್‌. ಕೆ. ಸುಧಾಕರ್‌, ರಂಜನ್‌ ಕುಮಾರ್‌ ಆರ್‌. ಅಮೀನ್‌, ಟಿ. ಆರ್‌. ಶೆಟ್ಟಿ ಅವರು ಅತಿಥಿಗಳನ್ನು ಗೌರವಿಸಿದರು.  ಕವಿತಾ ಸರೋಜಿನಿ ಕಾರ್ಯಕ್ರಮ ನಿರ್ವಹಿಸಿದರು. ರಂಜನ್‌ ಕುಮಾರ್‌ ಅಮೀನ್‌ ಅವರು ವಂದಿಸಿದರು.

Advertisement

ಸಮಾರಂಭದಲ್ಲಿ ಆಡಳಿತ ಸಮಿತಿಯ ಉಪಾಧ್ಯಕ್ಷ ಪ್ರಭಾಕರ ಬೋಳಾರ್‌, ಜತೆ ಕಾರ್ಯದರ್ಶಿ ದೇವದಾಸ್‌ ಕೆ. ಶೆಟ್ಟಿಗಾರ್‌, ಜತೆ ಕೋಶಾಧಿಕಾರಿ ಸುಂದರ ಎಂ. ಕೋಟ್ಯಾನ್‌, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ವಿಶ್ವನಾಥ ಎನ್‌. ಶೇಣವ, ಗುಣಕರ ಎಚ್‌. ಹೆಗ್ಡೆ, ಯೋಗೀಶ್‌ ವಿ. ಗುಜರನ್‌, ಮಧುಕರ ಜಿ. ಬೈಲೂರು, ರಾಮ ಪೂಜಾರಿ, ಸುಧಾಕರ ಅಂಚನ್‌, ಮೋಹನ್‌ ಎಸ್‌. ಕಾಂಚನ್‌, ಚಂದ್ರಶೇಖರ ಎ. ಅಂಚನ್‌, ಅಶೋಕ್‌ ಸಾಲ್ಯಾನ್‌, ಜಯ ಎಂ. ಶೆಟ್ಟಿ, ದಯಾಸಾಗರ್‌ ಚೌಟ, ಸುಧೀರ್‌ ಪುತ್ರನ್‌, ಚಂದ್ರಕಾಂತ್‌ ನೈಕ್‌, ಸಂಜೀವ ಎಸ್‌. ಶೆಟ್ಟಿ, ನ್ಯಾಯವಾದಿ ಮೊದ್ದಿನ್‌ ಮುಂಡ್ಕೂರು,  ಚಂದ್ರಶೇಖರ ಪಾಲೆತ್ತಾಡಿ, ಸ್ಥಳೀಯ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ನ್ಯಾಯ ವಾದಿಗಳು, ವಿದ್ಯಾರ್ಥಿಗಳು, ಪಾಲಕರು, ತುಳು-ಕನ್ನಡಿಗರು ಉಪಸ್ಥಿತರಿದ್ದರು.

ಚೆಂಬೂರು ಪರಿಸರದಲ್ಲಿ ಕಳೆದ ಆರು ದಶಕಗಳಿಗಿಂತಲೂ ಅಧಿಕ ಕಾಲದಿಂದ ನಾಡು-ನುಡಿಯೊಂದಿಗೆ ಶೈಕ್ಷಣಿಕ ಸೇವೆಯಲ್ಲಿ ನಿತರವಾಗಿರುವ ಚೆಂಬೂರು ಕರ್ನಾಟಕ ಸಂಘವು ತುಳು-ಕನ್ನಡಿಗರ ಪ್ರಪ್ರಥಮ ಕಾನೂನು ಕಾಲೇಜನ್ನು ಸ್ಥಾಪಿಸುವುದರ ಮೂಲಕ ಮರಾಠಿ ಮಣ್ಣಿನಲ್ಲಿ ನೂತನ ಇತಿಹಾಸವನ್ನು ನಿರ್ಮಿಸಿತು. ಸಂಸ್ಥೆಯ ಕಾನೂನು ಕಾಲೇಜಿನ ತರಗತಿ ಹಾಗೂ ವಾಚನಾಲಯ, ತರಬೇತಿ ನ್ಯಾಯಾಲಯವನ್ನು ಪರಿಶೀಲಿಸಿದ ಜಸ್ಟೀಸ್‌ ಶಿವರಾಜ್‌ ವಿ. ಪಾಟೀಲ್‌ ಅವರು ಸಂಸ್ಥೆಯ ಕಾರ್ಯವೈಖರಿಯನ್ನು ಮುಕ್ಯಕಂಠದಿಂದ ಶ್ಲಾಘಿಸಿದರು. ಶಿಕ್ಷಣಕ್ಕೆ ಮೊದಲ ಆಧ್ಯತೆಯನ್ನು ನೀಡಿದ ಸಂಘವು ಕರ್ನಾಟಕ ಪ್ರಾಥಮಿಕ, ಪ್ರೌಢಶಾಲೆಯೊಂದಿಗೆ, ಕಲೆ, ವಿಜ್ಞಾನ, ವಾಣಿಜ್ಯ ಕಿರಿಯ ಮಹಾವಿದ್ಯಾಲಯವನ್ನು ಸ್ಥಾಪಿಸಿದೆ. ಪ್ರತೀ ವರ್ಷ ಇಲ್ಲಿನ ಕನ್ನಡ ಮಾಧ್ಯಮ ಮತ್ತು ಇಂಗ್ಲೀಷ್‌ ಮಾಧ್ಯಮಗಳಿಗೆ ಉತ್ತಮ ಫಲಿತಾಂಶಗಳು ಲಭಿಸುತ್ತಿದೆ. ಸಂಘದ ಅಧ್ಯಕ್ಷ ನ್ಯಾಯವಾದಿ ಎಚ್‌. ಕೆ. ಸುಧಾಕರ ಮತ್ತು ಇತರ ಪದಾಧಿಕಾರಿಗಳ ಹಗಲಿರುಳು ಶ್ರಮದಿಂದ ಪ್ರಸ್ತುತ ಚೆಂಬೂರು ಕರ್ನಾಟಕ ಕಾನೂನು ಪದವಿ ಕಾಲೇಜು ಸ್ಥಾಪನೆಗೊಂಡು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.

ಮುಂಬಯಿಯಲ್ಲಿ ತುಳು-ಕನ್ನಡಿಗರು ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆಗೈದಿದ್ದಾರೆ. ಆದರೆ ಸಂಘ-ಸಂಸ್ಥೆಗಳ ಕಾನೂನು ಕಾಲೇಜು ಇರಲಿಲ್ಲ. ಹಾಗಾಗಿ ನಾವೊಂದು ಕಾನೂನು ಕಾಲೇಜನ್ನು ಸ್ಥಾಪಿಸಬೇಕು ಎಂದು 2011 ರಲ್ಲಿ ಅಂದಿನ ಅಧ್ಯಕ್ಷ ಪ್ರಭಾಕರ ಬೋಳಾರ್‌ ಅವರು ಪ್ರಸ್ತಾವನೆಯನ್ನು ಸಮಿತಿಯ ಮುಂದಿಟ್ಟಿದ್ದರು. ಆನಂತರ ಮುಂಬಯಿ ವಿಶ್ವವಿದ್ಯಾಲಯ, ಬಾರ್‌ ಕೌನ್ಸಿಲ್‌ನ ಪರವಾನಿಗೆ ಪಡೆಯುವಲ್ಲಿ ಜಸ್ಟೀಸ್‌ ಶಿವರಾಜ್‌ ಪಾಟೀಲ್‌ ಮತ್ತು ನ್ಯಾಯವಾದಿ ಕಮಲಕರ್‌ ದಳ್ವಿ ಅವರ ಸಹಕಾರ ಅಮೂಲ್ಯವಾಗಿತ್ತು. ಈ ಕಾಲೇಜನ್ನು ಜಸ್ಟೀಸ್‌ ಶಿವರಾಜ್‌ ಪಾಟೀಲ್‌ ಅವರೆ ಲೋಕಾರ್ಪಣೆಗೊಳಿಸಬೇಕು ಎಂದು ನಮ್ಮೆಲ್ಲರ ಕನಸಾಗಿತ್ತು. ಅದು ಇಂದು ನನಸಾಗಿದೆ. ಕಾಲೇಜಿನ ಸ್ಥಾಪನೆಗಾಗಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳು. ಸಂಸ್ಥೆಯ ಅಭಿವೃದ್ಧಿಗೆ ಎಲ್ಲರ ಸಹಕಾರ, ಪ್ರೋತ್ಸಾಹ ಸದಾಯಿರಲಿ 
– ನ್ಯಾಯವಾದಿ ಎಚ್‌. ಕೆ. ಸುಧಾಕರ್‌ (ಅಧ್ಯಕ್ಷರು: ಚೆಂಬೂರು ಕರ್ನಾಟಕ ಸಂಘ).

Advertisement

Udayavani is now on Telegram. Click here to join our channel and stay updated with the latest news.

Next