Advertisement

Udupi: ಅವ್ಯವಸ್ಥೆಗಳ ತಾಣ ಉಡುಪಿ ರೈಲು ನಿಲ್ದಾಣ

04:56 PM Jul 30, 2024 | Team Udayavani |

ಉಡುಪಿ: ಕಳೆದ ಹತ್ತು ವರ್ಷಗಳಲ್ಲಿ ದೇಶದ ರೈಲ್ವೇ ವಲಯದಲ್ಲಿ ಕ್ರಾಂತಿಕಾರಿ ಬದ ಲಾವಣೆಗಳು ನಡೆದಿವೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಹಲವು ಮಂತ್ರಿಗಳು ದೂರದೃಷ್ಟಿಯ ಯೋಜನೆಗಳ ಮೂಲಕ ರೈಲು ವ್ಯವಸ್ಥೆಯನ್ನು ಜನಪರವಾಗಿಸಿ ದ್ದಾರೆ. ರೈಲು ನಿಲ್ದಾಣಗಳ ಆಧುನೀಕರಣ, ಹೊಸ ಮಾದರಿಯ ವೇಗದ ರೈಲುಗಳ ಆರಂಭ, ಸಮಯ ಪಾಲನೆ, ಸ್ವತ್ಛತೆ ಎಲ್ಲದರಲ್ಲೂ ರೈಲ್ವೇ ಗಮನ ಸೆಳೆಯುತ್ತಿದೆ. ಬೇರೆ ಕಡೆ ಏನೇ ಆದರೂ ಕೃಷ್ಣ ನಗರಿ ಉಡುಪಿಯಲ್ಲಿರುವ ಇಂದ್ರಾಳಿ ರೈಲು ನಿಲ್ದಾಣ ಮಾತ್ರ ಸ್ವಲ್ಪವೂ ಕದಲದೆ ಕುಳಿತಿದೆ. ಮೂಲ ಸೌಕರ್ಯಗಳ ಕೊರತೆಯಿಂದಾಗಿ ಪ್ರಯಾಣಿಕರು ಸಂಕಷ್ಟ ಎದುರಿಸುತ್ತಿದ್ದಾರೆ.

Advertisement

ಹೇಳಿ ಕೇಳಿ ಉಡುಪಿ ರೈಲು ನಿಲ್ದಾಣ ಅತ್ಯಂತ ಮಹತ್ವದ ಆಯಕಟ್ಟಿನ ಪ್ರದೇಶ. ಕೊಂಕಣ ರೈಲ್ವೇ ನಿಗಮಕ್ಕೆ ಒಳಪಟ್ಟ ನಿಲ್ದಾಣಕ್ಕೆ 31 ವರ್ಷಗಳ ಇತಿಹಾಸವಿದೆ. ಕೃಷ್ಣ ಮಠ ಸೇರಿದಂತೆ ಕರಾವಳಿಯ ನಾನಾ ದೇಗುಲಗಳಿಗೆ ಬರುವವರಿಗೆ ಉಡುಪಿ ರೈಲು ನಿಲ್ದಾಣವೇ ಇಳಿದಾಣ. ವ್ಯಾಪಾರ, ಶಿಕ್ಷಣ, ಆರೋಗ್ಯ ಸೇವೆಗೆ ಹೆಸರಾದ ಮಣಿಪಾಲಕ್ಕೆ ದೇಶದ ಮೂಲೆ ಮೂಲೆಗಳಿಂದ ವಿದ್ಯಾರ್ಥಿಗಳು ಮತ್ತು ಇತರರು ರೈಲಿನ ಮೂಲಕ ಬರುತ್ತಾರೆ. ಅವರು ರೈಲು ಹತ್ತುವುದು ಮತ್ತು ಇಳಿ ಯುವುದು ಇಂದ್ರಾಳಿ ರೈಲ್ವೇ ನಿಲ್ದಾಣದಲ್ಲಿ.

ಎಲ್ಲಕ್ಕಿಂತ ಹೆಚ್ಚಾಗಿ ಉಡುಪಿ ಭಾಗದ ಪ್ರತಿ ಮನೆಗೂ ಮುಂಬಯಿ ಜತೆಗೆ ಸಂಪರ್ಕ ವಿದೆ. ಇಲ್ಲಿನ ಸಾವಿರಾರು ಮಂದಿ ಮುಂಬಯಿಯಲ್ಲಿ ಉದ್ಯಮ, ವ್ಯವಹಾರ ನಡೆಸು ತ್ತಿದ್ದಾರೆ. ಅವರೆಲ್ಲರ ಓಡಾಟಕ್ಕೆ ರೈಲೇ ಜೀವನಾಡಿ, ಇಂದ್ರಾಳಿ ನಿಲ್ದಾಣವೇ ಪ್ರಮುಖ ಕೊಂಡಿ.

ಕರಾವಳಿಯವರೇ ಆದ ಜಾರ್ಜ್‌ ಫೆರ್ನಾಂಡಿಸ್‌ ಅವರ ಪ್ರಯತ್ನದ ಫ‌ಲವಾಗಿ ಮಂಗ ಳೂರಿನಿಂದ ಮುಂಬಯಿಗೆ ಕೊಂಕಣ ರೈಲು ಆರಂಭ ವಾಗಿತ್ತು. ಈ ಮಾರ್ಗದಲ್ಲಿ ಮೊದಲ ರೈಲು ಓಡಿದ್ದೇ ಮಂಗಳೂರು ಮತ್ತು ಉಡುಪಿ ಮಧ್ಯೆ. ಅದೂ ಇದೇ ಇಂದ್ರಾಳಿ ನಿಲ್ದಾಣದಿಂದ. ಇಷ್ಟು ದೊಡ್ಡ ಹಿನ್ನೆಲೆ ಇರುವ ಇಂದ್ರಾಳಿ ರೈಲ್ವೇ ಸ್ಟೇಷನ್‌ ಕಾಲಕ್ಕೆ ತಕ್ಕಂತೆ ಬದಲಾಗದೆ ಹಿಂದೆ ಬಿದ್ದಿದೆ.

ಒಂದು ದಿನದಲ್ಲಿ ಕನಿಷ್ಠ 5,000ಕ್ಕೂ ಅಧಿಕ ಪ್ರಯಾಣಿಕರು ಹತ್ತಿಳಿಯುವ ಈ ನಿಲ್ದಾಣದ ಮೂಲ ಸೌಕರ್ಯ ವ್ಯವಸ್ಥೆಯನ್ನು ಗಮನಿಸಿದರೆ ನಿಜಕ್ಕೂ ಬೇಸರವಾ ಗುತ್ತದೆ. ಸ್ವತ್ಛತೆ ಇಲ್ಲದಿರುವುದು, ಮಳೆಗೆ ರಕ್ಷಣೆ ಇಲ್ಲ, ಪ್ಲ್ರಾಟ್‌  ಫಾರ್ಮ್ ಬದಲಿಸಲು ಸರಿಯಾದ ಸೌಕರ್ಯವಿಲ್ಲ, ರಕ್ಷಣೆಯ ಸುಳಿವಿಲ್ಲ.

Advertisement

ದಿನಕ್ಕೆ 75 ರೈಲು ಸಂಚಾರ, 5,000 ಜನರ ಓಡಾಟ

ಇಂದ್ರಾಳಿ ರೈಲು ನಿಲ್ದಾಣದ ಮೂಲಕ ದಿನಕ್ಕೆ 75 ಪ್ರಯಾಣಿಕ ರೈಲುಗಳು ಓಡಾಡುತ್ತವೆ. ಗೂಡ್ಸ್‌ ರೈಲು ಪ್ರತ್ಯೇಕ.
ಒಂದೊಂದು ರೈಲಿನಲ್ಲಿ 75 ಜನ ಹತ್ತಿಳಿಯುತ್ತಾರೆ ಎಂಬ ಲೆಕ್ಕ ಹಿಡಿದರೂ ಕನಿಷ್ಠ ದಿನಕ್ಕೆ 5,000 ಜನ ಓಡಾಡುತ್ತಾರೆ.
ಕರಾವಳಿ ಹಾಗೂ ಮುಂಬಯಿಯನ್ನು ಸಂಪರ್ಕಿಸುವ ಕೊಂಕಣ ರೈಲ್ವೇಯ ಮಹತ್ವದ ನಿಲ್ದಾಣವಿದು.
ರತ್ನಗಿರಿ ಮತ್ತು ಮಡಗಾಂವ್‌ ಹೊರತುಪಡಿಸಿ ಅತೀ ಹೆಚ್ಚು ಪ್ರಯಾಣಿಕರು ಮತ್ತು ವಾಣಿಜ್ಯ ವಹಿವಾಟು ಇರುವ ನಿಲ್ದಾಣ.
ಉಡುಪಿ, ಮಣಿಪಾಲದಂಥ ಧಾರ್ಮಿಕ, ಶೈಕ್ಷಣಿಕ ಕೇಂದ್ರಕ್ಕೆ ದೇಶಾದ್ಯಂತದಿಂದ ಜನರು, ವಿದ್ಯಾರ್ಥಿಗಳ ಸಂಪರ್ಕ

ಉದ್ಘಾಟನೆ ದಿನ ಮಾತ್ರ ಸೇವೆ ನೀಡಿದ ಎಸ್ಕಲೇಟರ್‌!

2016ರಲ್ಲಿ ಅಂದಿನ ಅಂದಿನ ರೈಲ್ವೇ ಸಚಿವ ಸುರೇಶ್‌ ಪ್ರಭು ಅವರು ಇಂದ್ರಾಳಿ ಸ್ಟೇಷನ್‌ನಲ್ಲಿ ಎಸ್ಕಲೇಟರ್‌ ಉದ್ಘಾಟನೆ ಮಾಡಿದ್ದರು. ಅದು ಕೆಲಸ ಮಾಡಿದ್ದು ಅದೊಂದು ದಿನ ಮಾತ್ರ! ವಾಹನಗಳು ರೈಲ್ವೇ ನಿಲ್ದಾಣದ ಒಳಭಾಗದವರೆಗೂ ಬರು ತ್ತವೆ. ಹಾಗಿರುವಾಗ ಎಸ್ಕಲೇಟರ್‌ ಯಾಕೆ ಬೇಕು ಎನ್ನುವುದು ಇನ್ನೂ ಯಾರಿಗೂ ತಿಳಿದಿಲ್ಲ. ಈಗ ಇಲ್ಲಿ ನೋ ಎಂಟ್ರಿ ಫ‌ಲಕ ಅಳವಡಿಕೆ ಮಾಡಲಾಗಿದೆ. ಇದಕ್ಕಾಗಿ ಮಾಡಿರುವ ಎಲ್ಲ ವ್ಯವಸ್ಥೆಗಳೂ ಈಗ ತುಕ್ಕುಹಿಡಿದಿದ್ದು, ಬೀದಿನಾಯಿಗಳ ವಾಸಸ್ಥಾನವಾಗಿ ಪರಿಣಮಿಸಿದೆ.

ಪ್ರಮುಖ ಸಮಸ್ಯೆಗಳು ಏನೇನು?

ಸ್ವತ್ಛತೆ ಎಂಬುದು ಇಲ್ಲಿ ಕಾಣುವುದಿಲ್ಲ.ಪ್ರಯಾಣಿಕರಿಗೆ ನರಕ ದರ್ಶನ.

ರೈಲು ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಸರಿಯಾದ ವ್ಯವಸ್ಥೆಗಳಿಲ್ಲ.

ಪ್ಲ್ರಾಟ್‌ಫಾರಂನ ಹಲವು ಕಡೆ ಶೆಲ್ಟರ್‌ಗಳೇ ಇಲ್ಲ.ಇರುವ ಕೆಲವು ಶೆಲ್ಟರ್‌ಗಳು ತೂತು ಬಿದ್ದಿವೆ.

ರೈಲು ಹತ್ತಲು ಹೋಗುವಾಗ, ರೈಲು ಇಳಿಯುವಾಗ ಮಳೆ ಬಂದರೆ ನೆನೆಯಬೇಕು.

ಒಂದು ಪ್ಲ್ರಾಟ್‌ ಫಾರಂನಿಂದ ಇನ್ನೊಂದಕ್ಕೆ ಹೋಗಲು ವ್ಯವಸ್ಥೆಗಳು ಸೂಕ್ತವಾಗಿಲ್ಲ.

ಸುರಕ್ಷತೆ ವಿಚಾರದಲ್ಲಿ ರೈಲು ನಿಲ್ದಾಣ ತುಂಬಾ ಹಿಂದೆ ಬಿದ್ದಿದೆ.

ಶೌಚಾಲಯಗಳು ಹೆಚ್ಚಿಲ್ಲ, ಇರುವುದು ಕೂಡಾ ಸ್ವತ್ಛವಿಲ್ಲ

ರೈಲು ನಿಲ್ದಾಣದಲ್ಲಿ ಸರಿಯಾದ ಬೆಳಕಿನ ವ್ಯವಸ್ಥೆಯೂ ಇಲ್ಲ.

ಕುಡಿಯಲು ಒಂದೇ ಕಡೆ ಫಿಲ್ಟರ್‌ ನೀರಿದೆ. ಆದರೆ ಎರಡೂ ಲೋಟ ಮಾಯ!

– ಪುನೀತ್‌ ಸಾಲ್ಯಾನ್‌

Advertisement

Udayavani is now on Telegram. Click here to join our channel and stay updated with the latest news.

Next