Advertisement

ಮೂರು ಪಕ್ಷಗಳಿಗೆ ಕಬ್ಬಿಣದ ಕಡಲೆ

07:00 AM Oct 07, 2018 | |

ಬೆಂಗಳೂರು: ಪಂಚ ರಾಜ್ಯಗಳ ಚುನಾವಣೆ ಜತೆಗೇ ರಾಜ್ಯದಲ್ಲಿ ಲೋಕಸಭೆಯ ಮೂರು ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾಗಿದ್ದು, ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಮೂರೂ ಪಕ್ಷಗಳಿಗೆ ಅಚ್ಚರಿ ತಂದಿದೆ. ಅಷ್ಟೇ ಅಲ್ಲ, ಮೂರು ಪಕ್ಷಗಳಲ್ಲಿ ಚಟುವಟಿಕೆ ಚುರುಕುಗೊಂಡಿದೆ.

Advertisement

ವಿಧಾನಸಭೆಯ ಎರಡು ಕ್ಷೇತ್ರಗಳ ಚುನಾವಣೆ ಘೋಷಣೆ ನಿರೀಕ್ಷೆಯಲ್ಲಿದ್ದ ಪಕ್ಷಗಳಿಗೆ ಮೂರು ಲೋಕಸಭೆ ಕ್ಷೇತ್ರಗಳ ಚುನಾವಣೆಯೂ ದಿಢೀರ್‌ ಘೋಷಣೆ ಆಗಿರುವುದರಿಂದ ಒಲ್ಲದ ಮನಸ್ಸಿನಲೇ ಅಭ್ಯರ್ಥಿಗಳನ್ನು ಹುಡುಕಿಕೊಂಡು ಸಜ್ಜಾಗುವ ಅನಿವಾರ್ಯತೆ ಎದುರಾಗಿದೆ. ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರಕ್ಕಂತೂ ಎರಡು ವಿಧಾನಸಭೆ ಹಾಗೂ ಮೂರು ಲೋಕಸಭೆ ಕ್ಷೇತ್ರಗಳ ಉಪ ಚುನಾವಣೆ ಅಗ್ನಿಪರೀಕ್ಷೆ.

ಸರ್ಕಾರ ರಚನೆಯಾದ ನಂತರ ರಾಜರಾಜೇಶ್ವರಿ ನಗರ ಹಾಗೂ ಜಯನಗರ ವಿಧಾನಸಭೆ ಕ್ಷೇತ್ರಗಳಲ್ಲಿ ಎದುರಾದ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿದ್ದರೂ ಅದರಲ್ಲಿ ನಮ್ಮ ಪಾತ್ರವೂ ಇತ್ತು ಎಂದು ಜೆಡಿಎಸ್‌ ಹೇಳಿಕೊಂಡು ಎರಡೂ ಪಕ್ಷಗಳು ಸಮ್ಮಿಶ್ರ ಸರ್ಕಾರಕ್ಕೆ ದೊರೆತ ಜಯ ಎಂದು ಸಮಾಧಾನಪಟ್ಟುಕೊಂಡಿದ್ದವು. ಆದರೆ, ಸದ್ಯ ರಾಜಕೀಯ ಚಿತ್ರಣ ಬದಲಾಗಿರುವುದರಿಂದ ಹಾಗೂ ಸಚಿವ ಸಂಪುಟ ವಿಸ್ತರಣೆಯಾಗದೆ ಅಸಮಾಧಾನದವೂ ಇರುವುದರಿಂದ ಈ ಚುನಾವಣೆ ಸವಾಲಾಗಿದೆ.

ಇನ್ನು ಬಿಜೆಪಿಗೂ ಉಪ ಚುನಾವಣೆ ಪ್ರತಿಷ್ಠೆಯಾಗಿದೆ. ಏಕೆಂದರೆ ಮೂರು ಲೋಕಸಭಾ ಕ್ಷೇತ್ರಗಳ ಪೈಕಿ ಎರಡು ತಮ್ಮದೇ ಪಕ್ಷ ಗೆದ್ದಿದ್ದ ಕ್ಷೇತ್ರಗಳಾಗಿರುವುದರಿಂದ ಮತ್ತೆ ಅಲ್ಲಿ ಕಮಲ ಅರಳಿಸಬೇಕಿದೆ. ಮಂಡ್ಯದಲ್ಲಿ ಅಸ್ಥಿತ್ವ ಸಾಬೀತುಪಡಿಸಬೇಕಿದ್ದರೆ, ರಾಮನಗರದಲ್ಲಿ ಸಾಧ್ಯವಾದಷ್ಟು ಪೈಪೋಟಿ ನೀಡಿ ಜಮಖಂಡಿ ವಿಧಾನಸಭೆ ಕ್ಷೇತ್ರ ಗೆದ್ದು ತಮ್ಮ ಶಕ್ತಿ ತೋರಿಸಬೇಕಿದೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುವುದರಿಂದ ಬಿಜೆಪಿಗೆ ಕಠಿಣ ಸವಾಲಾಗಲಿದೆ. ಹೀಗಾಗಿ, ಮೂರೂ ಪಕ್ಷಗಳಿಗೆ  ಈ ಉಪ ಚುನಾವಣೆ ಮಹತ್ವದ್ದಾಗಿದೆ. ಮುಂದಿನ ಲೋಕಸಭಾ ಚುನಾವಣೆ ಮೇಲೂ ಇದರ ಫ‌ಲಿತಾಂಶ ಪರಿಣಾಮ ಬೀರಲಿದೆ.

ಬೆವರು ಹರಿಸಬೇಕು?
ಎರಡು ವಿಧಾನಸಭೆ ಹಾಗೂ ಮೂರು ಲೋಕಸಭೆ ಕ್ಷೇತ್ರಗಳ ಉಪ ಚುನಾವಣೆ ದಿನಾಂಕ ಘೋಷಣೆ ಆಗಿರುವುದರಿಂದ ಇನ್ನೆರ‌ಡು ತಿಂಗಳ ಕಾಲ ರಾಜ್ಯದಲ್ಲಿ ಚುನಾವಣಾ ಜ್ವರ. ಶಿವಮೊಗ್ಗ, ಬಳ್ಳಾರಿ ಹಾಗೂ ಮಂಡ್ಯ ಲೋಕಸಭೆ ಹಾಗೂ ರಾಮನಗರ ವಿಧಾನಸಭೆಗೆ ಚುನಾವಣೆ ಮೂರೂ ಪಕ್ಷಗಳು ಬೆವರು ಹರಿಸಬೇಕಾಗಿದೆ.

Advertisement

ಸಂಪುಟ ವಿಸ್ತರಣೆ ಮುಂದಕ್ಕೆ
ಉಪ ಚುನಾವಣೆ ದಿನಾಂಕ ಘೋಷಣೆ ಹಿನ್ನೆಲೆಯಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಹುತೇಕ ಅನುಮಾನ. ಸಂಪುಟ ವಿಸ್ತರಣೆಯಾದರೆ ಅತೃಪ್ತರು ಅಸಹಕಾರ ತೋರಬಹುದು ಅಥವಾ ಪಕ್ಷಾಂತರ ಮಾಡಬಹುದು ಎಂಬ ಆತಂಕವೂ ಇರುವುದರಿಂದ ಸಂಪುಟ ವಿಸ್ತರಣೆ ಮತ್ತೆ ಮುಂದಕ್ಕೆ ಹೋಗುವುದು ಖಚಿತ. ಉಪ ಚುನಾವಣೆ ನಂತರ ಬೆಳಗಾವಿಯಲ್ಲಿ ವಿಧಾನಸಭೆ ಅಧಿವೇಶನ ನಡೆಯಲಿದ್ದು, ಆಗಲೂ ಸಂಪುಟ ವಿಸ್ತರಣೆ ಕಷ್ಟ. ಲೋಕಸಭೆ ಚುನಾವಣೆವರೆಗೂ ಇದೇ ರೀತಿ ಮುಂದಕ್ಕೆ ಹಾಕುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.

ಮೂರೂ ಲೋಕಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆ ನಮಗೆ ಆಶ್ಚರ್ಯ ತಂದಿದೆ. ಆರು ತಿಂಗಳ ಅವಧಿಗೆ ಚುನಾವಣೆ ಮಾಡುವ ಅಗತ್ಯ ಇರಲಿಲ್ಲ. ಜೆಡಿಎಸ್‌ ಜತೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುವ ಬಗ್ಗೆ ಮಾತುಕತೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು.
– ದಿನೇಶ್‌ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ

ಲೋಕಸಭಾ ಕ್ಷೇತ್ರಕ್ಕೂ ಈಗ ಚುನಾವಣೆ ಘೋಷಣೆ ಮಾಡಿದ್ದು ಅಚ್ಚರಿ ಮೂಡಿಸಿದೆ. ಕಾಂಗ್ರೆಸ್‌ ಚುನಾವಣೆ ಎದುರಿಸಲು ಸಿದ್ಧವಿದೆ, ಅಭ್ಯರ್ಥಿಗಳ ಕೊರತೆ ಇಲ್ಲ. ಯಾವ ಪಕ್ಷಕ್ಕೆ ಯಾವ ಕ್ಷೇತ್ರ ಬಿಟ್ಟುಕೊಡಬೇಕು ಎಂಬುದರ ಬಗ್ಗೆ ಜೆಡಿಎಸ್‌ ಜತೆ ಮಾತುಕತೆ ಮಾಡಿ ತೀರ್ಮಾನಿಸುತ್ತೇವೆ.
– ಡಾ.ಜಿ.ಪರಮೇಶ್ವರ್‌, ಡಿಸಿಎಂ

ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡೇ ಸ್ಪರ್ಧೆ ಎದುರಿಸುತ್ತೇವೆ. ರಾಮನಗರದಲ್ಲಿ ಜೆಡಿಎಸ್‌ ಸ್ಪರ್ಧೆ ಮಾಡಲಿದ್ದು, ಅನಿತಾ ಕುಮಾರಸ್ವಾಮಿ ಸ್ಪರ್ಧೆ ಬಗ್ಗೆ ಇನ್ನೂ ತೀರ್ಮಾನವಾಗಬೇಕಿದೆ. ಮಂಡ್ಯದಲ್ಲಿ ನಮ್ಮವರೇ ಇದ್ದಾರಲ್ಲ. ಉಳಿದ ಕ್ಷೇತ್ರಗಳ ಬಗ್ಗೆ ಚರ್ಚಿಸಿ ತೀರ್ಮಾನಿಸುತ್ತಾರೆ.
– ಎಚ್‌.ಡಿ.ದೇವೇಗೌಡ, ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ

ಲೋಕಸಭೆಗೆ ಮಾರ್ಚ್‌ನಲ್ಲಿ ಚುನಾವಣೆ ಘೋಷಣೆ ಆಗುವುದರಿಂದ ರಾಜ್ಯದಲ್ಲಿ ಮೂರು ಕ್ಷೇತ್ರಗಳಿಗೆ ಚುನಾವಣೆ ನಡೆಯುವುದಿಲ್ಲ ಎಂದುಕೊಂಡಿದ್ದೆವು. ಜಮಖಂಡಿ ಸೇರಿ ಎಲ್ಲ ಕ್ಷೇತ್ರಗಳನ್ನೂ ಗಂಭೀರವಾಗಿ ಪರಿಗಣಿಸಿ ಹೋರಾಟ ಮಾಡುತ್ತೇವೆ. ಮೈತ್ರಿ ಬಗ್ಗೆ ಹೈಕಮಾಂಡ್‌ ಬಳಿ ಚರ್ಚಿಸಿ ತೀರ್ಮಾನಿಸಲಾಗುವುದು.
– ಸಿದ್ದರಾಮಯ್ಯ, ಸಮನ್ವಯ ಸಮಿತಿ ಅಧ್ಯಕ್ಷರು

ರಾಜ್ಯದಲ್ಲೂ ನೀತಿ ಸಂಹಿತೆ ಜಾರಿ
ರಾಜ್ಯದ ಮೂರು ಲೋಕಸಭಾ ಕ್ಷೇತ್ರ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ನ.3ರಂದು ಮತದಾನ ನಡೆಯಲಿದ್ದು, ಐದು ಕ್ಷೇತ್ರಗಳಲ್ಲಿ ತಕ್ಷಣದಿಂದಲೇ ನೀತಿಸಂಹಿತೆ ಜಾರಿಯಾಗಿದೆ. ಐದು ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಅ.9ರವರೆಗೆ ಅವಕಾಶವಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ತಿಳಿಸಿದ್ದಾರೆ. ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಈ ಐದು ಕ್ಷೇತ್ರಗಳಲ್ಲಿನ ಯಾವುದೇ ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತಿಲ್ಲ. ಜತೆಗೆ ಕ್ಷೇತ್ರಗಳಿಗೆ ಸಂಬಂಧಿಸಿ ಹೊಸ ಘೋಷಣೆ ಮಾಡುವಂತಿಲ್ಲ. ಚುನಾವಣಾ ಪ್ರಕ್ರಿಯೆಗೆ 34,433 ಸಿಬ್ಬಂದಿ ಬಳಸಿಕೊಳ್ಳಲಾಗುವುದು. ನ.8ಕ್ಕೆ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

ಅ.16 ನಾಮಪತ್ರ ಸಲ್ಲಿಕೆಗೆ ಕಡೆಯ ದಿನ
ಮಂಡ್ಯ, ಶಿವಮೊಗ್ಗ, ಬಳ್ಳಾರಿ ಲೋಕಸಭಾ ಕ್ಷೇತ್ರ ಹಾಗೂ ರಾಮನಗರ, ಜಮಖಂಡಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ನ.3ರಂದು ಮತದಾನ ನಡೆಯಲಿದೆ. ಅ.16 ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾಗಿದ್ದು, ಅ.17ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಅ.20 ಕೊನೆಯ ದಿನವಾಗಿದೆ. ನ.6ರಂದು ಮತ ಎಣಿಕೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next