Advertisement

ಅಡಕತ್ತರಿಯಲ್ಲಿ ಆಡಳಿತ ವ್ಯವಸ್ಥೆ : BBMP ಕಾಯ್ದೆ ಅನುಷ್ಠಾನವಾದರೂ ನಿಯಮಗಳು ರೂಪುಗೊಂಡಿಲ್ಲ

11:56 AM Dec 09, 2021 | Team Udayavani |

ಬೆಂಗಳೂರು: “ಬಿಬಿಎಂಪಿ ಕಾಯ್ದೆ- 2020′ ಮಸೂದೆ ವಿಧಾನಸಭೆಯಲ್ಲಿ ಅಂಗೀಕಾರಗೊಂಡು ಹಾಗೂ ಇದು ಪಾಲಿಕೆಯಲ್ಲಿ ಅನುಷ್ಠಾನಗೊಂಡು ಹೆಚ್ಚು- ಕಡಿಮೆ ಒಂದು ವರ್ಷ ಸಂದಿದೆ. ಆದರೆ, ಇದುವರೆಗೆ ಆ ಕಾಯ್ದೆಗೆ ನಿಯಮಗಳು ಮಾತ್ರ ರೂಪುಗೊಂಡಿಲ್ಲ. ಈ “ಹೊಸ ಕಾಯ್ದೆಯ ಹಳೆಯ ನಿಯಮಗಳು’ ಆಡಳಿತ ವ್ಯವಸ್ಥೆಯನ್ನು ಅಡ್ಡಕತ್ತರಿಯಲ್ಲಿ ಸಿಲುಕಿಸಿದೆ!

Advertisement

ಬಿಬಿಎಂಪಿ ಕಾಯ್ದೆಯಲ್ಲಿ ಹಲವಾರು ಹೊಸ ಅಂಶಗಳು ಸೇರ್ಪಡೆಗೊಂಡಿದ್ದರೆ, ಇನ್ನು ಕೆಲವು ಕರ್ನಾಟಕ ಮುನ್ಸಿಪಲ್‌ ಕಾಯ್ದೆಯಲ್ಲಿನ ಅಂಶಗಳು ಯಥಾವತ್ತಾಗಿ ಅಥವಾ ಸಣ್ಣಪುಟ್ಟ
ಬದಲಾವಣೆಗ ಳೊಂದಿಗೆ ಮುಂದುವರಿದಿವೆ. ಅದೇನೇ ಇರಲಿ, ಕಾಯ್ದೆಯೊಂದು ಜಾರಿಗೆ ಬಂದಾಗ, ಅದಕ್ಕೆ ನಿಯಮ ಗಳೂ ರೂಪುಗೊಳ್ಳಬೇಕಾಗುತ್ತದೆ. ಕಳೆದ ಒಂದು ವರ್ಷದಿಂದ ಈ ನಿಟ್ಟಿನಲ್ಲಿ ಸರ್ಕಾರ ಅಥವಾ ಪಾಲಿಕೆ ಯಿಂದ ನಿರೀಕ್ಷಿತ ಮಟ್ಟದಲ್ಲಿ ಪ್ರಯತ್ನಗಳು ನಡೆದಿಲ್ಲ. ಇದು ಆಡಳಿತಾತ್ಮಕ ಸೇರಿದಂತೆ ವಿವಿಧ ಹಂತಗಳಲ್ಲಿ ಸಮಸ್ಯೆ ಆಗುತ್ತಿದೆ ಎಂಬ ಅಪಸ್ವರಗಳು
ಪಾಲಿಕೆಯ ಅಧಿಕಾರಿಗಳ ವಲಯದಲ್ಲಿ ಕೇಳಿಬರುತ್ತಿದೆ.

ತಕ್ಷಣಕ್ಕೆ ನಿಯಮಗಳ ರಚನೆ ಕಾರ್ಯವನ್ನು ಸಮ ರೋಪಾದಿಯಲ್ಲಿ ಮಾಡಿದರೂ, ಇನ್ನೂ ನಾಲ್ಕೈದು ತಿಂಗಳು ಸಮಯ ಬೇಕಾಗುತ್ತದೆ. ಈ ಮಧ್ಯೆ ಬಿಬಿಎಂ ಪಿಗೆ ಚುನಾವಣೆ ಕೂಡ ನಡೆಯಬೇಕಿದೆ (ಇದಕ್ಕೆ ಸಂಬಂಧಿಸಿದ ಪ್ರಕರಣವನ್ನು ಸುಪ್ರೀಂ ಕೋರ್ಟ್‌ ಡಿ. 20ರಂದು ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ). ಈ ದಿಸೆಯಲ್ಲಿ ನಿಯಮಗಳ ರಚನೆ ಮತ್ತಷ್ಟು ವಿಳಂಬವಾಗುವ
ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸುತ್ತವೆ.

ಹಳೆಯ ಕಾಯ್ದೆಯಲ್ಲಿ 500ಕ್ಕೂ ಹೆಚ್ಚು ಸೆಕ್ಷನ್‌ಗಳು ಮತ್ತು ಚಾಪ್ಟರ್‌ಗಳು ಬರುತ್ತವೆ. ಹೊಸ ಕಾಯ್ದೆಯಲ್ಲಿ ಇಷ್ಟೊಂದು ಸೆಕ್ಷನ್‌ಗಳು ಇಲ್ಲ. ಹೊಸದರಲ್ಲಿ ವಿಕೇಂದ್ರೀಕರಣ ವ್ಯವಸ್ಥೆಗೆ ಹೆಚ್ಚು ಒತ್ತು ನೀಡಲಾಗಿದೆ. ಈಗಾಗಲೇ  ಇರುವ 3 ಸಮಿತಿಗಳ ಜತೆಗೆ ವಲಯ ಸಮಿತಿಗಳನ್ನೂ ಸೇರ್ಪಡೆ ಮಾಡಿದೆ. ಇಂತಹ ಹಲವು ಮಾರ್ಪಾಡುಗಳು ಆಗಿವೆ. ಇದೆಲ್ಲದಕ್ಕೂ ನಿಯಮಗಳು ಸಿದ್ಧಗೊಳ್ಳಬೇಕಿದೆ.

ಇದನ್ನೂ ಓದಿ : ಬಿಎಸ್ಸೆನ್ನೆಲ್‌ ಬಿಲ್‌ ಬಾಕಿ; 104 ಆರೋಗ್ಯವಾಣಿ ಬಂದ್‌ , ಯೋಜನೆ ಸ್ಥಗಿತದ ಹುನ್ನಾರವೇ?

Advertisement

ಇದು ಕೇವಲ ಪಾಲಿಕೆ ಅಥವಾ ಸರ್ಕಾರದಿಂದ ಕಷ್ಟ. ಈ ಸಂಬಂಧ ಪ್ರತ್ಯೇಕ ಸಂಸ್ಥೆಯನ್ನು ನಿಯೋಜಿಸಿ, ಅದರಿಂದ ನಿಯಮಗಳನ್ನು ರೂಪಿಸಬೇಕು. ನಂತರ ತಜ್ಞರು, ಸಾರ್ವಜನಿಕರಿಂದ ಸಲಹೆ, ಆಕ್ಷೇಪಣೆಗಳನ್ನು ಆಲಿಸಿ, ಅಂತಿಮವಾಗಿ ಒಂದು ರೂಪ ನೀಡಬೇಕು ಎಂದು ಬಿಬಿಎಂಪಿ ಅಧಿಕಾರಿ ಗಳು ತಿಳಿಸುತ್ತಾರೆ. ನಿಯಮಗಳ ಅಗತ್ಯತೆ: ಉದಾಹರಣೆಗೆ ಯಾವುದಾದರೊಂದು ಟೆಕ್‌ ಪಾರ್ಕ್‌ ತೆರಿಗೆ ಬಾಕಿ ಉಳಿಸಿ ಕೊಂಡಿದ್ದರೆ, ಇದಕ್ಕಾಗಿ ಕೋರ್ಟ್‌ಗೆ ಹೋಗದೆ, ಆ ಟೆಕ್‌ ಪಾರ್ಕ್‌ನ ಖಾತೆಗಳನ್ನು ಜಪ್ತಿ ಮಾಡಿ ಬಾಕಿ ವಸೂಲು ಮಾಡಲು ಹೊಸ ಕಾಯ್ದೆಯಲ್ಲಿ ಅವಕಾಶ ಇದೆ. ಅದೇ ರೀತಿ, ಎರಡು ಗ್ರಾಮಗಳಿಗೆ ಸೇರಿದ ಒಂದು ಜಾಗದಲ್ಲಿ ಕಟ್ಟಡ ನಿರ್ಮಿಸಲಾಗಿದೆ ಎಂದು ಕೊಳ್ಳೋಣ. ಎರಡೂ ಗ್ರಾಮಗಳ ಮಾರ್ಗಸೂಚಿ ದರ ಭಿನ್ನವಾಗಿರುತ್ತದೆ. ಆಗ,
ಯಾವ ಮಾರ್ಗಸೂಚಿ ದರ ಅನ್ವಯ ಆಗುತ್ತದೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಇನ್ನೂ ಮುಂದುವರಿದು ಹೇಳುವುದಾದರೆ, ಸಾರ್ವಜನಿಕ ಸ್ಥಳಗಳಲ್ಲಿ ವಾಣಿಜ್ಯ ಉದ್ದೇಶದ  ಹೋರ್ಡಿಂಗ್ಸ್ ಗಳನ್ನು ಸಂಪೂರ್ಣ ನಿಷೇಧಿಸುವ ಉದ್ದೇಶದಿಂದ ಪಾಲಿಕೆಯು ಹೈಕೋರ್ಟ್‌ ಸೂಚನೆ ಮೇರೆಗೆ “ಹೊರಾಂಗಣ ಸೈನೇಜ್‌ ಮತ್ತು ಸಾರ್ವಜನಿಕ ಸಂದೇಶ ನೀತಿ’ಯನ್ನು ಮತ್ತು ಹೊರಾಂಗಣ ಜಾಹೀರಾತು ಮತ್ತು ಸಾರ್ವಜನಿಕ ಸಂದೇಶ ಬೈಲಾ -2018′ ಅನ್ನು ಜಾರಿಗೊಳಿಸಿದೆ. ಅದರ ಪ್ರಕಾರ ಸಾರ್ವಜನಿಕ ಪ್ರದೇಶದಲ್ಲಿ ವಾಣಿಜ್ಯ ಜಾಹೀ ರಾತು ಪ್ರದರ್ಶನಕ್ಕೆ ಅವಕಾಶ ಇಲ್ಲ. ಆದರೆ, ಬಿಬಿಎಂಪಿ ಕಾಯ್ದೆಯ ಸೆಕ್ಷನ್‌ 157 ಹೊರಾಂಗಣದಲ್ಲೂ ವಾಣಿಜ್ಯ ಜಾಹೀರಾತು ಪ್ರದರ್ಶನಕ್ಕೆ ಅವಕಾಶ ಕಲ್ಪಿಸು ತ್ತದೆ. ಪ್ರತಿ ಹಂತದಲ್ಲಿ ಇಂಥ ಹತ್ತಾರು ಗೊಂದಲಗಳು ಈಗಲೂ ಮುಂದುವರಿದಿವೆ.
ಇದಕ್ಕಾಗಿ ಹೊಸ ಕಾಯ್ದೆಗೆ ಪೂರಕ ವಾಗಿ ನಿಯಮಗಳು ಬೇಕಾಗುತ್ತದೆ ಎಂದು ಬಿಬಿ ಎಂಪಿ ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದರು.

– ವಿಜಯಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next