Advertisement

ಮರದ ಅಂಬಾರಿ ಹೊತ್ತು ಅರ್ಜುನ ತಾಲೀಮು

12:45 PM Sep 19, 2017 | |

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿ ಮೆರವಣಿಗೆಯಲ್ಲಿ 750 ಕೆ.ಜಿ.ತೂಕದ ಚಿನ್ನದ ಅಂಬಾರಿ ಹೊತ್ತು ಲಕ್ಷಾಂತರ ಜನರ ಗೌಜು-ಗದ್ದಲದ ನಡುವೆ ಗಜಗಾಂಭೀರ್ಯದಿಂದ ಸಾಗುವ ಅರ್ಜುನನಿಗೆ ಸೋಮವಾರ ಮರದ ಅಂಬಾರಿ ಹೊರುವ ತಾಲೀಮು ಆರಂಭಿಸಲಾಯಿತು.

Advertisement

ಆ.17 ಮತ್ತು 31ರಂದು 2 ತಂಡಗಳಲ್ಲಿ ಅರಮನೆ ಆವರಣ ಪ್ರವೇಶಿಸಿರುವ ಈ ಬಾರಿಯ ದಸರಾ ಗಜಪಡೆಯ 15 ಆನೆಗಳನ್ನು ಮೊದಲ 20 ದಿನಗಳ ಕಾಲ ಯಾವುದೇ ಭಾರ ಹೇರದೆ ಬೆಳಗ್ಗೆ ಮತ್ತು ಸಂಜೆ ವೇಳೆ ಅರಮನೆಯಿಂದ ಬನ್ನಿಮಂಟಪದವರೆಗೆ ತಾಲೀಮು ನಡೆಸಲಾಗುತ್ತಿತ್ತು. ನಂತರ 350 ಕೆ.ಜಿ ತೂಕದಿಂದ ಆರಂಭಿಸಿ ಹಂತ ಹಂತವಾಗಿ 50 ಕೆಜಿ ತೂಕ ಹೆಚ್ಚಿಸುತ್ತಾ 750 ಕೆಜಿವರೆಗೆ ಮರಳು ಮೂಟೆ ಹೊರಿಸಿ ತಾಲೀಮು ನಡೆಸಲಾಯಿತು. 

ಇನ್ನು ಜಂಬೂ ಸವಾರಿಗೆ 12 ದಿನ ಮಾತ್ರ ಬಾಕಿ ಇರುವುದರಿಂದ ಸೋಮವಾರ 350 ಕೆ.ಜಿ ತೂಕದ ಮರದ ಅಂಬಾರಿ ಹಾಗೂ 400 ಕೆಜಿ ತೂಕದ ಮರಳು ಮೂಟೆ ಹೊರಿಸಿ ಅಂಬಾರಿ ಹೊರುವ ತಾಲೀಮು ನಡೆಸಲಾಯಿತು. ಅರಮನೆ ಆವರಣದಲ್ಲಿ ಅರ್ಜುನನ ಬೆನ್ನಮೇಲೆ ಮರದ ಅಂಬಾರಿ ಕಟ್ಟಿದ ನಂತರ ಜಂಬೂಸವಾರಿ ದಿನ ಮುಖ್ಯಮಂತ್ರಿಯವರು ಪುಷ್ಪಾರ್ಚನೆ ಮಾಡುವ ಜಾಗಕ್ಕೆ ಆನೆಯನ್ನು ಕರೆತಂದು ನಿಲ್ಲಿಸಿ, ಅಲ್ಲಿಂದ ಬಲರಾಮ ದ್ವಾರದ ಮೂಲಕ ಹೊರಬಂದು ಬನ್ನಿಮಂಟಪದವರೆಗೆ ಅರ್ಜುನ ಮರದ ಅಂಬಾರಿ ಹೊರುವ ತಾಲೀಮನ್ನು ಯಶಸ್ವಿಯಾಗಿ ಪೂರೈಸಿದ.

ಕುಮ್ಕಿ ಆನೆಗಳಾದ ವರಲಕ್ಷಿ ಮತ್ತು ವಿಜಯ ಆನೆಗಳು ಅರ್ಜುನನ ಅಕ್ಕ-ಪಕ್ಕದಲ್ಲಿ ಸಾಗಿದರೆ, ಇನ್ನುಳಿದ 12 ಆನೆಗಳು ಅರ್ಜುನನ್ನು ಹಿಂಬಾಲಿಸಿದವು. ಅರ್ಜುನ 750 ಕೆ.ಜಿ ಹೊರುವ ಜತೆಗೆ ಮರದ ಅಂಬಾರಿ ಹೊರುವ ತಾಲೀಮನ್ನು ಯಶಸ್ವಿಯಾಗಿ ಪೂರೈಸಿದ್ದಾನೆ ಎಂದು ಮೈಸೂರು ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next