ಅಂಬರೀಷ್ ಅವರು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಹೀರೋಗಳ ಸಿನಿಮಾಗಳಲ್ಲಿ ತಂದೆ ಪಾತ್ರ ಮಾಡಿದ್ದಾರೆ. ಆದರೆ, ಅವರೇ ಮುಖ್ಯಭೂಮಿಕೆಯಲ್ಲಿ ನಟಿಸಿದೇ ತುಂಬಾ ವರ್ಷವೇ ಆಗಿತ್ತು. ಈಗ ಅಂಬರೀಷ್ ಅವರೇ ಮುಖ್ಯಭೂಮಿಕೆಯಲ್ಲಿರುವ ಚಿತ್ರವೊಂದು ಬಹುತೇಕ ಚಿತ್ರೀಕರಣ ಮುಗಿಸಿದೆ. ಅದು “ಅಂಬಿ ನಿಂಗೆ ವಯಸ್ಸಾಯ್ತೋ’. ಹೀಗೊಂದು ಚಿತ್ರ ತಯಾರಾಗುತ್ತಿರುವ ಬಗ್ಗೆ ನೀವು ಕೇಳಿರಬಹುದು.
ಈಗಾಗಲೇ ಚಿತ್ರೀಕರಣ ಆರಂಭವಾಗಿದ್ದು, ಅಂಬರೀಷ್ ಅವರು ಕೂಡಾ ತುಂಬಾ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ. ಚಿತ್ರತಂಡ ಅಂಬರೀಷ್ ಅವರ ಗೆಟಪ್ಗ್ಳನ್ನು ಬಿಡುಗಡೆ ಮಾಡಿದೆ. ಈ ಚಿತ್ರವನ್ನು ಗುರುದತ್ ಗಾಣಿಗ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಸುದೀಪ್ ಅವರ ಜೊತೆ ಸಹಾಯಕ ನಿರ್ದೇಶಕರಾಗಿದ್ದ ಗುರುದತ್ ಅವರಿಗೆ ನಿರ್ದೇಶಕರಾಗಿ ಇದು ಚೊಚ್ಚಲ ಸಿನಿಮಾ.
ಈಗ ಮೊದಲ ನಿರ್ದೇಶನದಲ್ಲೇ ಅಂಬರೀಷ್ ಅವರಿಗೆ ಸಿನಿಮಾ ಮಾಡುವ ಅವಕಾಶ ಸಿಕ್ಕಿದೆ. ಚಿತ್ರವನ್ನು ಜಾಕ್ ಮಂಜು ನಿರ್ಮಿಸುತ್ತಿದ್ದಾರೆ. ಈ ಚಿತ್ರಕ್ಕಾಗಿ ಅಂಬರೀಷ್ ಅವರು ಗಡ್ಡ ಬಿಟ್ಟಿದ್ದಾರೆ. ಅಂಬರೀಷ್ ಅವರು ಈ ಸಿನಿಮಾ ಮಾಡಲು ಕಾರಣ ರಜನಿಕಾಂತ್ ಅಂತೆ. “ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರ ತಮಿಳಿನ “ಪವರ್ ಪಾಂಡಿ’ ಚಿತ್ರದ ರೀಮೇಕ್ ಆಗಿದ್ದು, “ಪವರ್ ಪಾಂಡಿ’ ಸಿನಿಮಾ ನೋಡಿದ ರಜನಿಕಾಂತ್,
ಅಂಬಿಗೆ ಫೋನ್ ಮಾಡಿ, “ಈ ಸಿನಿಮಾ ನಿಮಗೆ ತುಂಬಾ ಚೆನ್ನಾಗಿ ಹೊಂದಿಕೆಯಾಗುತ್ತದೆ, ಮಾಡಿ’ ಎಂದರಂತೆ. ಅದರಂತೆ ಅಂಬರೀಷ್ ಸಿನಿಮಾ ಮಾಡುತ್ತಿದ್ದಾರೆ. ಚಿತ್ರದಲ್ಲಿ ಸುದೀಪ್ ಕೂಡಾ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಅಂಬರೀಷ್ ಅವರ ಯೌವ್ವನದ ದಿನಗಳಲ್ಲಿ ಸುದೀಪ್ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಶ್ರುತಿ ಹರಿಹರನ್ ಕೂಡಾ ನಟಿಸುತ್ತಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತ, ಜೆಬಿನ್ ಜಾಕೋಬ್ ಛಾಯಾಗ್ರಹಣ ಚಿತ್ರಕ್ಕಿದೆ.