Advertisement

ರಾಮಕೃಷ್ಣ  ಮಿಷನ್‌ ಆಶ್ರಯದಲ್ಲಿ 4ನೇ ವಾರದ ಸ್ವಚ್ಛತಾ ಅಭಿಯಾನ

10:19 AM Nov 27, 2017 | Team Udayavani |

ಮಹಾನಗರ : ಶ್ರೀ ರಾಮಕೃಷ್ಣ ಮಿಷನ್‌ ಸ್ವಚ್ಛತಾ ಅಭಿಯಾನದ ಅಂಗವಾಗಿ 4ನೇ ವಾರದ ಸ್ವಚ್ಛತಾ ಕಾರ್ಯಕ್ರಮವು ರವಿವಾರ ನಗರದ ಕಾಸ್ಸಿಯಾ ಶಾಲೆಯ ಎದುರಿನ ರಸ್ತೆಯಲ್ಲಿ ಹಮ್ಮಿಕೊಳ್ಳಲಾಯಿತು.

Advertisement

ಸ್ವಾಮಿ ಜಿತಕಾಮಾನಂದಜೀ ಅವರ ಉಪಸ್ಥಿತಿಯಲ್ಲಿ ವಿಧಾನ ಪರಿಷತ್‌ ವಿಪಕ್ಷ ಮುಖ್ಯ ಸಚೇತಕ ಕ್ಯಾ| ಗಣೇಶ್‌ ಕಾರ್ಣಿಕ್‌ ಹಾಗೂ ಕಾಸ್ಸಿಯಾ ಹೈಸ್ಕೂಲಿನ ಮುಖ್ಯೋಪಾಧ್ಯಾಯ ಎವರಿಸ್ಟ್‌ ಕ್ರೆಸ್ಟಾ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದರು. ಅಭಿಯಾನದ ಪ್ರಧಾನ ಸಂಯೋಜಕ ದಿಲ್‌ ರಾಜ್‌ ಆಳ್ವ, ಸೌರಜ್‌, ಸುರೇಶ್‌ ಶೆಟ್ಟಿ, ಬಜಪೆ ಪೊಲೀಸ್‌ ಠಾಣೆಯ ಅಧಿಕಾರಿ ಮದನ್‌ ಮತ್ತಿತರರು ಉಪಸ್ಥಿತರಿದ್ದರು.

ಕಾಸ್ಸಿಯಾ ವಿದ್ಯಾರ್ಥಿಗಳು ಶಾಲೆಯ ಮುಂಭಾಗದ ಗೋಡೆ ಹಾಗೂ ತೋಡುಗಳನ್ನು ಸ್ವಚ್ಛಗೊಳಿಸಿದರು. ನಿವೇದಿತಾ ಬಳಗದ ಸದಸ್ಯರು ರಸ್ತೆಯ ಎರಡೂ ಬದಿಯಲ್ಲಿ ಬಿದ್ದಿದ್ದ ಕಲ್ಲು ರಾಶಿ ಹಾಗೂ ರಸ್ತೆ ಮೇಲೆ ಹರಡಿಕೊಂಡಿದ್ದ ಮರಳು ತೆಗೆದು ಶುಚಿ ಮಾಡಿದರು. ಎಸ್‌. ಎಂ. ಕುಶೆ ಶಾಲಾ ವಿದ್ಯಾರ್ಥಿಗಳು ಮನೆ ಮನೆ ಭೇಟಿ ನೀಡಿ ಸ್ವಚ್ಛತಾ ಕರಪತ್ರ ಹಂಚಿದರು.

ಬಸ್‌ ತಂಗುದಾಣದ ನವೀಕರಣ
ಹಿಂದೂ ವಾರಿಯರ್ಸ್‌ ಯುವಕರು ಮಾರ್ನಮಿಕಟ್ಟೆಯ ಹತ್ತಿರವಿರುವ ಬಸ್‌ ತಂಗುದಾಣವನ್ನು ಸ್ವಚ್ಛಗೊಳಿಸಿ ಸುಣ್ಣ ಬಣ್ಣ ಹಚ್ಚಿ ಸುಂದರಗೊಳಿಸಿದರು. ನುರಿತ ಗಾರೆ ಕೆಲಸದವರಿಂದ ನೆಲಹಾಸಿಗೆ ಹೊಸದಾಗಿ ಕಾಂಕ್ರೀಟ್‌ ಹಾಕಿ ಸಮತಟ್ಟುಗೊಳಿಸಲಾಯಿತು. ಅನಂತರ ಅದರ ಎದುರಿನ ವೃತ್ತಕ್ಕೆ ಬಣ್ಣ ಬಳಿದು ಅಂದ ಹೆಚ್ಚಿಸಲು ಪ್ರಯತ್ನಿಸಲಾಯಿತು.

ಬ್ಯಾನರ್‌, ಪೋಸ್ಟರ್‌ ತೆರವು
ಸೌಂದರ್ಯಕ್ಕೆ ಧಕ್ಕೆ ತರುವ ಸುಮಾರು 100ಕ್ಕೂ ಅಧಿಕ ಅನಧಿಕೃತ ಫ್ಲೆಕ್ಸ್‌ ಬ್ಯಾನರ್‌ ಗಳನ್ನು ಸ್ವಚ್ಛ ಪುತ್ತೂರು ಕಾರ್ಯಕರ್ತರು ಶ್ಯಾಮ್‌ ಸುದರ್ಶನ್‌ ಭಟ್‌ ನಿರ್ದೇಶನದಲ್ಲಿ ತೆರವು ಮಾಡಿದರು. ಜಪ್ಪು, ಮಂಗಳಾದೇವಿ ಹಾಗೂ ಮೋರ್ಗನ್ಸ್‌ ಗೇಟ್‌ ಮತ್ತಿತರ ಪ್ರದೇಶಗಳಲ್ಲಿ ಈ ಕಾರ್ಯ ನಡೆಯಿತು.

Advertisement

ಸ್ವಚ್ಛ ಮನಸ್ಸು ಅಭಿಯಾನ
ಅಭಿಯಾನದ ಪ್ರಮುಖ ಅಂಗವಾದ ಸ್ವಚ್ಛ  ಮನಸ್ಸು ಅಭಿಯಾನ ಮಂಗಳೂರು ನಗರ ಹಾಗೂ ಹೊರವಲಯದಲ್ಲಿ ನಿರಂತರವಾಗಿ ನಡೆಯುತ್ತಿದೆ. ಕಳೆದ 20 ದಿನಗಳಲ್ಲಿ 73 ಪ್ರೌಢಶಾಲೆಗಳಲ್ಲಿ ಸ್ವಚ್ಛ ಮನಸ್ಸು ಎಂಬ ಜಾಗೃತಿ ಅಭಿಯಾನವನ್ನು ಏರ್ಪಡಿಸಲಾಗಿತ್ತು. ಇಂದಿನವರೆಗೆ 73 ಶಾಲೆಗಳಿಂದ 6,988 ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಎಲ್ಲ ವಿದ್ಯಾರ್ಥಿಗಳಿಗೂ ‘ಸ್ವಚ್ಛತಾ ಸೇನಾನಿ’ ಎಂಬ ವಿಶೇಷ ಬ್ಯಾಡ್ಜ್ ನೀಡಲಾಗಿದೆ. 

ಸುಮಾರು 60 ಜನ ಸಂಪನ್ಮೂಲ ವ್ಯಕ್ತಿಗಳು ವಿದ್ಯಾರ್ಥಿಗಳಲ್ಲಿ ಸ್ವಚ್ಛತೆ ಕುರಿತು ಅರಿವು ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದ ನಿವೃತ್ತ ನಿರ್ದೇಶಕ ಎಂ. ಆರ್‌. ವಾಸುದೇವ್‌ ಮಾರ್ಗದರ್ಶನದಲ್ಲಿ ಈ ಅಭಿಯಾನ ನಡೆಯುತ್ತಿದೆ. ಒಟ್ಟು 101 ಶಾಲೆಗಳು ನೋಂದಣಿ ಮಾಡಿಕೊಂಡಿದ್ದು ,10358 ವಿದ್ಯಾರ್ಥಿಗಳನ್ನು ಸ್ವಚ್ಛತಾ ಸೇನಾನಿಗಳೆಂದು ಗುರುತಿಸಲಾಗಿದೆ.

ಸ್ವಚ್ಛ ಗ್ರಾಮ ಅಭಿಯಾನ
ರಾಮಕೃಷ್ಣ ಮಿಷನ್‌ ನೇತೃತ್ವದಲ್ಲಿ ಸ್ವಚ್ಛ  ದಕ್ಷಿಣ ಕನ್ನಡ ಅಭಿಯಾನದ ಪ್ರಯುಕ್ತ ಮಂಗಳೂರು ತಾಲೂಕಿನ ಮಳವೂರು, ಮೂಡುಶೆಡ್ಡೆ, ಐಕಳ, ಕಟೀಲು, ಪಿಲಾತಬೆಟ್ಟು, ಕೆಮ್ರಾಲ್‌ ಮುಂತಾದ ಸುಮಾರು 30 ಗ್ರಾಮಗಳಲ್ಲಿ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಒಟ್ಟು ಸುಮಾರು 1,300 ಕಾರ್ಯಕರ್ತರು ಪಾಲ್ಗೊಂಡರು. ಸ್ವಚ್ಛತೆಗೆ ಬೇಕಾದ ಸಲಕರಣೆಗಳು, ಟೀಶರ್ಟ್‌ ಗಳು, ಬ್ಯಾನರ್‌ ಮತ್ತಿತರ ಸಾಮಗ್ರಿಗಳನ್ನು ಹಾಗೂ ಎಲ್ಲ ಸ್ವಯಂ ಸೇವಕರಿಗೆ ಉಪಾಹಾರದ ವ್ಯವಸ್ಥೆಯನ್ನೂ ರಾಮಕೃಷ್ಣ ಮಿಷನ್‌ ವತಿಯಿಂದ ಒದಗಿಸಲಾಗಿತ್ತು. ಜಿ.ಪಂ. ಸ್ವಚ್ಛ ದಕ್ಷಿಣ ಕನ್ನಡ ಅಭಿಯಾನಕ್ಕೆ ಸಹಕಾರ ನೀಡುತ್ತಿದೆ. ಎಂಆರ್‌ಪಿಎಲ್‌ ಪ್ರಾಯೋಜಕತ್ವ ನೀಡಿ ಪ್ರೋತ್ಸಾಹಿಸುತ್ತಿದೆ.

ಪುಟ್‌ಪಾತ್‌ ನಿರ್ಮಾಣ
ಕಾಸ್ಸಿಯಾ ಶಾಲೆಯ ಎದುರಿನ ಕಾಲುದಾರಿಗೆ ನಿಗದಿಪಡಿಸಿದ ಸ್ಥಳವು ತ್ಯಾಜ್ಯ ಬಿಸಾಡುವ ಸ್ಥಳವಾಗಿತ್ತು. ವಿದ್ಯಾರ್ಥಿಗಳು
ಹಾಗೂ ದಾರಿಹೋಕರು ಕಾಲುದಾರಿ ಬಳಸಲಾಗದೆ ಪರದಾಡುತ್ತಿದ್ದರು. ಅಲ್ಲದೆ ಆ ಪರಿಸರ ದುರ್ನಾತ ಬೀರುತ್ತ ಅಸಹ್ಯವಾಗಿತ್ತು. ಕಳೆದೆರಡು ದಿನಗಳಿಂದ ಅಲ್ಲಿಂದ ನಾಲ್ಕುಟಿಪ್ಪರ್‌ ಕಟ್ಟಡ ತ್ಯಾಜ್ಯ ಹಾಗೂ ಕಸ ತೆಗೆದು ಸ್ವತ್ಛಗೊಳಿಸಲಾಯಿತು. ಅಲ್ಲಿ ಈಗ ಇಂಟರ್‌ಲಾಕ್‌ ಹಾಕಿ ಕಾಲುದಾರಿಯನ್ನು ನಿರ್ಮಿಸಲಾಗುತ್ತಿದೆ. ಮುಂದಿನ ವಾರದಲ್ಲಿ ಹೂಗಿಡಗಳನ್ನು ನೆಟ್ಟು ಸುಂದರಗೊಳಿಸಲಾಗುವುದು. 

Advertisement

Udayavani is now on Telegram. Click here to join our channel and stay updated with the latest news.

Next