Advertisement

Suspend: 253 ಕೋಟಿ ರೂ. ನೀರಾವರಿ ಅಕ್ರಮ: 28 ಎಂಜಿನಿಯರ್‌ ಸಸ್ಪೆಂಡ್‌

10:04 PM Jan 20, 2024 | Team Udayavani |

ಮಸ್ಕಿ(ರಾಯಚೂರು): ನಕಲಿ ಬಿಲ್‌ಗ‌ಳ ಸೃಷ್ಟಿ ಮೂಲಕ ನೀರಾವರಿ ಇಲಾಖೆಯಲ್ಲಿ ಬರೋಬ್ಬರಿ 253 ಕೋಟಿ ರೂ. ದೋಚಿದ ಸಂಗತಿ ಬಯಲಾಗಿದ್ದು, ಈ ಅಕ್ರಮದಲ್ಲಿ ಭಾಗಿಯಾದ 28 ಜನ ಎಂಜಿನಿಯರ್‌ಗಳನ್ನು ಅಮಾನತು ಮಾಡಲಾಗಿದೆ. ಇತರ 17 ಮಂದಿ ವಿರುದ್ಧ ಸಿವಿಲ್‌ ದಾವೆ ಹೂಡಲು ಆದೇಶಿಸಲಾಗಿದೆ.

Advertisement

ಕರ್ನಾಟಕ ನೀರಾವರಿ ನಿಗಮ ತುಂಗಭದ್ರಾ ವಲಯ ಮುನಿರಾಬಾದ್‌ ವ್ಯಾಪ್ತಿಯಲ್ಲಿ ಇಂಥದ್ದೊಂದು ಅವ್ಯವಹಾರ ನಡೆದಿದೆ. 1,200 ಕೋಟಿ ವೆಚ್ಚದಲ್ಲಿ ತುಂಗಭದ್ರಾ ಎಡದಂಡೆ ಕಾಲುವೆ ಆಧುನೀಕರಣ ಕಾಮಗಾರಿಯನ್ನು 2009ರಿಂದ 2011ರ ಅವ ಧಿಯಲ್ಲಿ ಕೈಗೊಳ್ಳಲಾಗಿತ್ತು. ಈ ಕಾಮಗಾರಿಯಲ್ಲಿ ಹಲವು ಲೋಪ, ಕಳಪೆ ಕಾಮಗಾರಿ ಹಾಗೂ ಕಾಮಗಾರಿ ಹೆಸರಿನಲ್ಲಿ ಕ್ಲೇಮ್‌ ಮಾಡಲಾಗಿದ್ದ ಆರ್ಬಿಟ್ರೇಷನ್‌ನಲ್ಲಿ(ರಾಜಿ ಮಧ್ಯಸ್ಥಿಕೆ) ಕೋಟ್ಯಂತರ ರೂ. ಅಕ್ರಮ ನಡೆದಿದೆ ಎನ್ನುವ ಆರೋಪ ಕೇಳಿ ಬಂದಿದ್ದವು.

ಸರ್ಕಾರ ಈ ಬಗ್ಗೆ ತನಿಖೆ ನಡೆಸುವಂತೆ ಜಲಸಂಪನ್ಮೂಲ ಇಲಾಖೆಯ ವಿಚಕ್ಷಣ ದಳದ ಪೊಲೀಸ್‌ ಮಹಾನಿರ್ದೇಶಕರಿಗೆ ಸೂಚನೆ ನೀಡಿತ್ತು. ಸತತ ಮೂರು ವರ್ಷಗಳ ಕಾಲ ತನಿಖೆ ನಡೆಸಿದ ವಿಚಕ್ಷಣ ದಳದ ಪೊಲೀಸ್‌ ಮಹಾನಿರ್ದೇಶಕರು ಹಾಗೂ ನಿವೃತ್ತ ಎಂಜಿನಿಯರ್‌ಗಳ ತಂಡ ಬಹುಕೋಟಿ ಅಕ್ರಮದ ಸಮಗ್ರ ವರದಿ ಸರ್ಕಾರಕ್ಕೆ ಸಲ್ಲಿಸಿದೆ.

ಏನಿದು ಅಕ್ರಮ?: ನೀರಾವರಿ ನಿಗಮದ ತುಂಗಭದ್ರಾ ಎಡದಂಡೆ ಕಾಲುವೆ ಆಧುನೀಕರಣ ಕಾಮಗಾರಿ ವೇಳೆ ಮೂರು ತಿಂಗಳ ಅವಧಿ ಯ ಕಾಮಗಾರಿಯನ್ನು ಕೊನೆಯ ಒಂದೇ ತಿಂಗಳಲ್ಲಿ ಮುಗಿಸಲಾಗಿದೆ. ಉಳಿದ ಎರಡು ತಿಂಗಳು ಕಾಲ ಮಷಿನರಿ ಕೆಲಸ, ಕಾರ್ಮಿಕರ ವೆಚ್ಚ, ಸಾಮಗ್ರಿ ಸೇರಿ ಎಲ್ಲವೂ ನಷ್ಟವಾಗಿದೆ. ಇದಕ್ಕಾಗಿ ಆರ್ಬಿಟ್ರೇಷನ್‌ ಕ್ಲೇಮ್‌ ನೀಡುವಂತೆ ಗುತ್ತಿಗೆದಾರರು ಅಕ್ಷೇಪಣೆ ಸಲ್ಲಿಸಿದ್ದರು. ಇದಕ್ಕಾಗಿ ಅಧಿ ಕಾರಿಗಳು ಹಲವು ಕಾಮಗಾರಿಗಳಿಗೆ ಆರ್ಬಿಟ್ರೇಷನ್‌ ಹೆಸರಲ್ಲಿ ಕೋಟ್ಯಂತರ ರೂ. ಬಿಲ್‌ ಪಾವತಿಸಿದ್ದರು. ದಾಖಲೆಗಳ ಪರಿಶೀಲನೆ, ಕಡತಗಳ ತಪಾಸಣೆ, ಆವಕ, ರವಾನೆ ವಹಿಗಳ ಪರಿಶೀಲನೆ ವೇಳೆ ಆರ್ಬಿಟ್ರೇಷನ್‌ ಹೆಸರಲ್ಲಿ ನಕಲಿ ದಾಖಲೆ, ಖೊಟ್ಟಿ ಬಿಲ್‌ಗ‌ಳ ಸೃಷ್ಟಿ ಮೂಲಕ 253 ಕೋಟಿ ರೂ. ಹೆಚ್ಚುವರಿಯಾಗಿ ಗುತ್ತಿಗೆದಾರರಿಗೆ ಪಾವತಿ ಮಾಡಿ ಸರ್ಕಾರಕ್ಕೆ ನಷ್ಟ ಉಂಟು ಮಾಡಲಾಗಿದೆ ಎನ್ನುವ ಸಂಗತಿ ಬಯಲಾಗಿದೆ.

2009-10ರಲ್ಲಿ 9 ಕಾಮಗಾರಿಗಳು, 2010-11ರ ಅವ ಧಿಯ ನಾಲ್ಕು ಕಾಮಗಾರಿಗಳಲ್ಲಿ ಇಷ್ಟೊಂದು ಲೋಪ ಉಂಟಾಗಿದೆ. ಒಟ್ಟು 13 ಕಾಮಗಾರಿಗಳಲ್ಲಿ ಗುತ್ತಿಗೆದಾರರಿಗೆ ಅಸಲಿಗೆ ಕೇವಲ 74.04 ಕೋಟಿ ರೂ. ಆರ್ಬಿಟ್ರೇಷನ್‌ ಕ್ಲೇಮ್‌ ಕೊಡಬೇಕಿತ್ತು. ಆದರೆ ಅ ಧಿಕಾರಿಗಳು ಗುತ್ತಿಗೆದಾರರ ಜತೆ ಶಾಮೀಲಾಗಿ 327.04 ಕೋಟಿ ರೂ. ಆರ್ಬಿಟ್ರೇಷನ್‌ ಕ್ಲೇಮ್‌ ನೀಡಿದ್ದಾರೆ. ಹೀಗಾಗಿ ಬರೋಬ್ಬರಿ 253.39 ಕೋಟಿ ರೂ.ನಷ್ಟು ಅವ್ಯವಹಾರ ಸಾಬೀತಾಗಿದೆ ಎಂದು ತನಿಖಾ ತಂಡ ವರದಿ ನೀಡಿದೆ.

Advertisement

28 ಎಂಜಿನಿಯರ್‌ ತಲೆದಂಡ: ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಟ್ಟು ಸರ್ಕಾರಕ್ಕೆ ನಷ್ಟ ಉಂಟು ಮಾಡಿದ ಒಟ್ಟು 46 ಜನ ಎಂಜಿನಿಯರ್‌ಗಳನ್ನು ಪಟ್ಟಿ ಮಾಡಲಾಗಿದೆ. ತನಿಖಾ ತಂಡ ನೀಡಿದ ವರದಿಯನ್ವಯ ಹಾಲಿ ಸಹಾಯಕ ಕಾರ್ಯಪಾಲ ಎಂಜಿನಿಯರ್‌(ಎಇಇ), ಸಹಾಯಕ ಎಂಜಿನಿಯರ್‌(ಎಇ), ಕಿರಿಯ ಎಂಜಿನಿಯರ್‌(ಜೆಇ) ಹುದ್ದೆಯಲ್ಲಿ ಕರ್ತವ್ಯದಲ್ಲಿರುವ 28 ಜನ ಎಂಜಿನಿಯರ್‌ಗಳನ್ನು ಅಮಾನತು ಮಾಡಿ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಿದ್ದರೆ, ನಿವೃತ್ತ 17 ಮಂದಿ (ಒಬ್ಬರು ಮೃತ) ಸೇರಿ 18 ಜನ ಎಂಜಿನಿಯರ್‌ಗಳ ಮೇಲೆ ನ್ಯಾಯಾಲಯದಲ್ಲಿ ಪ್ರತ್ಯೇಕ ಸಿವಿಲ್‌ ದಾವೆ ಹೂಡಲು ಜಲಸಂಪನ್ಮೂಲ ಇಲಾಖೆಯ ಅಧಿಧೀನ ಕಾರ್ಯದರ್ಶಿ ಎಸ್‌. ಹರ್ಷ ಅದೇಶ ಹೊರಡಿಸಿದ್ದಾರೆ.

ಶಿಸ್ತು ಕ್ರಮಕ್ಕೆ ಗುರಿಯಾದವರು
ಅನಂತಕುಮಾರ ಚೂರಿ-ಎಇಇ, ವಿನೋದಕುಮಾರ ಗುಪ್ತ-ಎಇಇ, ಎಂ. ಹನುಮಂತಪಪ್ಪ-ಎಇ, ಬಿ. ಶಿವಮೂರ್ತಿ-ಎಇ, ಸೂಗಪ್ಪ ಪ್ರಭಾರ-ಎಇಇ, ವಿ. ತಿಮ್ಮಣ್ಣ-ಎಇ, ಈಶ್ವರ ನಾಯಕ-ಎಇ, ಕೆ. ಶಾಂತರಾಜು-ಎಇ, ಬಸವರಾಜ ಹಳ್ಳಿ-ಎಇ, ಸಿ.ಎಚ್‌.ಜಿ. ವೆಂಕಟೇಶ್ವರ ರಾವ್‌-ಎಇ, ಜಿತೇಂದ್ರ-ಎಇ, ರಾಜೀವ್‌ ನಾಯಕ-ಎಇ, ವಿಶ್ವನಾಥ ಎಚ್‌.-ಎಇ, ಕೃಷ್ಣಮೂರ್ತಿ ಎಂ.-ಎಇ, ದೇವೇಂದ್ರಪ್ಪ- ಎಇ, ಯಲ್ಲಪ್ಪ-ಎಇ, ರವಿ ಕೆ.ಬಿ-ಜೆಇ, ಜಗನ್ನಾಥ ಕುಲಕರ್ಣಿ-ಜೆಇ, ಕನಕಪ್ಪ-ಜೆಇ, ಅಬ್ದುಲ್‌ ರಶೀದ್‌ಖಾನ್‌-ಜೆಇ, ಗಜಾನನ-ಜೆಇ, ಮೋಹನ್‌ಕುಮಾರ-ಜೆಇ, ಎಚ್‌.ಡಿ. ನಾಯಕ-ಜೆಇ, ಮಲ್ಲಪ್ಪ ನಾಗಪ್ಪ-ಜೆಇ, ಮಹಿಮೂದ-ಎಸ್‌ಡಿಎ,ನಾಗರಾಜ-ಎಸ್‌ಡಿಎ, ಆರೀಫ್‌ ಹುಸೇನ್‌-ಎಸ್‌ಡಿಎ,ಅಬ್ದುಲ್‌ ಹಕ್‌-ಅನುರೇಖಕಾರರು, ಸಿದ್ದಯ್ಯ-ಕೆಲಸ ಸಹಾಯಕ (ನಿವೃತ್ತ),
ಟಿ. ವೆಂಕಟೇಶ-ಇಇ (ನಿವೃತ್ತ), ಎಸ್‌.ಇ. ನಿಂಗಪ್ಪ-ಎಇ, ಬಿ.ಎ.ಪಾಂಡುರಂಗ-ಇಇ (ನಿವೃತ್ತ), ಓಂಪ್ರಕಾಶ-ಎಇಇ (ನಿವೃತ್ತ), ಬಿ.ಟಿ. ಷಡಕ್ಷರಯ್ಯ-ಎಇ (ನಿವೃತ್ತ),ವಿ. ಕಲ್ಲಪ್ಪ-ಇಇ (ನಿವೃತ್ತ), ಪಿ.ಎನ್‌.ಬಸವರಾಜ-ಜೆಇ (ನಿವೃತ್ತ), ಸದಾಶಿವ-ಎಇಇ (ನಿವೃತ್ತ), ಭೋಜನಾಯಕ ಕಟ್ಟಿಮನಿ-ಎಸ್‌ಇ (ನಿವೃತ್ತ),ಆರ್‌. ಕುಮಾರಸ್ವಾಮಿ- ಎಇಇ (ನಿವೃತ್ತ), ಜಿ. ಹನುಮಂತಪ್ಪ-ಇಇ (ನಿವೃತ್ತ), ಕೆ.ವೀರಸಿಂಗ್‌ ನಾಯಕ-ಇಇ (ನಿವೃತ್ತ), ಎಂ.ರಾಮಪ್ರಸಾದ-ಎಇಇ (ನಿವೃತ್ತ), ಆಂಜನೇಯ-ಎಇ (ನಿವೃತ್ತ), ಮಾರಪ್ಪ-ಎಸ್‌ಡಿಎ (ನಿವೃತ್ತ), ಕೆ.ಹನುಮಂತಪ್ಪ-ಎಇ (ನಿವೃತ್ತ) ಹಾಗೂ ಬಿ.ಆರ್‌. ಮುನೀಶ್‌-ಎಇಇ (ಮೃತ).

Advertisement

Udayavani is now on Telegram. Click here to join our channel and stay updated with the latest news.

Next