Advertisement

ರಸ್ತೆ ಹೊಂಡಕ್ಕೆ ಬಿದ್ದು ಸತ್ತ ಬೈಕ್‌ ಸವಾರೆ ವಿರುದ್ಧ ಕೇಸ್‌, ಆಕ್ರೋಶ

07:43 PM Jul 24, 2017 | Team Udayavani |

ಮುಂಬಯಿ : ರಸ್ತೆ ಹೊಂಡವನ್ನು ತಪ್ಪಿಸುವ ಯತ್ನದಲ್ಲಿ ಬೈಕ್‌ ಸವಾರನೋರ್ವ ಸತ್ತರೆ ಪೊಲೀಸರು ಯಾರ ವಿರುದ್ಧ ಕೇಸು ದಾಖಲಿಸಬೇಕು ? ಬೈಕ್‌ ಸವಾರ ನಿರ್ಲಕ್ಷ್ಯದ ಚಾಲನೆ ನಡೆಸಿದ್ದರಿಂದ ಅಪಘಾತ ಸಂಭವಿಸಿತೆಂದು ಆತನ ವಿರುದ್ಧ ಕೇಸು ದಾಖಲಿಸಬೇಕೇ ? ಅಥವಾ ರಸ್ತೆ ನಿರ್ವಹಣೆಯ ಜವಾಬ್ದಾರಿ ಹೊಂದಿರುವ ಸರಕಾರಿ ಇಲಾಖೆಯ ವಿರುದ್ಧ ಕೇಸು ದಾಖಲಿಸಬೇಕೇ ?

Advertisement

ರಸ್ತೆ ಸುರಕ್ಷಾ ಪರಿಣತರ ಪ್ರಕಾರ ಪೊಲೀಸರು ರಸ್ತೆ ನಿರ್ವಹಣೆಯ ಜವಾಬ್ದಾರಿ ಹೊಂದಿರುವ ಸರಕಾರಿ ಇಲಾಖೆಯ ವಿರುದ್ಧ ಕೇಸು ದಾಖಲಿಸಬೇಕು. ಆದರೆ ಪೊಲೀರು ಮಾಡುವುದು ತದ್ವಿರುದ್ಧ ! ರಸ್ತೆ ಹೊಂಡಕ್ಕೆ ಬಿದ್ದು ಸಾಯಲು ಅಥವಾ ಗಾಯಗೊಳ್ಳಲು ಬೈಕ್‌ ಸವಾರನ ನಿರ್ಲಕ್ಷ್ಯದ ಚಾಲನೆಯೇ ಕಾರಣವೆಂದು ಆತನ ವಿರುದ್ಧ (ಆತ ಸತ್ತರೂ ಕೂಡ) ಪೊಲೀಸರು ಕೇಸು ದಾಖಲಿಸುತ್ತಾರೆ; ಅಥವಾ ವ್ಯಕ್ತಿಯ ಸಾವಿಗೆ ಕಾರಣವಾಗುವ ರೀತಿಯಲ್ಲಿ ಅಪಘಾತ ಉಂಟುಮಾಡಿದ ವಾಹನ ಚಾಲಕನ ವಿರುದ್ಧ ಕೇಸು ದಾಖಲಿಸುತ್ತಾರೆ; ಹೊರತು ರಸ್ತೆ ನಿರ್ವಹಣೆಯಲ್ಲಿ ಬೇಜವಾಬ್ದಾರಿ ತೋರುವ ಸರಕಾರಿ ಇಲಾಖೆಯ ವಿರುದ್ಧ ಕೇಸು ದಾಖಲಿಸುವುದಿಲ್ಲ !

ಮೊನ್ನೆ ಭಾನುವಾರ ಮುಂಬಯಿ ಬಾಂದ್ರಾದ ನಿವಾಸಿ ಜಾಗೃತಿ ವಿರಾಜ್‌ ಹೋಗಳೆ ಎಂಬ ಮಹಿಳೆ ವಾರಾಂತ್ಯದ ಪಿಕ್‌ನಿಕ್‌ ಪ್ರಯುಕ್ತ ಜವಾಹರ್‌ ಜಲಪಾತ ವೀಕ್ಷಣೆಗೆಂದು ಬೈಕಿನಲ್ಲಿ ಹೋಗಿದ್ದರು. ಆಗ ಜೋರಾಗಿ ಮಳೆ ಬರುತ್ತಿತ್ತು. ಲಾರಿಯೊಂದನ್ನು ಓವರ್‌ಟೇಕ್‌ ಮಾಡುವ ಭರದಲ್ಲಿ ಆಕೆಯ ಬೈಕ್‌ ರಸ್ತೆ ಹೊಂಡಕ್ಕೆ ಬಿತ್ತು. ಒಡನೆಯೇ ಆಕೆ ಬೈಕನ್ನು ಎಡಕ್ಕೆ ಚಲಾಯಿಸಿದರು. ಪರಿಣಾಮವಾಗಿ ಲಾರಿ ಆಕೆಯ ಮೇಲೆ ಹರಿದು ಆಕೆ ದಾರುಣವಾಗಿ ಮೃತಪಟ್ಟರು. 

ಹೋಗಳೆ  ಅವರು ಈ ಹಿಂದೆ ಲೇಹ್‌ ಮತ್ತು ಲದ್ದಾಕ್‌ ನಂತಹ ದುರ್ಗಮ ಪ್ರದೇಶಗಳಿಗೆ ಬೈಕಿನಲ್ಲೇ ಹೋಗಿ ಬಂದ ಅನುಭವಿ ದ್ವಿಚಕ್ರ ವಾಹನ ಚಾಲಕಿ. ಮುಂಬಯಿಯಿಂದ ನೂರು ಕಿ.ಮೀ. ದೂರದ ವೈತಿ ಗ್ರಾಮಕ್ಕೆ ಸಮೀಪದಲ್ಲಿ ಭಾನುವಾರ ಬೆಳಗ್ಗೆ 9 ಗಂಟೆಗೆ ಲಾರಿ ಓವರ್‌ಟೇಕ್‌ ಮಾಡುವಾಗ ರಸ್ತೆ ಹೊಂಡದ ದುರಂತದಲ್ಲಿ ಹೋಗಳೆ ಮೃತಪಟ್ಟಿದ್ದರು. ಹೋಗಳೆ ಅವರ ದಾರುಣ ಸಾವಿಗೆ ಆಕೆಯ ನಿರ್ಲಕ್ಷ್ಯದ ಬೈಕ್‌ ಚಾಲನೆಯೇ ಕಾರಣವೆಂದು ಪೊಲೀಸರು, ಅಪಘಾತದಲ್ಲಿ ಮೃತಪಟ್ಟಿರುವ ಆಕೆಯ ವಿರುದ್ಧ ಸೆ.304(ಎ) ಪ್ರಕಾರ ಕೇಸು ದಾಖಲಿಸಿಕೊಂಡರು ! 

ರಸ್ತೆ ಸುರಕ್ಷಾ ಪರಿಣತ ಎ ವಿ ಶೆಣೈ ಅವರು ಹೇಳುವಂತೆ “ಸಾಮಾನ್ಯವಾಗಿ ವಾಹನ ಅಪಘಾತಗಳು ಸಂಭವಿಸಿದಾಗ ದೊಡ್ಡ ವಾಹನಗಳ ವಿರುದ್ಧ ಕೇಸ್‌ ಬುಕ್‌ ಮಾಡುವುದು ವಾಡಿಕೆ. ಈ ಪ್ರಕರಣದಲ್ಲಿ ಪೊಲೀಸರು ಬೈಕ್‌ ಸವಾರೆಯ ಮೇಲೆಯೇ ಕೇಸು ಬುಕ್‌ ಮಾಡಿರುವುದು ವಿಚಿತ್ರ. ಪೊಲೀಸರು ನಿಜಕ್ಕೂ ತರ್ಕಬದ್ಧ ರೀತಿಯಲ್ಲಿ ಕಾನೂನನ್ನು ಬಳಸುವುದು ಅಗತ್ಯ’.

Advertisement

“ಈ ಪ್ರಕರಣದಲ್ಲಿ ಹೊಗಾಳೆ ಅವರನ್ನೇ ಅಪಘಾತಕ್ಕೆ ಕಾರಣರೆಂದು ಪೊಲೀಸರು ಆರೋಪಿಸಿರುವುದು  ಸರಿಯಲ್ಲ; ಆಕೆ ರಸ್ತೆ ಹೊಂಡವನ್ನು ತಪ್ಪಿಸಲು ಯತ್ನಿಸಿದ್ದಾರೆ. ಪೊಲೀಸರು ರಸ್ತೆ ನಿರ್ವಹಣೆಯ ಹೊಣೆಗಾರಿಕೆ ಹೊಂದಿರುವ ಲೋಕೋಪಯೋಗಿ ಇಲಾಖೆ ವಿರುದ್ಧ ಅಥವಾ ಎಂಎಂಆರ್‌ಡಿ (ಮುಂಬಯಿ ಮೆಟ್ರೋಪಾಲಿಟನ್‌ ಪ್ರದೇಶಾಭಿವೃದ್ಧಿ ಪ್ರಾಧಿಕಾರದ) ವಿರುದ್ಧ ಕೇಸು ದಾಖಲಿಸಬೇಕು. ನಿಜವಾದ ಅಪರಾಧಿಗಳೆಂದರೆ ಅವರೇ. ನಿಜವಾದ ಅಪರಾಧಿಯ ವಿರುದ್ಧ ಕೇಸು ದಾಖಲಿಸುವುದು ಪೊಲೀಸರ ಕರ್ತವ್ಯ ಮತ್ತು ಹೊಣೆಗಾರಿಕೆ” ಎಂದು ಶೆಣೈ ಹೇಳುತ್ತಾರೆ. 

ಹಾಗಿದ್ದರೂ ಮುಂಬಯಿಯ ನಿವೃತ್ತ ಪೊಲೀಸ್‌ ಇನ್ಸ್‌ಪೆಕ್ಟರ್‌ ರಘುನಾಥ ದಳವಿ ಹೇಳುವುದು ಬೇರೆಯೇ!: ‘ಕೊನೆಗೂ ನಾವೆಲ್ಲ ಮನುಷ್ಯರೇ. ಅಪಘಾತದಲ್ಲಿ ಸತ್ತ ವ್ಯಕ್ತಿಯ ಕುಟುಂಬದವರು ಯಾತನೆಗೆ ಗುರಿಯಾಗುತ್ತಾರೆ ಎಂಬುದನ್ನು ನಾವೆಲ್ಲರೂ ಬಲ್ಲೆವು. ಆದರೆ ನಾವೆಲ್ಲ ಕಾನೂನಿಗೆ ಬದ್ಧರಾಗಿದ್ದೇವೆ; ನಾವು ಜನರಿಗೆ ಸಹಾಯ ಮಾಡಲು ಬಯಸುತ್ತೇವೆ; ಆದರೆ ಅದು ಸಾಧ್ಯವಾಗುವುದಿಲ್ಲ. ಕಾನೂನನ್ನು ನಾವು ಅನುಸರಿಸಲೇಬೇಕಾಗುತ್ತದೆ”. ಹಾಲಿ ಪ್ರಕರಣದಲ್ಲಿ ಹೊಗಾಳೆ ವಿರುದ್ಧ ಪೊಲೀಸರು ಕೈಗೊಂಡಿರುವ ನಿಷ್ಠುರ ಕಾನೂನು ಕ್ರಮದ ಬಗ್ಗೆ ಜನರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟೀಕೆ, ಖಂಡನೆಗಳು ಪ್ರವಾಹದಂತೆ ಹರಿದು ಬರತೊಡಗಿವೆ.

ಮುಂಬೈ: ಮಹಿಳಾ ಬೈಕರ್‌ ರಸ್ತೆ ಗುಂಡಿಗೆ ಆಹುತಿ
ಮುಂಬಯಿ:
ಮುಂಬೈನ ರಸ್ತೆಗಳಲ್ಲಿಯ ಗುಂಡಿಗಳು ತಂದೊಡ್ಡುತ್ತಿರುವ ಅಪಾಯದ ವಿರುದ್ಧ ರೇಡಿಯೋ ಜಾಕಿ ನಡೆಸುತ್ತಿರುವ ಅಭಿಯಾನ ಯಶಸ್ವಿಯಾಗುತ್ತಿರುವ ಬೆನ್ನಲ್ಲೇ ನಗರದ ಮಹಿಳಾ ಬೈಕರ್‌ ಒಬ್ಬರು ರಸ್ತೆ ಗುಂಡಿಯಿಂದಾಗಿ ಅಸುನೀಗಿದ್ದಾರೆ. ಮಹಿಳಾ ಬೈಕರ್‌ ಜಾಗೃತಿ ವಿರಾಜ್‌ ಹೋಗಲೆ(34) ತಮ್ಮ ಸ್ನೇಹಿತರೊಂದಿಗೆ ಜಾವ್ಹಾರ್‌ಗೆ ಬೈಕ್‌ ಸವಾರಿ ಮಾಡುತ್ತಿದ್ದರು. ಈ ವೇಳೆ ಗುಂಡಿ ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ಬೈಕ್‌ನಿಂದ ಕೆಳಗೆ ಬಿದ್ದರು. ಅದೇ ಸಮಯದಲ್ಲಿ ವೇಗವಾಗಿ ಬರುತ್ತಿದ್ದ ಲಾರಿಯೊಂದು ಅವರ ಮೇಲೆ ಹರಿದು ಅವರು ಸ್ಥಳದಲ್ಲೇ ಮೃತರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next