Advertisement

ಗಾಂಧಾರಿಯೇಕೆ ಪಂಚಪತಿವ್ರತೆಯರ ಸಾಲಿಗೆ ಸೇರಲಿಲ್ಲ?

07:48 PM Jan 20, 2020 | mahesh |

ಪಂಚ ಪತಿವ್ರತೆಯರೆಂದು ಗೌತಮನ ಪತ್ನಿ ಅಹಲ್ಯೆ, ಪಾಂಡುರಾಜನ ಪತ್ನಿ ಕುಂತಿ, ಬೃಹಸ್ಪತಿಯ ಪತ್ನಿ ತಾರಾ, ರಾವಣನ ಪತ್ನಿ ಮಂಡೋದರಿ, ಪಂಚ ಪಾಂಡವರ ಪತ್ನಿ ದ್ರೌಪದಿಯನ್ನು ಹೇಳಲಾಗುತ್ತದೆ. ಸತ್ಯವಾನನ ಪತ್ನಿ ಸಾವಿತ್ರಿಯನ್ನು, ಧೃತರಾಷ್ಟ್ರನ ಪತ್ನಿ ಗಾಂಧಾರಿಯನ್ನು ಹೇಳುವುದಿಲ್ಲ. ಇದಕ್ಕೆ ಮಾನದಂಡಗಳೇನು? ಪತಿವ್ರತೆ ಎಂದು ಕರೆಯಬೇಕಾದರೆ ಏನೇನು ಗುಣಗಳು ಅರ್ಹತೆಗಳಿರಬೇಕು? ಈ ಕಾಲಘಟ್ಟದಲ್ಲಿ ಈ ಪ್ರಶ್ನೆಗಳು ಬಂದೇ ಬರುತ್ತವೆ. ಧೃತರಾಷ್ಟ್ರನ ಪತ್ನಿ ಗಾಂಧಾರಿ ಜೀವನಪೂರ್ತಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡೇ ಇರಬೇಕೆಂದರೆ, ಆಕೆಯ ಮನೋಸ್ಥೈರ್ಯವನ್ನು ಗಮನಿಸಿ. ಎಂತಹ ಅಸಾಧಾರಣ ಶಕ್ತಿಯಿರಬೇಕು? ಹಾಗಿದ್ದರೂ ಪಂಚಪತಿವ್ರತೆಯರ ಪಟ್ಟಿಯಲ್ಲಿ ಆಕೆಯ ಹೆಸರು ಬರುವುದಿಲ್ಲ.

Advertisement

ಮೇಲಿನ ಐವರು ಪೈಕಿ ಗೌತಮನ ಪತ್ನಿ ಅಹಲ್ಯೆ, ಇಂದ್ರನೊಂದಿಗೆ ಗುಪ್ತ ಸಂಬಂಧ ಹೊಂದಿದ್ದರಿಂದ ಪತಿಯಿಂದ ಸಾವಿರ ವರ್ಷ ಕಲ್ಲಾಗು ಎಂದು ಶಾಪಕ್ಕೊಳಗಾಗುತ್ತಾಳೆ. ಮುಂದೆ ರಾಮನಿಂದ ಶಾಪಮುಕ್ತಳಾಗುತ್ತಾಳೆ. ಗೌತಮನ ವೇಷದಲ್ಲಿ ಧಾವಿಸಿಬಂದ ಇಂದ್ರನನ್ನು ಕೂಡಿದ್ದರಿಂದ, ಅಹಲ್ಯೆಯ ತಪ್ಪಿಲ್ಲ ಎಂದೂ ಕೆಲವರು ಹೇಳುತ್ತಾರೆ. ಇನ್ನು ಕೆಲವರು ಆಕೆಗೆ ಅದು ಇಂದ್ರನೆ ಗೊತ್ತಿತ್ತು, ಅದಕ್ಕಾಗಿಯೇ ನಿಜವಾಗಿ ಪತಿಯೇ ಬಂದಾಗ ಬೆಕ್ಕಿನ ರೂಪದಲ್ಲಿ ಹೊರಹೊರಡು ಎಂದು ಇಂದ್ರನಿಗೆ ಸೂಚಿಸುತ್ತಾಳೆ ಎನ್ನುತ್ತಾರೆ. ಇರಬಹುದು. ಈ ಚರ್ಚೆಗಳನ್ನು ಎಷ್ಟು ದೂರಕ್ಕೆ ಬೇಕಾದರೂ ಒಯ್ಯಬಹುದು. ಅದಿರಲಿ ಅಡ್ಡಸಂಬಂಧ ಹೊಂದಿದ್ದ ಅಹಲ್ಯೆಗೆ ಯಾವ ಆಧಾರದಲ್ಲಿ ಪತಿವ್ರತೆಯ ಪಟ್ಟ ಸಿಕ್ಕಿತು?

ಈ ಪ್ರಶ್ನೆಗಳನ್ನು ಅರ್ಥ ಮಾಡಿಕೊಳ್ಳಬೇಕಾದರೆ ಇವರ ಬದುಕನ್ನು ಗಮನಿಸಬೇಕು. ಒಬ್ಬೊಬ್ಬರ ಬದುಕುಗಳೂ ಅಗ್ನಿದಿವ್ಯವೇ. ಅಹಲ್ಯೆ ಒಮ್ಮೆ ಎಡವಿದರೂ, ಮುಂದಿನ ಸಾವಿರವರ್ಷಗಳ ಕಾಲ ಕಲ್ಲಾಗಿ ಬದುಕುತ್ತಾಳೆ. ಪುರಾಣದಲ್ಲಿ ಮಾಡಿರುವ ಈ ವರ್ಣನೆಯನ್ನು ಕೇವಲ ಉಪಮೆ ಅಥವಾ ರೂಪಕವಾಗಿ ಭಾವಿಸಬೇಕು. ಗಂಡನ ಶಾಪದಿಂದ ಒದಗಿಬಂದ ಕಷ್ಟಗಳನ್ನೆಲ್ಲ ಆಕೆ ಕಲ್ಲುಮನಸ್ಸು ಮಾಡಿಕೊಂಡು ಎದುರಿಸುತ್ತಾಳೆ, ಕಷ್ಟಗಳಿಗೆ ಕಲ್ಲಾಗುತ್ತಾಳೆ, ಕಷ್ಟಗಳಿಂದ ಕಲ್ಲಾಗುತ್ತಾಳೆ ಎನ್ನುವುದು ಅದರ ಸೂಚ್ಯರ್ಥ. ಇನ್ನೊಂದು ರೀತಿಯಲ್ಲಿ ನೋಡಿದರೆ, ಆಕೆ ತನ್ನ ಗಂಡನ ಪಾಲಿಗೆ ಕಲ್ಲಿನಂತೆ, ಅಂದರೆ ಜೀವವಿಲ್ಲದವಳಂತೆ! ಮಾಡಿದ ಒಂದು ತಪ್ಪನ್ನು ತಿದ್ದಿಕೊಳ್ಳಲು ಆಕೆ ಕಲ್ಲಿನಂತಹ ಬದುಕನ್ನು ಬಾಳುತ್ತಾಳೆ. ಅದು ಅವಳನ್ನು ಪರಮಪವಿತ್ರಳನ್ನಾಗಿ ಮಾಡುತ್ತದೆ. ಬಹುಶಃ ಗಂಡನಿಂದ ಪರಿತ್ಯಕ್ತಳಾದ ನಂತರ ಆಕೆ ತಪಸ್ವಿನಿಯಾಗಿ, ಪರಿಶುದ್ಧಳಾಗುತ್ತಾಳೆ. ಅದಕ್ಕೆ ವರವೆಂಬಂತೆ ಭಗವಂತ ರಾಮನ ರೂಪದಲ್ಲಿ ಬರುತ್ತಾನೆ. ಇದು ಅರ್ಥವಾದರೆ ಅಹಲ್ಯೆಯನ್ನು ಯಾಕೆ ಪತಿವ್ರತೆ ಎಂದರು ಎನ್ನುವುದು ಸು#ರಿಸುತ್ತದೆ.

ಉತ್ತರಕಾಂಡದಲ್ಲಿ ಎಸ್‌.ಎಲ್‌.ಭೈರಪ್ಪನವರು ಅಹಲ್ಯೆಯ ಜೀವನವನ್ನು ತರುತ್ತಾರೆ. ಇಲ್ಲಿನ ಅಹಲ್ಯೆ ಸಂಪೂರ್ಣ ಭಿನ್ನ. ಇಂದ್ರನೊಂದಿಗೆ ಸೇರಿದ್ದು ಗಂಡನಿಗೆ ಗೊತ್ತಾದ ನಂತರ, ಅವಳು ಪರಿತ್ಯಕ್ತಳಾಗುತ್ತಾಳೆ. ವ್ಯಸನದಿಂದ ಮನೆಯೊಳಗೇ ಸೇರಿಕೊಳ್ಳುತ್ತಾಳೆ. ಯಾರಿಗೂ ಮುಖ ತೋರಿಸಲು ಅವಳಿಗೆ ಮನಸ್ಸಾಗುವುದಿಲ್ಲ. ಸಂಪೂರ್ಣ ಜುಗುಪ್ಸಿತ ಬದುಕನ್ನು ಬಾಳಿ, ಶುದ್ಧಿಯಾಗುತ್ತಾಳೆ. ಆ ಹೊತ್ತಿನಲ್ಲಿ ಗೌತಮರು ಕೂಡ ನೊಂದುಬೆಂದಿರುತ್ತಾರೆ ಎನ್ನುವುದು ಭೈರಪ್ಪನವರು ಮೂಡಿಸಿದ ಅಂತರಾರ್ಥಗಳು. ಇರಬಹುದು, ಇಲ್ಲದಿರಬಹುದು.

ಮೂಲಪ್ರಶ್ನೆಗೆ ಬರೋಣ. ಗಾಂಧಾರಿಯ ಮನಶ್ಕಕ್ತಿ ಎಂತಹದ್ದೇ ಆಗಿರಬಹುದು. ಅವಳು ಅಹಲ್ಯೆ ಅನುಭವಿಸಿದ ಕಷ್ಟವನ್ನೇನು ಅನುಭವಿಸಲಿಲ್ಲ. ಕುರುಕುಲದ ರಾಣಿಯಾಗಿ ಅರಮನೆಯಲ್ಲಿ ಇದ್ದವಳು, ಬಿಸಿಲು ಬೆಂಕಿಯೆನ್ನದೇ ಬೇಯುವ, ಕಾಮುಕರ ಕಣ್ಣಿಗೆ ಬಿದ್ದು ಪರದಾಡುವ, ಊಟಕ್ಕೇನು ಮಾಡುವುದು ಎಂದು ಚಿಂತಿಸುವ ಸ್ಥಿತಿಯಿರಲಿಲ್ಲ. ಉಳಿದೈವರು ಸ್ತ್ರೀಯರು ಬದುಕಿನಲ್ಲಿ ಏನೇನು ಸಾಧ್ಯವೋ ಅಷ್ಟೆಲ್ಲ ಕಷ್ಟಗಳನ್ನು ಪಟ್ಟು, ಅದರ ಮಧ್ಯೆಯೂ ತಮ್ಮ ಪಾವಿತ್ರ್ಯವನ್ನು ಕಾಪಾಡಿಕೊಂಡರು. ಎಂತಹ ಹಂತದಲ್ಲೂ ಮೌಲ್ಯಗಳೊಂದಿಗೆ ರಾಜಿ ಮಾಡಿಕೊಳ್ಳಲಿಲ್ಲ. ಈ ಪಾವಿತ್ರ್ಯವೇ ಅವರನ್ನು ಪರಮಪತಿವ್ರತೆಯನ್ನಾಗಿಸಿದ್ದು.

Advertisement

-ನಿರೂಪ

Advertisement

Udayavani is now on Telegram. Click here to join our channel and stay updated with the latest news.

Next