Advertisement

ಮೈತ್ರಿಗೆ ಕೈ ಅಭ್ಯರ್ಥಿಗಳೇ ಪ್ರತ್ಯಸ್ತ್ರ: ಕಮಲ ತಂತ್ರ 

01:54 AM Mar 22, 2019 | Team Udayavani |

ರಾಜ್ಯದಲ್ಲಿ ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿ ಪಕ್ಷಗಳ ಒಮ್ಮತದ ಅಭ್ಯರ್ಥಿಗಳು ಕಣಕ್ಕಿಳಿಯುವ ಕ್ಷೇತ್ರಗಳಲ್ಲಿ ಬಿಜೆಪಿಯು ತನ್ನದೇ ಸಮರ್ಥ ಅಭ್ಯರ್ಥಿಗಳ ಜತೆಗೆ ಕಾಂಗ್ರೆಸ್‌ ತೊರೆದು ಪಕ್ಷ ಸೇರಿದ ಮೂವರಿಗೆ ಟಿಕೆಟ್‌ ನೀಡುವ ಮೂಲಕ ಅವರನ್ನೇ “ಪ್ರತ್ಯಸ್ತ್ರ’ವಾಗಿ ಕಣಕ್ಕಿಳಿಸುವ ಪ್ರಯೋಗ ನಡೆಸಿದೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 16 ಕ್ಷೇತ್ರಗಳಲ್ಲಿ (ಬೆಂಗಳೂರು ದಕ್ಷಿಣ ಕ್ಷೇತ್ರ ಖಾಲಿ ಇದೆ) ಬಿಜೆಪಿ ಸಂಸದರು ಹಾಗೂ ಉಳಿದ 12 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನ 10 ಹಾಗೂ ಜೆಡಿಎಸ್‌ನ ಇಬ್ಬರು ಸಂಸದರಿದ್ದಾರೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚಿಸಿರುವ ಕಾಂಗ್ರೆಸ್‌- ಜೆಡಿಎಸ್‌ ಲೋಕಸಭಾ ಚುನಾವಣೆಗೂ ಮೈತ್ರಿ ಮುಂದುವರಿಸಿರುವ ಹಿನ್ನೆಲೆಯಲ್ಲಿ ಬಿಜೆಪಿಯು ಅಳೆದು ತೂಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ.ಅನಿರೀಕ್ಷಿತ ಫ‌ಲಿತಾಂಶದ ನಿರೀಕ್ಷೆಯಲ್ಲಿರುವ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡದೆ ಕಾದು ನೋಡುವ ತಂತ್ರ ಅನುಸರಿಸಿದೆ. ಈ ಅಭ್ಯರ್ಥಿಗಳ ಆಯ್ಕೆಗೆ ಕಾರಣವಾದ ಅಂಶಗಳು…

Advertisement

ವೈಯಕ್ತಿಕ ಜನಪ್ರಿಯತೆ
ಕಲಬುರಗಿ – ಡಾ.ಉಮೇಶ್‌ ಜಾಧವ್‌
ಲಂಬಾಣಿ ಸಮುದಾಯದ ನಾಯಕರಾದ ಡಾ.ಉಮೇಶ್‌ ಜಾಧವ್‌ ಅವರು ವೈಯಕ್ತಿಕವಾಗಿ ಜನಪ್ರಿಯತೆ ಹೊಂದಿದ್ದು, ಲಂಬಾಣಿ ಸಮುದಾಯದ ಪ್ರಭಾವಿ ನಾಯಕರಾಗಿದ್ದಾರೆ.ಈಗಾಗಲೇ ಕ್ಷೇತ್ರದಲ್ಲಿ ಪ್ರಬಲ ನಾಯಕರೆನಿಸಿದ್ದ ಈಡಿಗ ಸಮುದಾಯದ ಮಾಲೀಕಯ್ಯ ಗುತ್ತೇದಾರ್‌, ಕೋಲಿ ಸಮುದಾಯದ ಬಾಬುರಾವ್‌ ಚಿಂಚನಸೂರ್‌ ಅವರು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದಾರೆ. ಇದೀಗ ಉಮೇಶ್‌ ಜಾಧವ್‌ ಅವರನ್ನು ಪಕ್ಷಕ್ಕೆ ಸೆಳೆದು ಅಭ್ಯರ್ಥಿಯಾಗಿಸಿರುವುದರಿಂದ ಲಂಬಾಣಿ ಸಮುದಾಯದ ಬೆಂಬಲ ಸಿಗುವ ನಿರೀಕ್ಷೆಯಿದೆ. ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಭಾವಿಯಾಗಿರುವುದರಿಂದ ಅವರ ವಿರುದ್ಧ  ಸಮರ್ಥ ಅಭ್ಯರ್ಥಿ ಎಂದೇ ಬಿಂಬಿತವಾದ ಉಮೇಶ್‌ ಜಾಧವ್‌ ಅವರನ್ನು ಬಿಜೆಪಿ ಕಣಕ್ಕಿಲಿಸಿದೆ.

ಸ್ಥಳೀಯರು

ಬಳ್ಳಾರಿ – ದೇವೇಂದ್ರ
ಹರಪನಹಳ್ಳಿಯ ಕಾಂಗ್ರೆಸ್‌ ಮುಖಂಡರಾಗಿದ್ದ ದೇವೇಂದ್ರ ಕಳೆದ ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿ ಸೇರಿದ್ದರು. ಸ್ಥಳೀಯರಾದ ಅವರು ಮಾಜಿ ಸಚಿವರಾದ ಕಾಂಗ್ರೆಸ್‌ ಶಾಸಕ ರಮೇಶ್‌ ಜಾರಕಿಹೊಳಿ ಅವರ ಸಂಬಂಧಿಯೂ ಆಗಿದ್ದಾರೆ. ಇದೇ ಕ್ಷೇತ್ರದ ವ್ಯಾಪ್ತಿಯ ಕಾಂಗ್ರೆಸ್‌ ಶಾಸಕ ಬಿ.ನಾಗೇಂದ್ರ ಅವರ ಸಹೋದರ ಬಿ.ವೆಂಕಟೇಶ ಪ್ರಸಾದ್‌ ಅವರು ಇತ್ತೀಚೆಗೆ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದು, ಟಿಕೆಟ್‌ ಆಕಾಂಕ್ಷಿ ಯಾಗಿದ್ದರು. ಆದರೆ ಅವರನ್ನು ಸಮಾಧಾನಪಡಿಸುವಲ್ಲಿ ಪಕ್ಷ ಯಶಸ್ವಿಯಾಗಿದೆ. ರಮೇಶ ಜಾರಕಿಹೊಳಿ, ಬಿ.ನಾಗೇಂದ್ರ ಅವರು ಕಾಂಗ್ರೆಸ್‌ನಿಂದ ಅಂತರ ಕಾಯ್ದುಕೊಂಡಿರುವುದು ರಹಸ್ಯವಾಗಿ ಉಳಿದಿಲ್ಲ.

ಪ್ರಜ್ವಲ್‌ಗೆ ತೀವ್ರ ಸ್ಪರ್ಧೆ ಸಾಧ್ಯತೆ

Advertisement

ಹಾಸನ -‌ ಎ.ಮಂಜು
ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹಾಗೂ ಅವರ ಕುಟುಂಬದ ವಿರುದ್ಧ  ತಮ್ಮ ರಾಜಕೀಯ ಜೀವನದುದ್ದಕ್ಕೂ ಪ್ರತಿರೋಧ ವ್ಯಕ್ತಪಡಿಸುತ್ತಲೇಬೆಳೆದ ಮೂಲನಿವಾಸಿ ಎ.ಮಂಜು ಅವರನ್ನು ಬಿಜೆಪಿ  ಈ ಬಾರಿ ಹಾಸನದಿಂದ ಕಣಕ್ಕಿಳಿಸಿದೆ. ಹಾಸನ ಕ್ಷೇತ್ರದಲ್ಲಿ ಇಬ್ಬರು ಬಿಜೆಪಿ ಶಾಸಕರಿದ್ದು, ದೇವೇಗೌಡರ ಕುಟುಂಬದ ಕುಡಿ ಪ್ರಜ್ವಲ್‌ ರೇವಣ್ಣಗೆ ಪ್ರಬಲ ಸ್ಪರ್ಧೆಯೊಡ್ಡುವ ಸಾಮರ್ಥಯ ಎ.ಮಂಜು ಅವರಿಗಿದೆ ಎಂಬ ಉದ್ದೇಶದಿಂದ ಅವರ ಹೆಸರನ್ನು ಬಿಜೆಪಿ ಅಂತಿಮಗೊಳಿಸಿದೆ. ದೇವೇಗೌಡರ ಕುಟುಂಬ ರಾಜಕೀಯ ವಿರುದ್ಧ ದ ಮತಗಳ ಜತೆಗೆ ಜಿಲ್ಲೆಯಲ್ಲಿ ಕಡೆಗಣಿಸಲ್ಪಟ್ಟ ಹಾಗೂ ದೌರ್ಜನ್ಯಕ್ಕೆ ಒಳಗಾದ ಕಾಂಗ್ರೆಸ್‌ ಮತಗಳನ್ನು ಸೆಳೆಯುವಲೆಕ್ಕಾಚಾರದಲ್ಲಿ ಅದೇ ಸಮುದಾಯದ ಮಂಜು ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಮತ ಸೆಳೆಯಲು ಯತ್ನ

ಚಿತ್ರದುರ್ಗ – ಎ.ನಾರಾಯಣಸ್ವಾಮಿ
ಬಿಜೆಪಿ ಸರ್ಕಾರದ ಅವಧಿಯಲ್ಲಿ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎ.ನಾರಾಯಣಸ್ವಾಮಿ ಯವರು ಬಿಜೆಪಿಯ ಹುರಿಯಾಳಾಗಿದ್ದಾರೆ. ಕ್ಷೇತ್ರದಲ್ಲಿ ಆರು ಬಿಜೆಪಿ ಶಾಸಕರಿರುವುದು ಬಿಜೆಪಿಗೆ ಅನುಕೂಲಕರವಾಗಿ ಮಾರ್ಪಟ್ಟಿದೆ. ಜತೆಗೆ ಕಾಂಗ್ರೆಸ್‌ನ ಹಾಲಿ ಸಂಸದ ಚಂದ್ರಪ್ಪ ಅವರು ಪರಿಶಿಷ್ಟ ಜಾತಿ ಎಡಗೈ ಸಮುದಾಯದವರಾಗಿದ್ದು, ಅದೇ ಸಮುದಾಯದ ನಾರಾಯಣಸ್ವಾಮಿಯವರನ್ನು ಕಣಕ್ಕಿಳಿಸುವ ಮೂಲಕ ಎಡಗೈ ಸಮುದಾಯ ಮತಗಳನ್ನು ಪ್ರಧಾನವಾಗಿ ಗಳಿಸುವ ಲೆಕ್ಕಾಚಾರ ನಡೆಸಿದೆ.

ಪ್ರಭಾವಿ ನಾಯಕ

ತುಮಕೂರು-ಬಸವರಾಜು ತುಮಕೂರು ಕ್ಷೇತ್ರದಿಂದ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡರು ಸ್ಪರ್ಧಿಸಲಿರುವ ಹಿನ್ನೆಲೆಯಲ್ಲಿ ಸ್ಥಳೀಯವಾಗಿ ಪ್ರಭಾವಿ ಎನಿಸಿದ ಮಾಜಿ ಸಂಸದ ಜಿ.ಎಸ್‌.ಬಸವರಾಜು ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಈ ಕ್ಷೇತ್ರದಿಂದ ಮಾಜಿ ಶಾಸಕ ಸುರೇಶ್‌ಗೌಡ, ಜಗ್ಗೇಶ್‌ ಅವರ ಹೆಸರು ಪ್ರಸ್ತಾಪವಾಗಿದ್ದರೂ ದೇವೇಗೌಡರು  ಸ್ಪರ್ಧಿಸಿದರೆ ಒಕ್ಕಲಿಗ ಅಭ್ಯರ್ಥಿ ಕಣಕ್ಕಿಳಿಸುವುದು ಸೂಕ್ತವಲ್ಲ ಎಂಬ ಕಾರಣಕ್ಕೆ ಲಿಂಗಾಯತ ಸಮುದಾಯದ ಬಸವರಾಜು ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ.

ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ

ಚಿಕ್ಕಬಳ್ಳಾಪುರ -‌ ಬಿ.ಎನ್‌.ಬಚ್ಚೇಗೌಡ ಕಳೆದ ಲೋಕಸಭಾ ಚುನಾವಣೆಯಲ್ಲಿ 9,520 ಮತಗಳ ಅಂತರದಿಂದ ಪರಾಭವಗೊಂಡಿದ್ದ ಬಚ್ಚೇಗೌಡ ಮತ್ತೂಮ್ಮೆ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಕಳೆದ ಬಾರಿ ಕುಮಾರಸ್ವಾಮಿಯವರು ಜೆಡಿಎಸ್‌ನಿಂದ ಸ್ಪರ್ಧಿಸಿ 3.46 ಲಕ್ಷ ಮತಗಳನ್ನು ಪಡೆದಿದ್ದರು. ಇದರಲ್ಲಿ ಒಕ್ಕಲಿಗರ ಮತಗಳೇ ಸಿಂಹಪಾಲು ಎನ್ನಲಾಗಿದೆ.ಇದೀಗ ಕಾಂಗ್ರೆಸ್‌ಗೆ ಕ್ಷೇತ್ರವನ್ನು ಬಿಟ್ಟು ಕೊಟ್ಟಿರುವ ಹಿನ್ನೆಲೆ ಯಲ್ಲಿ ಒಕ್ಕಲಿಗ ಮತ ಗಳನ್ನು ಸೆಳೆದರೆ ಗೆಲುವು ಸುಲಭ ಎಂಬುದು ಬಿಜೆಪಿ ಲೆಕ್ಕಾಚಾರ.

ಹಾಲಿ ಸಂಸದರ ರಾಜಕೀಯ ಗುರು

ಚಾಮರಾಜ ನಗರ-‌ ಶ್ರೀನಿವಾಸ್‌ ಪ್ರಸಾದ್‌ ಹಾಲಿ ಸಂಸದ ಧ್ರುವನಾರಾಯಣ್‌ ಅವರನ್ನು
ಮಣಿಸಲು ಅವರ ರಾಜಕೀಯ ಗುರು ಶ್ರೀನಿವಾಸ ಪ್ರಸಾದ್‌ ಅವರನ್ನೇ ಬಿಜೆಪಿ ಅಖಾಡಕ್ಕಿಳಿಸಿದೆ. ಚಾಮರಾಜ ನಗರದಲ್ಲಿ ದಲಿತ ಸಮುದಾಯದ ಮೇಲೆ ತಮ್ಮದೇ ಆದ ಪ್ರಭಾವ ಹೊಂದಿರುವ ಶ್ರೀನಿವಾಸ್‌ ಪ್ರಸಾದ್‌ ಅವರು ಸಿದ್ದರಾಮಯ್ಯ ಆಪ್ತ ಬಳಗದಲ್ಲಿ ಸೇರಿದ್ದರು. ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಕೈಬಿಟ್ಟ ಕಾರಣಕ್ಕೆ ದೂರವಾದ ಪ್ರಸಾದ್‌, ನಂಜನಗೂಡು ಉಪಚುನಾವಣೆಯಲ್ಲಿ ಪರಾಭವಗೊಂಡಿದ್ದರು.

ಎಂ. ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next