Advertisement

ರಫೇಲ್ ಡೀಲ್; ನಿಮ್ಮ ಮಾಹಿತಿಯ ಮೂಲ ಬಹಿರಂಗಪಡಿಸಿ; ರಾಹುಲ್ ಗೆ ಶಾ

02:34 PM Dec 14, 2018 | Team Udayavani |

ನವದೆಹಲಿ:ರಫೇಲ್ ಯುದ್ಧ ವಿಮಾನ ಖರೀದಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಸ್ವಾಗತಾರ್ಹ. ಗೆಲುವು ಯಾವಾಗಲೂ ಸತ್ಯದ ಕಡೆಗೆ ಇರುತ್ತದೆ. ಆದರೆ ದುರಾದೃಷ್ಟ ಎಂಬಂತೆ ದೇಶದ ಹಳೆಯ ಪಕ್ಷ ಜನರನ್ನು ಈ ವಿಚಾರದಲ್ಲಿ ತಪ್ಪು ದಾರಿಗೆ ಎಳೆದಿತ್ತು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದರು.

Advertisement

ರಫೇಲ್ ಯುದ್ಧ ವಿಮಾನ ಖರೀದಿ ವಿಚಾರಕ್ಕೆ ಸಂಬಂಧಿಸಿಂತೆ ಶುಕ್ರವಾರ ಸುಪ್ರೀಂಕೋರ್ಟ್ ನ ತ್ರಿಸದಸ್ಯ ಪೀಠ ಅರ್ಜಿಯನ್ನು ವಜಾಗೊಳಿಸಿ ತೀರ್ಪು ಪ್ರಕಟಿಸಿದ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಶಾ ಮಾತನಾಡಿದರು.

ರಫೇಲ್ ಡೀಲ್ ವಿಚಾರದಲ್ಲಿ ದೇಶದ ಜನರ ದಿಕ್ಕು ತಪ್ಪಿಸಲು ರಾಹುಲ್ ಗಾಂಧಿಗೆ ಹೇಳಿಕೊಟ್ಟವರು ಯಾರು ಎಂಬುದನ್ನು ಗೊತ್ತುಪಡಿಸಬೇಕು ಎಂದರು. ರಫೇಲ್ ಖರೀದಿಗೆ ಸಂಬಂಧಿಸಿದಂತೆ ಸಂಸತ್ ನಲ್ಲಿ ಚರ್ಚೆ ನಡೆಸಲು ನಾವು ಸಿದ್ಧರಾಗಿದ್ದೇವೆ ಎಂದು ತಿಳಿಸಿದರು.

ರಾಹುಲ್ ಗಾಂಧಿ ಸುಳ್ಳು ಆರೋಪಕ್ಕೆ ಸುಪ್ರೀಂಕೋರ್ಟ್ ತಕ್ಕ ಉತ್ತರ ನೀಡಿದೆ. ರಾಜಕೀಯ ಲಾಭ ಪಡೆಯಲು ಕಾಂಗ್ರೆಸ್ ರಫೇಲ್ ವಿಚಾರದಲ್ಲಿ ಸುಳ್ಳು ಹೇಳಿತ್ತು. ರಫೇಲ್ ವಿಚಾರದಲ್ಲಿ ಮೋದಿ ಅಲ್ಲ, ರಾಹುಲ್ ಗಾಂಧಿಯ ಬಣ್ಣವೇ ಬಯಲಾಗಿದೆ ಎಂದು ವಾಗ್ದಾಳಿ ನಡೆಸಿದರು.

Advertisement

ದೇಶದ ಭದ್ರತೆ ವಿಚಾರದಲ್ಲಿ ಕಾಂಗ್ರೆಸ್ ಧಕ್ಕೆ ತರಲು ಯತ್ನಿಸಿದೆ ಎಂದು ದೂರಿದರು. ಒಂದು ವೇಳೆ ಕಾಂಗ್ರೆಸ್ ಬಳಿ ದಾಖಲೆ ಇದ್ದಿದ್ದರೆ ಸುಪ್ರೀಂಕೋರ್ಟ್ ಗೆ ಯಾಕೆ ಹೋಗಲಿಲ್ಲ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ನ “ಬಿ” ಟೀಮ್ ಕೋರ್ಟ್ ಮೆಟ್ಟಿಲು ಹತ್ತಿತ್ತು. ಸಂಸತ್ ನಲ್ಲಿ ರಫೇಲ್ ಬಗ್ಗೆ ಚರ್ಚೆ ನಡೆಸಲು ಜಂಟಿ ಸಂಸದೀಯ ಸಮಿತಿಯನ್ನು ರಚಿಸಲಾಗಿತ್ತು. ನಾನು ಕಾಂಗ್ರೆಸ್ ಪಕ್ಷಕ್ಕೆ ಸವಾಲು ಹಾಕುತ್ತಿದ್ದೇನೆ, ಈ ಬಗ್ಗೆ ಚರ್ಚೆ ನಡೆಸಬೇಕು ಎಂದು ಹೇಳಿದರು.

10 ವರ್ಷಗಳ ಯುಪಿಎ ಆಡಳಿತಾವಧಿಯಲ್ಲಿ ರಫೇಲ್ ಡೀಲ್ ಅನ್ನು ಅಂತಿಮಗೊಳಿಸಿಲ್ಲ ಯಾಕೆಂದರೆ ಅವರಿಗೆ ಬರಬೇಕಿದ್ದ “ಕಮಿಷನ್” ಇತ್ಯರ್ಥವಾಗಿಲ್ಲವಾಗಿತ್ತು ಎಂದು ತಿರುಗೇಟು ನೀಡಿದರು. ರಫೇಲ್ ವಿಚಾರದಲ್ಲಿ ದೇಶದ ಜನತೆಗೆ ಸುಳ್ಳು ಮಾಹಿತಿ ನೀಡಿದ ರಾಹುಲ್ ಗಾಂಧಿ, ದೇಶದ ಜನತೆ ಹಾಗೂ ಸೇನೆಯ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next