Advertisement

ಸರ್ಕಾರಿ ಆಡಳಿತದ ದಕ್ಷತೆ ಹೆಚ್ಚಿಸುವ ವಿಧಾನವೇನು? 

12:30 AM Jan 04, 2019 | |

ನಮಗೆ ಸಿಕ್ಕಿದ ಸ್ವಾತಂತ್ರದ ಮಹತ್ವವನ್ನು ಸರಿಯಾಗಿ ನಾವು ಅರ್ಥಮಾಡಿಕೊಂಡಿಲ್ಲ. ನಾವು ಗಾಂಧೀಜಿಯವರ ಅಹಿಂಸಾ ತತ್ವದಂತೆ ಚಳವಳಿ ನಡೆಸಿ ಹೇಗೋ ಸ್ವಾತಂತ್ರ್ಯಗಳಿಸಿದೆವು. ಒಂದಷ್ಟು ಸಾವು ನೋವುಗಳು ಸಂಭವಿಸಿರಬಹುದು. ಆದರೆ ಕೆಲವು ಪ್ರಜಾಸತ್ತಾತ್ಮಕ ರಾಷ್ಟ್ರಗಳ, ಮುಖ್ಯವಾಗಿ ಸಂಯುಕ್ತ ಅಮೆರಿಕದ ಸ್ವತಂತ್ರಪೂರ್ವ ಇತಿಹಾಸವನ್ನು ಗಮನಿಸುವಾಗ ಅಲ್ಲಿ ನಡೆದ ರಕ್ತಪಾತದ ಕಾಲು ಪಾಲಷ್ಟು ಭಾರತದಲ್ಲಿ ನಡೆಯಲಿಲ್ಲ. ರಕ್ತಸಿಕ್ತ ಹೋರಾಟದ ಮೂಲಕ ಗಳಿಸಿದ ಸ್ವಾತಂತ್ರ್ಯದ ಮಹತ್ವ ಹೆಚ್ಚು ಅಥವಾ ರಕ್ತರಹಿತ ಕ್ರಾಂತಿಯ ಮೂಲಕ ಗಳಿಸಿದ ಸ್ವಾತಂತ್ರ್ಯದ ಮಹತ್ವ ಕಡಿಮೆ ಎಂಬ ಪ್ರತಿಪಾದನೆಯಲ್ಲ. ಆದರೆ ಸ್ವಾತಂತ್ರಾನಂತರ ಅಮೆರಿಕ ತೋರಿಸಿದ ಪ್ರಗತಿಯನ್ನು ಅವಲೋಕಿಸುವಾಗ ಈ ಪ್ರಶ್ನೆ ತರ್ಕಕ್ಕೆ ಅವಕಾಶ ಒದಗಿಸುತ್ತದೆ. ಸುಮಾರು ಐದುನೂರು ವರ್ಷಗಳ ಹಿಂದೆ ಪ್ರಪಂಚ ಮುಖಕ್ಕೆ ಪ್ರಕಟಗೊಳ್ಳದ ವಿಶಾಲ ಭೂಪ್ರದೇಶವೊಂದು ಕಳೆದ ಇನ್ನೂರು ವರ್ಷಗಳಿಂದ ವಿಶ್ವದ ಮುಂಚೂಣಿಯಲ್ಲಿದೆ ಎಂದರೆ ಅಲ್ಲಿನ ಆಡಳಿತಗಾರರ ರಾಷ್ಟ್ರೀಯ ಮನೋಧರ್ಮ ಹೇಗಿರಬಹುದು ಎಂಬುದು ಸ್ವಯಂವೇದ್ಯ. Your father’s son also occupy this seat ಎಂದು ನುಡಿದ ಅಬ್ರಹಾಂ ಲಿಂಕನ್‌ರವರ ಮಾತನ್ನು ನೆನೆಸಿಕೊಂಡಾಗ ಆ ಕಾಲದ ಅಲ್ಲಿಯ ರಾಜಕಾರಣಿಗಳ ಮನೋಧರ್ಮ ಹಾಗೂ ಸಮಾನತೆಯ ಪ್ರತಿಪಾದನೆ ಅಚ್ಚರಿ ಮೂಡಿಸುತ್ತದೆ.

Advertisement

ಅಮೆರಿಕವನ್ನು ಹೊಗಳುವುದು ಲೇಖನದ ಉದ್ದೇಶವಲ್ಲ, ಆದರೆ ಅವರು ಬ್ರಿಟಿಷ್‌ ವಸಾಹತು ಸಾಮ್ರಾಜ್ಯದ ಆಡಳಿತದಿಂದ (colonial rules) ಬಿಡುಗಡೆಗೊಳ್ಳುತ್ತಲೇ ಬೆಳೆಸಿ ಉಳಿಸಿಕೊಂಡ ರಾಷ್ಟ್ರೀಯ ಮನೋಧರ್ಮ ಹಾಗೂ ಸಾಧಿಸಿದ ಪ್ರಗತಿಯನ್ನು ಗಮನಿಸಿದಾಗ ನಮ್ಮಲ್ಲಿ ಅಂಥ ಕ್ರಾಂತಿಯಾಗಲಿಲ್ಲವೆಂಬುದನ್ನು ಬೊಟ್ಟು ಮಾಡಲಾಗುತ್ತಿದೆಯಷ್ಟೇ. ಭಾರತ ಸ್ವತಂತ್ರವಾದೊಡನೆ ಅನೇಕ ಮಂದಿ ಅಂದುಕೊಂಡಂತೆ ಆಡಳಿತವೆಂದರೆ ರಾಜಕಾರಣ. ಹಾಗಾಗಿ ರಾಜಕಾರಣವೇ ಪ್ರಬಲವಾಯಿತು. ಸರಿ, ರಾಜಕಾರಣವಿಲ್ಲದಿದ್ದರೆ ಪ್ರಜಾಸತ್ತೆಗೆ ಏನು ಬೆಲೆ ಇದೆ. ಆದರೆ ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆಯಾಗಬಾರದಷ್ಟೇ. ನಮ್ಮ ನಾಯಕರು ಅದನ್ನೇ ಕಡೆಗಣಿಸಿದರು. ಸಂವಿಧಾನದಲ್ಲಿ ಅಡಕವಾದ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗಗಳು ಪ್ರತ್‌ ಪ್ರತ್ಯೇಕ ಹಾಗೂ ಸ್ವತಂತ್ರ ಆದರೆ ಒಂದಕೊಂದು ಹೊಂದಿಕೊಂಡು ಕೆಲಸ ನಿರ್ವಹಿಸಬೇಕಲ್ಲದೆ ಅತಿಕ್ರಮಿಸಬಾರದು ಎಂಬ ಹಾಗೆ ಸರ್ವೋಚ್ಚ ನ್ಯಾಯಾಲಯ ಕಿವಿ ಮಾತನ್ನು ಅನೇಕ ಬಾರಿ ಹೇಳಿದೆ. ಆದರೆ ನಮ್ಮ ದೇಶದಲ್ಲಿ ಕಾರ್ಯಾಂಗ, ಶಾಸಕಾಂಗದ ನೇರ ನಿಯಂತ್ರಣಕ್ಕೊಳಪಟ್ಟಿದೆ ಎಂದೆನ್ನಿಸುತ್ತದೆ. ಚುನಾಯಿತ ಪ್ರತಿನಿಧಿಗಳಾದ ಶಾಸಕ, ಸಂಸದರ ಒತ್ತಡ ನೌಕರಶಾಯಿಯ ಮೇಲೆ ಸದಾ ಇರುತ್ತದೆ. ಒತ್ತಡ ಸಾರ್ವಜನಿಕ ಹಿತಾಸಕ್ತಿಯಿಂದಲ್ಲ, ಚುನಾಯಿತ ಪ್ರತಿನಿಧಿಗಳ ಸ್ವಹಿತಾಸಕ್ತಿಗೆ ತಕ್ಕಂತೆ. ಅವರ ಇಚ್ಚೆಗೆ ವಿರುದ್ಧವಾಗಿ ನಡೆದುಕೊಂಡರೆ ಫೋನಿನ ಮೇಲೆ ವರ್ಗವಾಗುವ ಸಾಧ್ಯತೆಯುಂಟಷ್ಟೇ. ಸೇವಾ ನಿಯಮಾವಳಿಯನ್ನು ರೂಪಿಸುವವರು ಇವರೇ ತಾನೆ. ಹಾಗಾಗಿ ನೌಕರಶಾಹಿ ಸಾರ್ವಜನಿಕ ಹಿತಾಸಕ್ತಿಗೆ ಪ್ರಾಶಸ್ತ್ಯ ನೀಡದೆ ಈ ಆಡಳಿತಗಾರರು ಹೇಳಿದಂತೆ ಕಾರ್ಯನಿರ್ವಹಿಸುವ ಪರಿಪಾಠ ಬೆಳೆಸಿಕೊಂಡುದುದರಿಂದ ಇಲ್ಲಿಯ ಸರಕಾರಿ ಕಚೇರಿಗಳಲ್ಲಿನ ಕಾರ್ಯಸಂಸ್ಕೃತಿ (work culture) ಬೆಳೆದು ಬಂದಿದೆ. 

ಅಮೆರಿಕ ಬೆಳೆಸಿಕೊಂಡು ಬಂದ ಕಾರ್ಯ ಸಂಸ್ಕೃತಿಯೇ ಬೇರೆ. ಅಮೇರಿಕ ವಾಸದ ಸಂದರ್ಭ ಒಮ್ಮೆ ಅಲ್ಲಿಯೇ ಜನಿಸಿದ ಮಗುವಿನ ಪಾಸ್‌ಪೋರ್ಟ್‌ಗೆ ಸಂಬಂಧಿಸಿ ಅಂಚೆ ಕ್ಚಚೀರಿಗೆ ಭೇಟಿ ನೀಡಬೇಕಾಗಿ ಬಂತು. (ಅಮೇರಿಕದಲ್ಲಿ ಅಂಚೆ ಕಚೇರಿಗಳಲ್ಲಿ ಮಧ್ಯಾಹ್ನ ಒಂದು ಗಂಟೆ ತನಕ ಪಾಸ್‌ಪೋರ್ಟ್‌ ಸಂಬಂಧಿಸಿದ ಮೂಲ ಕೆಲಸಗಳು ನಿರ್ವಹಿಸಲ್ಪಡುತ್ತದೆ). ನಾವು ಅಂಚೆ ಕಚೇರಿಗೆ ಹೋದಾಗ ಮಧ್ಯಾಹ್ನ 12.45. ಆಗ ಸರತಿಯ ಸಾಲಿನಲ್ಲಿ ಆರೇಳು ಮಂದಿ ಇದ್ದರು. ಅನಂತರ ಕೆಲವು ಮಂದಿ ಸೇರಿಕೊಂಡರು. ಸರಿಯಾಗಿ ಒಂದು ಗಂಟೆಯಾಗುವಾಗ ಸರತಿಯ ಸಾಲಿನಲ್ಲಿ 8 ಮಂದಿ ಇದ್ದೆವು. ಆಗ ಕೌಂಟರ್‌ನಲ್ಲಿದ್ದ ಮೇಡಂ ಸಾಲಿನ ಕೊನೆಯಲ್ಲಿರುವವರನ್ನು ಕರೆದು ಒಂದು ಟೋಕನ್‌ ನೀಡಿದರು. ಹಾಗೆ ಉಳಿದವರಿಗೂ ಕ್ರಮವಾಗಿ ಟೋಕನ್‌ ನೀಡಿ ಆ ಎಂಟು ಮಂದಿಗೂ ಸೇವೆ ನೀಡಿದ ಅನಂತರ ಕೌಂಟರ್‌ ಕ್ಲೋಸ್‌ ಮಾಡಿದರು. ಇದು ಅಮೆರಿಕದ ಆಡಳಿತದಲ್ಲಿ ಉಳಿಸಿ ಬೆಳೆಸಿಕೊಂಡುಬಂದ ವರ್ಕ್‌ ಕಲ್ಚರ್‌. ನಿಜ, ಅಮೆರಿಕ ಅಧ್ಯಕ್ಷ ಮಾದರಿಯ ಪ್ರಜಾಸತ್ತೆ. ಪರಂತು ಅಲ್ಲಿಯೂ ಚುನಾಯಿತ ಪ್ರತಿನಿಧಿಗಳ ಒಕ್ಕೂಟವೇ ಆಡಳಿತ ನಡೆಸುವುದಲ್ಲವೇ.

ನಮ್ಮ ದೇಶದಲ್ಲಿ ಇಂಥ ವಿದ್ಯಮಾನ ಇಲ್ಲವೇ ಇಲ್ಲ ಎಂಬ ಅವಸರದ ತೀರ್ಮಾನಕ್ಕೆ ಬರುವುದು ಬೇಡ. ಚುನಾವಣೆಗೆ ಸಂಬಂಧಿಸಿ ಮತ ಚಲಾಯಿಸುವ ಅವಧಿ ಮುಗಿಯುತ್ತಿರುವ ಕೊನೆ ಕ್ಷಣದಲ್ಲಿ ಮತಗಟ್ಟೆಯ ನೂರು ಗಜ ವ್ಯಾಪ್ತಿಯೊಳಗೆ ಹಾಜರಿದ್ದ ಎಲ್ಲಾ ಮತದಾರರಿಗೂ ಮತ ಚಲಾಯಿಸಲು ಅವಕಾಶ ಕಲ್ಪಿಸುವ ಕಾನೂನಿದೆ. ವಿಪರ್ಯಾಸವೆಂದರೆ ಈ ಅವಕಾಶ ಇನ್ಯಾವ ಸಂದರ್ಭದಲ್ಲಿಯೂ ಬಡ ಪೌರನಿಗಿಲ್ಲ. ಮಧ್ಯಾಹ್ನ ಒಂದು ಗಂಟೆ ತನಕ ಬಿಲ್‌ ಪಾವತಿಸಬಹುದೆಂಬ ಬೋರ್ಡ್‌ ಇರುತ್ತದೆ. ಸರತಿಯ ಸಾಲಿನಲ್ಲಿ ತಾಸುಗಟ್ಟಲೆ ನಿಂತು ಇನ್ನೇನು ಕೌಂಟರ್‌ನ ಸಮೀಪ ಬಂದೆ ಎನ್ನುವಷ್ಟದಲ್ಲಿ ಗಂಟೆ ಒಂದು ಹೊಡೆದರೆ ಟೈಮಾಯ್ತು ಎಂದು ನಿರ್ದಾಕ್ಷಿಣ್ಯವಾಗಿ ಕೌಂಟರ್‌ ಕ್ಲೋಸ್‌ ಆಗುತ್ತದೆ. ಸಾರ್ವಜನಿಕ ಹಿತಾಸಕ್ತಿ ನಮ್ಮ ಸಂವಿಧಾನದಲ್ಲಿ ಮಾತ್ರ, ಆಡಳಿತದಲ್ಲಿಲ್ಲ. ಹಾಗಾದರೆ ಚುನಾವಣಾ ಸಂದರ್ಭ ಒದಗಿಸಿದ ಅವಕಾಶ ಸಾರ್ವಜನಿಕ ಹಿತಾಸಕ್ತಿಯಿಂದಲ್ಲವೇ? ಖಂಡಿತ ಅಲ್ಲ. ಅದು ಚುನಾವಣಾ ಹಿತದೃಷ್ಟಿಯಿಂದ ಮಾತ್ರ. ಕೇವಲ ಒಂದು ಮತವೂ ನಿರ್ಣಾಯಕವಾಗಿ ಪರಿಣಾಮಿಸಬಹುದಲ್ಲವೇ. ಇಂಥ ಆಡಳಿತದ ಧೋರಣೆಯಿಂದಾಗಿ ನಮ್ಮ ನೌಕರಶಾಹಿ ಸಾರ್ವಜನಿಕ ಸ್ಪಂದನವುಳ್ಳ ಅಂಗವಾಗಿ ಬೆಳೆದುಬಂದಿಲ್ಲ. 

ಆಡಳಿತದಲ್ಲಿ ದಕ್ಷತೆ ಹೆಚ್ಚಿಸಬೇಕಾದರೆ ಏನು ಮಾಡಬೇಕು? ಮೊದಲು ಆಡಳಿತಗಾರರಲ್ಲಿ ಶಿಸ್ತು ನೆಲೆಯಾಗಬೇಕು. ಮುಖ್ಯವಾಗಿ ಆಡಳಿತದ ಮೇಲ್ಪದರದಲ್ಲಿ ಶಿಸ್ತು ನೆಲೆಯಾದರೆ ಬೇರು ನಿರುಂಡಾಗ ಭೂರುಹದ ಶಾಖೋಪಶಾಖೆಗಳಿಗೆ ತೇವ ರವಾನೆಯಾದ ಹಾಗೆ ಶಿಸ್ತು ಆಡಳಿತದ ಎಲ್ಲಾ ಭಾಗಗಳಿಗೂ ಪಸರಿಸುತ್ತದೆ. ಮುಖ್ಯ ಶಿಕ್ಷಕರು ಸಮಯಕ್ಕೆ ಸರಿಯಾಗಿ ಹಾಜರಾಗುವುದಾದರೆ ಸಹ ಶಿಕ್ಷಕರಿಗೆ ಪ್ರತ್ಯೇಕ ಹೇಳಬೇಕಾದ ಅಗತ್ಯ ಸಾಮಾನ್ಯವಾಗಿ ಇರುವುದಿಲ್ಲ. ನಮ್ಮ ಆಡಳಿತದ ಕೊರತೆಯೂ ದೋಷವೇ ಇದು. ಉನ್ನತಸ್ತರದಲ್ಲಿ ಶಿಸ್ತು ನೆಲೆಯಾಗದಿರುವುದು. ಹಾಗೆ ಉತ್ತರದಾಯಿತ್ವವೂ ನಿಗದಿಯಾಗದಿರುವುದು. ಹಾಗಾಗಿ ಆಡಳಿತ ಯಂತ್ರ ಸ್ವಯಂ ಚಾಲಿತವಾಗಿ ಕಾರ್ಯನಿರ್ವಹಿಸುವುದಿಲ್ಲ. ನಿಯಾಮಾವಳಿಗಳ ಕೊರತೆ ನಮ್ಮಲ್ಲಿಲ್ಲ. ಕೆಳಹಂತದ ನೌಕರರ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿ ಮಾರ್ಗದರ್ಶನ ನೀಡುವ ಜವಾಬ್ದಾರಿ ಕಚೇರಿ ವ್ಯವಸ್ಥಾಪಕರಿಗೆ ಇದೆ. ಅವರು ಗುಮಾಸ್ತರುಗಳ ದಫ್ತಾರ್‌ ಚೆಕ್‌ ಮಾಡುವ ಕೆಲಸ ಆಗಾಗ ಹಾಗೂ ನಿರಂತರ ಮಾಡಬೇಕೆಂಬ ನಿಯಮವಿದೆ. ಹಾಗೆ ಮಾಡುವುದಾದಲ್ಲಿ ಯಾವುದೋ ಒಂದು ಟೇಬಲ್‌ನಲ್ಲಿ ಒಂದು ಕಡತ ಒಂದು ವರ್ಷದಿಂದ ಬಾಕಿಯಾಗುವುದು ಹೇಗೆ? ಸಮರ್ಪಕವಾಗಿ ಮೇಲುಸ್ತುವಾರಿ ಕೆಲಸವಾಗುವುದಿಲ್ಲವೆಂಬುದು ಸ್ವಯಂವೇದ್ಯ. ವ್ಯವಸ್ಥಾಪಕರ ಕಾರ್ಯನಿರ್ವಹಣೆಯನ್ನು ಕಚೇರಿ ಮುಖ್ಯಸ್ತರು ಪರಿಶೀಲಿಸುವುದಿಲ್ಲ. ಮೇಲುಸ್ತುವಾರಿ ಕೇವಲ ನಾಮಕಾವಸ್ತೆ. ಆಡಳಿತದ ದಕ್ಷತೆ ಹೆಚ್ಚಿಸಬೇಕಾದರೆ ಮೇಲಿನ ಹಂತದಲ್ಲಿ ಉತ್ತರದಾಯಿತ್ವ ನಿಗದಿಯಾಗಬೇಕು ಹಾಗೂ ಸಂದರ್ಭಾನುಸಾರ ತಾನಾಗಿ ಪರಿಣಾಮ ಬೀರುವಂತಿರಬೇಕು. ಅಲ್ಲದೆ ಜನಪ್ರತಿನಿಧಿಗಳ ಅನುಚಿತ ಒತ್ತಡಕ್ಕೆ ತಡೆ ಇರಬೇಕು.

Advertisement

ಭಾರತದಲ್ಲಿ ಇದು ಭ್ರಮೆ ಎಂದೆನಿಸಬಹುದು. ಆದರೆ ಇದು ಭ್ರಮೆಯೂ ಅಲ್ಲ, ಭ್ರಮನಿರಸನಗೊಂಡ ಹೇಳಿಕೆಯೂ ಅಲ್ಲ. ಆಶಾವಾದದಿಂದಲೇ ಹೇಳುವುದಾದರೆ, ಈ ವ್ಯವಸ್ಥೆ ನನಸಾಗಲು ಉತ್ತಮ ಜನಪ್ರತಿನಿಧಿಗಳಿರುವ ಶಾಸಕಾಂಗದ ಅಗತ್ಯವಿದೆ. ನಮ್ಮ ಸಾಂವಿಧಾನಿಕ ವ್ಯವಸ್ಥೆಯಲ್ಲಿ ಕಾರ್ಯಾಂಗವನ್ನು ಸಂಪೂರ್ಣ ಸ್ವತಂತ್ರಗೊಳಿಸಲು ಅವಕಾಶವಿಲ್ಲ. ಅದು ಶಾಸಕಾಂಗದ ಉಸಿರಾಗಿಯೇ ಇರತಕ್ಕದ್ದು. ಆದುದರಿಂದ ಉತ್ತಮ ಜನಪ್ರತಿಗಳಿಂದ ಶಾಸಕಾಂಗವನ್ನು ಭರ್ತಿಗೊಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ದುರದೃಷ್ಟವೆಂದರೆ ನಮ್ಮ ದೇಶದಲ್ಲಿ ಚುನಾವಣೆಯಿಂದ ಚುನಾವಣೆಗೆ ಗುರುತರ ಕ್ರಿಮಿನಲ್‌ ಅಪರಾಧ ಎಸಗಿದವರು, ಕಾಳಸಂತೆ ಖದೀಮರು, ಸುಶಿಕ್ಷಿತರಲ್ಲವರೇ ಹೆಚ್ಚು ಆಯ್ಕೆಯಾಗುತ್ತಿದ್ದಾರೆ. ಇದು ದುರ್ಬಲ ಚುನಾವಣಾ ಕಾನೂನಿನ ಪರಿಣಾಮ ಎಂದರೆ ತಪ್ಪಾಗಲಾರದು. ಅಪರೂಪಕ್ಕೊಮ್ಮೆ ಭ್ರಷ್ಟಾಚಾರ ಎಸಗಿದ ರಾಜಕಾರಣಿಗೆ ಶಿಕ್ಷೆಯಾದ ಉದಾಹರಣೆಯುಂಟು. ಆದರೆ ಅಂಥವರು ಶಿಕ್ಷೆಗೆ ಗುರಿಯಾಗುವ ಮುನ್ನ ಅವರು ಆಡಳಿತದಲ್ಲಿ ದೀರ್ಘ‌ಕಾಲ ಇದ್ದು ಮಾಡಬಹುದಾದ ಎಲ್ಲ ಭ್ರಷ್ಟಾಚಾರವನ್ನು ಎಸಗಿ, ರಾಜಕೀಯ ಕ್ಷೇತ್ರವನ್ನೇ ಹೊಲಸುಗೊಳಿಸಿ ಕೆಟ್ಟ ಪರಂಪರೆಯನ್ನು ಬಿಟ್ಟು ಹೋಗಿರುತ್ತಾರೆ. ಆದುದರಿಂದ ರಾಜಕೀಯ ಪ್ರವೇಶಕ್ಕೆ ಮುನ್ನ ಜರಡಿ ಹಿಡಿಯುವ ವ್ಯವಸ್ಥೆಗಾಗಿ ಜನತಾ ಪ್ರಾತಿನಿಧ್ಯ ಕಾಯಿದೆಗೆ ವ್ಯಾಪಕ ಬದಲಾವಣೆ ತರಬೇಕಾಗಿದೆ. 

ಬೇಳೂರು ರಾಘವ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next