Advertisement

BJP-JDS Alliance; ಯಡಿಯೂರಪ್ಪರ ಯಾವುದೇ ನಿರ್ಧಾರಕ್ಕೂ ನಮ್ಮ ಸಹಮತವಿದೆ: ಪ್ರತಾಪ್ ಸಿಂಹ

03:08 PM Sep 08, 2023 | Team Udayavani |

ಮೈಸೂರು: ಯಡಿಯೂರಪ್ಪ ಅವರು ನಮ್ಮ ಪಕ್ಷದ ಪ್ರಶ್ನಾತೀತ ನಾಯಕರು. ಏಕಾಂಗಿಯಾಗಿ ರಾಜ್ಯ ಸುತ್ತಿ ಪಕ್ಷ ಕಟ್ಟಿದ್ದಾರೆ. ಬಿಜೆಪಿ ಈ ಮಟ್ಟಕ್ಕೆ ಬೆಳೆಯಲು ಯಡಿಯೂರಪ್ಪ ಕಾರಣ. ಅವರೇ ಮೈತ್ರಿ ಹೇಳಿಕೆ ನೀಡಿದ್ದಾರೆ ಎಂದರೆ ಅದಕ್ಕೆ ನಮ್ಮ ಸಹಮತವಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಎರಡೆರಡು ಬಾರಿ ಬಿಜೆಪಿಯನ್ನೂ ಅಧಿಕಾರಕ್ಕೆ ತಂದವರು ಯಡಿಯೂರಪ್ಪ. ಕೇಂದ್ರ ನಾಯಕರ ಜೊತೆ ಸಮಾಲೋಚನೆ ನಡೆಸಿ ಜೆಡಿಎಸ್ ಜತೆ ಮೈತ್ರಿ ನಿರ್ಧಾರಕ್ಕೆ ಬಂದಿರುತ್ತಾರೆ ಅವರು ಏನೇ ನಿರ್ಧಾರ ತೆಗೆದುಕೊಂಡರೂ ನಮ್ಮ ಬೆಂಬಲ ಸದಾ ಇರುತ್ತದೆ. ಯಡಿಯೂರಪ್ಪ ಅವರು ಏನೇ ನಿರ್ಧಾರ ತೆಗೆದುಕೊಂಡಿದ್ದರೂ ಪಕ್ಷದ ಹಿತದೃಷ್ಟಿಯಿಂದಲೇ ಯೋಚಿಸಿಯೇ ತೀರ್ಮಾನ ಕೈಗೊಂಡಿರುತ್ತಾರೆ ಎಂದರು.

ರಾಜ್ಯದ ಜನ ಪ್ರಜ್ಞಾವಂತರು, ಆದರೆ ಕೆಲವೊಮ್ಮೆ ಯಾಮಾರುತ್ತಾರೆ. ವಿಧಾನಸಭೆಯಲ್ಲಿ ಗ್ಯಾರಂಟಿ ಯೋಜನೆಗೆ ಜನ ಯಾಮಾರಿದ್ದರು. ಹಾಗಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ರಾಜ್ಯದ ಜನಕ್ಕೆ ಈಗ ತಪ್ಪಿನ ಅರಿವಾಗಿದೆ. ಲೋಕಸಭಾ ಚನಾವಣೆಯಲ್ಲಿ ಬಿಜೆಪಿಗೆ ಜನರು ಮತ ನೀಡುತ್ತಾರೆ. ಮೋದಿ ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ ಎಂದರು.

ಸೊಳ್ಳೆಗಳು; ಸನಾತನ ಧರ್ಮದ ವಿರುದ್ಧ ಹೇಳಿಕೆ ನೀಡುವವರನ್ನು ಸೊಳ್ಳೆ ನೊಣಗಳಿಗೆ ಹೋಲಿಕೆ ಮಾಡಿದ ಸಂಸದ ಪ್ರತಾಪ್ ಸಿಂಹ ಅವರು, ಸೂರ್ಯನ ಸುತ್ತ ಭೂಮಿ ಸುತ್ತುತ್ತಿದೆ ಎಂದು ಹೇಳಿದ ಏಕೈಕ ಧರ್ಮ ಹಿಂದೂ ಧರ್ಮ ಮಾತ್ರ. ಈ ಖಗೋಳ ವಿಜ್ಞಾನಕ್ಕೆ ನಮ್ಮ ಋಷಿಮುನಿಗಳು ಹಿಂದಿನ ಕಾಲದಲ್ಲಿ ಕೊಡುಗೆ ನೀಡಿದ್ದಾರೆ. ಆದರೆ ಬೇರೆ ಧರ್ಮಗಳಿಗೆ ಖಗೋಳ ವಿಜ್ಞಾನದ ಬಗ್ಗೆ ಅರಿವೇ ಇಲ್ಲ. ಭೂಮಿ ಸುತ್ತ ಸೂರ್ಯ ಸುತ್ತುತ್ತಾನೆ ಅಂತ ಅವರು ಹೇಳ್ತಾರೆ. ಹಿಂದೂ ಧರ್ಮದ ಬಗ್ಗೆ ಅರಿವೇ ಇಲ್ಲದೆ, ಜ್ಞಾನವಿಲ್ಲದೆ ಅಸಂಬಂಧ ಮಾತುಗಳನ್ನು ಆಡುತ್ತಾರೆ. ಏಳು ನೂರು ವರ್ಷಗಳ ಮುಸಲ್ಮಾನರ ದಾಳಿಯನ್ನು, ಇನ್ನೂರು ವರ್ಷಗಳ ಕ್ರೈಸ್ತರ ದಾಳಿಯನ್ನು ಸಹಿಸಿಕೊಂಡು ಇವತ್ತಿಗೂ 80% ಹಿಂದೂಗಳು ಈ ದೇಶದಲ್ಲಿ ಇದಾರೆಂದರೆ ಹಿಂದೂ ಧರ್ಮಕ್ಕೆ ಈ ಸೊಳ್ಳೆ ನೊಣಗಳನ್ನೆಲ್ಲ ನುಂಗಿ ಜೀರ್ಣಸಿಕೊಳ್ಳುವ ಶಕ್ತಿ ಇದೆ ಎಂದರು.

ಸಿದ್ದರಾಮಯ್ಯ ಸರ್ಕಾರವಿದ್ದಾಗ ಮಹಿಷ ದಸರಾಗೆ ಅನುಮತಿ ನೀಡಿದ್ದರು.  ಯಡಿಯೂರಪ್ಪ, ಬೊಮ್ಮಾಯಿ ಸಾಹೇಬರ ಸರ್ಕಾರದಲ್ಲಿ ಮಹಿಷ ದಸರಾಗೆ ಮಟ್ಟ ಹಾಕಿದ್ದೆವು.  ಅದೇನೋ ಗೊತ್ತಿಲ್ಲ ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದಾಗ ಧರ್ಮ ವಿರೋಧಿಗಳಿಗೆ ಶಕ್ತಿ ಬರುತ್ತದೆ. ಅದನ್ನೇ ಇಂದು ಮಹಿಷ ದಸರಾ ರೂಪದಲ್ಲಿ ನೋಡುತ್ತಿದ್ದೇವೆ ಎಂದು ಪ್ರತಾಪ್ ಸಿಂಹ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next