Advertisement

ನಗರದಲ್ಲಿ ನೀರಿಗೆ ಕೊರತೆಯಾಗದು

01:20 AM May 20, 2019 | Lakshmi GovindaRaj |

ಬೆಂಗಳೂರು: ನಗರದಲ್ಲಿ ನೀರಿಗೆ ಯಾವುದೇ ರೀತಿಯಲ್ಲೂ ಕೊರತೆ ಉಂಟಾಗದಂತೆ ಕ್ರಮವಹಿಸುತ್ತಿದ್ದು, ಭವಿಷ್ಯದಲ್ಲೂ ಯಾವುದೇ ಜಲಕಂಟಕ ಬಾರದಂತೆ ಯೋಜನೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಜಲಮಂಡಳಿ ವಿಶ್ವಾಸ ವ್ಯಕ್ತಪಡಿಸಿದೆ.

Advertisement

ಬೆಂಗಳೂರು ನಗರದ 800 ಚ.ಕಿ.ಮೀ ಕಾರ್ಯವ್ಯಾಪ್ತಿಯಲ್ಲಿ ನೀರು ಸರಬರಾಜು ಹಾಗೂ ತ್ಯಾಜ್ಯ ನೀರಿನ ಶುದ್ಧೀಕರಣ ಹಾಗೂ ವಿಲೇವಾರಿ ಜವಾಬ್ದಾರಿ ವಸಿಕೊಂಡಿರುವ ಜಲಮಂಡಳಿಯು ನಿತ್ಯ 1,453 ದಶಲಕ್ಷ ಲೀ.ನಷ್ಟು ನೀರನ್ನು ಪೂರೈಸುತ್ತಿದೆ.

ಈ ನಡುವೆ ಬೇಸಿಗೆ ಸಂದರ್ಭದಲ್ಲಿ ನಗರದ ನೀರಿನ ಪೂರೈಕೆಯಲ್ಲಿ ಸಮಸ್ಯೆಯಾಗುತ್ತಿರುವ ಕುರಿತು ಸಾಕಷ್ಟು ವರದಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಲಮಂಡಳಿಯು ಸದ್ಯ ಆಣೆಕಟ್ಟುಗಳಲ್ಲಿ ನೀರಿನ ಸ್ಥಿತಿ, ನಗರದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಗೆ ನೀರು ಒದಗಿಸಲು ಸದ್ಯ ಚಾಲ್ತಿಯಲ್ಲಿರುವ ಹಾಗೂ ಭವಿಷ್ಯದಲ್ಲಿ ಕೈಗೊಳ್ಳುವ ಯೋಜನೆಗಳು ಕುರಿತು ಮಾಹಿತಿ ನೀಡಿದೆ.

10 ಟಿಎಂಸಿ ಹೆಚ್ಚುವರಿ ನೀರಿ: ಸರ್ಕಾರ ಬೆಂಗಳೂರಿಗೆ 19 ಟಿ.ಎಂ.ಸಿ .ಯಷ್ಟು ನೀರನ್ನು ಹಂಚಿಕೆ ಮಾಡಿದ್ದು, ಅದನ್ನು ವಿವಿಧ ಹಂತಗಳ ಮೂಲಕ ನಗರಕ್ಕೆ ಪೂರೈಕೆ ಮಾಡುತ್ತಿದೆ. ಈ 19 ಟಿಎಂಸಿ ಜತೆಗೆ ಭವಿಷ್ಯದ ಬೆಂಗಳೂರಿಗಾಗಿ ಸರ್ಕಾರ ಇನ್ನು 10 ಟಿಎಂಸಿ ನೀರನ್ನು ಹೆಚ್ಚುವರಿಯಾಗಿ ನೀಡಿದ್ದು, ಈ ನೀರನ್ನು ಬಳಸಿಕೊಳ್ಳುವ ಸಲುವಾಗಿ ಕಾವೇರಿ ನೀರು ಸರಬರಾಜು ಯೋಜನೆಯ 5ನೇ ಹಂತದ ಕಾಮಗಾರಿಯನ್ನು ಆರಂಭಿಸಲಾಗಿದೆ ಎಂದು ಜಲಮಂಡಳಿ ತಿಳಿಸಿದೆ.

ಜಲಮಂಡಳಿಯ ಪ್ರಮುಖ ಸಮಸ್ಯೆಯಾಗಿರುವ ಲೆಕ್ಕಕ್ಕೆ ಸಿಗದ ನೀರಿನ ಪ್ರಮಾಣವನ್ನು ಕಡಿತಗೊಳಿಸುವಲ್ಲಿ ಜಲಮಂಡಳಿ ಸಫ‌ಲವಾಗಿದ್ದು, ಹಿಂದೆ ಇದ್ದ ಶೇ.43ರಷ್ಟು ನೀರಿನ ಸೋರಿಕೆ ಪ್ರಮಾಣವನ್ನು ಶೇ.36ಕ್ಕೆ ಇಳಿಕೆ ಮಾಡಲಾಗಿದೆ. ಇದರಿಂದ 120 ದಶಲಕ್ಷ ಲೀ. ನೀರು ಲೆಕ್ಕಕ್ಕೆ ಸಿಗುತ್ತಿದೆ.

Advertisement

ಇದರ ಜೊತೆಗೆ ಎತ್ತಿನ ಹೊಳೆಯೋಜನೆಯಿಂದ ನೀರು ತರಲಾಗುತ್ತಿದ್ದು, ಇದಕ್ಕಾಗಿ ತಿಪ್ಪಗೊಂಡನಹಳ್ಳಿ ಕೆರೆ ಪುನರುಜ್ಜೀವನ ಯೋಜನೆ ಕೈಗೊಳ್ಳಲಾಗಿದೆ. ಇನ್ನು 2023ರ ವೇಳೆಗೆ ನಗರದಲ್ಲಿ ಒಟ್ಟು 1713.5 ಎಂ.ಎಲ್‌.ಡಿ., ತ್ಯಾಜ್ಯ ನೀರನ್ನು ಸಂಸ್ಕರಿಸಬಹುದಾಗಿರುತ್ತದೆ. ಈ ಸಂಸ್ಕರಿಸಿದ ನೀರಿನಲ್ಲಿ ಶೇ.50ರಷ್ಟನ್ನು ಬೆಂಗಳೂರಿನ ಹೊರಭಾಗದಲ್ಲಿರುವ ನಗರಗಳ ಕೆರೆಗಳನ್ನು ತುಂಬಿಸಲಾಗುವುದು,

ಉಳಿದ ಶೇ.50ರಷ್ಟು ಸಂಸ್ಕರಿಸಿದ ತ್ಯಾಜ್ಯ ನೀರನ್ನು ಬೆಂಗಳೂರಿನಲ್ಲಿರುವ ಕೈಗಾರಿಕೆ, ವಾಣಿಜ್ಯ ಮತ್ತು ಗೃಹ ಬಳಕೆದಾರರ ಇತರೆ ಬಳಕೆಯ ಬೇಡಿಕೆಯನ್ನು ಪೂರೈಸಲು, ಉದ್ಯಾನವನದಲ್ಲಿನ ಗಿಡಗಳಿಗೆ ನೀರುಣಿಸಲು ಹಾಗೂ ಸಮುದಾಯ ಭವನಗಳ ಉಪಯೋಗಗಳಿಗೆ ಬಳಸಲಾಗುತ್ತದೆ. ಇದಲ್ಲದೇ ಬೆಂಗಳೂರಿನ ನಾಗರಿಕರಿಗೆ ಸಹ ಕಟ್ಟಡಗಳಿಗೆ ಮಳೆನೀರು ಕೊಯ್ಲು, ತ್ಯಾಜ್ಯ ಸಂಸ್ಕರಣ ಘಟಕ ಅಳವಡಿಕೆ ಮಾಡಿಕೊಳ್ಳುವ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದು ಜಲಮಂಡಳಿ ತಿಳಿಸಿದೆ.

ಡ್ಯಾಂಗಳಲ್ಲಿ ನೀರಿನ ಸಂಗ್ರಹ ತೃಪ್ತಿಕರ: ಸದ್ಯ ಕೃಷ್ಣರಾಜ ಅಣೆಕಟ್ಟೆ ಮತ್ತು ಕಬಿನಿ ಅಣೆಕಟ್ಟೆಯಲ್ಲಿ ನೀರಿನ ಶೇಖರಣೆಯ ಪ್ರಮಾಣವು ತೃಪ್ತಿಕರವಾಗಿದ್ದು, ಬೇಸಿಗೆ ಹಾಗೂ ಬರದಿಂದಾಗಿ ನಗರದಲ್ಲಿ ನೀರಿನ ಕೊರತೆ ಉಂಟಾಗಿರುವುದಿಲ್ಲ. ಇನ್ನು ಜೂನ್‌ ಪ್ರಾರಂಭಿಕ ವಾರದಲ್ಲಿ ಮುಂಗಾರು ಮಳೆಯ ಮುನ್ಸೂಚ ಇದ್ದು ಮತ್ತೆ ನೀರಿನ ಶೇಖರಣೆ ಹೆಚ್ಚಲಿದೆ.

ಸದ್ಯ ಜಲಮಂಡಲಿಯು ಬಿಬಿಎಂಪಿ ವ್ಯಾಪ್ತಿಯ ಸುಮಾರು ಒಂದು ಕೋಟಿ ಜನರಿಗೆ ನೀರನ್ನು ಪೂರೈಸುತ್ತಿದ್ದು, 2007ರಲ್ಲಿ ಹೊಸದಾಗಿ ಬಿಬಿಎಂಪಿಗೆ ಸೇರಿದ 110 ಹಳ್ಳಿಗಳಿಗೆ ನೀರು ಸರಬರಾಜು ಸೌಲಭ್ಯವನ್ನು ಒದಗಿಸುವ ಕಾಮಗಾರಿಯು ಪ್ರಗತಿಯಲ್ಲಿದ್ದು 2019 ರ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next