Advertisement

ನೀರಿನಿಂದ ಹರಡುವ ಸಾಂಕ್ರಾಮಿಕ ರೋಗಗಳು

06:25 AM Oct 21, 2018 | |

ನೀರು ಜಗತ್ತಿನ ಪ್ರತಿಯೊಂದು ಜೀವಿಯ ಜೀವನಕ್ಕೆ ಅತೀ ಅಗತ್ಯವಾಗಿರುತ್ತದೆ. ನಮ್ಮಲ್ಲಿ  ಮಳೆಗಾಲ ಸಾಮಾನ್ಯವಾಗಿ ಜೂನ್‌ನಿಂದ ಅಕ್ಟೋಬರ್‌ ತಿಂಗಳವರೆಗೆ ಇದ್ದು, ಸರಾಸರಿ ಮಳೆ ಆಗಿ ನದಿ, ಕೆರೆ, ಬಾವಿಗಳು ತುಂಬಿ ಅಂರ್ತಜಲ ವೃದ್ಧಿಸಿ ಪ್ರಾಣಿ ಪಕ್ಷಿಗಳನ್ನು ವರ್ಷದಾದ್ಯಂತ ಜೀವಂತವಿರಿಸುತ್ತದೆ. ಮಳೆ ಬಂದಾಗ ಮಳೆ ನೀರು ಮಲಿನಗೊಂಡಿರುವ ನೀರಿನೊಂದಿಗೆ ಸೇರಿ ಆ ನೀರು ಕುಡಿಯುವ ನೀರಿಗೆ ಸೇರಿ ಕಲುಷಿತಗೊಂಡು ಕರುಳುಬೇನೆ, ಅತಿಸಾರ ಭೇದಿ, ಅಮಶಂಕೆ, ಟೈಫಾಯ್ಡ, ಕಾಮಾಲೆ (ಹೆಪಟೈಟಿಸ್‌-ಐ) ಗಳಂತಹ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಗಳಿವೆ. ಪ್ರಕೃತಿ ವಿಕೋಪದಂತಹ ನೈಸರ್ಗಿಕ ಬದಲಾವಣೆಯನ್ನು ಹೊರತುಪಡಿಸಿ, ಹೆಚ್ಚಿನ ಸಂದರ್ಭಗಳಲ್ಲಿ ಮಾನವನ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನದಿಂದ ಶುದ್ಧ ನೀರು ಕಲುಷಿತಗೊಂಡು ಕಾಯಿಲೆಗಳು ಒಬ್ಬರಿಂದ ಇನ್ನೊಬ್ಬರಿಗೆ ಹರಡಿ ಸಾವುಗಳುಂಟಾಗುತ್ತವೆ. ಕುಡಿಯುವ ನೀರು ಸಾಮಾನ್ಯವಾಗಿ ಕಲುಷಿತಗೊಳ್ಳುವ ವಿಧಾನಗಳೆಂದರೆ –

Advertisement

–     ಕಲುಷಿತ ನೀರು ಕುಡಿಯುವ ನೀರಿನ ಮೂಲದಲ್ಲಿ ಸಂಗ್ರಹವಾಗಿ ಕುಡಿಯುವ ನೀರಿನೊಂದಿಗೆ ಸೇರುವುದರಿಂದ.
–     ಮನೆಯ ಲ್ಯಾಟ್ರಿನ್‌ ಪಿಟ್‌ ಕುಡಿಯುವ ನೀರಿನ ಬಾವಿ ಅಥವಾ ಇತರ ಮೂಲಗಳ ಅತೀ ಸಮೀಪದಲ್ಲಿರುವುದು.
–     ಕುಡಿಯುವ ನೀರಿನ ಮೂಲದ ಹತ್ತಿರ ತ್ಯಾಜ್ಯ ವಸ್ತುಗಳನ್ನು ಸಂಗ್ರಹಣೆ ಮಾಡುವುದರಿಂದ.
– ನೀರು ಸರಬರಾಜು ಪೈಪುಗಳ ಜೋಡಣೆ ಕೆಟ್ಟು ಹೋಗಿ / ಒಡೆದು ಹೋಗಿ ಸುತ್ತಲಿನ ಕಲುಷಿತ ನೀರು ಪೈಪುಗಳಲ್ಲಿ  ಸೇರಿಕೊಂಡಾಗ.
–     ಕುಡಿಯುವ ನೀರಿನ ಮೂಲಗಳಲ್ಲಿ ಬಟ್ಟೆ ಒಗೆಯುವುದು, ಮಲ ವಿಸರ್ಜನೆ ಮಾಡುವುದು, ಸ್ನಾನ ಮಾಡುವುದು, ಪ್ರಾಣಿಗಳನ್ನು, ವಾಹನಗಳನ್ನು ತೊಳೆಯುವುದು.
–     ಕೊಳವೆ ಬಾವಿಯ ಸುತ್ತಲೂ ಒಂದು ಮೀಟರ್‌ ಒಳಗೆ ನೀರು ನಿಂತು ಕಲುಷಿತ ಗೊಂಡಾಗ
–     ಮಲಿನಗೊಂಡ ಪಾತ್ರೆಗಳಲ್ಲಿ ನೀರನ್ನು ಸಂಗ್ರಹಿಸಿದರೆ, ಕಲುಷಿತ ಕೈಯಿಂದ ನೀರನ್ನು ಮುಟ್ಟಿದಾಗ 
–     ನಗರ ಪ್ರದೇಶಗಳಲ್ಲಿ ಡ್ಯಾಮ್‌ಗಳಿಂದ, ನದಿಗಳಿಂದ ನೀರನ್ನು ಸಾರ್ವಜನಿಕರಿಗೆ ಸರಬರಾಜು ಮಾಡುವ ಮೊದಲು ನೀರು ಶುದ್ಧೀಕರಣ ಕ್ರಮಗಳನ್ನು ವೈಜ್ಞಾನಿಕವಾಗಿ ಮಾಡದೇ ಇದ್ದಾಗ.
–     ಈ ಯಾವುದೇ ರೀತಿಯಲ್ಲಿ ಕುಡಿಯುವ ನೀರು ಕಲುಷಿತಗೊಂಡಾಗ, ಅಂತಹ ನೀರನ್ನು ನೇರವಾಗಿ ಬಳಕೆ ಮಾಡಿದಾಗ ನೀರಿನಿಂದ ಹರಡುವ ಕೆಳಗೆ ಕಾಣಿಸಿದ ಯಾವುದೇ ಕಾಯಿಲೆಗಳು ಜನಸಮುದಾಯದಲ್ಲಿ ಕಾಣಿಸಿಕೊಳ್ಳಬಹುದು.
–     ಕರುಳುಬೇನೆ , ಅತಿಸಾರ ಭೇದಿ: ದಿನದಲ್ಲಿ ಮೂರು ಸಲಕ್ಕೂ ಹೆಚ್ಚು ಬಾರಿ ಭೇದಿ ಹಾಗೂ ವಾಂತಿ, ಹೊಟ್ಟೆ ನೋವು, ದೇಹದಲ್ಲಿ ನೀರು ಮತ್ತು ಲವಣದ ಅಂಶಗಳು ಕಡಿಮೆ ಯಾದಾಗ ಅದನ್ನು ಪೂರೈಕೆ ಮಾಡದಿದ್ದಾಗ ಮರಣ ಸಂಭವಿಸಬಹುದು.
–     ಆಮಶಂಕೆ – ಕರುಳಿನ ಆಮಶಂಕೆಯಲ್ಲಿ ರಕ್ತ ಅಥವಾ ಮಾಂಸದಂತಹ ಭೇದಿಯೊಂದಿಗೆ ಜ್ವರ ಅಥವಾ ಹೊಟ್ಟೆ ನೋವು ಇರಬಹುದು. ಬಯಲು ಶೌಚದಿಂದ ಈ ಕಾಯಿಲೆ ಹೆಚ್ಚು  ಹರಡಿ, ಸರಿಯಾದ ಚಿಕಿತ್ಸೆ ಸಿಗದಿದ್ದರೆ ಸಾವು ಸಂಭವಿಸಬಹುದು.
–     ಟೈಫಾಯ್ಡ ಮತ್ತು ಪ್ಯಾರಾ ಟೈಫಾಯ್ಡ – ವಾರಕ್ಕಿಂತ ಹೆಚ್ಚು ಸಮಯದಿಂದ ಜ್ವರ, ತಲೆ ನೋವು ಸುಸ್ತು, ಮೈಕೈ ನೋವು ವಾಂತಿ ಹೊಟ್ಟೆನೋವು ಕಂಡು ಬರುವುದು. ಸರಿಯಾದ ಚಿಕಿತ್ಸೆ ಸಿಗದಿದ್ದರೆ ಕರುಳಿನಲ್ಲಿ  ರಂಧ್ರಗಳಾಗಿ ರಕ್ತಸ್ರಾವಗೊಂಡು ಸಾವನ್ನಪ್ಪುವ ಸಾಧ್ಯತೆಗಳಿವೆ.
–     ಕಾಮಾಲೆ (ಹೆಪಟೈಟಿಸ್‌ – ಎ) – ಜ್ವರ, ಚಳಿ, ತಲೆನೋವು, ಕಾಮಾಲೆ ಚಿಹ್ನೆಯಾದ ಹಳದಿ ಮೂತ್ರ, ಕಣ್ಣಿನ ಕೆಳಭಾಗ ಹಳದಿಯಾಗುವುದು, ಹಸಿವೆ ಯಾಗದೇ ಇರುವುದು, ಮೈಕೈ ನೋವು, ಸುಸ್ತು ಹೊಟ್ಟೆ ನೋವು ಕಾಣಿಸಿಕೊಳ್ಳಬಹುದು.
–     ಹೊಟ್ಟೆ ಹುಳುಗಳು – ಮುಖ್ಯವಾಗಿ ಲಾಡಿ ಹುಳ, ದುಂಡು ಹುಳಗಳು ಕಲುಷಿತ ನೀರಿನಿಂದ ಹರಡುತ್ತದೆ.
–     ಇಲಿಜ್ವರ – ಮಳೆ ಸಮಯದಲ್ಲಿ ಕಾಡು, ಬೆಟ್ಟ ಪ್ರದೇಶಗಳಿಂದ ಹರಿದು ಬರುವ ನೀರು ಇಲಿಗಳು ಹಾಗೂ ಇತರ ಪ್ರಾಣಿಗಳ ಮಲಮೂತ್ರಗಳು ಮಿಶ್ರಣಗೊಂಡಿರುತ್ತದೆ. ಇಂತಹ ಕಲುಷಿತ ನೀರಿನಲ್ಲಿ ಕೆಲಸ ಮಾಡುವಾಗ ಕಾಲಿನಲ್ಲಿ, ಮೈಯಲ್ಲಿರ ಬಹುದಾದ ಒಡಕುಗಳ ಮೂಲಕ ಕ್ರಿಮಿಗಳು ದೇಹವನ್ನು ಪ್ರವೇಶಿಸಿ ರೋಗವನ್ನುಂಟು ಮಾಡಬಹುದು. ಜ್ವರ, ತಲೆನೋವು, ಮೈಕೈ ನೋವು, ಜಾಂಡೀಸ್‌ ಕಾಣಿಸಿಕೊಳ್ಳಬಹುದು. ಅಂತಹ ರೋಗಿಗಳಿಗೆ ಶೀಘ್ರವಾಗಿ ಚಿಕಿತ್ಸೆ ಸಿಗದಿದ್ದರೆ, ಮೂತ್ರಕೋಶ, ಲಿವರ್‌ ಹಾಗೂ ಇತರ ಅಂಗಾಂಗ ವೈಕಲ್ಯವುಂಟಾಗಿ ಸಾವುಂಟಾಗಬಹುದು.

ಇತ್ತೀಚಿನ ವರ್ಷಗಳಲ್ಲಿ ನಗರೀಕರಣ ಹಾಗೂ ಅವಿಭಕ್ತ ಕುಟುಂಬ ವ್ಯವಸ್ಥೆ ಹೋದ ಮೇಲೆ ಪಿತ್ರಾರ್ಜಿತ ಆಸ್ತಿಗಳು ಪಾಲಾಗಿ ಉಳಿದ ಸಣ್ಣ ಸಣ್ಣ ಜಾಗದಲ್ಲಿ ಮನೆ ಮಾಡಿ ವಾಸ ಮಾಡಬೇಕಾದ ಅನಿವಾರ್ಯ ಸಂದರ್ಭಗಳಲ್ಲಿ, ಮನೆ, ಲ್ಯಾಟ್ರಿನ್‌ ಪಿಟ್‌ ಮತ್ತು ಬಾವಿ ನಡುವೆ ಅಗತ್ಯವಾಗಿ ಇರಬೇಕಾದ ಕನಿಷ್ಠ 60 ಅಡಿ ಅಂತರವನ್ನು ಕಾಯ್ದುಕೊಳ್ಳಲು ಸಾಧ್ಯವಾಗದೇ ಇರುವುದು ಸಾಮಾನ್ಯವಾಗಿದೆ. ಈ ಸಮಸ್ಯೆ ನಗರದ ಹೊರವಲಯಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಅಂತಹ ಸಮುದಾಯದವರು, ಗ್ರಾಮಸ್ಥರು ಒಟ್ಟಾಗಿ ಸೇರಿ ಜನವಸತಿ ಪ್ರದೇಶದಿಂದ ಸಾಕಷ್ಟು ದೂರ ಸುರಕ್ಷಿತ ಪ್ರದೇಶದಲ್ಲಿ ಪಂಚಾಯತ್‌/ನಗರ ಸಭೆಯ ಸಹಕಾರದಿಂದ ಬಾವಿ ನಿರ್ಮಿಸಿ ಸಾರ್ವಜನಿಕವಾಗಿ ನೀರನ್ನು ಬಳಸುವುದು, ಅಥವಾ ಮನೆ-ಮನೆಗಳಲ್ಲಿ  ಲ್ಯಾಟ್ರಿನ್‌ ಪಿಟ್‌ ಮಾಡದೇ ಒಳಚರಂಡಿ ವ್ಯವಸ್ಥೆ ಮಾಡುವುದು ಅಗತ್ಯವಾಗುತ್ತದೆ.

ಕುಡಿಯುವ ನೀರು ಶುದ್ಧೀಕರಣ
ಕುಡಿಯುವ ನೀರನ್ನು ಸಾಮಾನ್ಯವಾಗಿ ಕ್ಲೋರಿನ್‌ ಮಾತ್ರೆಗಳು, ಕ್ಲೋರಿನ್‌ ಗ್ಯಾಸ್‌, ಕ್ಲೋರಿನ್‌ ದ್ರಾವಣ ಅಥವಾ ಬ್ಲೀಚಿಂಗ್‌ ಪೌಡರ್‌ ಹಾಕುವುದರ ಮೂಲಕ ನೀರಿನಲ್ಲಿರುವ ಸಾಮಾನ್ಯವಾದ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ನಾಶ ಮಾಡಿ ಕುಡಿಯಲು ಯೋಗ್ಯ ಮಾಡಬಹುದು. ನೈಸರ್ಗಿಕ ವಿಕೋಪ ಸಂದರ್ಭದಲ್ಲಿ ಸಮುದಾಯದಲ್ಲಿರುವ ಎಲ್ಲ ನೀರು ಕಲುಷಿತಗೊಂಡಿದ್ದರೆ, ಅದರಲ್ಲಿಯ ಉತ್ತಮ ಅನಿಸಿದ ನೀರನ್ನು ಬಕೆಟ್‌ಗಳಲ್ಲಿ, ಡ್ರಮ್‌ಗಳಲ್ಲಿ ತುಂಬಿಸಿಡಬೇಕು. ಕನಿಷ್ಟ 5-6 ಗಂಟೆಗಳ ಅನಂತರ ಉತ್ತಮವೆಂದರೆ 24 ಗಂಟೆಗಳ ನಂತರ ಹಾಗೆ ಸಂಗ್ರಹವಾದ ಬಕೆಟ್‌ನಲ್ಲಿರುವ ಮೇಲಾºಗದಲ್ಲಿರುವ ಸ್ವತ್ಛ ಕಾಣಿಸುವ ನೀರನ್ನು ಬೇರ್ಪಡಿಸಿ ಅದಕ್ಕೆ ಮಾರುಕಟ್ಟೆಯಲ್ಲಿ ಸಿಗುವ ಕ್ಲೋರಿನ್‌ ಅಥವಾ ಹಾಲೋಜನ್‌ ಮಾತ್ರೆಗಳನ್ನು 40 ಲೀಟರ್‌ ನೀರಿಗೆ 1 ಗ್ರಾಮ್‌ನಂತೆ ಹಾಕಿ ಒಂದು ಗಂಟೆಯ ಅನಂತರ ಬಳಸಬಹುದು.

ಬಾವಿಗೆ ಕ್ಲೋರಿನೇಶನ್‌ (ಬ್ಲೀಚಿಂಗ್‌ ಪೌಡರ್‌) ಮಾಡುವ ವಿಧಾನ
ಉತ್ತಮ ಶ್ರೇಣಿಯ ಬ್ಲೀಚಿಂಗ್‌ ಪೌಡರ್‌ನಲ್ಲಿ ಸುಮಾರು 33%ಕ್ಲೋರಿನ್‌ ಇರುತ್ತದೆ. ಸಾಮಾನ್ಯವಾಗಿ 1000 ಲೀಟರ್‌ ನೀರಿಗೆ 2.5ಗ್ರಾಂ. ನಷ್ಟು ಅಂತಹ ಉತ್ತಮ ಶ್ರೇಣಿಯ ಬ್ಲೀಚಿಂಗ್‌ ಪೌಡರ್‌ ಬೇಕಾಗುತ್ತದೆ. ವೃತ್ತಾಕಾರದ ಬಾವಿಯಲ್ಲಿರುವ ನೀರಿನ ಪ್ರಮಾಣವನ್ನು ಕೆಳಗಿನ ಸೂತ್ರದಿಂದ ಕಂಡು ಹಿಡಿಯಬಹುದು.
3.14 x ಛ2 x ಜ x 1000
              4
ಹಾಗೆಯೇ ವೃತ್ತಾಕಾರವಾಗಿರುವ ಬಾವಿಯಲ್ಲಿರುವ ನೀರಿಗೆ ಅಗತ್ಯವಾಗುವ ಬ್ಲೀಚಿಂಗ್‌ ಪೌಡರ್‌ನ್ನು ಕರಾರುವಕ್ಕಾಗಿ ಕೆಳಗಿನ ಸೂತ್ರದಿಂದ ಕಂಡುಕೊಳ್ಳಬಹುದು.
  9.4 x ಈ2 x ಏ
          4
ಈ = ಸುತ್ತಳತೆ   ಏ = ನೀರಿನ ಆಳ ಮೀಟರ್‌ನಲ್ಲಿ  ಉದಾರಣೆಗೆ 2 ಮೀಟರ್‌ ಸುತ್ತಳತೆಯಿರುವ ಬಾವಿಯಲ್ಲಿ  6 ಮೀಟರ್‌ನಷ್ಟು ನೀರಿದ್ದರೆ ಬೇಕಾಗುವ ಬ್ಲೀಚಿಂಗ್‌ ಪುಡಿ.
 9.4 x 2 x 2 x 6  = 56.4 ಗ್ರಾಮ್‌ಗಳು
             4
ನೀರನ್ನು ಶುದ್ಧೀಕರಿಸಲು ಅಗತ್ಯವಾಗುವಷ್ಟು, ಬ್ಲೀಚಿಂಗ್‌ ಪೌಡರನ್ನು 1 ಬಕೆಟ್‌ನಲ್ಲಿ (100 ಗ್ರಾಮ್‌ಗೆ ಮೀರದಂತೆ) ಹಾಕಿ ತೆಳುವಾದ ಪೇಸ್ಟ್‌ ಆಗುವಂತೆ ನೀರಿನಲ್ಲಿ ಕಲಸಬೇಕು. ನಂತರ ಸ್ವಲ್ಪ ಸ್ವಲ್ಪವೇ ನೀರು ಸೇರಿಸಿ ಮುಕ್ಕಾಲು ಬಕೆಟ್‌ ತುಂಬ ನೀರು ತುಂಬಬೇಕು. ಈ ಮಿಶ್ರಣವನ್ನು ಚೆನ್ನಾಗಿ ಕಲುಕಿ. ಸುಣ್ಣದ ಕಣಗಳು ತಳದಲ್ಲಿ ತಂಗುವಂತೆ 5ರಿಂದ 10 ನಿಮಿಷ ಬಿಡಬೇಕು. ನಂತರ ಮೇಲೆ ನಿಂತ ತಿಳಿಯಾದ ಕ್ಲೋರಿನ್‌ಯುಕ್ತ ದ್ರಾವಣವನ್ನು ಬೇರೆ ಬಕೆಟ್‌ಗೆ ರವಾನಿಸಿ, ತಳದಲ್ಲಿರುವ ಸುಣ್ಣದ ಹರಳುಗಳನ್ನು ಚೆಲ್ಲಬೇಕು. ನಂತರ ಕ್ಲೋರಿನ್‌ಯುಕ್ತ ದ್ರಾವಣವಿರುವ ಬಕೆಟ್‌ ನೀರನ್ನು ಶುದ್ಧೀಕರಣ ಮಾಡಬೇಕಿದ್ದ ಬಾವಿ ನೀರಿಗೆ ಸೇರುವಂತೆ ಮಾಡಬೇಕು. ಹೀಗೆ ಕ್ಲೋರಿನೇಶನ್‌ ಮಾಡಿದ 60 ನಿಮಿಷಗಳ ನಂತರ ನೀರನ್ನು ಬಳಸಬಹುದು.  ಸರಿಯಾದ ಕ್ರಮದಲ್ಲಿ ಸರಿಯಾದ ಪ್ರಮಾಣದಲ್ಲಿ ಬ್ಲೀಚಿಂಗ್‌ ಪೌಡರ್‌ ಹಾಕಿ ಕ್ಲೋರಿನೇಶನ್‌ ಮಾಡುವುದರಿಂದ ನೀರಿನಲ್ಲಿರಬಹುದಾದ ಹೆಚ್ಚಿನ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ನಾಶಪಡಿಸಿದ್ದರೂ ಈ ಕ್ರಿಯೆ ಕೆಲವು ವೈರಸ್‌ಗಳನ್ನು, ಕೆಲವು ರೋಗಕಾರಕ ಕಣಗಳ  ಮೇಲೆ ಹೆಚ್ಚು ಪರಿಣಾಮಕಾರಿಯಲ್ಲ. ಆದ್ದರಿಂದ ನೀರನ್ನು ಕ್ಲೋರಿನೇಶನ್‌ ನಂತರವೂ 10ರಿಂದ 20 ನಿಮಿಷಗಳ ತನಕ ಕುದಿಸಿ  ಆರಿಸಿ ಕುಡಿದರೆ ಉತ್ತಮ.

Advertisement

ನದಿ, ಡ್ಯಾಮ್‌ಗಳ ಮೂಲದಿಂದ ಸಾರ್ವಜನಿಕರಿಗೆ ನೀರು ಸರಬರಾಜು ವ್ಯವಸ್ಥೆಯ ನೀರಿನ ಶುದ್ಧೀಕರಣ, ನೀರಿನ ಗುಣಮಟ್ಟ ಪರೀಕ್ಷೆ, ಸಾಗಾಟ ಪೈಪ್‌ಲೈನ್‌ ವ್ಯವಸ್ಥೆಗಳನ್ನು ಅಧಿಕಾರಿಗಳು ಹೆಚ್ಚು ಒತ್ತು ನೀಡಿ ಪದೇ ಪದೇ ಪರಿಶೀಲನೆಗೆ ಒಳಪಡಿಸುವುದು ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಅತೀ ಅಗತ್ಯವಾಗಿದೆ.

ತಡೆಗಟ್ಟುವ ವಿಧಾನಗಳು
–    ನೀರನ್ನು ಯಾವಾಗಲೂ ಕುದಿಸಿ ಆರಿಸಿ ಕುಡಿಯುವುದು.
–     ಕುಡಿಯುವ ನೀರಿನ ಮೂಲದಿಂದ ಕನಿಷ್ಠ 60 ಅಡಿ ಅಂತರದಲ್ಲಿ ಯಾವುದೇ ತ್ಯಾಜ್ಯ ನೀರು , ತ್ಯಾಜ್ಯ ವಸ್ತು, ಲ್ಯಾಟ್ರಿನ್‌ ಪಿಟ್‌ ಇರದಂತೆ ಮಾಡಿಕೊಳ್ಳುವುದು.
–     ಸಾರ್ವಜನಿಕರು ಕುಡಿಯುವ ನೀರಿನ ಮೂಲಗಳನ್ನು ಕಾಲ ಕಾಲಕ್ಕೆ ಪರೀಕ್ಷಿಸಿ ಕ್ಲೋರಿನ್‌ /ಬ್ಲೀಚಿಂಗ್‌ ಪೌಡರ್‌ ಹಾಕುವುದು.
–     ಕುಡಿಯುವ ನೀರಿನ ಬಾವಿಗೆ, ಬ್ಯಾಂಕ್‌ಗಳಿಗೆ ಕಸಕಡ್ಡಿ , ಪ್ರಾಣಿಪಕ್ಷಿಗಳು ತ್ಯಾಜ್ಯಗಳು ಬೀಳದಂತೆ ನೋಡಿಕೊಳ್ಳುವುದು. 
–     ಕುಡಿಯುವ ನೀರಿನ ಮೂಲಗಳಲ್ಲಿ  ದನ, ಕರುಗಳ ಸ್ನಾನ, ಮಲ ಮೂತ್ರ ವಿಸರ್ಜನೆ, ಸ್ನಾನ, ವಾಹನ ಸ್ವತ್ಛಗೊಳಿಸುವುದು ಬಹಿಷ್ಕರಿಸಬೇಕು.

– ಡಾ| ಅಶ್ವಿ‌ನಿ ಕುಮಾರ ಗೋಪಾಡಿ , 
ಅಡಿಶನಲ್‌ ಪ್ರೊಫೆಸರ್‌
ಕಮ್ಯುನಿಟಿ ಮೆಡಿಸಿನ್‌, ಕೆ.ಎಂ.ಸಿ. ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next