Advertisement

ರಂಗೇರಿದ ಪರಿಷತ್‌ ಕಣ; ಬಹುತೇಕ ಕಡೆ ಕಾಂಗ್ರೆಸ್‌-ಬಿಜೆಪಿ ನಡುವೆ ನೇರ ಪೈಪೋಟಿ

02:01 AM Nov 23, 2021 | Team Udayavani |

ಬೆಂಗಳೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಗೆ ಮೂರೂ ಪಕ್ಷಗಳ ಅಭ್ಯರ್ಥಿಗಳು ಬಹುತೇಕ ಅಂತಿಮ ಗೊಂಡಿದ್ದು, ಪರಿಷತ್‌ ಚುನಾವಣ ಕಣ ಅಧಿಕೃತವಾಗಿ ರಂಗೇರಿದಂತಾಗಿದೆ.

Advertisement

20 ಕ್ಷೇತ್ರಗಳ 25 ಸ್ಥಾನಗಳಲ್ಲಿ ಆಡಳಿತ ಪಕ್ಷ ಬಿಜೆಪಿ ಮತ್ತು ಅಧಿಕೃತ ವಿಪಕ್ಷ ಕಾಂಗ್ರೆಸ್‌ ನಡುವೆ ಬಹುತೇಕ ನೇರ ಪೈಪೋಟಿ ನಡೆಯಲಿದ್ದು, ಜೆಡಿಎಸ್‌ ಬಲ ಇರುವ ಹಳೇ ಮೈಸೂರು ಭಾಗದ ಕೆಲವು ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ ಉಂಟಾಗಲಿದೆ. ಜೆಡಿಎಸ್‌ ಸ್ಪರ್ಧೆ ಮಾಡದ ಕಡೆ ಬಿಜೆಪಿ ಬೆಂಬಲ ಕೋರಿರುವುದು ಕುತೂಹಲ ಮೂಡಿಸಿದೆ.

ಆಡಳಿತ ಪಕ್ಷ ಬಿಜೆಪಿ ಮತ್ತು ಕಾಂಗ್ರೆಸ್‌ ಐದೂ ದ್ವಿಸದಸ್ಯ ಕ್ಷೇತ್ರಗಳಲ್ಲಿ ಒಬ್ಬೊಬ್ಬರೇ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಪಕ್ಷದಲ್ಲಿಯೇ ಉಂಟಾಗುವ ಆಂತರಿಕ ಸಂಘರ್ಷದ ತಲೆನೋವಿನಿಂದ ಹೊರ ಬಂದಿವೆ.

ಬಿಜೆಪಿ ಮತ್ತು ಕಾಂಗ್ರೆಸ್‌ ಎಲ್ಲ 20 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ ಮಾಡಿದರೆ, ಜೆಡಿಎಸ್‌ ನಾಲ್ಕು ಕ್ಷೇತ್ರಗಳ ಹೆಸರು ಅಂತಿಮಗೊಳಿಸಿ, ಉಳಿದ ಕ್ಷೇತ್ರಗಳ ಹೆಸರು ಘೋಷಿಸಿಲ್ಲ.

ಬೆಂಗಳೂರು ನಗರ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಕಲಬುರಗಿ, ಬೀದರ್‌, ಬಳ್ಳಾರಿ, ರಾಯಚೂರು, ಚಿತ್ರದುರ್ಗ, ಕೊಡಗು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ಪೈಪೋಟಿ ಏರ್ಪಡಲಿದೆ. ಬೆಂಗಳೂರು ಗ್ರಾಮಾಂತರ, ಕೋಲಾರ, ಹಾಸನ, ಮಂಡ್ಯ, ತುಮಕೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಡುವೆ ನೇರ ಪೈಪೋಟಿಯಿದ್ದು, ಐದು ದ್ವಿಸದಸ್ಯ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಹಾಗೂ ಬಿಜೆಪಿ ತಲಾ ಒಂದೊಂದು ಅಭ್ಯರ್ಥಿ ಇರುವುದರಿಂದ ಎರಡೂ ಪಕ್ಷಗಳಿಗೆ ಗೆಲುವು ಹಂಚಿಕೆಯಾಗಲಿದೆ.

Advertisement

ಬಿಜೆಪಿ ಹಾಲಿ ಸದಸ್ಯರಲ್ಲಿ ಕೊಡಗಿನ ಸುನಿಲ್‌ ಸುಬ್ರಮಣಿ ಬದಲಿಗೆ ಅಪ್ಪಚ್ಚು ರಂಜನ್‌ ಸಹೋದರನಿಗೆ ಟಿಕೆಟ್‌ ನೀಡಿದೆ. ಉಳಿದಂತೆ ಐವರು ಹಾಲಿ ಸದಸ್ಯರಿಗೆ ಟಿಕೆಟ್‌ ನೀಡಿದ್ದು, ಬೆಂಗಳೂರು ನಗರದಲ್ಲಿ ಹೊಸಬರಿಗೆ ಅವಕಾಶ ನೀಡಿದ್ದಾರೆ.

ಇದನ್ನೂ ಓದಿ:ಲಂಕಾದಲ್ಲಿ ಕೃಷಿ ಸಂಬಂಧಿ ರಾಸಾಯನಿಕಗಳ ಆಮದಿನ ಮೇಲಿನ ನಿರ್ಬಂಧ ರದ್ದು

ಬಣ ರಾಜಕೀಯದ ಪ್ರಭಾವ
ವಿಪಕ್ಷ ಕಾಂಗ್ರೆಸ್‌ ಕೆಲವು ಹಾಲಿ ಸದಸ್ಯರಿಗೆ ಟಿಕೆಟ್‌ ತಪ್ಪಿಸುವ ಮೂಲಕ ದಿಟ್ಟ ನಿಲುವು ಪ್ರದರ್ಶಿಸಿದೆ. ಇಲ್ಲಿ ಬಣ ರಾಜಕೀಯದ ಪ್ರಭಾವವೂ ಕೆಲಸ ಮಾಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ವಿಧಾನ ಪರಿಷತ್ತಿನ ಹಾಲಿ ವಿಪಕ್ಷ ನಾಯಕ ಎಸ್‌.ಆರ್‌. ಪಾಟೀಲ್‌ ಅವರಿಗೆ ಟಿಕೆಟ್‌ ಕೈ ತಪ್ಪಿದ್ದು, ಮಾಜಿ ಗೃಹ ಸಚಿವ ಎಂ.ಬಿ. ಪಾಟೀಲ್‌ ಸಹೋದರ ಸುನಿಲ್‌ ಪಾಟೀಲ್‌ ಟಿಕೆಟ್‌ ಪಡೆದಿದ್ದಾರೆ. ಇದರ ಹಿಂದೆ ನಾಯಕರ ಪ್ರಭಾವ ಕೆಲಸ ಮಾಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಮಂಜುನಾಥ ಭಂಡಾರಿಗೆ ಟಿಕೆಟ್‌
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಒಳಗೊಂಡ ಕ್ಷೇತ್ರಕ್ಕೆ ಮಂಜುನಾಥ ಭಂಡಾರಿ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ಸಿಕ್ಕಿದೆ. ಬೆಳಗಾವಿಯಲ್ಲಿ ಕಳೆದ ಬಾರಿ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯಾಗಿದ್ದ ವಿವೇಕರಾವ್‌ ಪಾಟೀಲ್‌ ಕಾಂಗ್ರೆಸ್‌ ಟಿಕೆಟ್‌ ಕೈ ತಪ್ಪಿದ್ದು, ಹಾಲಿ ಶಾಸಕಿ ಲಕ್ಷ್ಮೀ ಹೆಬ್ಟಾಳ್ಕರ್‌ ಸಹೋದರ ಚನ್ನರಾಜ ಹಟ್ಟಿಹೊಳಿ ಅವರಿಗೆ ಟಿಕೆಟ್‌ ಸಿಕ್ಕಿದೆ.

ಹುಬ್ಬಳ್ಳಿ ಧಾರವಾಡ, ಹಾವೇರಿ, ಗದಗ ದ್ವಿಸದಸ್ಯ ಕ್ಷೇತ್ರಕ್ಕೆ ಹಾಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್‌ ಅವರಿಗೆ ಅವಕಾಶ ಕಲ್ಪಿಸಲಾಗಿದೆ. ಕಲಬುರಗಿಯಲ್ಲಿ ರಾಜ್ಯಸಭೆ ವಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆಪ್ತ ಶಿವಾನಂದ ಪಾಟೀಲ್‌ ಮರ್ತುರ ಅವರಿಗೆ ಟಿಕೆಟ್‌ ನೀಡಲಾಗಿದೆ. ಉತ್ತರ ಕನ್ನಡದಲ್ಲಿ ಹಾಲಿ ಸದಸ್ಯ ಎಸ್‌.ಎನ್‌. ಘೋಟೆ°ಕರ್‌ ಬದಲು ಭೀಮಣ್ಣ ನಾಯ್ಕಗೆ ಟಿಕೆಟ್‌ ನೀಡಲಾಗಿದೆ. ದಕ್ಷಿಣ ಕನ್ನಡದಲ್ಲಿ ಹಾಲಿ ಕಾಂಗ್ರೆಸ್‌ ಸದಸ್ಯ ಪ್ರತಾಪ ಚಂದ್ರ ಶೆಟ್ಟಿ ಚುನಾವಣೆಯಿಂದ ಹಿಂದೆ ಸರಿ ದಿರು ವುದರಿಂದ ಮಂಜುನಾಥ ಭಂಡಾರಿಗೆ ಅವಕಾಶ ಲಭಿಸಿದೆ.

ಚಿತ್ರದುರ್ಗದಲ್ಲಿ ರಘು ಆಚಾರ್‌ ಹಿಂದೆ ಸರಿದದ್ದರಿಂದ ಬಿ. ಸೋಮಶೇಖರ್‌ಗೆ ಅದೃಷ್ಟ ಒಲಿದಿದೆ. ಮೈಸೂರಿ ನಲ್ಲಿ ಹಾಲಿ ಸದಸ್ಯ ಧರ್ಮಸೇನಾ ಆಕಾಂಕ್ಷಿಯಾಗಿದ್ದರೂ ಸ್ಥಳೀಯ ವಾಗಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಡಾ| ಡಿ ತಿಮ್ಮಯ್ಯ ಅವಕಾಶ ಗಿಟ್ಟಿಸಿದ್ದಾರೆ. ಆದರೆ ಬಳ್ಳಾರಿ ಯಲ್ಲಿ ಸ್ಥಳೀಯ ಶಾಸಕರ ವಿರೋಧದ ನಡುವೆಯೂ ಟಿಕೆಟ್‌ ಪಡೆಯುವಲ್ಲಿ ಹಾಲಿ ಸದಸ್ಯ ಕೆ.ಸಿ. ಕೊಂಡಯ್ಯ ಯಶಸ್ವಿಯಾಗಿದ್ದಾರೆ.

ಕಳೆದ ಲೋಕಸಭಾ ಚುನಾವಣೆ ಯಲ್ಲಿ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದ ಮಾಜಿ ಸಚಿವ ಎ. ಮಂಜು ಅವರ ಪುತ್ರ ಮಂಥರ ಗೌಡ ಅವರಿಗೆ ಕೊಡಗು ಟಿಕೆಟ್‌ ನೀಡಲಾಗಿದ್ದು, ಭವಿಷ್ಯದಲ್ಲಿ ಎ. ಮಂಜು ಮತ್ತೆ ಕಾಂಗ್ರೆಸ್‌ಗೆ ಮರಳುವ ಮುನ್ಸೂಚನೆ ನೀಡಿದಂತಿದೆ.

ಕಾಂಗ್ರೆಸ್‌ನಲ್ಲಿ ಉಳಿದಂತೆ ಹಾಲಿ ಸದಸ್ಯರಾದ ಆರ್‌. ಪ್ರಸನ್ನ ಕುಮಾರ್‌ ಶಿವಮೊಗ್ಗ, ಎಸ್‌. ರವಿ, ಬೆಂಗಳೂರು ಗ್ರಾಮಾಂತರ ಟಿಕೆಟ್‌ ಪಡೆದಿದ್ದು, ರಾಯಚೂರಿಗೆ ಶರಣ ಗೌಡ ಪಾಟೀಲ್‌, ಚಿಕ್ಕಮಗಳೂರಿಗೆ ಗಾಯತ್ರಿ ಶಾಂತೇಗೌಡ, ಹಾಸನಕ್ಕೆ ಎಂ. ಶಂಕರ, ತುಮಕೂರಿಗೆ ಆರ್‌. ರಾಜೇಂದ್ರ, ಮಂಡ್ಯಕ್ಕೆ ದಿನೇಶ್‌ ಗೂಳಿಗೌಡ ಅವರಿಗೆ ಟಿಕೆಟ್‌ ನೀಡಲಾಗಿದೆ.

ಕಾಂಗ್ರೆಸ್‌ನಿಂದ ಕೋಲಾರದಿಂದ ಅನಿಲ್‌ ಕುಮಾರ್‌, ಬೆಂಗಳೂರು ನಗರದಿಂದ ಯೂಸುಫ್ ಷರೀಫ್, ಬೀದರ್‌ನಿಂದ ಭೀಮರಾವ್‌ ಬಿ. ಪಾಟೀಲ್‌ ಅವರ ಹೆಸರು ಅಂತಿಮ ಗೊಳಿಸಲಾಗಿದೆ.

ಇದನ್ನೂ ಓದಿ:ವಿಜಯಪುರ: ಪಕ್ಷೇತರ ಸ್ಪರ್ಧೆಯ ಭೀತಿ; ಸುನಿಲ ಗೌಡಗೆ ಕಾಂಗ್ರೆಸ್ ಟಿಕೇಟ್

ಕಾದು ನೋಡಿದ ಜೆಡಿಎಸ್‌
ಎರಡೂ ರಾಷ್ಟ್ರೀಯ ಪಕ್ಷಗಳು ಅಧಿಕೃತ ಅಭ್ಯರ್ಥಿಗಳನ್ನು ಪ್ರಕಟಿಸುವ ವರೆಗೂ ಕಾದು ನೋಡಿದ ಜೆಡಿಎಸ್‌ ಕೊನೆ ಘಳಿಗೆಯಲ್ಲಿ ಟಿಕೆಟ್‌ ಘೋಷಣೆ ಮಾಡಿದೆ. ಪರಿಷತ್ತಿನ ನಾಲ್ವರು ಹಾಲಿ ಸದಸ್ಯರಲ್ಲಿ ಕಾಂತರಾಜು, ಸಿ.ಆರ್‌. ಮನೋಹರ್‌ ಮತ್ತು ಸಂದೇಶ ನಾಗರಾಜ್‌ ಅವರಿಗೆ ಟಿಕೆಟ್‌ ಕೈ ತಪ್ಪಿದ್ದು, ಹಾಸನಕ್ಕೆ ಡಾ| ಸೂರಜ್‌ ಗೌಡ, ಮಂಡ್ಯಕ್ಕೆ ಹಾಲಿ ಸದಸ್ಯ ಅಪ್ಪಾಜಿ ಗೌಡ, ತುಮಕೂರಿಗೆ ಅನಿಲ್‌ ಕುಮಾರ್‌, ಬೆಂಗಳೂರು ಗ್ರಾಮಾಂತರ ರಮೇಶ್‌ ಗೌಡಗೆ ಟಿಕೆಟ್‌ ನೀಡಲಾಗಿದೆ.

ಹಾಲಿ ಸದಸ್ಯರ ಸ್ಪರ್ಧೆ ಇಲ್ಲ
ಬಿಜೆಪಿಯಿಂದ ಕೊಡಗು ಕ್ಷೇತ್ರದ ಸುನಿಲ್‌ ಸುಬ್ರಮಣಿ, ಕಾಂಗ್ರೆಸ್‌ನಿಂದ ಬೆಂಗಳೂರು ನಗರದ ನಾರಾಯಣಸ್ವಾಮಿ, ಮೈಸೂರಿನ ಧರ್ಮಸೇನಾ, ದಕ್ಷಿಣ ಕನ್ನಡದ ಪ್ರತಾಪಚಂದ್ರ ಶೆಟ್ಟಿ, ಬೆಳಗಾವಿಯ ವಿವೇಕ ರಾವ್‌ ಪಾಟೀಲ್‌, ವಿಜಯಪುರದ ಎಸ್‌.ಆರ್‌. ಪಾಟೀಲ್‌, ಚಿತ್ರದುರ್ಗದ ರಘು ಆಚಾರ್‌, ಕಾರವಾರದ ಘೋಟೆ°ಕರ್‌, ಜೆಡಿಎಸ್‌ನಿಂದ ಕೋಲಾರದ ಸಿ.ಆರ್‌. ಮನೋಹರ್‌, ಮೈಸೂರಿನ ಸಂದೇಶ್‌ ನಾಗರಾಜ್‌, ತುಮಕೂರಿನ ಬೆಮೆಲ್‌ ಕಾಂತರಾಜ್‌ ಅವರಿಗೆ ಟಿಕೆಟ್‌ ಕೈ ತಪ್ಪಿದೆ. ಈ ಪೈಕಿ ಕೆಲವರು ಸ್ಪರ್ಧೆಗೆ ನಿರಾಕರಿಸಿದರೆ ಕೆಲವರಿಗೆ ಪಕ್ಷವೇ ಟಿಕೆಟ್‌ ನಿರಾಕರಿಸಿದೆ.

ಸ್ಪರ್ಧೆಯಿಂದ ಹಿಂದಕ್ಕೆ
ಕಾಂಗ್ರೆಸ್‌ನಲ್ಲಿ ಹಾಲಿ ಸದಸ್ಯರಾದ ದಕ್ಷಿಣ ಕನ್ನಡದ ಪ್ರತಾಪಚಂದ್ರ ಶೆಟ್ಟಿ, ಬೆಂಗಳೂರಿನ ನಾರಾಯಣಸ್ವಾಮಿ, ಬೀದರ್‌ನ ವಿಜಯ್‌ಸಿಂಗ್‌, ಚಿತ್ರ ದುರ್ಗದ ರಘು ಆಚಾರ್‌ ಖುದ್ದು ಸ್ಪರ್ಧೆಯಿಂದ ಹಿಂದೆ ಸರಿದಿದ್ದರು.

ಇಂದು ಕೊನೆಯ ದಿನ
ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಮಂಗಳವಾರ ಕೊನೆಯ ದಿನವಾಗಿದ್ದು, ನಾಮಪತ್ರಗಳ ಮಹಾ ಪೂರ ಹರಿದುಬರುವ ಸಾಧ್ಯತೆಯಿದೆ. ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸೇರಿ ಒಟ್ಟು 26 ಅಭ್ಯರ್ಥಿಗಳಿಂದ 32 ನಾಮಪತ್ರಗಳು ಸಲ್ಲಿಕೆಯಾಗಿವೆ. ನ. 24ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನಾಮಪತ್ರ ವಾಪಸ್‌ ಪಡೆಯಲು ನ. 26 ಕೊನೆಯ ದಿನವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next