Advertisement

ವಾಮನನ ಸಿದ್ದಾಶ್ರಮ ! ರಾಮನಿಂದ ವಿಶ್ವಾಮಿತ್ರರ ಯಜ್ಞದ ರಕ್ಷಣೆ…

12:18 PM Jan 29, 2019 | |

ಶ್ರೀರಾಮ ಲಕ್ಷ್ಮಣರು  ತಾಟಕಿಯನ್ನು ಸಂಹರಿಸಿದ ನಂತರ ಪ್ರಾತಃಕಾಲವನ್ನು ನಿರೀಕ್ಷಿಸುತ್ತಾ ವಿಶ್ವಾಮಿತ್ರರೊಂದಿಗೆ ಆ ರಾತ್ರಿ ತಾಟಕವನದಲ್ಲೇ ವಿಶ್ರಮಿಸಿದರು.  ಬೆಳ್ಳಿಗೆ ಎದ್ದು ನಿತ್ಯಕರ್ಮಗಳನ್ನು ಮುಗಿಸಿ ತಮ್ಮ ಪ್ರಯಾಣವನ್ನು ಮುಂದುವರಿಸಿದರು. ದಾರಿಯಲ್ಲಿ ,  ಮಹಾತಪಸ್ವಿ ವಿಶ್ವಾಮಿತ್ರರು ಶ್ರೀರಾಮನಲ್ಲಿ  ಬಹಳ ಸಂತೋಷದಿಂದ ” ರಾಜಕುಮಾರ ನಿನಗೆ ಮಂಗಳವಾಗಲಿ. ತಾಟಕವಧೆಯಿಂದ ನಾನು ನಿನ್ನ ಮೇಲೆ ಬಹಳ ಸಂತುಷ್ಟನಾಗಿರುವೆನು. ಆದ್ದರಿಂದ ನಿನಗೆ ಎಲ್ಲ ಪ್ರಕಾರದ ಅಸ್ತ್ರಗಳನ್ನು ಕೊಡುತ್ತಿದ್ದೇನೆ” ಎಂದು ಹೇಳಿ ಎಲ್ಲಾ ರೀತಿಯ ದಿವ್ಯಾಸ್ತ್ರ ಹಾಗೂ ಮಹಾನ್ ದಂಡಚಕ್ರ, ಧರ್ಮಚಕ್ರ, ವಿಷ್ಣುಚಕ್ರ ಹಾಗೂ ಅತ್ಯಂತ ಭಯಂಕರ ಐಂದ್ರಚಕ್ರ , ಇಂದ್ರನ ವಜ್ರಾಸ್ತ್ರ ,ಶಿವನ ತ್ರಿಶೂಲ, ಬ್ರಹ್ಮದೇವರ ಬ್ರಹ್ಮಶಿರ ಎಂಬ ಅಸ್ತ್ರ, ಜೊತೆಗೆ ಪರಮೋತ್ತಮವಾದ ಬ್ರಹ್ಮಾಸ್ತ್ರವನ್ನೂ , ಹತ್ತು ಹಲವು ವಿಶೇಷಾಸ್ತ್ರವನ್ನು  ಕರುಣಿಸಿ ಹಾರೈಸಿದರು.

Advertisement

         ಆ ಅಸ್ತ್ರಗಳನ್ನು ಸ್ವೀಕರಿಸಿದ ಬಳಿಕ ಪರಮ ಪವಿತ್ರ ಶ್ರೀರಾಮನ ಮುಖ ಪ್ರಸನ್ನತೆಯಿಂದ ಅರಳಿತು. ಶ್ರೀರಾಮನು  ವಿಶ್ವಾಮಿತ್ರರಿಂದ ಆ ಅಸ್ತ್ರಗಳ ಸಂಹಾರವಿಧಿಯನ್ನು ಅರಿತು ಅವರೆಲ್ಲರೂ ತಮ್ಮ ಪ್ರಯಾಣವನ್ನು ಮುಂದುವರಿಸುತ್ತಾ ತಟಾಕವನದಿಂದ ಹೊರಬಂದರು. ಅಲ್ಲಿ ಅವರಿಗೆ ಒಂದು ಪರ್ವತದ ಬಳಿ ದಟ್ಟವಾದ ಮೋಡಗಳಂತೆ ನಿಬಿಡವಾದ ವೃಕ್ಷಗಳಿಂದ ತುಂಬಿದ ಆಶ್ರಮವು ಕಾಣಿಸಿತು. ಅದು ಜಿಂಕೆಗಳ ಸಮೂಹಗಳಿಂದ ತುಂಬಿಕೊಂಡು ಅತ್ಯಂತ ಮನೋಹರವಾಗಿ ಕಾಣುತ್ತಿತ್ತು. ನಾನಾ ಬಗೆಯ ಪಕ್ಷಿಗಳ ಮಧುರ ಕಲರವದಿಂದ ಈ ಸ್ಥಾನದ ಶೋಭೆ ಹೆಚ್ಚುತ್ತಿತ್ತು .

             ಇದನ್ನು ಕಂಡ ಶ್ರೀರಾಮನು ವಿಶ್ವಾಮಿತ್ರರಲ್ಲಿ – “ಪೂಜ್ಯರೇ! ಇದು ಯಾರ ಆಶ್ರಮವಾಗಿದೆ ? ಇದರ ಬಗ್ಗೆ ತಿಳಿದುಕೊಳ್ಳುವ ಉತ್ಕಠತೆ ನನ್ನ ಮನಸಿನಲ್ಲಿ ಉಂಟಾಗಿದೆ. ಎಲ್ಲಿ ನಿಮ್ಮ ಯಜ್ಞ ಕ್ರಿಯೆ ನಡೆಯುವುದು? ಆ ಪಾಪಿ ದುರಾಚಾರಿ, ಬ್ರಹ್ಮಹತ್ಯೆ ಮಾಡಿರುವ, ನಿಮ್ಮ ಯಜ್ಞದಲ್ಲಿ ವಿಘ್ನವನ್ನು ಮಾಡಲು ಬರುತ್ತಾ ಇರುವ ಆ ದುರಾತ್ಮ ರಾಕ್ಷಸರು ಎಲ್ಲಿ ? ಯಾವ ಪ್ರದೇಶದಲ್ಲಿ ಆ ರಾಕ್ಷಸರನ್ನು ವಧಿಸಿ ನಾನು ಯಜ್ಞ ರಕ್ಷಿಸಬೇಕು? ಅಂತಹ ನಿಮ್ಮ ಆಶ್ರಮದ ದೇಶ ಯಾವುದು? ದಯಮಾಡಿ ಇದೆಲ್ಲದರ ಬಗ್ಗೆ ನನಗೆ ತಿಳಿಸಿರಿ”. ಎಂದು ಕೇಳಿದನು.

           ಅಪ್ರಮೇಯನಾದ ಶ್ರೀರಾಮನ ಮಾತನ್ನು ಕೇಳಿ ಮಹಾತೇಜಸ್ವೀ ವಿಶ್ವಾಮಿತ್ರರು ಅವನ ಪ್ರಶ್ನೆಗಳಿಗೆ ಉತ್ತರಿಸುತ್ತಾ.. ಆ ಆಶ್ರಮದ ಹಿಂದಿನ ವೃತ್ತಾಂತವನ್ನು ವಿವರಿಸತೊಡಗಿದರು. ರಾಮ ! ಬಹಳ ಹಿಂದೆ ದೇವವಂದಿತ ಭಗವಾನ್ ವಿಷ್ಣುವು ನೂರು ಯುಗಗಳವರೆಗೆ ಇಲ್ಲಿ ತಪಸ್ಸನ್ನು ಮಾಡಿದ್ದನು. ಈ ಸ್ಥಾನವು ವಾಮನನದ್ದಾಗಿದೆ. ಶ್ರೀವಿಷ್ಣುವು ವಾಮನ ಅವತಾರ ಧರಿಸುವ ಮೊದಲಿನಿಂದಲೂ ಈ ಆಶ್ರಮವಿತ್ತು.  ಇದು ಸಿದ್ಧಾಶ್ರಮವೆಂದು ಪ್ರಸಿದ್ಧವಾಗಿತ್ತು. ಏಕೆಂದರೆ ಇಲ್ಲಿ ಮಹಾಯೋಗಿ ವಿಷ್ಣುವಿಗೆ ಸಿದ್ದಿ ಉಂಟಾಗಿತ್ತು. ಅವನು ತಪಸ್ಸು ಮಾಡುತ್ತಿದ್ದಾಗಲೇ ವಿರೋಚನ ಕುಮಾರ ಬಲಿಚಕ್ರವರ್ತಿಯು ಇಂದ್ರನನ್ನು ಮರುದ್ಗಣಗಳ ಸಹಿತ ಸೋಲಿಸಿ ಅವರ ರಾಜ್ಯವನ್ನು ವಶಪಡಿಸಿಕೊಂಡಿದ್ದನು. ಅವನು ಮೂರು ಲೋಕಗಳಲ್ಲಿಯೂ ವಿಖ್ಯಾತನಾಗಿದ್ದನು.

Advertisement

             ಇಂದ್ರಾದಿ ದೇವತೆಗಳೆಲ್ಲ ಈ ಆಶ್ರಮಕ್ಕೆ ಬಂದು ಭಗವಾನ್ ವಿಷ್ಣುವಿನಲ್ಲಿ ಪ್ರಾರ್ಥಿಸಿದರು. “ಬಲಿಯು ಈಗಾಗಲೇ ಮೂರೂ ಲೋಕಗಳನ್ನು ಗೆದ್ದೂ ವಿಜಯಶಾಲಿಯಾಗಿದ್ದಾನೆ. ಈಗ ಶತ ಯಾಗವನ್ನು ಮಾಡಿ ಅಜೇಯನಾಗಲು ಹೊರಟಿದ್ದಾನೆ. ಇದರಿಂದ ರಾಕ್ಷಸರ ಉಪದ್ರವೂ ಎಲ್ಲೇ ಮೀರುತ್ತಿದೆ. ಬಲಿಯ ಯಜ್ಞವು ಪೂರ್ಣವಾಗುವ ಮೊದಲೇ ನೀನು ಅವನನ್ನು ತಡೆದು ನಮ್ಮನ್ನು ರಕ್ಷಿಸಬೇಕು. ಈ ಸಮಯದಲ್ಲಿ ಯಾವನೇ ದೇಶದೇಶಾಂತರಾದ ಯಾಚಕನು ಬಂದು ಅವನಲ್ಲಿ ಬೇಡಿದರೂ ಗೋ , ಭೂಮಿ, ಸುವರ್ಣ ಮುಂತಾದ ಬೇಡಿಕೆಗಳನ್ನು ಕೇಳಿ ದಾನಮಾಡುತ್ತಿದ್ದಾನೆ. ನೀನು ದೇವತೆಗಳ ಹಿತಕ್ಕಾಗಿ ನಿನ್ನ ಯೋಗಮಾಯೆಯಿಂದ ವಾಮನರೂಪವನ್ನು ಧರಿಸಿ ಆ ಯಜ್ಞಕ್ಕೆ ಹೋಗಿ ನಮ್ಮ ಉತ್ತಮ ಕಲ್ಯಾಣವನ್ನು ಮಾಡು” ಎಂದು ಬೇಡಿಕೊಂಡರು.

          ಅದೇ ಸಮಯಕ್ಕೆ ಅಗ್ನಿಯಂತೆ ತೇಜಸ್ವೀ ಮಹರ್ಷಿ ಕಶ್ಯಪರು ಅವರ ಧರ್ಮಪತ್ನಿ ಅದಿತಿಯ ಜೊತೆಗೆ ತನ್ನ ತೇಜದಿಂದ ಬೆಳಗುತ್ತಾ ಒಂದು ಸಾವಿರ ವರುಷಗಳವರೆಗೆ ಮಹಾನ್ ವ್ರತವನ್ನು ಆಚರಿಸಿ ಭಾವಂತನನ್ನೇ ಮಗುವಾಗಿ ಪಡೆಯುವ ಹಂಬಲದಿಂದ ಅದೇ ಆಶ್ರಮಕ್ಕೆ ಭವನ್ ವಿಷ್ಣುವನ್ನು ದರ್ಶಿಸಲು ಬಂದರು.

            ಅದಿತಿ ಕಶ್ಯಪರ ಹಾಗೂ ಎಲ್ಲಾ ದೇವತೆಗಳ ಬೇಡಿಕೆಗಳನ್ನು ಮನ್ನಿಸಿ ಭಗವಾನ್ ನಾರಾಯಣನು ಅದಿತಿ ದೇವಿಯ ಗರ್ಭದಿಂದ ಪ್ರಕಟನಾಗಿ ವಾಮನರೂಪವನ್ನು ಧರಿಸಿ, ಬಲಿಯ ಬಳಿ ಮೂರೂ ಹೆಜ್ಜೆ ಜಾಗವನ್ನು ಯಾಚಿಸಿ, ಬಲಿಯ ನಿಗ್ರಹಿಸಿ ಮೂರುಲೋಕಗಳನ್ನು ಪುನಃ ಇಂದ್ರನಿಗೆ ಒಪ್ಪಿಸಿಕೊಟ್ಟನು. ಅದೇ ಭಾಗವತನು ಹಿಂದೆ ಇಲ್ಲಿ ವಾಸಿಸಿದ್ದನು. ಅದಕ್ಕಾಗಿ ಈ ಆಶ್ರಮವು ಎಲ್ಲ ವಿಧದ ಶ್ರಮ(ದುಃಖ)ವನ್ನು ನಾಶಮಾಡುವಂತಹುದು. ಆ ಭಗವಾನ್ ವಾಮನನಲ್ಲಿ ಭಕ್ತಿ ಇರುವುದರಿಂದ ನಾನೂ ಕೂಡ ಈ ಸ್ಥಾನವನ್ನು ಉಪಯೋಗಿಸುತ್ತಿದ್ದೇನೆ. ಇದೇ ಆಶ್ರಮಕ್ಕೆ ನನ್ನ ಯಜ್ಞದಲ್ಲಿ ವಿಘ್ನವನ್ನೊಡ್ಡುವ ರಾಕ್ಷಸರು ಬರುತ್ತಾರೆ. ರಾಮ! ನೀನು ಇಲ್ಲೇ ಆ ದುರಾಚರಿಗಳನ್ನು ವಧಿಸುವುದಿದೆ ಎಂದು ತಿಳಿಸಿದರು.

            ವಿಶ್ವಾಮಿತ್ರರು ಬಂದಿರುವುದನ್ನು ನೋಡಿ ಸಿದ್ಧಾಶ್ರಮದಲ್ಲಿ ವಾಸಿಸುವ ಎಲ್ಲ ತಪಸ್ವಿಗಳು ಕೂಡಲೇ ಅವರ ಬಳಿಗೆ ಬಂದು ಎಲ್ಲರು ಸೇರಿ ಯಥೋಚಿತವಾಗಿ ಪೂಜಿಸಿ ಸತ್ಕಾರ ಮಾಡಿದರು. ಮಹೂರ್ತಕಾಲ ವಿಶ್ರಾಂತಿ ಪಡೆದ ರಾಮ- ಲಕ್ಷ್ಮಣರು  ವಿಶ್ವಾಮಿತ್ರರಿಗೆ ಕೈ ಮುಗಿದು ತಾವು ಇಂದೇ ಯಜ್ಞದೀಕ್ಷೆಯನ್ನು ಕೈಗೊಳ್ಳಿರಿ ಎಂದು ಹೇಳಲು ವಿಶ್ವಾಮಿತ್ರರು ಜಿತೇಂದ್ರಿಯ ಭಾವದಿಂದ ನಿಯಮಪೂರ್ವಕ ಯಜ್ಞ ದೀಕ್ಷೆಯನ್ನು ಪ್ರವೇಶಿಸಿದರು. ರಾಜಕುಮಾರರಿಬ್ಬರು ಜಾಗರೂಕರಾಗಿ ರಾತ್ರಿ ಕಳೆದರು.

           ಅನಂತರ ವಿಶ್ವಾಮಿತ್ರರಿಗೆ ನಮಸ್ಕರಿಸಿ, ಆ ರಾಕ್ಷಸರ ಬಗ್ಗೆ ವಿಚಾರಿಸಿದರು. ಪೂಜ್ಯರೇ ! ಯಾವ ಸಮಯದಲ್ಲಿ ಆ ಇಬ್ಬರು ನಿಶಾಚರ ಆಕ್ರಮಣವಾಗುತ್ತದೆ ? ಇದನ್ನು ನಾವು ತಿಳಿಯಲು ಬಸುತ್ತಿದ್ದೇವೆ. ಏಕೆಂದರೆ, ಅವರಿಬ್ಬರೂ ಯಜ್ಞ ಭೂಮಿಗೆ ಬರುವುದನ್ನು ನಾವು ತಡೆಯಬೇಕಾಗಿದೆ. ಎಲ್ಲಾದರೂ ಎಚ್ಚರ ತಪ್ಪಿ ಆ ಸಂದರ್ಭವು ತಪ್ಪಿಹೋಗಬಾರದು, ಅದಕ್ಕಾಗಿ ತಿಳಿಸಿರಿ ಎಂದು ಯುದ್ಧದ ಇಚ್ಛೆಯನ್ನು ವ್ಯಕ್ತಪಡಿಸಿದರು.

            ಕಾಕುತ್ಸ್ಥವಂಶಿ ರಾಜಕುಮಾರರ ಮಾತನ್ನು ಕೇಳಿದ ಕೋಶಿಕ ಮುನಿಗಳು ” ರಾಮ ! ವಿಶ್ವಮಿತ್ರಾಕ್ ಯಜ್ಞದ ದೀಕ್ಷನ್ನು ಕೈಗೊಂಡಿರುವರು. ಆದ್ದರಿಂದ ಈಗ ಮೌನವಾಗಿ ಇರುವರು. ರಘುವಂಶಿ ವೀರರಾದ ನೀವಿಬ್ಬರೂ ಎಚ್ಚರವಾಗಿದ್ದು ಇಂದಿನಿಂದ ಆರು ರಾತ್ರಿಗಳವರೆಗೆ ಇವರ ಯಜ್ಞವನ್ನು ರಕ್ಷಿಸುತ್ತಾ ಇರಿ ” ಎಂದು ತಿಳಿಸಿದರು.

           ಮುನಿಗಳ ಈ ಮಾತನ್ನು ಕೇಳಿ ಆ ಇಬ್ಬರು ರಾಜಕುಮಾರರು ಒಂದೇ ಸಮಾನ ಆರು ಹಗಲು, ಆರು ರಾತ್ರಿಗಳವರೆಗೆ ಆ ತಪೋವನವನ್ನು ರಕ್ಷಿಸುತ್ತಾ ಇದ್ದರು. ಅಷ್ಟು ದಿನ ಅವರು ನಿದ್ದೆಯನ್ನೇ ಮಾಡದೆಯೇ ವಿಶ್ವಾಮಿತ್ರರ ಯಜ್ಞದ ರಕ್ಷಣೆಯಲ್ಲೇ ತತ್ಪರರಾದರು.

          ಶಾಸ್ತ್ರವಿಧಿಗನುಸಾರ ವೇದಮಂತ್ರಗಳ ಉಚ್ಚಾರಣಾ ಪೂರ್ವಕ ಆ ಯಜ್ಞದ ಕಾರ್ಯಪ್ರಾರಂಭಗೊಂಡಿತು. ಈ ಪ್ರಕಾರ ಐದು ದಿನಗಳು ಕಳೆದು ಆರನೆಯ ದಿನ ಬಂದಾಗ ಶ್ರೀರಾಮನು ಸೌಮಿತ್ರಿಯಲ್ಲಿ – ” ಸುಮಿತ್ರಾ ನಂದನ ! ನೀನು ನಿನ್ನ ಚಿತ್ತವನ್ನು ಏಕಾಗ್ರಗೊಳಿಸಿ ಎಚ್ಚರವಾಗಿರು” ಹೇಳಿದನು.

         ಇದೆ ಸಮಯದಲ್ಲಿ ಆಕಾಶದಲ್ಲಿ ಭಯಾನಕ ಭಾರೀ ಶಬ್ದ ಉಂಟಾಯಿತು. ಮಳೆಗಾಲದಲ್ಲಿ ಕರಿಮೋಡಗಳು ಆಕಾಶವನ್ನು ಮುಚ್ಚಿಬಿಡುವಂತೆಯೇ, ಮಾರೀಚ ಮತ್ತು ಸುಭಾಹು ಎಂಬ ರಾಕ್ಷಸರು ಎಲ್ಲೆಡೆ  ತಮ್ಮ ಮಾಯೆಯನ್ನು ಹರಡುತ್ತಾ ಯಜ್ಞ ಮಂಟಪದ ಕಡೆಗೆ ಓದಿ ಬರುತ್ತಿದ್ದರು. ಅವರ ಅನುಚರರೂ ಜೊತೆಗೇ ಇದ್ದರು. ಆ ಭಯಂಕರ ರಾಕ್ಷಸರು ಅಲ್ಲಿಗೆ ಬಂದು ರಕ್ತದ ಮಳೆಗರೆಯಲು ಪ್ರಾರಂಭಿಸಿದರು.

          ರಕ್ತ ಪ್ರವಾಹದಿಂದ ಯಜ್ಞವೇದಿಕೆಯ ಸುತ್ತಲಿನ ಭೂಮಿ ನೆನೆದಿರುವುದನ್ನು ನೋಡಿ ಶ್ರೀರಾಮಚಂದ್ರನು ವಾಯುವಿನ ವೇಗದಿಂದ ಮೋಡಗಳು ಛಿನ್ನ-ಭಿನ್ನವಾಗುವಂತೆ ಮಾನವಸ್ತ್ರವನ್ನು ತನ್ನ ಧನುಸ್ಸಿಗೆ ಸಂಧಾನಮಾಡಿದನು. ಆ ಅಸ್ತ್ರವು ಅತ್ಯಂತ ತೇಜಸ್ವಿಯಾಗಿತ್ತು. ಶ್ರೀರಾಮನು ರೋಷ ಭರಿತನಾಗಿ ಮಾರೀಚನ ಎದೆಗೆ ಆ ಬಾಣವನ್ನು ಪ್ರಯೋಗಿಸಿದನು. ಆ ಏಟಿನಿಂದ ಮಾರೀಚನು ನೂರು ಯೋಜನ ದೂರ ಸಮುದ್ರದಲ್ಲಿ ಹೋಗಿ ಬಿದ್ದನು. ತನ್ನ ಕೈಚಳಕವನ್ನು ತೋರಿಸುತ್ತ ಶೀಘ್ರವಾಗಿ ಮಹಾ ಆಗ್ನೇಯಾಸ್ತ್ರವನ್ನು ಅನುಸಂಧಾನ ಮಾಡಿ ಅದನ್ನು ಸುಬಾಹುವಿನ ಎದೆಗೆ ಪ್ರಯೋಗಿಸಿದನು. ಅದು ತಗಲುತ್ತಲೇ ಅವನು ಸತ್ತು ಭೂಮಿಗೆ ಬಿದ್ದನು. ಇನ್ನು ಯಜ್ಞದಲ್ಲಿ ವಿಘ್ನವನ್ನು ಮಾಡುವ ಇತರ ನಿರ್ದಯಿ, ದುರಾಚಾರೀ,ಪಾಪಕರ್ಮ ಹಾಗೂ ರಕ್ತಭೋಜೀ ರಾಕ್ಷಸರನ್ನು ಕೂಡ ಕೊಂದುಹಾಕುವೆನು ಎಂದು ವಾಯುವ್ಯಾಸ್ತ್ರವನ್ನು ಪ್ರಯೋಗಿಸಿ ಉಳಿದ ನಿಶಾಚರರನ್ನು ಸಂಹರಿಸಿ ಮುನಿಗಳನ್ನು ಸಂತೋಷಪಡಿಸಿದನು.

         ಯಜ್ಞವು ಮುಗಿದಾಗ ಮಹಾಮುನಿ ವಿಶ್ವಾಮಿತ್ರರು ಸಮಸ್ತ ದಿಕ್ಕುಗಳನ್ನು ವಿಘ್ನ – ಬಾಧೆಗಳಿಂದ ರಹಿತವಾಗಿರುವುದನ್ನು ನೋಡಿ ಶ್ರೀರಾಮಚಂದ್ರನನ್ನ ಪ್ರಶಂಶಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next