Advertisement

ಉ.ಕ. ಸಮಸ್ಯೆ ನಿವಾರಣೆಗೆ ಸರ್ಕಾರಗಳ ಉದಾಸೀನ

12:18 PM Nov 15, 2017 | Team Udayavani |

ಧಾರವಾಡ: ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ನಿವಾರಣೆ ವಿಚಾರದಲ್ಲಿ ಉದಾಸೀನತೆ ತೋರುತ್ತಿವೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ದೂರಿದರು. ನಗರದ ಹೊರವಲಯದ ನರೇಂದ್ರ ಬೈಪಾಸ್‌ ನಲ್ಲಿ ಮಂಗಳವಾರ ಬೆಳಗ್ಗೆ ಧಾರವಾಡದಿಂದ ಬೆಳಗಾವಿ ವರೆಗೆ ಹಮ್ಮಿಕೊಂಡಿದ್ದ ಕರ್ನಾಟಕ ವಿಕಾಸ ಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು. 

Advertisement

ಉತ್ತರ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುವಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಸಂಪೂರ್ಣ ವಿಫಲವಾಗಿವೆ. ಅಭಿವೃದ್ಧಿಯ ವಿಷಯದಲ್ಲಿ ತೀವ್ರ ಉದಾಸೀನತೆ ತೋರಿದ್ದಾರೆ. ಈ ನಿಟ್ಟಿನಲ್ಲಿ ಜೆಡಿಎಸ್‌ನಿಂದ ಸದನದ ಒಳಗೆ ಹಾಗೂ ಹೊರಗೆ ಗಂಭೀರ ಹೋರಾಟ ನಡೆಸುವ ಮೂಲಕ ಈ ಭಾಗದ ಜನತೆಗೆ ನ್ಯಾಯ ದೊರಕಿಸಿ ಕೊಡಲು ಪ್ರಯತ್ನಿಸಲಾಗುವುದು ಎಂದರು. 

ಕಳೆದ ಹಲವು ದಶಕಗಳಿಂದ ತೀವ್ರ ನಿರ್ಲಕ್ಷಕ್ಕೆ ಒಳಪಟ್ಟಿರುವ ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಯನ್ನು ಕಡೆಗಣಿಸಿರುವ ಕೇಂದ್ರದ ಬಿಜೆಪಿ ನೇತೃತ್ವದ ನರೇಂದ್ರ ಮೋದಿ ಅವರ ಸರ್ಕಾರ ಹಾಗೂ ರಾಜ್ಯದ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಈಗಾಗಲೇ ಕರ್ನಾಟಕ ವಿಕಾಸ ಯಾತ್ರೆಯ ಮೂಲಕ ರಾಜ್ಯದೆಲ್ಲೆಡೆ ಸಂಚರಿಸಿ ಸಮರ ಸಾರಲಾಗಿದೆ.

ಜನರ ಆರ್ಶೀವಾದದ ಫಲವಾಗಿ 2018ರಲ್ಲಿ ಜೆಡಿಎಸ್‌ ಸರ್ಕಾರ ಅಧಿ ಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನವಲಗುಂದ ಶಾಸಕ ಎನ್‌.ಎಚ್‌. ಕೋನರಡ್ಡಿ, ರಾಜ್ಯ ಕಾರ್ಯಾಧ್ಯಕ್ಷ ಬಸವರಾಜ ಎಸ್‌. ಹೊರಟ್ಟಿ, ರಾಜ್ಯ ಉಪಾಧ್ಯಕ್ಷ ಗುರುರಾಜ ಹುಣಸಿಮರದ, ಹು-ಧಾ ಮಹಾನಗರ ಜಿಲ್ಲಾಧ್ಯಕ್ಷ ರಾಜಣ್ಣ ಕೊರವಿ, ಜಿಲ್ಲಾ ಕಾರ್ಯಾಧ್ಯಕ್ಷ ಬಿ.ಬಿ. ಗಂಗಾಧರಮಠ, ನವಲಗುಂದ ತಾಲೂಕಾಧ್ಯಕ್ಷ ವೀರಣ್ಣ ನೀರಲಗಿ, ಮಹಾನಗರ ಪಾಲಿಕೆ ಸದಸ್ಯ ಶ್ರೀಕಾಂತ ಜಮನಾಳ ಇತರರಿದ್ದರು. 

ಕೊನೆಯಲ್ಲಿ ಪೊಲೀಸರು: ವಿಕಾಸ ಯಾತ್ರೆ ನರೇಂದ್ರ ಕ್ರಾಸ್‌ನಿಂದ ಬೆಳಗಾವಿಗೆ ತೆರಳಿದ ಬಳಿಕ ಪೊಲೀಸರು ಭದ್ರತೆಗೆ ಬಂದರು. ಜೆಡಿಎಸ್‌ ಕಾರ್ಯಕರ್ತರು ಯಾತ್ರೆ ಕುರಿತು ಸರಿಯಾಗಿ ಮಾಹಿತಿ ನೀಡದ ಹಿನ್ನೆಲೆಯಲ್ಲಿ ತಡವಾಗಿ ಸ್ಥಳಕ್ಕೆ ಆಗಮಿಸಿದ ಡಿವೈಎಸ್‌ಪಿ ಬಿ.ಪಿ. ಚಂದ್ರಶೇಖರ ನೇತೃತ್ವದ ತಂಡ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಮರಳಿತು.

Advertisement

ರಾಷ್ಟ್ರೀಯ ಹೆದ್ದಾರಿ 4ರ ನರೇಂದ್ರ ಬೈಪಾಸ್‌ನಲ್ಲಿ ವಿಕಾಸ ಯಾತ್ರೆ ಕಾರಣ ಕೆಲ ಸಮಯ ವಾಹನಗಳ ಸಂಚಾರಕ್ಕೆ ಅಡೆತಡೆ ಉಂಟಾಯಿತು. ಈ ಸಂದರ್ಭದಲ್ಲಿ ಪೊಲೀಸರು ಇಲ್ಲದ ಕಾರಣ ಪಕ್ಷದ ಕಾರ್ಯಕರ್ತರೇ ರಸ್ತೆ ತೆರವಿಗೆ ಮುಂದಾದರು.

Advertisement

Udayavani is now on Telegram. Click here to join our channel and stay updated with the latest news.

Next