Advertisement

ನಿಯಮ ಮೀರಿ ವರ್ಗಾವಣೆ: ಸರಿಪಡಿಸಲು ಸಿಎಸ್‌ ನಿರ್ದೇಶನ

06:45 AM Aug 04, 2018 | |

ಬೆಂಗಳೂರು: ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ವೇಳೆ ಒಟ್ಟು ವೃಂದ ಬಲದ ಶೇ. 4ರಷ್ಟು ಮಂದಿಯನ್ನು ಮಾತ್ರ ವರ್ಗಾವಣೆ ಮಾಡಬೇಕು ಎಂದು ಸೂಚಿಸಿದ್ದರೂ ಕೆಲವು ಇಲಾಖೆಗಳಲ್ಲಿ ಅದಕ್ಕೆ ಮೀರಿ ವರ್ಗಾವಣೆ ಮಾಡಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.

Advertisement

ಈ ಕುರಿತಂತೆ ಸುತ್ತೋಲೆ ಹೊರಡಿಸಿರುವ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌, ನಿಗದಿಗಿಂತ ಹೆಚ್ಚು ನೌಕರರನ್ನು ವರ್ಗಾವಣೆ ಮಾಡಿರುವ ಇಲಾಖೆಗಳು ಅದನ್ನು ಪರಿಷ್ಕರಿಸಿ ಶೇ. 4ಕ್ಕೆ ಮಿತಿಗೊಳಿಸಿ ಆದೇಶಿಸುವಂತೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಎಲ್ಲಾ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು ಮತ್ತು ಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ.

2018-19ನೇ ಸಾಲಿನ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಕುರಿತಂತೆ ಜೂ. 26ರಂದು ಆದೇಶ ಹೊರಡಿಸಿ ಜುಲೈ 31ರೊಳಗೆ ಮುಕ್ತಾಯಗೊಳಿಸುವಂತೆ ತಿಳಿಸಲಾಗಿತ್ತು. ಆದರೆ, ಈ ಮಧ್ಯೆ ಅವಧಿ ವಿಸ್ತರಣೆ ಬೇಡಿಕೆ ಬಂದಿದ್ದರಿಂದ ವರ್ಗಾವಣೆ ಅವಧಿಯನ್ನು ಆ. 8ರವರೆಗೆ ವಿಸ್ತರಿಸಲಾಗಿದೆ. ವರ್ಗಾವಣೆ ಆದೇಶ ಹೊರಡಿಸುವ ಸಂದರ್ಭದಲ್ಲಿ 2013ರ ಮಾರ್ಗಸೂಚಿಯಂತೆ ಒಟ್ಟಾರೆ ವೃಂದ ಬಲದ ಶೇ. 4ರಷ್ಟನ್ನು ಮೀರದಂತೆ ನೌಕರರನ್ನು ವರ್ಗಾವಣೆ ಮಾಡಬೇಕು ಎಂದು ಸ್ಪಷ್ಟವಾಗಿ ನಿರ್ದೇಶನ ನೀಡಲಾಗಿತ್ತು.

ಆದರೂ ಕೆಲವು ಇಲಾಖೆಗಳು ಒಟ್ಟು ವೃಂದ ಬಲದ ಶೇ. 5ರಿಂದ ಶೇ. 6ರಷ್ಟು  ನೌಕರರನ್ನು ವರ್ಗಾವಣೆ ಮಾಡಿದೆ. ಇದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಮುಖ್ಯ ಕಾರ್ಯದರ್ಶಿಗಳು ಕಟ್ಟುನಿಟ್ಟಿನ ಸೂಚನೆ ಹೊರಡಿಸಿದ್ದು, ಅದರಂತೆ ಶೇ. 4ಕ್ಕಿಂತ ಹೆಚ್ಚಿನ ನೌಕರರನ್ನು ವರ್ಗಾವಣೆ ಮಾಡಿರುವ ಇಲಾಖೆಗಳು ಆ. 8ರೊಳಗೆ ವರ್ಗಾವಣೆ ಪಟ್ಟಿಯನ್ನು ಪರಿಷ್ಕರಿಸಿ ಒಟ್ಟಾರೆ ಮಿತಿಯನ್ನು ಶೇ. 4ಕ್ಕೆ ಇಳಿಸಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next