Advertisement

ಇಂದು ಶಂಕ್ರಣ್ಣಗೆ 87ರ ಸಂಭ್ರಮ

01:18 PM Jun 16, 2017 | Team Udayavani |

ದಾವಣಗೆರೆ: ಪ್ರದೇಶ ಕಾಂಗ್ರೆಸ್‌ನ ಖಾಯಂ ಖಜಾಂಚಿ, ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ, ಅಖೀಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ, ಶಿಕ್ಷಣ ರೂವಾರಿ, ಅಜಾತಶತೃ ಶಾಮನೂರು ಶಿವಶಂಕರಪ್ಪ ಅವರಿಗೆ ಇಂದು 87ನೇ ಜನ್ಮದಿನದ ಸಂಭ್ರಮ. ದಾವಣಗೆರೆ ಹಳೆಪೇಟೆಯಲ್ಲಿ 1931ರ ಜೂ. 16 ರಂದು ಜನಿಸಿರುವ ಶಿವಶಂಕರಪ್ಪನವರು ಶಾಮನೂರು ಕಲ್ಲಪ್ಪ ತಾಯಿ ಶಾಮನೂರು ಸಾವಿತ್ರಮ್ಮ ದಂಪತಿ ಪುತ್ರ.

Advertisement

ಇಂಟರ್‌ ಮಿಡಿಯೇಟ್‌ ವರೆಗೆ ಅಭ್ಯಾಸ ಮಾಡಿರುವ ಶಿವಶಂಕರಪ್ಪನವರ ಲೆಕ್ಕಾಚಾರ, ವ್ಯವಹಾರ ಚತುರತೆಗೆ ಚೌಕಿಪೇಟೆಯ ಬಕ್ಕೇಶ್ವರ ದೇವಸ್ಥಾನ ಪಕ್ಕದಲ್ಲಿ ಸಣ್ಣ ಅಂಗಡಿ ಪ್ರಾರಂಭಿಸಿ, ಈಗ ವಿದೇಶಗಳಿಗೆ ವಹಿವಾಟು ವಿಸ್ತರಿಸಿರುವುದು ಸಾಕ್ಷಿ. ಈಗ ಆಗರ್ಭ ಶ್ರೀಮಂತರಾಗಿರುವ ಶಾಮನೂರು ಶಿವಶಂಕರಪ್ಪ ,ಚಿಕ್ಕ ವಯಸ್ಸಿನಲ್ಲಿ ಬಡತನವನ್ನೇ ಹಾಸು, ಹೊದ್ದು ಮಲಗಿದವರು. 

ಅಸಾಧಾರಣ ಚಾಣಾಕ್ಷತೆ, ಕುಶಲಮತಿ ನಡೆ, ವ್ಯಾವಹಾರಿಕ ಜ್ಞಾನದೊಂದಿಗೆ ಬೆಳೆದು ನಿಂತಿರುವ ಪರಿ ಕನಸಿನಲ್ಲೂ ಊಹಿಸಲಿಕ್ಕೂ ಆಗದು. 70ರ ದಶಕದಲ್ಲಿ ದೇಶದ ಪ್ರತಿಷ್ಠಿತ ಬಾಪೂಜಿ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಅಧಿಕಾರ ವಹಿಸಿಕೊಂಡ ನಂತರ ದಾವಣಗೆರೆಯ ಚಿತ್ರಣ ಬದಲಾಗಲು ಕಾರಣೀಭೂತರು.

ದಕ್ಷಿಣ ಕರ್ನಾಟಕ ಮ್ಯಾಂಚೆಸ್ಟರ್‌ ದಾವಣಗೆರೆ ಈಗ ಆ್ಯಕ್ಸ್‌ಫರ್ಡ್‌ ಸಿಟಿ, ಶಿಕ್ಷಣ ನಗರಿ, ಮೆಡಿಕಲ್‌ ಹಬ್‌… ಎಂಬ ಅನ್ವರ್ಥ ಹೆಸರು ಪಡೆದಿರುವುದರ ಹಿಂದೆ ಬಾಪೂಜಿ ವಿದ್ಯಾಸಂಸ್ಥೆ, ಗೌರವ ಕಾರ್ಯದರ್ಶಿ ಶಾಮನೂರು ಶಿವಶಂಕರಪ್ಪನವ ಕಾಣಿಕೆ ಅಪಾರ ಹಾಗೂ ಅನುಪಮ. ಬಾಪೂಜಿ ವಿದ್ಯಾಸಂಸ್ಥೆಯ ಮೂಲಕ  ಪೂರ್ವ ಪ್ರಾಥಮಿಕ ಶಾಲೆಯಿಂದ ಹಿಡಿದು ವೈದ್ಯಕೀಯ ಶಿಕ್ಷಣದವರೆಗೆ 50ಕ್ಕೂ ಹೆಚ್ಚು ಶಾಲಾ-ಕಾಲೇಜುಗಳನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.

ಸ್ಪರ್ಧಾತ್ಮಕ ಯುಗದ ಬೇಡಿಕೆಗೆ ಅನುಗುಣವಾದ ಅಡ್ವಾನ್ಸ್‌ ಕೋರ್ಸ್‌ ತೆರೆಯುವಲ್ಲಿ ಮುಂಚೂಣಿಯಲ್ಲಿದ್ದಾರೆ. 1969ರಲ್ಲಿ 5ನೇ ವಾರ್ಡ್‌ನ ನಗರಸಭೆ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ಕ್ಷೇತ್ರ ಪ್ರವೇಶಿಸಿದ ಶಾಮನೂರು ಶಿವಶಂಕರಪ್ಪ 70ರ ದಶಕದಲ್ಲಿ ನಗರಸಭೆ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವರ ಅಧಿಕಾರವಧಿಯಲ್ಲಿ ಟಿವಿ ಸ್ಟೇಷನ್‌ ಕೆರೆ ನಿರ್ಮಿಸಿದ್ದು ಅವರ ದೂರದೃಷ್ಟಿತ್ವಕ್ಕೆ ಸಾಕ್ಷಿ.

Advertisement

ಈಗ ಅದೇ ಟಿವಿ ಸ್ಟೇಷನ್‌ ಕೆರೆ ದಾವಣಗೆರೆ ನಗರದ ಪ್ರಮುಖ ನೀರಿನ ಮೂಲ. ಈಗ 500 ಕೋಟಿ ವೆಚ್ಚದ ಜಲಸಿರಿ… ಯೋಜನೆ ಜಾರಿಗೆ ಪ್ರಮುಖ ಪಾತ್ರ ವಹಿಸಿದ್ದಾರೆ. ಕರ್ನಾಟಕ ಪ್ರದೇಶ ಕಾಂಗ್ರೆಸ್‌ನ ಖಾಯಂ ಖಜಾಂಚಿಯಾಗಿರುವ ಶಾಮನೂರು ಶಿವಶಂಕರಪ್ಪ ಸಂಸದರಾಗಿಯೂ ಸೇವೆ ಸಲ್ಲಿಸಿದ್ದಾರೆ. ರಾಜಕೀತ ಕ್ಷೇತ್ರದಲ್ಲಿ ಅಕ್ಷರಶಃ ಅಜಾತಶತೃವಾಗಿರುವ ಅವರು ಎಲ್ಲಾ ಪಕ್ಷದ ಮುಖಂಡರೊಂದಿಗೆ ಅವಿನಾಭ ಸಂಬಂಧ ಹೊಂದಿದ್ದಾರೆ.

ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ತಾವು ಶಾಮನೂರು ಶಿವಶಂಕರಪ್ಪನವರ ಅಭಿಮಾನಿ ಎಂದು ಹೇಳಿಕೊಂಡಿರುವುದು ಅವರ ಗೆಳೆತನದ ಪರಿಗೆ ಸಾಕ್ಷಿ. ಎಲ್ಲರಿಂದಲೂ ಪೀÅತಿಯ ಶಂಕರಣ್ಣ.. ಎಂದೇ ಕರೆಯಲ್ಪಡುವ ಶಾಮನೂರು ಶಿವಶಂಕರಪ್ಪ  ಅವರಿಗೆ ಸಚಿವ ಸ್ಥಾನಮಾನ ತಡವಾಗಿ ದೊರೆತಿತ್ತು. ಆದರೂ ಅವರಿಗೆ ತೋಟಗಾರಿಕೆ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಎರಡು ಖಾತೆ ಸಿಕ್ಕಿದ್ದವು.

ಎರಡೂ ಖಾತೆಯನ್ನು ಉತ್ತಮವಾಗಿ ನಿರ್ವಹಿಸಿದರು. ದಾವಣಗೆರೆಯಲ್ಲಿ 10 ಕೋಟಿ ವೆಚ್ಚದಲ್ಲಿ ಗಾಜಿನಮನೆ, ತಾರಸಿ ಕೈತೋಟದಂತಹ ವಿನೂತನ ಯೋಜನೆ, 10 ಕೋಟಿ ವೆಚ್ಚದ ಅತ್ಯಾಧುನಿಕ ಸೌಲಭ್ಯದ ಜಾನುವಾರು ಮಾರುಕಟ್ಟೆ, ಕೃಷಿ ಉತ್ಪನ್ನ ಮಾರುಕಟ್ಟೆ ಅಭಿವೃದ್ಧಿಗೆ ಮುಂತಾದ ಜನಪರ ಕಾರ್ಯಕ್ಕೆ ಮುನ್ನುಡಿ ಬರೆದಿದ್ದಾರೆ. 

ಕಳೆದ ವರ್ಷ ಜನ್ಮದಿನದ ಆಸುಪಾಸಿನಲ್ಲೇ ಸಚಿವ ಸ್ಥಾನ ಕೈತಪ್ಪಿದರೂ ಬೇಸರಗೊಳ್ಳದ ಅವರು, ತಾವು ನಿರ್ವಹಿಸಿದ ಸಚಿವ ಖಾತೆಗಳೇ ತಮ್ಮ ಪುತ್ರ ಎಸ್‌.ಎಸ್‌.ಮಲ್ಲಿಕಾರ್ಜುನ್‌ಗೆ ದಕ್ಕಿದ್ದು ವಿಶೇಷ. 87ರಲ್ಲೂ ಅವರ ನೆನಪಿನ ಶಕ್ತಿ ಎಲ್ಲರನ್ನೂ ದಂಗು ಬಡಿಸುವಂತಿದೆ. ಈಗಲೂ ಚುರುಕು, ಸಕ್ರಿಯವಾಗಿ ಕೆಲಸ ಮಾಡುತ್ತಿರುವ ಶಂಕರಣ್ಣ ನೂರ್ಕಾಲ ಕಾಲ ಆರೋಗ್ಯಯುತ ಜೀವನ ನಡೆಸುವ ಮೂಲಕ ದಾವಣಗೆರೆ ಅಭಿವೃದ್ಧಿಗೆ ಶ್ರಮಿಸುವಂತಾಗಲಿ…   

Advertisement

Udayavani is now on Telegram. Click here to join our channel and stay updated with the latest news.

Next