Advertisement

ರಾಗಧನದ ಮೂರು ಸಂಗೀತ ಮಾಲಿಕೆ 

06:00 AM May 25, 2018 | |

“ರಾಗಧನ’ದ ವತಿಯಿಂದ ವಸಂತಿ ರಾಮ ಭಟ್‌ ಅವರು ಪ್ರತಿ ತಿಂಗಳು ಆಯೋಜಿಸುತ್ತಿರುವ ಗೃಹ ಸಂಗೀತ ಮಾಲಿಕೆಯಲ್ಲಿ ಫೆಬ್ರವರಿಯ ಕಛೇರಿಯನ್ನು ನಡೆಸಿಕೊಟ್ಟವರು ಮುಂಬಯಿಯ ಪ್ರಭಾ ರಾವ್‌.

Advertisement

ರಾಗ, ತಾಳಗಳ ಮೇಲಿನ ಹಿಡಿತ, ಗಟ್ಟಿತನದ ನಿರೂಪಣೆ ಮತ್ತು ವರ್ಷಗಳ ಅನುಭವದ ಪಕ್ವತೆ ಅವರ ವೈಶಿಷ್ಟé. ಕಾನಡಾ ವರ್ಣ, ಕುಮುದ ಕ್ರಿಯ (ಅರ್ಧನಾರೀಶ್ವರಂ) ನಾಗಸ್ವರಾವಳಿ (ಶ್ರೀಪತೇ) ಲಲಿತ (ಹಿರಣ್ಮಯೀಂ) ಕನ್ನಡ ಗೌಳ (ಓರಜೂಪು) ಕೃತಿಗಳು ಬಿಗುತನವಿದ್ದರೂ ರಾಗಭಾವದೊಂದಿಗೆ ಮೂಡಿಬಂದವು. ರಾಗ ಮತ್ತು ಸ್ವರ ಕಲ್ಪನೆಗಳೊಂದಿಗೆ ಚೊಕ್ಕವಾಗಿ ವಿಸ್ತರಿಸುವ (ಹಂಸಾನಂದಿ) ಮೂಲಾಧಾರ, ಕರ್ನಾಟಕ ಶುದ್ಧ ಸಾವೇರಿ (ಏಕಾಂಭ್ರಂಶ ನಾಯಿಕಾ) ಮತ್ತು ಪ್ರಧಾನ ರಾಗ ವರಾಳಿ (ವಟಿ ಜನ್ಮಮಿದಿ) ಕೃತಿಗಳು ಸರಳ ಸುಂದರವಾಗಿ ಮೂಡಿಬಂದವು.ಷಣ್ಮುಖ ಪ್ರಿಯ ರಾಗಾಲಾಪನೆ ಮತ್ತು “ತಾನಂ’ ಹಾಡಿದ ಗಾಯಕಿ ಚತುರಸ್ರ ತ್ರಿಪುಟ ತಾಳದಲ್ಲಿ “ಹರೇ ರಾಮ ಗೋವಿಂದ ಮುರಾ|ರೇ ಮುಕುಂದ ಶೌರೇ ಮುರ| ಹರ’ ಎಂಬ ಪಲ್ಲವಿಯನ್ನು ಚುಟುಕಾಗಿ ಹಾಡಿ ರಾಗಮಾಲಿಕೆಯಲ್ಲಿ ಸ್ವರ ಕಲ್ಪನೆಗಳನ್ನು ನೀಡಿದರು. ಬೃಂದಾವನ ಸಾರಂಗಾ, ತಿಲಂಗ್‌, ಭಾಗೇಶ್ರೀ ರಾಗಗಳಲ್ಲಿ ಲಘು ಪ್ರಸ್ತುತಿಗಳೊಂದಿಗೆ ಕಛೇರಿ ಸಮಾಪನಗೊಂಡಿತು.ವಯಲಿನ್‌ನಲ್ಲಿ ವಸಂತಿ ರಾಮ ಭಟ್‌ ಚುರುಕಾದ ಬೆರಳುಗಾರಿಕೆಯನ್ನು ತೋರಿದರೆ, ಮೃದಂಗದಲ್ಲಿ ದೇವೇಶ್‌ ಭಟ್‌ ಔಚಿತ್ಯಪೂರ್ಣವಾದ ಲಯಗಾರಿಕೆಯನ್ನು ತೋರಿದ್ದಾರೆ.

ಮಾರ್ಚ್‌ ತಿಂಗಳಲ್ಲಿ ನಡೆದ ವಸಂತಲಕ್ಷ್ಮೀ ಹೆಬ್ಟಾರ್‌ ಅವರ ಕಛೇರಿಯಲ್ಲಿ ಪರಂಪರಾಗತ ಚೌಕಟ್ಟನ್ನು ಕಾಯ್ದುಕೊಳ್ಳುವ ಎಚ್ಚರವಿತ್ತು; ಹೊಸ ಪ್ರಯೋಗಗಳನ್ನು ಸ್ವಾಗತಿಸುವ ನಾವೀನ್ಯವಿತ್ತು. ಸಾವೇರಿ ವರ್ಣ, ದ್ವಿಜಾವಂತಿ (ಅಖೀಲಾಂಡೇಶ್ವರಿ) ದೇವಗಾಂಧಾರಿ (ನಳಿನಜಾಂಡ) ಕೋಕಿಲ ಪ್ರಿಯ (ಕೋದಂಡ ರಾಮ) ಕೃತಿಗಳು ಹಿತವಾಗಿ ಮತ್ತು ಸೌಖ್ಯವಾಗಿ ಅರಳಿಕೊಂಡವು. ಭಾವಶುದ್ಧವಾದ ರಾಗ ವಿಸ್ತಾರ, ನೆರವಲ್‌, ಸ್ವರ ಕಲ್ಪನೆಗಳೊಂದಿಗೆ ನೀಡಲಾದ ಪ್ರಧಾನ ರಾಗ ಶಂಕರಾಭರಣ (ಸ್ವರ ರಾಗ ಸುಧಾ) ಉತ್ತಮವಾಗಿ ಮೂಡಿಬಂತು. ಅಭೇರಿ, ದೇಶ ಮುಂತಾದ ರಾಗಗಳ ದೇವರ ನಾಮಗಳೊಂದಿಗೆ ಕಛೇರಿ ಕೊನೆಗೊಂಡಿತು. ವಸಂತಿ ಭಟ್‌ ಹದವರಿತು ವಯಲಿನ್‌ ನುಡಿಸಿದರು. ಬಾಲಚಂದ್ರ ಭಾಗವತ ಮೃದಂಗ ಸಹವಾದನವನ್ನು ನೀಡಿದರು.

ಈ ಗೃಹ ಸಂಗೀತ ಮಾಲಿಕೆಯ ಮುಂದಿನ ಕಛೇರಿ ಎ.28ರಂದು ನಡೆಯಿತು. ನಡೆಸಿಕೊಟ್ಟವರು ಬೆಂಗಳೂರಿನ ಲಕ್ಷ್ಮೀ ನಾಗಾನಂದ.

ನವರಾಗ ಮಾಲಿಕಾ ವರ್ಣ, ಬೇಗಡೆ (ವಲ್ಲಭ ನಾಯಕಸ್ಯ) ಕಾಪಿ ನಾರಾಯಣ (ಸರಸ ಸಾಮದಾನ) ರೀತಿ ಗೌಳ (ಪರಿಪಾಲಯ ಮಾಂ). ಪುನ್ನಾಗ ವರಾಳಿ (ಕನಕಶೈಲ ವಿಹಾರಿಣಿ) ಮತ್ತು ವಿಳಂಬ ಕಾಲದಲ್ಲಿ ನೀಲಾಂಬರಿ (ಅಂಬಾ ನೀಲಾಯಕಾಕ್ಷಿ) ಕೃತಿಗಳಲ್ಲದೆ ವಿಸ್ತಾರಕ್ಕಾಗಿ ಆಯ್ದುಕೊಳ್ಳಲಾದ ರಾಗ ಅಮೃತವರ್ಷಿಣಿ (ಸುಧಾಮಯಿ). ಇದರಲ್ಲಿ ರಾಗವಿಸ್ತಾರ, ನೆರವಲ್‌, ಸ್ವರವಿನಿಕೆಗಳು ಮುಂತಾಗಿ ಎಲ್ಲಾ ಅಂಗಗಳಿದ್ದರೂ ಈ ಕೃತಿ ಶ್ರೋತೃಗಳನ್ನು ತಲಪುವಲ್ಲಿ ವಿಫ‌ಲವಾಯಿತು.ಯಮನ, ಬೃಂದಾವನ ಮತ್ತು ರಾಗಮಾಲಿಕೆಯಲ್ಲಿ ಲಘು ಪ್ರಸ್ತುತಿಗಳ ಸಹಿತ ಕಛೇರಿ ಸಂಪನ್ನಗೊಂಡಿತು.ತಾಳದ ಮೇಲಿನ ಹಿಡಿತ, ಶ್ರುತಿಯ ಅಚಲತೆಗಾಗಿ ನಿರಂತರ ಸಾಧನೆ ನಡೆಸಿದರೆ ಈ ಕಲಾವಿದೆ ಮುಂದೆ ಉತ್ತಮವಾಗಿ ಬೆಳಗಬಲ್ಲರು. ವಸಂತಿ ರಾಮ ಭಟ್‌ (ವಯಲಿನ್‌) ಮತ್ತು ದೇವೇಶ್‌ ಭಟ್‌ (ಮೃದಂಗ) ಸಹವಾದಕರಾಗಿದ್ದರು.

Advertisement

ಸರೋಜಾ ಆರ್‌. ಆಚಾರ್ಯ

Advertisement

Udayavani is now on Telegram. Click here to join our channel and stay updated with the latest news.

Next