Advertisement

ಈ ಬಾರಿ ಕಮಲ ಅರಳಿಸಿ: ಶ್ರೀರಾಮುಲು

10:25 PM Apr 07, 2019 | Lakshmi GovindaRaju |

ನಂಜನಗೂಡು: ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಐದು ಬಾರಿ ಸಂಸದರಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿ, ಪ್ರಾಮಾಣಿಕ ರಾಜಕಾರಣಿ ಎಂಬ ಖ್ಯಾತಿ ಪಡೆದಿರುವ ಬಿಜೆಪಿ ಅಭ್ಯರ್ಥಿ ಶ್ರೀನಿವಾಸಪ್ರಸಾದ್‌ ಅವರನ್ನು ಗೆಲ್ಲಿಸುವ ಮೂಲಕ ಪ್ರಪ್ರಥಮ ಬಾರಿಗೆ ಕ್ಷೇತ್ರದಲ್ಲಿ ಕಮಲ ಅರಳಿಸಬೇಕು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ, ಮಾಜಿ ಸಚಿವ ಶ್ರೀರಾಮುಲು ಮನವಿ ಮಾಡಿದರು.

Advertisement

ನಗರದಲ್ಲಿ ನೆಹರು ವೃತ್ತದಲ್ಲಿ ಭಾನುವಾರ ಆಯೋಜಿಸಿದ್ದ ಬಹಿರ‌ಂಗ ಸಭೆಯಲ್ಲಿ ಅವರು ಮಾತನಾಡಿದರು. ಭ್ರಷ್ಟಾಚಾರ, ಹಗರಣಗಳ ಆಡಳಿತ ನಡೆದಿದ್ದೇ ಕಾಂಗ್ರೆಸ್‌ ಸಾಧನೆಯಾಗಿದೆ. ಅದನ್ನು ಬಿಟ್ಟರೇ ಬೇರೆ ಏನನ್ನೂ ಮಾಡಲಿಲ್ಲ. ಐವತ್ತು ವರ್ಷ ದೇಶ ಆಳಿದ ಕಾಂಗ್ರೆಸ್‌ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲಿಲ್ಲ.

ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ ಹಗರಣಗಳಿಂದ ಕೂಡಿತ್ತು. ಮೋದಿ ಪ್ರಧಾನಿಯಾದ ಬಳಿಕ ಹಲವಾರು ಜನಪರ ಯೋಜನೆಗಳ ಮೂಲಕ ಪ್ರತಿಯೊಬ್ಬರಿಗೂ ಸೌಲಭ್ಯ ಕಲ್ಪಿಸಿದ್ದಾರೆ. ಸದೃಢ ರಾಷ್ಟ್ರ ನಿರ್ಮಾಣಕ್ಕಾಗಿ ಮೋದಿ ಮತ್ತೂಮ್ಮೆ ಪ್ರಧಾನಿಯನ್ನಾಗಿ ಮಾಡಬೇಕಿದೆ. ಹೀಗಾಗಿ ಪ್ರತಿಯೊಬ್ಬರೂ ಬಿಜೆಪಿ ಬೆಂಬಲಿಸಬೇಕು ಎಂದು ಕೋರಿದರು.

ಈ ಭಾಗದ ಜ್ವಲಂತ ಸಮಸ್ಯೆಯಾಗಿದ್ದ ಪರಿವಾರ ಹಾಗೂ ತಳವಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿದ್ದು ಬಿಜೆಪಿ ಹಾಗೂ ನರೇಂದ್ರ ಮೋದಿ ಎಂಬುದನ್ನು ಮರೆಯದೇ ಕಮಲಕ್ಕೆ ಮತ ನೀಡಬೇಕು. ಇದರ ಪರವಾಗಿ ಕಾಂಗ್ರೆಸ್‌ ಅಭ್ಯರ್ಥಿ ಸಂಸದ ಆರ್‌. ಧ್ರುವನಾರಾಯಣ ಸಂಸತ್‌ನಲ್ಲಿ ಚಕಾರ ಎತ್ತಲಿಲ್ಲ ಎಂದು ವಾಗ್ಧಾಳಿ ನಡೆಸಿದರು.

ಈ ಸಂಧರ್ಭದಲ್ಲಿ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸ ಪ್ರಸಾದ್‌, ಮಾಜಿ ಶಾಸಕ ಸಿದ್ದರಾಜು, ನಗರಾಧ್ಯಕ್ಷ ಬಾಲಚಂದ್ರು, ಅಪ್ಪಣ್ಣ , ಕೆಂಪಣ್ಣ, ಯು.ಎನ್‌. ಪದ್ಮನಾಭರಾವ್‌, ಬೆಂಕಿ ಮಹದೇವು ಆಳಿಯ ಜಯದೇವು, ಕುಂಬರಳ್ಳಿ ಸುಬ್ಬಣ್ಣ, ಜಗದೀಶ, ಮಹೇಶ್‌, ಗಾಯತ್ರಿ, ಮಂಗಳಾ, ಸುನೀತಾ, ಪ್ರೇಮಾಶಂಬಯ್ಯ, ನಾಗಮ್ಮ, ಸೌಭಾಗ್ಯ, ಮುಖಂಡರಾದ ಮಹದೇವು, ಯುವಮೋರ್ಚ ಮುಖಂಡರು ಹಾಗೂ ಬೂತ್‌ ಮಟ್ಟದ ಕಾರ್ಯಕರ್ತರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next